ಚುನಾವಣೆಗೆ 15 ತಿಂಗಳು ಮುನ್ನವೇ ಭರ್ಜರಿ ಕಾರ್ಯತಂತ್ರ ಹಣೆದ ಸೋನಿಯಾ ಗಾಂಧಿ
ಸರಕಾರ ಮತ್ತೆ ಸ್ಥಾಪಿಸಬಹುದು ಎನ್ನುವ ಲೆಕ್ಕಾಚಾರವನ್ನು ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಹೊಂದಿರುವುದು ಒಂದು ಕೇರಳದಲ್ಲಿ ಇನ್ನೊಂದು ಕರ್ನಾಟಕದಲ್ಲಿ. ಅದರಲ್ಲಿ, ಕಳೆದ ವರ್ಷ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತ್ತು.
ಕೇರಳದಲ್ಲಿ ಸರಿಯಾಗಿ ಕಾರ್ಯತಂತ್ರ ಮತ್ತು ಪ್ರಚಾರ ಮಾಡುವುದರಲ್ಲಿ ಎಡವಿದ್ದ ಕಾಂಗ್ರೆಸ್, ಈಗ ಕರ್ನಾಟಕದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದವಿಲ್ಲ. ಹಾಗಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮೂಲಕ ನೇರವಾಗಿ ಪಕ್ಷದ ಆಗುಹೋಗುಗಳ ಮೇಲೆ ಹಿಡಿತವನ್ನು ಪಕ್ಷ ಸಾಧಿಸುತ್ತಿದೆ.
ಬಿಜೆಪಿ, ಕಾಂಗ್ರೆಸ್ಸಿನ ಪಕ್ಷಾಂತರ ಎನ್ನುವ ಸೂತ್ರವಿಲ್ಲದ ಗಾಳಿಪಟ
2020ರಲ್ಲಿ ಐದು ಜನರನ್ನು ಪ್ರಾಂತ್ಯ/ಜಾತಿ ಆಧಾರಿತವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಎಐಸಿಸಿ ನಿಯೋಜಿಸಿತ್ತು. ಅದರಲ್ಲಿ ರಾಮಲಿಂಗ ರೆಡ್ಡಿ (ಒಕ್ಕಲಿಗ), ಈಶ್ವರ್ ಖಂಡ್ರೆ (ಲಿಂಗಾಯತ) ಸಲೀಂ ಅಹ್ಮದ್ (ಅಲ್ಪ ಸಂಖ್ಯಾತ), ಧ್ರುವ ನಾರಾಯಣ (ಎಸ್ ಸಿ) ಮತ್ತು ಸತೀಶ್ ಜಾರಕಿಹೊಳಿಯವರು ಎಸ್ ಟಿ ಸಮುದಾಯದವರನ್ನು ನೇಮಿಸಿ, ಕಾಂಗ್ರೆಸ್ ಬ್ಯಾಲನ್ಸ್ ಮಾಡಿತ್ತು.
ಈಗ, ಚುನಾವಣೆಗೆ ಇನ್ನೂ ಹೆಚ್ಚುಕಮ್ಮಿ ಹದಿನೈದು ತಿಂಗಳು ಇರುವಾಗಲೇ ಪ್ರಚಾರ ತಂತ್ರಗಾರಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಲಿಂಗಾಯತ ಸಮುದಾಯದ ನಾಯಕರೊಬ್ಬರಿಗೆ ಎಐಸಿಸಿ ವಹಿಸಿದೆ.
ಸೋನಿಯಾ ಗಾಂಧಿಯವರಿಂದ ಇದೊಂದು ಉತ್ತಮ ಹೆಜ್ಜೆಯೆಂದು ವ್ಯಾಖ್ಯಾನಿಸಲಾಗುತ್ತಿದೆ. ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕ ಆದವರಿಗೆ ಯಾವರೀತಿಯ ಜವಾಬ್ದಾರಿ ಇರಲಿದೆ ಎನ್ನುವ ವಿಚಾರಕ್ಕೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಾಗಿದೆ.
