ರೈತರ ಸಾಲ ಮನ್ನಾ: ಜೆಡಿಎಸ್ ನಲ್ಲಿ ಏನು ಲೆಕ್ಕಾಚಾರ ನಡೀತಿದೆ?
Recommended Video
'ರೈತರ ಸಾಲ ಮನ್ನಾ ನಿರ್ಧಾರಕ್ಕೆ ಇನ್ನೂ ಸ್ವಲ್ಪ ಸಮಯ ಬೇಕು' ಅನ್ನೋದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮನವಿ. ಚುನಾವಣೆ ವೇಳೆಯಲ್ಲಿ ಅವರು ಹೇಳಿದ್ದ ಮಾತಾದರೂ ಏನು? ಜೆಡಿಎಸ್ ಸ್ವಂತ ಬಲದ ಮೇಲೆ ಜೆಡಿಎಸ್ ಅಧಿಕಾರ ಹಿಡಿದರೆ ಇಪ್ಪತ್ನಾಲ್ಕು ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡ್ತೀವಿ ಎಂದು ಹೇಳಿದ್ದರು.
ರಾಷ್ಟ್ರೀಕೃತ ಬ್ಯಾಂಕ್, ಕೋ ಆಪರೇಟಿವ್ ಬ್ಯಾಂಕ್ ಎಲ್ಲ ಸಾಲವನ್ನೂ ಮನ್ನಾ ಮಾಡ್ತೇನೆ ಎಂದು ಹೇಳಿದ್ದರು. ಆದರೆ ಈಗ ಅಧಿಕಾರ ಹಿಡಿದಿರುವುದು ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ. ಇಂಥ ಸನ್ನಿವೇಶದಲ್ಲಿ ಏಕಾಏಕಿ ಕುಮಾರಸ್ವಾಮಿ ಒಬ್ಬರೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾ? ಸೋಮವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸಹ ಈ ಬಗ್ಗೆ ಮಾತನಾಡಿದ್ದಾರೆ.
ಶಿರಗುಪ್ಪದ ರೈತನಿಗೆ ಕುಮಾರಸ್ವಾಮಿ ಮೇಲೆ ಯಾಕೋ ಬೇಜಾರು!
ಮೂವತ್ತೇಳು ಶಾಸಕರನ್ನು ಜತೆಗಿಟ್ಟುಕೊಂಡು ರೈತರ ಸಂಪೂರ್ಣ ಸಾಲ ಮನ್ನಾ ನಿರ್ಧಾರ ಮಾಡಲು ಸಾಧ್ಯವಾ ಎಂದಿದ್ದಾರೆ. ಹೌದು, ಮೈತ್ರಿ ಸರಕಾರ ಆದರೇನು, ಸಾಲ ಮನ್ನಾ ಮಾಡುವ ಮಾತು ಕೊಟ್ಟ ಮೇಲೆ ಉಳಿಸಿಕೊಳ್ಳಲೇಬೇಕು ಅಲ್ಲವಾ ಎಂಬ ಪ್ರಶ್ನೆಯನ್ನು ಮಾಜಿ ಶಾಸಕರು ಹಾಗೂ ಜೆಡಿಎಸ್ ಮುಖಂಡರಾದ ವೈ.ಎಸ್.ವಿ.ದತ್ತ ಅವರ ಮುಂದೆ ಒನ್ಇಂಡಿಯಾ ಕನ್ನಡ ಇಟ್ಟಾಗ, ಒಂದೊಂದೇ ಸವಾಲನ್ನು ತೆರೆದಿಟ್ಟರು ದತ್ತ.
