ಬದುಕು ಮೂರಾಬಟ್ಟೆ ಆಗೋದಕ್ಕೆ ಒಂದೇ ಒಂದು ಪೆಗ್ ಸಾಕು!
ಮೋಜು ಮಸ್ತಿಗಾಗಿ ಆರಂಭವಾಗುವ ಕುಡಿತ ಮೊದಮೊದಲಿಗೆ ಖುಷಿ ಕೊಡುತ್ತದೆ. ನಂತರ ನಮ್ಮ ಬದುಕನ್ನೇ ಬಲಿ ತೆಗೆದುಕೊಳ್ಳುತ್ತದೆ. ಹೀಗಿದ್ದರೂ ಜನ ಕುಡಿತವನ್ನು ಬಿಡುತ್ತಿಲ್ಲ. ಅದರ ಬೆಲೆ ಗಗನಕ್ಕೇರಿದರೂ ವೈನ್ ಶಾಪ್ಗಳಲ್ಲಿ ನೂಕುನುಗ್ಗಲು ಮಾತ್ರ ಕಡಿಮೆಯಾಗಿಲ್ಲ. ಈಗ ಕುಡಿತ ಲಿಂಗಬೇಧವಿಲ್ಲದೆ ಎಲ್ಲರನ್ನೂ ಹಾಳು ಮಾಡುವಲ್ಲಿ ಯಶಸ್ವಿಯಾಗಿದೆ. ಸದಾ ಒತ್ತಡದಲ್ಲಿ ಕೆಲಸ ಮಾಡುವ ಬಹುತೇಕ ಮಂದಿ ಒಂದು ಪೆಗ್ ಏರಿಸಿದರೆ ರಿಲ್ಯಾಕ್ಸ್ ಆಗುತ್ತದೆ ಎಂಬ ಭ್ರಮೆಯಲ್ಲಿಯೇ ಕುಡಿತವನ್ನು ಮುಂದುವರೆಸುತ್ತಿದ್ದಾರೆ.
ಕುಡಿತ ಒಬ್ಬ ವ್ಯಕ್ತಿಯ ಸಂಸಾರವನ್ನು ಹಾಳುಮಾಡುತ್ತದೆ, ಮನಸ್ಸನ್ನು ಕೆಡಿಸುತ್ತದೆ, ಆರೋಗ್ಯವನ್ನು ಬಲಿತೆಗೆದುಕೊಳ್ಳುತ್ತದೆ. ಇದು ಗೊತ್ತಿದ್ದರೂ ಜನ ಕುಡಿತವನ್ನು ಬಿಡುತ್ತಿಲ್ಲ. ಕೆಲವರು ಪ್ರತಿ ದಿನ ಸ್ವಲ್ಪ ಪ್ರಮಾಣದಲ್ಲಿ ಕುಡಿದರೆ, ಇನ್ನು ಕೆಲವರು ಯಾವುದಾದರೊಂದು ಸಂದರ್ಭಗಳಲ್ಲಿ ಮಾತ್ರ ಕುಡಿಯುತ್ತಾರೆ. ಇನ್ನು ಕೆಲವರು ಕುಡಿಯುತ್ತಲೇ ಇರುತ್ತಾರೆ.
ದಾವಣಗೆರೆ ಜಿಲ್ಲೆಗೆ ಮಾದರಿಯಾದ ಮದ್ಯ ಮುಕ್ತ ಆಲೂರು ಹಟ್ಟಿ ಗ್ರಾಮ
ಸಂಸಾರವನ್ನೇ ಹಾಳು ಮಾಡಬಹುದು!
