ವಿವಾಹೇತರ ಸಂಬಂಧದ ಆತಂಕದಲ್ಲಿ ನೆನಪಾದಳು ಗೌತಮರ ಪತ್ನಿ ಅಹಲ್ಯೆ
ಹಾದರದ ಸಂಬಂಧ ಅಪರಾಧ ಎಂದು ಪರಿಗಣಿಸುವಂತಿಲ್ಲ. ಒಂದು ವೇಳೆ ಅಂಥ ಸಂಬಂಧ ಆತ್ಮಹತ್ಯೆಗೆ ಪ್ರೇರೇಪಣೆ ನೀಡುವ ಹಾಗಿದ್ದರೆ ಮಾತ್ರ ಅದು ಅಪರಾಧ ಎಂದು ಸುಪ್ರೀಂ ಕೋರ್ಟ್ ನ ತೀರ್ಪು ಬಂದಿದೆ. ಈ ಸಮಯಕ್ಕೆ ಪುರಾಣದ ಪಾತ್ರಧಾರಿ ಅಹಲ್ಯೆ ನೆನಪಾಗುತ್ತಾಳೆ. 'ನೀನು ಕಲ್ಲಾಗು' ಎಂದು ಶಾಪ ನೀಡಿದ ಗೌತಮ ಮಹರ್ಷಿಯು, ಆಕೆಯ ಪಾತಿವ್ರತ್ಯದ ಬಗ್ಗೆ ಅನುಮಾನ ತಂದಿಟ್ಟ ಇಂದ್ರ ಎಲ್ಲ ಇಷ್ಟಿಷ್ಟೇ ನೆನಪಾಗುತ್ತಾರೆ.
ಬ್ರಹ್ಮ ಸೃಷ್ಟಿ ಮಾಡಿದ ತುಂಬ ಚಂದದ ಹೆಣ್ಣುಮಗಳು ಅಹಲ್ಯೆ. ಆಕೆಯನ್ನು ತೀರಾ ವಯಸ್ಸಾದ ಗೌತಮ ಋಷಿಗೆ ಮದುವೆ ಮಾಡಲಾಯಿತು. ಅಹಲ್ಯೆಯನ್ನು ಕಂಡು ಮೋಹಗೊಂಡ ಇಂದ್ರನು ಗೌತಮ ಋಷಿಯ ರೂಪದಲ್ಲಿ ಬಂದು, ಅಕೆಯೊಂದಿಗೆ ಒಂದಾದ. ಇದು ಗೊತ್ತಾದ ಮೇಲೆ ಅಹಲ್ಯೆ ಹಾಗೂ ಇಂದ್ರ ಇಬ್ಬರನ್ನೂ ಗೌತಮರು ಶಪಿಸಿದರು.
ವ್ಯಭಿಚಾರ ಅಪರಾಧವಲ್ಲ: ಸುಪ್ರೀಂ ಐತಿಹಾಸಿಕ ತೀರ್ಪು
ಪತ್ನಿಗೆ ಕಲ್ಲಾಗು ಎಂದು ಶಾಪವಿತ್ತರೆ, ಇಂದ್ರನಿಗೆ ಸಹಸ್ರಾಕ್ಷ (ಸಾವಿರ ಕಣ್ಣುಳ್ಳವನು) ಆಗು ಎಂದು ಶಾಪ ನೀಡುತ್ತಾರೆ ಗೌತಮ. ಆ ನಂತರ ರಾಮನ ಪಾದಸ್ಪರ್ಶದಿಂದ ಅಹಲ್ಯೆಯ ಶಾಪ ವಿಮೋಚನೆ ಆಗುತ್ತದೆ. ಇಂದಿಗೂ ಅಹಲ್ಯೆಯನ್ನು ಐವರು ಪತಿವ್ರತೆಯರಲ್ಲಿ ಒಬ್ಬಳಾಗಿ ಸ್ಮರಿಸುತ್ತಾರೆ.
ಗಂಡ ಹೆಂಡತಿಯ ಯಜಮಾನನಲ್ಲ : ಐಪಿಸಿ ಸೆಕ್ಷನ್ 497 ಕಸದಬುಟ್ಟಿಗೆ
ಭಾರತೀಯ ಸಮಾಜವು ಮದುವೆ ಎಂಬುದನ್ನು ಬಹಳ ಪವಿತ್ರವಾದ ಸಂಬಂಧ ಎಂದು ಪರಿಗಣಿಸಿದೆ. ಕಾಯಾ, ವಾಚಾ, ಮನಸಾ (ದೈಹಿಕವಾಗಿ, ಮಾತಿನಿಂದ, ಮನಸ್ಸಿನಲ್ಲಿ ಕೂಡ) ಮತ್ತೊಬ್ಬ ವ್ಯಕ್ತಿಯನ್ನು ಕಾಮದ ದೃಷ್ಟಿಯಿಂದ ನೋಡಬಾರದು ಎಂದು ನಂಬುವ ಸಮಾಜ ಇದು. ಇದೇ ವಿಚಾರ ಧರ್ಮಶಾಸ್ತ್ರದ ಗಂಡು-ಹೆಣ್ಣು ಇಬ್ಬರಿಗೂ ಅನ್ವಯಿಸುತ್ತದೆ.