ಕಾಂಗ್ರೆಸ್ ಒಪ್ಪಿಗೆ ಬೇಕು
ಜೆಡಿಎಸ್ ಸ್ವತಂತ್ರವಾಗಿ ಅಧಿಕಾರ ಹಿಡಿದಿದ್ದರೆ ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ನ ಕೆಲವು ಯೋಜನೆಗಳನ್ನು ಕೈ ಬಿಟ್ಟು, ಸಾಲ ಮನ್ನಾ ಯೋಜನೆಗಾಗಿ ಸಂಪನ್ಮೂಲ ಕ್ರೋಡೀಕರಿಸಬಹುದಿತ್ತು. ಆದರೆ ಈಗ ಕಾಂಗ್ರೆಸ್ ಜತೆಗೆ ಸೇರಿ ಸರಕಾರ ನಡೆಸುತ್ತಿರುವುದರಿಂದ ಸಾಲ ಮನ್ನಾಗೆ ಕೈ ಪಕ್ಷದ ಒಪ್ಪಿಗೆ ಪಡೆಯುವುದು ಜೆಡಿಎಸ್ ಗೆ ಅನಿವಾರ್ಯ ಆಗುತ್ತದೆ. ಆಗ ಕಾಂಗ್ರೆಸ್ ಷರತ್ತು ವಿಧಿಸಬಹುದು. ಈ ಹಿಂದಿನ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ಕೈ ಬಿಡದಂತೆ ಸಾಲ ಮನ್ನಾಗೆ ಸಂಪನ್ಮೂಲ ಕ್ರೋಡೀಕರಣ ಮಾಡುವುದಾದರೆ ಒಪ್ಪಿಗೆ ಸೂಚಿಸಬಹುದು. ಆಗ ಹಿಂದಿನ ಸರಕಾರದ ಯೋಜನೆಗಳನ್ನು ಕೈ ಬಿಡದೆ, ಸಾಲ ಮನ್ನಾಕ್ಕೆ ಬೇಕಾದ ಐವತ್ತೆಂಟು ಸಾವಿರ ಕೋಟಿ ರುಪಾಯಿಯನ್ನು ಹೊಂದಿಸುವುದು ಹೇಗೆ ಎಂದು ಕುಮಾರಸ್ವಾಮಿ ಆಲೋಚಿಸಬೇಕಾಗುತ್ತದೆ.
ಕೇಂದ್ರ ಸರಕಾರದಿಂದ ಹಣ ಬಿಡುಗಡೆ ಮಾಡಿಸಬೇಕು
ಐವತ್ತೆಂಟು ಸಾವಿರ ಕೋಟಿ ರುಪಾಯಿ ಸಾಲ ಮನ್ನಾದ ಮೊತ್ತದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ರೈತರ ಸಾಲವೂ ಒಳಗೊಂಡಿರುವುದರಿಂದ ಕೇಂದ್ರ ಸರಕಾರದಿಂದ ಹಣ ಬಿಡುಗಡೆಗೆ ಮನವಿ ಮಾಡುವುದು ಅನಿವಾರ್ಯ ಆಗುತ್ತದೆ. ಈ ಹಿಂದೆ ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೈತರ ಸಾಲದ ಮೇಲಿನ ಬಡ್ಡಿ ಮನ್ನಾದ ಘೋಷಣೆ ಮಾಡಿಬಿಟ್ಟಿದ್ದರು. ಆಗ ಪ್ರಧಾನಿ ಆಗಿದ್ದ ಪಿ.ವಿ.ನರಸಿಂಹ ರಾವ್ ಬಡ್ಡಿ ಮನ್ನಾ ಸಾಧ್ಯವಿಲ್ಲ ಅಂದುಬಿಟ್ಟರು. ಅದಾಗಲೇ ಘೋಷಣೆ ಮಾಡಿಯಾಗಿತ್ತು. ಆದ್ದರಿಂದ ರಾಜ್ಯ ಸರಕಾರದ ಬೊಕ್ಕಸದಿಂದ ಆ ಹೊರೆಯನ್ನು ಭರಿಸುವುದಕ್ಕೆ ಕೇಂದ್ರದ ಒಪ್ಪಿಗೆ ಅನಿವಾರ್ಯ ಆಯಿತು. ಕೊನೆಗೆ ನರಸಿಂಹ ರಾಯರು ಒಪ್ಪಿಗೆ ಸೂಚಿಸಿದರು. ಈಗಿನ ಕೇಂದ್ರ ಸರಕಾರವು ಸಾಲ ಮನ್ನಾ ಮಾಡಲು ಆಗುವುದಿಲ್ಲ ಎಂದು ಹೇಳಿಯಾಗಿದೆ. ಇಂಥ ಸನ್ನಿವೇಶದಲ್ಲಿ ರಾಜ್ಯ ಸರಕಾರದ ಜತೆಗೆ ರಾಜ್ಯದ ಬಿಜೆಪಿ ನಾಯಕರು ನಿಂತು, ಕೇಂದ್ರದ ಮೇಲೆ ಒತ್ತಡ ತಂದು ಹಣ ಬಿಡುಗಡೆ ಮಾಡಿಸಬೇಕು.