ಮೊದಲಿಗೆ ಖುಷಿಗಾಗಿ ಆರಂಭವಾಗುವ ಕುಡಿತದ ಚಟ ಬಳಿಕ ಖುಷಿಯಿರಲಿ, ಬೇಸರವಿರಲಿ, ಹಣವಿರಲಿ, ಇಲ್ಲದಿರಲಿ ಕುಡಿಯಬೇಕೆನಿಸುತ್ತದೆ. ಆರಂಭದಲ್ಲಿಯೇ ಅದನ್ನು ಮಟ್ಟ ಹಾಕದೆ ಹೋದರೆ ಅದು ಚಟವಾಗಿ ಪರಿಣಮಿಸುತ್ತದೆ. ಆಗ ಕುಡಿಯದೆ ಬದುಕಲಾಗಲ್ಲ ಎಂಬ ಸ್ಥಿತಿಗೆ ವ್ಯಕ್ತಿ ಬಂದು ಬಿಡುತ್ತಾನೆ. ಕೆಲವೊಮ್ಮೆ ಕುಡಿತದ ನಶೆಯಲ್ಲಿರುವ ವ್ಯಕ್ತಿಗೆ ತಾನೇನು ಮಾತಾಡುತ್ತಿದ್ದೇನೆ ಎಂಬುದು ಗೊತ್ತಾಗದೆ ಏನೇನೋ ಮಾತನಾಡುವುದು, ಜಗಳವಾಡುವುದು ಹೀಗೆ ವಿಚಿತ್ರವಾಗಿ ವರ್ತಿಸಿ ಸಂಬಂಧಗಳನ್ನು ಕಳೆದುಕೊಳ್ಳುತ್ತಾನೆ. ಅಂತಹವರಿಂದ ಜನ ದೂರವಿರಲು ಬಯಸುತ್ತಾರೆ. ಅಷ್ಟೇ ಅಲ್ಲ ಅಂಥ ವ್ಯಕ್ತಿಗಳೊಂದಿಗೆ ವ್ಯವಹಾರ ಮಾಡಲು ಕೂಡ ಹಿಂದೇಟು ಹಾಕುತ್ತಾರೆ.
ಕುಟುಂಬದ ಮಾನ-ಮರ್ಯಾದೆ ಬೀದಿಗೆ
ಇಂತಹ ವ್ಯಕ್ತಿಗಳು ಒಂದು ಕುಟುಂಬದಲ್ಲಿದ್ದರೆ ಆ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ. ಅಂತಹವರ ಮಕ್ಕಳು ಬಲಿಪಶುಗಳಾಗಬೇಕಾಗುತ್ತದೆ. ಬಹಳಷ್ಟು ಜನರಿದ್ದಾರೆ, ಅವರು ತಾವು ಮಾಡಿದ ಸಂಪಾದನೆಯನ್ನೆಲ್ಲ ಕುಡಿತಕ್ಕೆ ಸುರಿದು ಬರುತ್ತಾರೆ. ಇಂತಹವರಿಂದ ಸಂಸಾರ ನಡೆಯುವುದಾದರೂ ಹೇಗೆ? ಇಂತಹ ಸಂಸಾರಗಳಲ್ಲಿ ಜಗಳ, ಹೊಡೆದಾಟ, ಬಡಿದಾಟಗಳು ನಡೆದು ಸಂಸಾರವೇ ಛಿದ್ರವಾಗಿ ಬಿಡುತ್ತವೆ. ನಾವು ದಿನನಿತ್ಯ ಅಲ್ಲಲ್ಲಿ ಕುಡುಕರನ್ನು ನೋಡುತ್ತಿರುತ್ತೇವೆ. ಕೆಲವರು ಕುಡಿದು ಚರಂಡಿಯಲ್ಲಿಯೋ? ರಸ್ತೆಯಲ್ಲಿಯೋ ಬಿದ್ದಿದ್ದರೆ ಇನ್ನು ಕೆಲವರು ಕುಡಿತಕ್ಕಾಗಿ ಸಿಕ್ಕವರನ್ನೆಲ್ಲ ಹಣ ಕೊಡಿ ಎಂದು ಪೀಡಿಸುತ್ತಿರುತ್ತಾರೆ. ಇನ್ನು ಸುಸಂಸ್ಕೃತ ಮನೆತನದವರೇ ಕುಡಿತದ ಚಟವನ್ನು ಹತ್ತಿಸಿಕೊಂಡು ಅದರಿಂದ ಹೊರಬರಲಾಗದೆ ಪರದಾಡುತ್ತಿರುತ್ತಾರೆ. ಅಷ್ಟೇ ಅಲ್ಲ ಹಲವು ಕಾಯಿಲೆಗಳನ್ನು ಮೈಮೇಲೆ ಎಳೆದುಕೊಂಡಿರುತ್ತಾರೆ.
