ಕೊಲೆ ಅಂದರೆ ರವಿ ಹುಡುಗಾಟ ಅಂದುಕೊಂಡಿದ್ದಾನೆ: ಅಗ್ನಿಶ್ರೀಧರ್ ಸಂದರ್ಶನ
Recommended Video
ಬೆಂಗಳೂರು, ಡಿಸೆಂಬರ್ 11: "ಅವನು ಕೊಲೆಯನ್ನ ಹುಡುಗಾಟ ಅಂದುಕೊಂಡು ಬಿಟ್ಟಿದ್ದಾನೆ. ಆದ್ದರಿಂದಲೇ ಹಾಗೆ ಗನ್- ಬುಲೆಟ್, ಚಾಕು ಕೊಟ್ಟು ಕೊಂದು ಬನ್ನಿ ಅಂದಿದ್ದಾನೆ" ಅಂತ ಹೇಳಿದಾಗ ತಮ್ಮ ಗತಕಾಲದ ಗೆಳೆಯ ರವಿ ಬೆಳೆಗೆರೆ ನೆನಪು ಒಮ್ಮೆ ಅಗ್ನಿ ಶ್ರೀಧರ್ ಅವರ ಕಣ್ಣುಗಳಲ್ಲಿ ಹಾದುಹೋಯಿತು.
ಸುಪಾರಿ ಕೇಸ್ : ರವಿಬೆಳಗೆರೆಗೆ 14 ದಿನಗಳ ನ್ಯಾಯಾಂಗ ಬಂಧನ
ಕರುನಾಡ ಸೇನೆ ರಾಜ್ಯಾಧ್ಯಕ್ಷ- ಪತ್ರಕರ್ತ ಅಗ್ನಿ ಶ್ರೀಧರ್ ಬೆಂಗಳೂರಿನ ಇಸ್ರೋ ಲೇಔಟ್ ನಲ್ಲಿರುವ 'ಅಗ್ನಿ' ವಾರಪತ್ರಿಕೆಯ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯ ನಂತರ ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಅವರು ನೀಡಿದ ಉತ್ತರವಿದು.
"ಪತ್ರಕರ್ತ ಸುನೀಲ್ ಹೆಗ್ಗರವಳ್ಳಿಗೂ ಪರಿಚಯವಿರುವ ವ್ಯಕ್ತಿಯನ್ನು ಕೊಲ್ಲಲು ಕಳಿಸುವಷ್ಟು ದಡ್ಡರೆ ನನ್ನ ಅಪ್ಪ?" ಎಂದು ರವಿ ಬೆಳಗೆರೆ ಅವರ ಮಗಳು ಭಾವನಾ ಬೆಳಗೆರೆ ಪ್ರಶ್ನೆ ಮಾಡಿದ್ದರು.
ರವಿ ಬೆಳಗೆರೆ ವಿರುದ್ಧದ ಕೇಸ್ ಬಲವಾಗಿದೆ : ಸಂಗ್ರಾಮ್ ಸಿಂಗ್
ಆ ಬಗ್ಗೆ ಶ್ರೀಧರ್ ಗಮನ ಸೆಳೆದಾಗ, ಪರಿಚಯ ಇರುವ ವ್ಯಕ್ತಿಗೇ ಗುರಿಯನ್ನು ಮುಗಿಸುವುದು ಸಲೀಸು. ಸುಪಾರಿ ಹಂತಕ ಶಶಿಧರ್ ಮುಂಡೋಡಿಗೂ ಸುನೀಲ್ ಹೆಗ್ಗರವಳ್ಳಿಯ ಪರಿಯವಿದೆ. ನಮಸ್ಕಾರ ಸಾರ್ ಅಂತ ಮಾತನಾಡಿಸಿ, ಗುಂಡಿಟ್ಟು ಕೊಂದು ಬರೋದು ಸುಲಭ ಅಲ್ಲವಾ? ಆ ಕಾರಣಕ್ಕೆ ಪರಿಚಯಸ್ಥನನ್ನೇ ಆಯ್ಕೆ ಮಾಡಿಕೊಂಡಿರಬಹುದು.
"ಭಾವನಾ ಬೆಳಗೆರೆಯ ಮಾತೇ ತುಂಬ ಪ್ರಬಲವಾದ ಅಂಶ ಆಗಿಬಿಡಬಹುದು. ಆಕೆ ಭಾವನಾತ್ಮಕವಾಗಿ ಮಾತನಾಡಿರುವುದರಿಂದ ಗಂಭೀರವಾಗಿ ತೆಗೆದುಕೊಳ್ಳಬಾರದು" ಎಂದು ಹೇಳಿದರು.