ಹೆಣ್ಣಿಗೂ ಸಮಾನ ಶಿಕ್ಷೆ ಆಗಬೇಕು ಎಂದು ಅರ್ಜಿ ಹಾಕಿದ್ದರು
ಆದರೆ, ಹಾದರದ ಸಂಬಂಧ ಅಥವಾ ವಿವಾಹಕ್ಕೆ ಹೊರತಾದ, ವಿವಾಹೇತರ ಸಂಬಂಧ ವಿಚಾರದಲ್ಲಿ ಐಪಿಸಿ ಸೆಕ್ಷನ್ 497 ಈ ವರೆಗೆ ಚಾಲ್ತಿಯಲ್ಲಿತ್ತು. ಅದರ ಅಡಿಯಲ್ಲಿ ವಿವಾಹಿತ ಸ್ತ್ರೀಯ ಗಂಡನ ಒಪ್ಪಿಗೆ ಪಡೆದು ಲೈಂಗಿಕ ಸಂಪರ್ಕ ಪಡೆದರೆ ಅದು ಅಪರಾಧ ಎಂದು ಪರಿಗಣಿಸುತ್ತಿರಲಿಲ್ಲ. ಇನ್ನು ವಿವಾಹಿತ ಸ್ತ್ರೀ ಮತ್ತೊಬ್ಬ ವಿವಾಹಿತ ಪುರುಷನ ಜತೆಗೆ ಒಪ್ಪಿಗೆಯ ಲೈಂಗಿಕ ಸಂಬಂಧ ಹೊಂದಿದ್ದರೆ ವಿವಾಹೇತರ ಸಂಬಂಧ ಇರಿಸಿಕೊಂಡ ಪುರುಷನಿಗೆ ಶಿಕ್ಷೆಯಿತ್ತು. ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತಿತ್ತು. ಈ ರೀತಿಯ ಕಾನೂನು ಸಂವಿಧಾನಕ್ಕೆ ವಿರುದ್ಧವಾದದ್ದು. ಹಾದರದ ಸಂಬಂಧವನ್ನು ಪ್ರೋತ್ಸಾಹಿಸಿದ ಹೆಣ್ಣಿಗೂ ಸಮಾನವಾದ ಶಿಕ್ಷೆ ಆಗಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಎನ್ ಆರ್ ಐವೊಬ್ಬರು ಅರ್ಜಿ ಹಾಕಿದ್ದರು.
ಮದುವೆ ಪಾವಿತ್ರ್ಯವೇ ಹಾಳಾದಂತಾಗುತ್ತದೆ
ಹಾದರ ಸಂಬಂಧವನ್ನು ಅಪರಾಧ ಅಲ್ಲ ಎಂದು ಪರಿಗಣಿಸಿಬಿಟ್ಟರೆ ಭಾರತೀಯ ಸಮಾಜದ ಮದುವೆ ಪಾವಿತ್ರ್ಯವೇ ಹಾಳಾದಂತಾಗುತ್ತದೆ ಎಂದು ಕೇಂದ್ರ ಸರಕಾರವು ಹೇಳಿತ್ತು. ಇದೀಗ ಅಂತಿಮವಾಗಿ ಬ್ರಿಟಿಷರ ಕಾಲದ ಕಾನೂನು ಕಣ್ಣು ಮುಚ್ಚಿದೆ. ಹೆಣ್ಣು ಆಕೆಯ ಪತಿ ಪಾಲಿನ ಆಸ್ತಿಯಲ್ಲ. ಅವನ ಒಪ್ಪಿಗೆ ಪಡೆದು ಲೈಂಗಿಕ ಸಂಬಂಧ ಬೆಳೆಸಬಹುದು ಎಂಬ ಕಾನೂನು ತಪ್ಪು. ಇನ್ನು ವಿವಾಹೇತರ ಸಂಬಂಧ ಹೊಂದಿದ ಸ್ತ್ರೀ ಅಥವಾ ಪುರುಷನಿಂದ ವಿವಾಹ ವಿಚ್ಛೇದನ ಪಡೆಯಲು ಇದೊಂದು ಕಾರಣ ಆಗಬಹುದು ಹೊರತು ಅದು ಅಪರಾಧವಲ್ಲ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ.