ಮದ್ಯ ವ್ಯಸನಿಗಳ ಮಕ್ಕಳಿಗಾಗಿ ಮರಳು ಶಿಲ್ಪದ ಮೂಲಕ 'ನೀನು ಒಂಟಿಯಲ್ಲ ಸಂದೇಶ'!
ಕುಡಿತದಿಂದ ದುಷ್ಪರಿಣಾಮಗಳೇ ಜಾಸ್ತಿ
ಹಾಗೆ ನೋಡಿದರೆ ಕುಡಿತ ಒಬ್ಬ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳು ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅತಿಯಾದ ಮದ್ಯ ಸೇವಿಸುವವರು ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ಇನ್ನು ಕುಡಿತದಿಂದ ವ್ಯಕ್ತಿಯ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮ ಬೀರಬಹುದು ಎಂಬುದನ್ನು ನೋಡುವುದಾದರೆ ಮೆದುಳಿಗೆ ನಷ್ಟವಾಗಬಹುದು, ನೆನಪಿನ ಶಕ್ತಿ ಕುಂದಬಹುದು, ಮನಸ್ಸಿನ ತುಂಬಾ ಭ್ರಮೆ ಆವರಿಸಬಹುದು, ಆಘಾತಗಳಾಗಬಹುದು, ಮಾನಸಿಕ ಹಿಂಸೆಯನ್ನು ಅನುಭವಿಸಬಹುದು. ಇಷ್ಟು ಮಾತ್ರವಲ್ಲದೆ ಕೆಮ್ಮು, ಸ್ನಾಯು ದೌರ್ಬಲ್ಯ, ಎದೆಯಲ್ಲಿ ಸೋಂಕಿನ ಅಪಾಯ ಕಾಣಿಸಬಹುದು, ರಕ್ತದೊತ್ತಡ, ಹೃದಯಾಘಾತ, ಯಕೃತ್ ಊದಿಕೊಂಡು ಹೈಪಟೈಟಿಸ್ ಸಿರೋಸಿಸ್ಗೆ ದಾರಿ ಮಾಡಿಕೊಡಬಹುದು, ಹೊಟ್ಟೆಯಲ್ಲಿ ಉರಿ, ವಾಂತಿ, ಹುಣ್ಣುಗಳಾಗಬಹುದು. ಪ್ಯಾಂಕ್ರಿಯಾಟಿಟೀಸ್, ಪುರುಷರಲ್ಲಿ ದುರ್ಬಲತೆ, ಮಹಿಳೆಯರಲ್ಲಿ ಬಂಜೆತನವೂ ಕಂಡುಬರಬಹುದು. ನರಗಳು ದೌರ್ಬಲ್ಯಗೊಂಡು ಕೈಗಳಲ್ಲಿ ನಡುಕ ಹುಟ್ಟಬಹುದು. ನರಗಳು ಮರಗಟ್ಟಿದ ಅನುಭವವಾಗಬಹುದು.