ಮುಂದಿನ ಎರಡು ವರ್ಷಗಳ ರವಿ ಬೆಳಗೆರೆ ಜಾತಕ ಫಲ
ಅಗ್ನಿ ಶ್ರೀಧರ್ ಜತೆಗಿನ ಪ್ರಶ್ನೋತ್ತರ ವಿವರ ಇಲ್ಲಿದೆ.
ಪ್ರಶ್ನೆ: ಈಗ ರವಿ ಬೆಳಗೆರೆ ಪ್ರಕರಣದಲ್ಲಿ ನಡೆದುಕೊಳ್ಳುತ್ತಿರುವುದಕ್ಕೂ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ವಿರುದ್ಧ ನಡೆದುಕೊಂಡಿದ್ದಕ್ಕೂ ಬಹಳ ವ್ಯತ್ಯಾಸ ಇದೆ ಅಂತ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರಲ್ಲಾ?
ಅಗ್ನಿ ಶ್ರೀಧರ್: ಎರಡೂ ಬೇರೆ ಬೇರೆ ಪ್ರಕರಣ. ಅಲ್ಲಿ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಲ್ಲ. ಗಣಪತಿ ಅವರ ಸಾವಿನ ಮುಂಚಿನ ಹೇಳಿಕೆ ವಿಡಿಯೋ ದಾಖಲೆ ಆಗಿದೆ. ಅದೊಂದು ರಾಜಕೀಯ ಪ್ರಕರಣ. ಅದನ್ನು ಹೋಲಿಕೆ ಮಾಡುವುದೇ ತಪ್ಪು. ಅದರಲ್ಲೂ ಜಗದೀಶ್ ಶೆಟ್ಟರ್ ರಂಥವರು ಮಾಡಲೇಬಾರದು.
ಪ್ರಶ್ನೆ: ಗೌರಿ ಲಂಕೇಶ್ ಹತ್ಯೆಯ ದಾರಿ ತಪ್ಪಿಸುವ ಯತ್ನವಾಗಿ ಈ ಪ್ರಕರಣ ಮುಂದೆ ತಂದಿದ್ದಾರಾ?
ಅಗ್ನಿ ಶ್ರೀಧರ್: ಗೌರಿ ಲಂಕೇಶ್ ಹತ್ಯೆಯ ತನಿಖೆ ವೇಳೆ ಕೆಲವು ಸುಪಾರಿ ಹಂತಕರ ತನಿಖೆ ಮಾಡಿದ್ದಾರೆ. ಆಗ ಶಶಿಧರ್ ಮುಂಡೇವಾಡಿ ವಿಚಾರಣೆ ಮಾಡುವಾಗ ಇದು ಹೊರಗೆ ಬಂದಿದೆ. ಒಂದು ಪ್ರಕರಣದ ತನಿಖೆ ಮಾಡುವಾಗ ಮತ್ತೊಂದು ಕೃತ್ಯ ಬೆಳಕಿಗೆ ಬಂದರೆ ಹಾಗೇ ಬಿಡಬೇಕಾ? ಅದರ ತನಿಖೆಯನ್ನು ಮಾಡಬಾರದಾ?
ಪ್ರಶ್ನೆ: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲೂ ರವಿ ಬೆಳಗೆರೆ ಹೆಸರು ತಳಕು ಹಾಕಿಕೊಳ್ತಾ ಇದೆಯಲ್ಲಾ?
ಅಗ್ನಿ ಶ್ರೀಧರ್: ಇಲ್ಲ, ಕೇವಲ ಊಹೆಯಷ್ಟೇ. 24/7 ಚಾನಲ್ ನವರ ಸೃಷ್ಟಿ. ಆ ಹತ್ಯೆಯಲ್ಲಿ ರವಿಯ ಪಾತ್ರ ಇರುವುದಕ್ಕೆ ಸಾಧ್ಯವೇ ಇಲ್ಲ.
ಪ್ರಶ್ನೆ: ಸಿದ್ದರಾಮಯ್ಯ ಅವರ ಧ್ವನಿ ಕೇಳಿದರೆ ರವಿ ಬೆಳಗೆರೆ ಅವರು ಪತ್ರಕರ್ತ ಎಂಬ ರಿಯಾಯಿತಿ ಇಟ್ಟುಕೊಂಡಂತೆ ಇದೆಯಲ್ಲಾ?