ಅನೈತಿಕ ಸಂಬಂಧ ಅಪರಾಧವಲ್ಲ, ವ್ಯಭಿಚಾರಕ್ಕೂ ಸಿಕ್ತು ಸಮಾನತೆ?
ಸಮಾಜವನ್ನು ಎತ್ತ ನಡೆಸುತ್ತದೋ ಗೊತ್ತಿಲ್ಲ
ಇದೀಗ ಈ ತೀರ್ಪು ಹೆಣ್ಣಿನ ಸ್ವಾತಂತ್ರ್ಯಕ್ಕೆ ಸಿಕ್ಕ ಜಯ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿವಾಹೇತರ ಸಂಬಂಧದಲ್ಲಿ ಪುರುಷನಿಗೂ ಶಿಕ್ಷೆ (ಐಪಿಸಿ ಸೆಕ್ಷನ್ 497ರ ಅಡಿಯಲ್ಲಿ ಹೆಣ್ಣಿಗೆ ಮುಂಚಿನಿಂದಲೂ ಶಿಕ್ಷೆಯಿಲ್ಲ) ಇಲ್ಲ. ವಿವಾಹಿತ ಪರಪುರುಷ ಅಥವಾ ವಿವಾಹಿತ ಪರಸ್ತ್ರೀ ಜತೆಗೆ ಸಹಮತದ ಅಥವಾ ಒಪ್ಪಂದದ ಲೈಂಗಿಕ ಸಂಬಂಧ ಅಪರಾಧವಲ್ಲ ಎಂಬ ತೀರ್ಪು ಸಹಜವಾಗಿಯೇ ಹಲವು ಪ್ರಶ್ನೆಗಳು ಏಳುವಂತೆ ಮಾಡಿವೆ. ವಿವಾಹೇತರ ಸಂಬಂಧದಿಂದ ಸಮಾಜದಲ್ಲಿ ಅವಮಾನ ಎದುರಿಸಬೇಕಾಗುತ್ತದೆ ಎಂಬುದು ಹೆಣ್ಣಿನ ಅಂಜಿಕೆಯಾಗಿದ್ದರೆ, ಇದರಿಂದ ಜೈಲು ಸೇರಬೇಕಾಗುತ್ತದೆ ಎಂಬ ಆತಂಕ ಗಂಡಿನದಾಗಿತ್ತು. ಈಗ ವಿವಾಹ ವಿಚ್ಛೇದನ ಪಡೆಯಲು ಮಾತ್ರ ಇಂಥ ಕಾರಣ ನೀಡಬಹುದು ಎಂಬುದು ಸಮಾಜವನ್ನು ಎತ್ತ ನಡೆಸುತ್ತದೋ ಗೊತ್ತಿಲ್ಲ.
ಸಮಾಜದ ನಂಬಿಕೆ ಮೇಲೆ ಅನುಮಾನದ ರಾಡಿ
ವಯಸ್ಕರರಾದ ಸಲಿಂಗಿಗಳ ಮಧ್ಯೆ ಸಹಮತದ ಲೈಂಗಿಕ ಸಂಪರ್ಕ ಅಪರಾಧವಲ್ಲ ಎಂದು ಈಚೆಗಷ್ಟೇ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪಿಗೆ ಸಹ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಇಂಥ ಲೈಂಗಿಕ ಜೀವನವನ್ನು ಅಸಹಜ ಎಂದು ಕರೆಯುತ್ತಿದ್ದ ಬಹುಸಂಖ್ಯಾತರು ಇದನ್ನು 'ಕೋರ್ಟ್ ತೀರ್ಪು' ಎಂಬ ಕಾರಣಕ್ಕೆ ಒಪ್ಪಿ ಸುಮ್ಮನಾಗಬೇಕಿತ್ತು. ಆದರೆ ಈಗಿನ ತೀರ್ಪು ಅರ್ಧ ಭಾಗ ಹೆಣ್ಣಿಗೆ ಸ್ವಾತಂತ್ರ್ಯದ ಆಯ್ಕೆಯನ್ನು ಮತ್ತು ಇನ್ನರ್ಧ ಭಾಗ ಸಮಾಜದ ನಂಬಿಕೆ ಮೇಲೆ ಅನುಮಾನದ ರಾಡಿಯನ್ನು ಎರಚಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಚರ್ಚೆ ಆಗುವುದು ಅಗತ್ಯವಿದೆ. ಏನಂತೀರಿ?