ಗಣರಾಜ್ಯೋತ್ಸವದಂದು ಕಾಂಗ್ರೆಸ್ಸಿಗೆ ಕ್ಲಿಯರ್ ಕಟ್ ಹೊಸ ಸಂದೇಶ ರವಾನಿಸಿದ ಕುಮಾರಸ್ವಾಮಿ
ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ಲಿಂಗಾಯತ ನಾಯಕ
ಕರ್ನಾಟಕದ ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಶಾಸಕ, ಮಾಜಿ ಜಲಸಂಪನ್ಮೂಲ ಖಾತೆಯ ಸಚಿವರಾಗಿರುವ ಎಂ.ಬಿ.ಪಾಟೀಲ್ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ. ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡಿರುವ ಇವರು ಪ್ರಭಾವಿ ಲಿಂಗಾಯತ ಸಮುದಾಯದವರಾಗಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುವ ವಿಚಾರ ಭುಗಿಲೇಳಲು ಎಂ.ಬಿ.ಪಾಟೀಲ್ ಪ್ರಮುಖ ಕಾರಣಕರ್ತರು ಎನ್ನುವ ಆಪಾದನೆ ಅವರ ಪಕ್ಷದಲ್ಲೇ ಇತ್ತು ಎನ್ನುವುದು ಗಮನಿಸಬೇಕಾದ ವಿಚಾರ.
ಎಂ.ಬಿ.ಪಾಟೀಲ್ ಮಾಡಿರುವ ಜನಾನುರಾಗಿ ಕೆಲಸ
ಪ್ರತ್ಯೇಕ ಧರ್ಮದ ವಿಚಾರ ಈಗ ತೆರೆಮೆರೆಗೆ ಸರಿದಿರುವುದು ಮತ್ತು ಕೋವಿಡ್ ಸಂದರ್ಭದಲ್ಲಿ ತಮ್ಮ ಆಸ್ಪತ್ರೆಯ ಮೂಲಕ ಎಂ.ಬಿ.ಪಾಟೀಲ್ ಮಾಡಿರುವ ಜನಾನುರಾಗಿ ಕೆಲಸಗಳಿಂದಾಗಿ ಇವರಿಗೆ ಈ ಮಹತ್ವದ ಜವಾಬ್ದಾರಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ, ರಾಜಕಾರಣದಲ್ಲಿ ಪ್ರಮುಖವಾಗಿರುವ ಜಾತಿ ಲೆಕ್ಕಾಚಾರವೂ ಇವರ ಆಯ್ಕೆಗೆ ಇನ್ನೊಂದು ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಸಿದ್ದರಾಮಯ್ಯನವರು ಹಿಂದುಳಿದ ವರ್ಗ, ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯ
ಈಗಾಗಲೇ ಜಾತಿ ಮತ್ತು ವಿವಿಧ ಜಿಲ್ಲೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಇನ್ನು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹಿಂದುಳಿದ ವರ್ಗ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಹಾಗಾಗಿ, ರಾಜ್ಯದ ಇನ್ನೊಂದು ಪ್ರಮುಖ ಸಮುದಾಯದ ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್ ಅವರನ್ನು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಎಲ್ಲಾ ಜಾತಿಗಳಿಗೆ ಪ್ರಾತಿನಿಧ್ಯ ನೀಡುವ ಕೆಲಸವನ್ನು ಎಐಸಿಸಿ ಮಾಡಿದೆ.
ಲಿಂಗಾಯತ ಸಮುದಾಯದ ವರ್ಚಸ್ವೀ ನಾಯಕ ಯಡಿಯೂರಪ್ಪ
"ಪಕ್ಷ ನನಗೆ ಬಹುದೊಡ್ಡ ಜವಾಬ್ದಾರಿಯನ್ನು ನೀಡಿದೆ ಮತ್ತು ಇದನ್ನು ಸಂತೋಷ ಮತ್ತು ಸವಾಲಾಗಿ ಸ್ವೀಕರಿಸುತ್ತೇನೆ. ನಿಷ್ಠೆಯಿಂದ ಕೆಲಸ ನಿರ್ವಹಿಸಿ, ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುತ್ತೇನೆ"ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ಲಿಂಗಾಯತ ಸಮುದಾಯದ ವರ್ಚಸ್ವಿ ನಾಯಕ ಯಡಿಯೂರಪ್ಪನವರು ಮುಂದಿನ ಚುನಾವಣೆಯ ವೇಳೆಗೆ ಸಕ್ರಿಯ ರಾಜಕಾರಣದಲ್ಲಿ ಇಲ್ಲದೇ ಇದ್ದರೆ, ಆ ಸಮುದಾಯದ ನಾಯಕ ಯಾರು ಎನ್ನುವ ಪ್ರಶ್ನೆ ಈಗಲೇ ಆರಂಭವಾಗಿದ್ದು ಎಂ.ಬಿ. ಪಾಟೀಲ್ ಇದರಲ್ಲಿ ಮಂಚೂಣಿಯಲ್ಲಿದ್ದಾರೆ.