ಅಗ್ನಿ ಶ್ರೀಧರ್: ಅವರ ಉತ್ತರ ಸರಿಯಾಗಿದೆ. ಹೋಗಿ ಅರೆಸ್ಟ್ ಮಾಡಿಬಿಡಿ ಅಂತ ಹೇಳೋದಿಕ್ಕೆ ಆಗುತ್ತಾ? ಪೊಲೀಸರು ತನಿಖೆ ನಡೆಸಿ, ಸತ್ಯ ಗೊತ್ತಾಗಲಿ ಅಂದಿದ್ದಾರೆ. ನಾನು ಅವರ ಸ್ಥಾನದಲ್ಲಿ ಇದ್ದಿದ್ದರೂ ಹಾಗೇ ಹೇಳ್ತಿದ್ದೆ.(ರವಿ ಬೆಳಗೆರೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ಆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದರು)
ಪ್ರಶ್ನೆ: ರವಿ ಬೆಳಗೆರೆ ಕ್ರೈಂ ರಿಪೋರ್ಟರ್, ಎಷ್ಟೋ ಹತ್ಯೆಗಳ ಬಗ್ಗೆ ವರದಿ-ಅಧ್ಯಯನ ಮಾಡಿದವರು. ಅವರು ಈ ರೀತಿ ನಿರ್ಧರಿಸಲು ಸಾಧ್ಯವಾ?
ಅಗ್ನಿ ಶ್ರೀಧರ್: ಅದೇ ಆತ ಹತ್ಯೆಯನ್ನ ಬಹಳ ಸಲೀಸು ಅಂದುಕೊಂಡಂತಿದೆ. ಹುಡುಗಾಟದಂತೆ. ಆದ್ದರಿಂದ ಹೋಗಿ ಕೊಂದು ಬನ್ನಿ ಅಂತ ಕಳಿಸಿದ್ದಾನೆ. ಒಂದು ಕೊಲೆ ಮಾಡುವುದು ಅಷ್ಟು ಸಲೀಸಲ್ಲ. ಅದಕ್ಕೆ ಸಿದ್ಧತೆ ಬೇಕಾಗುತ್ತದೆ. ಆದರೆ ಇದ್ಯಾವುದು ಯೋಚಿಸಿಲ್ಲ್.
ಪ್ರಶ್ನೆ: ಈ ಪ್ರಕರಣದ ಬಗ್ಗೆ ಒಟ್ಟಾರೆ ನೋಡಿದಾಗ ಏನನ್ನಿಸುತ್ತದೆ?
ಅಗ್ನಿ ಶ್ರೀಧರ್: ಸಮಾಜಕ್ಕೆ ಇದರಿಂದ ಏನು ಸಂದೇಶ ಕೊಡುವುದಕ್ಕೆ ಹೋಗ್ತಿದಾರೆ? ಜಿಂಕೆ ಚರ್ಮ ಇಟ್ಟುಕೊಂಡಿದ್ದಾನೆ, ಆಮೆ ಚಿಪ್ಪು ಇಟ್ಟುಕೊಂಡಿದ್ದಾನೆ. ಎಷ್ಟು ಮಠಗಳಲ್ಲಿ ಇಟ್ಟುಕೊಂಡಿಲ್ಲ ಹೇಳಿ? ಆದರೆ ಇದರಿಂದ ಸಮಾಜದ ಮೇಲೆ ಆಗುವ ಪರಿಣಾಮಗಳೇನು ಅನ್ನೋದು ನೋಡಬೇಕು ಅಲ್ಲವಾ?
ಪ್ರಶ್ನೆ: ಸುಪಾರಿ ಹತ್ಯೆಗೆ ಪ್ರಯತ್ನಿಸಿದ್ದಾರೆ ಎಂಬುದು ಪೊಲೀಸರು ಸಾಬೀತು ಪಡಿಸಬೇಕಾದ ಅಂಶ. ಅಷ್ಟರಲ್ಲಿ ಅವರ ಎರಡನೇ ಪತ್ನಿ ಹೆಸರು ತಂದಿರುವುದು ಸರಿಯೇ?
ಅಗ್ನಿ ಶ್ರೀಧರ್: ಇದು ನಿಜಕ್ಕೂ ಅಮಾನವೀಯ. ಅವರ ಹೆಸರನ್ನು ತರಬಾರದಿತ್ತು. ಮನೆಯ ಹೆಣ್ಣುಮಕ್ಕಳ ಹೆಸರನ್ನು ಹೀಗೆ ತರಬಾರದು.