ಷರತ್ತುಗಳನ್ನು ಹಾಕಿದರೆ ಒಳ್ಳೆಯದು
ಕುಮಾರಸ್ವಾಮಿ ಅವರು ಸಾಲ ಮನ್ನಾ ಬಗ್ಗೆ ಇನ್ನೊಂದು ವಾರದಲ್ಲಿ ತಾತ್ವಿಕ ಒಪ್ಪಿಗೆ ಪಡೆದು, ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಅಷ್ಟರೊಳಗೆ ಸಂಪುಟ ರಚನೆ ಆಗಿ, ಸಾಲ ಮನ್ನಾಗೆ ಕಾಂಗ್ರೆಸ್ ಪಕ್ಷದಿಂದ ಒಪ್ಪಿಗೆ ಪಡೆಯಲು ಸಫಲರಾಗಬಹುದು. ಆದರೆ ಸಂಪೂರ್ಣ ಸಾಲ ಮನ್ನಾ ಸಾಧ್ಯವಾ ಎಂದರೆ, ಅದಕ್ಕಾಗಿ ಕೆಲ ಷರತ್ತುಗಳನ್ನು ಹಾಕಿದರೆ ಒಳ್ಳೆಯದು. ಉದಾಹರಣೆಗೆ ಸಣ್ಣ ಹಿಡುವಳಿದಾರರು ಅಂದರೆ ಇಷ್ಟು ಪ್ರಮಾಣದ ಭೂಮಿ ಇರುವವರು, ಇಷ್ಟು ಮೊತ್ತದ ಸಾಲ ಇರುವವರದನ್ನು ಎಂದು ಮಿತಿ ಹಾಕಿಕೊಂಡರೆ ಉತ್ತಮ ನಿರ್ಧಾರ ಆಗುತ್ತದೆ. ದೊಡ್ಡ ಮಟ್ಟದ ಭೂಮಿ ಇರುವವರು, ತಾವು ಮಾಡಿದ ಸಾಲ ತೀರಿಸುವ ಆರ್ಥಿಕ ಚೈತನ್ಯ ಇರುವವರದೂ ಸಂಪೂರ್ಣ ಸಾಲ ಮನ್ನಾ ಮಾಡಿದರೆ ಅದು ಸರಕಾರದ ಮೇಲೆ ಬೀಳುವ ಆರ್ಥಿಕ ಹೊರೆ. ನಿಜಕ್ಕೂ ಸಂಕಷ್ಟದಲ್ಲಿರುವ ಬಡವರನ್ನು ಕೈ ಬಿಡದೆ, ಮೈತ್ರಿ ಸರಕಾರದ ಮಿತಿಯೊಳಗೆ ಸಾಲ ಮನ್ನಾಗೆ ಮುಂದಾಗಬಹುದು.
ಇಷ್ಟೇ ಸಮಯ ಎನ್ನಲು ಸಾಧ್ಯವಿಲ್ಲ
ಸಂಬಂಧಪಟ್ಟ ಇಲಾಖೆಗಳಿಂದ ರೈತರ ಸಾಲಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಎಲ್ಲ ಜಿಲ್ಲೆಗಳಿಂದ ತರಿಸಿಕೊಳ್ಳಲಾಗುತ್ತಿದೆ. ಸಾಲ ಮನ್ನಾಗೆ ಎಷ್ಟು ಸಂಪನ್ಮೂಲ ಬೇಕಾಗುತ್ತದೆ ಎಂಬುದರ ಅಂದಾಜು ಮಾಡಲಾಗುತ್ತದೆ. ಆ ನಂತರ ಮೈತ್ರಿ ಸರಕಾರದ ಇತಿಮಿತಿಯೊಳಗೆ ಮಾಡಬಹುದಾದ ಗರಿಷ್ಠ ಪ್ರಮಾಣದ ಸಾಲ ಮನ್ನಾ ಮಾಡಲಾಗುತ್ತದೆ. ಮೈತ್ರಿ ಸರಕಾರ ಅನ್ನೋದು ಹಗ್ಗದ ಮೇಲಿನ ನಡಿಗೆ. ಇದನ್ನು ಜನರು ಸಹ ಅರ್ಥ ಮಾಡಿಕೊಳ್ಳಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಎಂಬುದು ಜೆಡಿಎಸ್ ನ ಪ್ರಣಾಳಿಕೆಯಲ್ಲಿದ್ದ ವಿಚಾರ. ಪಕ್ಷವು ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದ್ದರೆ ಕೊಟ್ಟ ಮಾತಿನಂತೆಯೇ ಇಪ್ಪತ್ನಾಲ್ಕು ಗಂಟೆಯೊಳಗೆ ಸಾಲ ಮನ್ನಾ ಮಾಡಬಹುದಿತ್ತು. ಆದರೆ ಈಗ ಕಾಂಗ್ರೆಸ್ ನವರ ಜತೆ ಸೇರಿ ಸರಕಾರ ಮಾಡಿದ್ದೇವೆ. ನಮ್ಮ ಸವಾಲು ಹಾಗೂ ಮಿತಿಯ ಮಧ್ಯೆಯೂ ರೈತರ ಪರವಾಗಿ ಕೆಲಸ ಮಾಡುತ್ತೇವೆ. ಆದರೆ ಅದು ಇಷ್ಟೇ ಸಮಯದಲ್ಲಿ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ವೈ.ಎಸ್.ವಿ.ದತ್ತ.