21 ವರ್ಷದಿಂದ ಪಾಕ್ ಜೈಲಲ್ಲಿರುವ ಸೋದರನಿಗೆ ರಾಖಿ ಕಳಿಸುತ್ತಿರುವ ರೇಖಾ
ಪ್ರತಿ ವರ್ಷದ ರಕ್ಷಾ ಬಂಧನದ ದಿನ ಅಹ್ಮದಾಬಾದ್ ನ ಆ ಹೆಣ್ಣುಮಗಳು ತನ್ನ ಸೋದರನಿಗೆ ರಾಖಿ ಕಳಿಸಿಕೊಡುತ್ತಲೇ ಇದ್ದಾರೆ. ಈ ಸಲದ ಲೆಕ್ಕ ಸೇರಿ ಹೇಳಬೇಕು ಅಂದರೆ ಇಪ್ಪತ್ತೊಂದು ವರ್ಷವಾಯಿತು. ಬೇರೆ ಯಾರಿಗಾದರೂ ಆಗಿದ್ದರೆ ಆತ ಬದುಕಿರುವ ಬಗ್ಗೆಯೇ ಅನುಮಾನ ಶುರುವಾಗಿರುತ್ತಿತ್ತು.
ಆದರೆ, 45 ವರ್ಷದ ರೇಖಾ ಯಾದವ್ ಪಾಕಿಸ್ತಾನದ ಕೋಟ್ ಲಖ್ ಪತ್ ಜೈಲಿಗೆ ಶ್ರದ್ಧೆಯಿಂದ ರಾಖಿ ಕಳಿಸುತ್ತಲೇ ಇದ್ದಾರೆ. ಭಾರತದ ಪರ ಗೂಢಚಾರ ಮಾಡಿದ ಆರೋಪದ ಮೇಲೆ 1994ರಿಂದಲೂ ಕುಲದೀಪ್ ಯಾದವ್ ಪಾಕಿಸ್ತಾನದ ಜೈಲಿನಲ್ಲಿದ್ದಾರೆ. ಈಚೆಗೆ ಆತನಿಂದ ಪತ್ರಗಳು ಬರುವುದು ನಿಂತ ಮೇಲೆ ಯಾದವ್ ಬದುಕಿದ್ದಾನಾ, ಈ ರಾಖಿ ಆತನನ್ನು ತಲುಪಬಹುದಾ ಎಂಬ ಶಂಕೆ ಬರುತ್ತಿದೆ.
ಸಹೋದರತ್ವದ ಸಂಕೇತವಾದ ರಕ್ಷಾಬಂಧನ ಆಚರಣೆ ಏಕೆ?
1997ರಲ್ಲಿ ಕುಲದೀಪ್ ಯಾದವ್ ಪಾಕಿಸ್ತಾನದ ಜೈಲಿನಲ್ಲಿರುವ ಬಗ್ಗೆ ರೇಖಾ ಕುಟುಂಬಕ್ಕೆ ಗೊತ್ತಾಗಿದೆ. ಅಲ್ಲಿನ ಸೇನಾ ಕೋರ್ಟ್ ಇಪ್ಪತ್ತೈದು ವರ್ಷಗಳ ಜೈಲು ಶಿಕ್ಷೆಯನ್ನು ಆತನಿಗೆ ವಿಧಿಸಿದೆ. ಕೋಟ್ ಲಖಪತ್ ಜೈಲಿನಲ್ಲಿ ಇರಿಸಲಾಗಿದೆ ಎಂಬ ಸಂಗತಿ ಗೊತ್ತಾದ ಮೇಲೆ ಅಲ್ಲಿಂದ ಆಗಾಗ ಪತ್ರಗಳು ಕೂಡ ಬರುತ್ತಿದ್ದವು. 2011ರ ನಂತರ ಪತ್ರಗಳು ಬರುವುದು ನಿಂತುಹೋದವು ಎನ್ನುತ್ತಾರೆ.
ಆ ಮೇಲೆ ಕುಲದೀಪ್ ಯಾದವ್ ಬದುಕಿದ್ದಾರಾ-ಇಲ್ಲವಾ? ಈ ರಾಖಿ ಸಿಕ್ಕುತ್ತಿದೆಯಾ ಗೊತ್ತಿಲ್ಲ. ಆದರೆ ಅವನು ಜೀವಂತವಾಗಿ ವಾಪಸ್ ಬರಲಿ ಅಂತ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಿಲ್ಲ ಎಂದು ಮೇಲಿಂದ ಮೇಲೆ ಪ್ರಶ್ನೆ ಕೇಳಿದ ನಂತರ ಉತ್ತರಿಸುತ್ತಾರೆ.
ಕೇಂದ್ರ ಸರಕಾರವು ಪಾಕ್ ನೊಂದಿಗೆ ಮಾತುಕತೆ ನಡೆಸಿ, ಇನ್ನು ಮೂರು ವರ್ಷಕ್ಕೆ ಕುಲದೀಪ್ ಶಿಕ್ಷೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದೆ. ವರ್ಷಗಟ್ಟಲೆ ಕಾದಿರುವ ನಾವು ಅಷ್ಟು ಕಾಯ್ದೇ ಕಾಯ್ತೀವಿ. ಆದರೆ ಅವನು ಜೀವಂತ ವಾಪಸ್ ಬರುವ ಖಾತ್ರಿ ನಮಗೆ ಬೇಕು ಎನ್ನುತ್ತದೆ ಈ ಕುಟುಂಬ.
ಭ್ರಾತೃತ್ವದ ದ್ಯೋತಕ ರಾಖಿ ಹಬ್ಬ: ಪುರಾಣ, ಐತಿಹಾಸಿಕ ಮಹತ್ವ
ಎಲ್ ಎಲ್ ಬಿ ಪೂರ್ಣಗೊಳಿಸಿದ್ದ ಕುಲದೀಪ್ ದೆಹಲಿಗೆ ತೆರಳಿ ಕೆಲ ಕಾಲ ಕೆಲಸ ಮಾಡಿದ್ದ. ಆದರೆ 1994ರಿಂದ ನಾಪತ್ತೆಯಾಗಿದ್ದ. ರೇಖಾ ಯಾದವ್ ತನ್ನ ಸೋದರನ ಸಲುವಾಗಿ ರಾಜ್ಯ- ಕೇಂದ್ರ ಸರಕಾರಗಳಿಗೆ ಅಲೆದಾಡಿದ್ದಾರೆ. ಹಲವು ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದಾರೆ. ಅಂದಹಾಗೆ ರೇಖಾ ಅವರು ಸಹಾನುಭೂತಿ ಆಧಾರದಲ್ಲಿ ಸರಕಾರಿ ಕೆಲಸವೊಂದರ ನಿರೀಕ್ಷೆಯಲ್ಲಿ ಇದ್ದಾರೆ.