ಕುಡಿಯುತ್ತಾ ಸಾವಿಗೆ ಹತ್ತಿರವಾಗುತ್ತಾರೆ
ಮದ್ಯವ್ಯಸನಿಗಳು ಕುಡಿಯುತ್ತಲೇ ಇರಬೇಕು. ಕುಡಿದರೆ ಮಾತ್ರ ನಡೆದಾಡಲು, ಕೆಲಸ ಮಾಡಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ಮಂಕಾಗುತ್ತಾರೆ. ಏನೋ ಕಳೆದುಕೊಂಡವರಂತೆ ಇರುತ್ತಾರೆ. ಬಹಳಷ್ಟು ಜನ ಮದ್ಯ ವ್ಯಸನಿಗಳು ಲಿವರ್ ಸೋಂಕುಗಳಿಂದ ಬಳಲುತ್ತಿರುತ್ತಾರೆ. ಅಷ್ಟೇ ಅಲ್ಲದೆ ಅದರ ತೊಂದರೆಯಿಂದಲೇ ಸಾವನ್ನಪ್ಪುತ್ತಾರೆ. ಮೋಜು ಮಸ್ತಿಯಿಂದ ಆರಂಭವಾಗುವ ಮದ್ಯಸೇವಿಸುವ ಅಭ್ಯಾಸ, ಕ್ರಮೇಣ ಚಟವಾಗಿ ಕೆಲವರಿಗೆ ಚಟ್ಟಕಟ್ಟುವವರೆಗೆ ನಿಲ್ಲದೆ ಕಾಡುತ್ತದೆ. ಕುಡಿತದಿಂದ ಎಷ್ಟೆಲ್ಲ ತೊಂದರೆಗಳಿವೆ ಎಂಬುದು ಗೊತ್ತಿದ್ದರೂ ಜನ ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಬಹಳಷ್ಟು ಮಂದಿ ಕುಡಿತದ ಚಟದಿಂದ ಹೊರಬಂದು ತಮ್ಮ ಜೀವನ ಮತ್ತು ಆರೋಗ್ಯವನ್ನು ಸರಿಪಡಿಸಿಕೊಂಡಿದ್ದಾರೆ. ಅಂತಹವರನ್ನು ನೋಡಿಕೊಂಡು ಇತರರು ದೃಢ ಮನಸ್ಸು ಮಾಡಿ ಅದರಿಂದ ಹೊರಬರಬೇಕು. ಆಗ ಮಾತ್ರ ಒಂದೊಳ್ಳೆಯ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ.
ದೃಢ ಮನಸ್ಸಿದ್ದರೆ ಕುಡಿತ ಬಿಡುವುದು ಕಷ್ಟವಲ್ಲ
ಕುಡಿತ ಬಿಡಬೇಕೆಂದು ಬಯಸುವವರು ಕುಡಿತದ ಚಟ ಬಿಡಿಸುವ ಸಂಸ್ಥೆಗಳ ಮೊರೆಹೋಗಬಹುದು ಅಥವಾ ವೈದ್ಯರ ಸಲಹೆ ಪಡೆಯಬಹುದು ಅದರಂತೆ ಮಾಡಬಹುದು. ಮದ್ಯವರ್ಜನ ಶಿಬಿರಗಳಿಗೂ ಹೋಗಬಹುದಾಗಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಕುಡಿತವನ್ನು ಬಿಡಬೇಕೆನ್ನುವ ಆಲೋಚನೆ ನಮ್ಮಲ್ಲಿ ಮೂಡಬೇಕು. ಅಷ್ಟೇ ಅಲ್ಲ ಬಿಟ್ಟೇ ಬಿಡುತ್ತೇನೆ ಎಂಬ ಹಠವೂ ಬೇಕು. ಸ್ವಯಂ ಇಚ್ಛೆಯಿಂದ ಮುನ್ನಡೆದರೆ ಕುಡಿತವನ್ನು ದೂರ ಮಾಡುವುದು ಕಷ್ಟವೇನಲ್ಲ. ಒಂದು ಕಾಲದಲ್ಲಿ ಕುಡಿತದ ದಾಸರಾಗಿದ್ದು, ನಂತರ ಅದರಿಂದ ಹೊರ ಬಂದು ಉತ್ತಮ ಬದುಕನ್ನು ಕಟ್ಟಿಕೊಂಡವರ ದೊಡ್ಡ ಪಟ್ಟಿಯೇ ಇದೆ. ಹೀಗಿರುವಾಗ ದೃಢ ಮನಸ್ಸು ಮಾಡಿದರೆ ಯಾವುದೂ ಕಷ್ಟವಲ್ಲ ಎಂಬುದಂತು ಸತ್ಯ.