ಅಜಿತ್ ಪೂವಣ್ಣರ ಕೈಚಳಕದಲ್ಲಿ ಕರಟವೇ ಕಲಾಕೃತಿಯಾಯ್ತು
ಕಲೆಗಾರರ ಕೈಗೆ ಏನೇ ಸಿಕ್ಕರೂ ಅದು ಹೊಸ ರೂಪ ತಾಳುತ್ತದೆ ಎಂಬುದಕ್ಕೆ, ಬಳಸಿ ಎಸೆಯುವ ತೆಂಗಿನ ಕಾಯಿಯ ಕರಟ (ಚಿಪ್ಪು)ದಲ್ಲಿ ಅಜಿತ್ ಪೂವಣ್ಣ ಮೂಡಿಸಿದ ವಿವಿಧ ಕಲಾಕೃತಿಗಳೇ ಸಾಕ್ಷಿಯಾಗಿವೆ.
ಸಾಮಾನ್ಯವಾಗಿ ನಾವೆಲ್ಲರೂ ಅಡುಗೆಗೆ ಬಳಸುವ ತೆಂಗಿನ ಕಾಯಿಯ ಕರಟವನ್ನು ಎಸೆಯುತ್ತೇವೆ ಅಥವಾ ಬೆಂಕಿ ಉರಿಸಲು ಬಳಸುತ್ತೇವೆ. ಹಿಂದೆ ಅಡುಗೆ ಬಡಿಸಲು ಸೌಟುಗಳಿಗೆ ಬಳಸುತ್ತಿದ್ದರು. ಈಗ ಅದು ಕೂಡ ಕಡಿಮೆಯಾಗಿದೆ. ಹೀಗಿರುವಾಗ ಕರಟವನ್ನು ಬಳಸಿ ಅಜಿತ್ ಪೂವಣ್ಣ ತಯಾರಿಸಿದ ಸುಂದರ ಕಲಾಕೃತಿಗಳು ಬೆರಗು ಮೂಡಿಸುತ್ತವೆ.
ಗಜಪಡೆ ಅಲಂಕಾರದ ಹಿಂದಿರುವ ಪಾಷಾಗೊಂದು ಸಲಾಂ
ವಿರಾಜಪೇಟೆಯ ಅಜಿತ್ ಪೂವಣ್ಣಗೆ ಒಲಿದ ಕಲೆ
ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅದನ್ನು ಕಠಿಣ ಶ್ರಮದ ಮೂಲಕ ಸಿದ್ಧಿಸಿಕೊಂಡರೆ ಅದ್ಭುತ ಲೋಕವನ್ನೇ ಸೃಷ್ಟಿಸಬಹುದು ಎಂಬುದಕ್ಕೆ ಅಜಿತ್ ಪೂವಣ್ಣ ನಿದರ್ಶನರಾಗಿದ್ದಾರೆ. ಮಾಳೇಟಿರ ಅಜಿತ್ ಪೂವಣ್ಣ ಅವರು ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದವರು. ತೆಂಗಿನ ಚಿಪ್ಪನ್ನು ಬಳಸಿ ತಯಾರು ಮಾಡುತ್ತಿದ್ದ ಸೌಟುಗಳನ್ನು ನೋಡಿದ್ದ ಅವರಿಗೆ ತಾವೂ ಕರಟಗಳನ್ನು ಬಳಸಿ ಏನಾದರೊಂದು ತಯಾರಿಸಬೇಕು ಎಂಬ ಆಸಕ್ತಿ ಮೂಡಿತ್ತು. ಅದು ಮುಂದೆ ಹೊಸ ಆಲೋಚನೆಗಳನ್ನು ಹುಟ್ಟು ಹಾಕಿತು.
60ಕ್ಕೂ ಹೆಚ್ಚು ಕಲಾಕೃತಿಗಳು
ಆ ಆಸಕ್ತಿಯಿಂದ ಇಂದು ಅವರ ಸಂಗ್ರಹದಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಕಲಾಕೃತಿಗಳು ಮೈದಾಳಿ ನಿಂತಿವೆ. ಓದು ಮುಗಿಸಿ ಬೆಂಗಳೂರಿನ ಕೆಲವು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡಿ ಮತ್ತೆ ಹುಟ್ಟೂರಲ್ಲಿರುವ ಅವರು ಇಂದಿಗೂ ತಮ್ಮ ಬಿಡುವಿನ ಸಮಯವನ್ನು ವ್ಯರ್ಥ ಮಾಡದೆ ತೆಂಗಿನ ಕರಟಕ್ಕೆ ಜೀವ ತುಂಬುವ ಕೆಲಸದಲ್ಲಿ ಮಗ್ನರಾಗಿ ಬಿಡುತ್ತಾರೆ.
ಕರಟದಲ್ಲಿ ಅರಳಿದ ಕಲೆ...
ಅವರ ಸಂಗ್ರಹದಲ್ಲಿ ಕರಟದಿಂದ ಜೀವ ತಾಳಿದ ಶಿವನಗುಡಿ, ಪಕ್ಷಿ, ಕೋಳಿ, ಚಿಟ್ಟೆ, ಕಪ್ಪು, ಪಾತ್ರೆ, ಪೆನ್ನು, ಲಾಕೆಟ್, ಬ್ರೋಚ್, ತಾವರೆ, ಲ್ಯಾಂಪ್ ಸ್ಟ್ಯಾಂಡ್ ಸೇರಿದಂತೆ ಹಲವು ವಿಧದ ಕಲಾಕೃತಿಗಳಿದ್ದು, ಅವುಗಳೆಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿ ಗಮನಸೆಳೆಯುತ್ತವೆ. ಕಲಾಕೃತಿ ತಯಾರಿಕೆಗೆ ಅಗತ್ಯ ಸಲಕರಣೆಗಳನ್ನು ಆನ್ಲೈನ್ ಮೂಲಕ ತರಿಸಿಕೊಂಡಿದ್ದಾರೆ.
ಅಜಿತ್ ಗೆ ಸಂಗೀತದಲ್ಲೂ ಆಸಕ್ತಿ
ತೆಂಗಿನಕಾಯಿಯ ಕರಟವನ್ನು ಅಜಿತ್ ಮೊದಲು ಚೆನ್ನಾಗಿ ಪಾಲಿಶ್ ಮಾಡುತ್ತಾರೆ. ನಂತರ ಅದರಿಂದ ಕಲಾಕೃತಿಗಳನ್ನು ರೂಪಿಸುತ್ತಾರೆ. ಇದು ಅಷ್ಟು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಅದಕ್ಕೇ ಆದ ಕಲೆಗಾರಿಕೆ ಬೇಕು. ಜತೆಗೆ ನಾಜೂಕು, ತಾಳ್ಮೆ ಎಲ್ಲವೂ ಬೇಕಾಗುತ್ತದೆ. ಆಗ ಮಾತ್ರ ಒಂದು ಸುಂದರ ಕಲಾಕೃತಿ ಸೃಷ್ಠಿಯಾಗಲು ಸಾಧ್ಯವಾಗುತ್ತದೆ. ಕರಟದ ಕಲೆಯೊಂದಿಗೆ ಸಂಗೀತದಲ್ಲಿಯೂ ಆಸಕ್ತಿ ಹೊಂದಿರುವ ಅಜಿತ್ ಪೂವಣ್ಣ.