ಮಹಾರಾಷ್ಟ್ರ ಕಳೆದುಕೊಂಡ ನಂತರ ಬಿಜೆಪಿ ಆಡಳಿತದ ರಾಜ್ಯಗಳು
ಕಾಂಗ್ರೆಸ್ ಮುಕ್ತ ಭಾರತ ಕನಸು ಹೊತ್ತಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಕ್ಕೆ ಮಹಾರಾಷ್ಟ್ರದಲ್ಲಿ ದೊಡ್ಡ ಹೊಡೆತ ಬಿದ್ದಿದೆ. 2014ರಿಂದ ಇಲ್ಲಿ ತನಕ ಭಾರತದ ಶೇ 71ಕ್ಕೂ ಅಧಿಕ ಭಾಗದಲ್ಲಿ ಕೇಸರಿ ಪತಾಕೆ ಹಾರಿಸಿದ್ದ ಬಿಜೆಪಿ ಈಗ ಶೇ 40ಕ್ಕೆ ಕುಸಿದಿದೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರಾಜಕೀಯ ತಂತ್ರಗಾರಿಕೆ ಬಗ್ಗೆ ಎಲ್ಲೆಡೆ ಪ್ರಶಂಸೆ ಕೇಳಿ ಬಂದಿತ್ತು. ಚುನಾವಣೆ ಪ್ರಚಾರಗಳಲ್ಲೂ ಮೋದಿ ಈ ಬಗ್ಗೆ ಪ್ರಸ್ತಾಪಿಸುತ್ತಿದ್ದರು.
ಪಂಚ ರಾಜ್ಯ ಸೋಲಿನ ಬಳಿಕ ಬಿಜೆಪಿಗೆ ಉಳಿದದ್ದು ಎಷ್ಟು ರಾಜ್ಯಗಳು?
ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ ಎಂಬುದನ್ನು ಮೋದಿ ಅವರೇ ಹಲವು ಬಾರಿ ಎದೆತಟ್ಟಿಕೊಂಡು ಹೇಳಿದ್ದರು. ಇಂದಿರಾಗಾಂಧಿಯ ನಂತರ ನಾನೇ ಅತಿ ಹೆಚ್ಚು ರಾಜ್ಯಗಳಲ್ಲಿ ಆಡಳಿತವಿರುವ ಪಕ್ಷದ ಪ್ರಧಾನಿ ಎಂದು ಸಹ ಅವರೇ ಹೇಳಿಕೊಂಡಿದ್ದರು.
ಅತಿ ಹೆಚ್ಚು ರಾಜ್ಯಗಳಲ್ಲಿ ಆಡಳಿತ
ಬಿಜೆಪಿಯು ದೇಶದ 18 ರಾಜ್ಯಗಳಲ್ಲಿ ಅಧಿಕಾರ ಸ್ಥಾನದಲ್ಲಿತ್ತು. ಜಮ್ಮು ಕಾಶ್ಮೀರದಲ್ಲಿ ಮೈತ್ರಿ ಮುರಿಯುವ ಮುನ್ನಾ ಬಿಜೆಪಿ 19 ರಾಜ್ಯದಲ್ಲಿ ಆಡಳಿತದಲ್ಲಿತ್ತು. 14 ರಾಜ್ಯಗಳಲ್ಲಿ ಬಿಜೆಪಿ/ಬಿಜೆಪಿ ಬೆಂಬಲಿತ ಪಕ್ಷದವರು ಮುಖ್ಯಮಂತ್ರಿ ಆಗಿದ್ದರು. ಉಳಿದ ಐದು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಪಕ್ಷಕ್ಕೆ ಬೆಂಬಲ ನೀಡಿ ಆಡಳಿತದ ಭಾಗವಾಗಿತ್ತು.
2014ಕ್ಕೂ ಮುನ್ನ ಬಿಜೆಪಿ 7 ರಾಜ್ಯ
2014ರಲ್ಲಿ ಬಿಜೆಪಿ 7 ರಾಜ್ಯ, ಕಾಂಗ್ರೆಸ್ 13 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ಗೋವಾ ಹಾಗೂ ಅರುಣಾಚಲಪ್ರದೇಶ ಪ್ರಮುಖವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 2016ರಲ್ಲಿ 15, 2017ರಲ್ಲಿ 19, 2018ರಲ್ಲಿ ಬಿಜೆಪಿ ಒಟ್ಟು 21ರಾಜ್ಯಕ್ಕೆ ತನ್ನ ಆಡಳಿತವನ್ನು ವಿಸ್ತರಿಸಿತು. ಕಾಂಗ್ರೆಸ್ 3 ರಾಜ್ಯಕ್ಕೆ ಸೀಮಿತವಾಯಿತು.
ಕಾಂಗ್ರೆಸ್ ಮುಕ್ತ ಈಶಾನ್ಯ ಭಾರತ, ಬಿಜೆಪಿ ಕನಸು ನನಸಾಯ್ತು!
ಈಶಾನ್ಯ ರಾಜ್ಯಗಳಲ್ಲೂ ಕೇಸರಿ ಪತಾಕೆ
2018ರಲ್ಲಿ ಈಶಾನ್ಯ ರಾಜ್ಯಗಳಲ್ಲೂ ಕೇಸರಿ ಪತಾಕೆ ಹಾರಿಸಿದ ಬಿಜೆಪಿಗೆ ಪಂಚರಾಜ್ಯಗಳ ಚುನಾವಣೆ ಹೊಡೆತ ನೀಡಿತು. 2018ರಲ್ಲಿ ತ್ರಿಪುರಾದಲ್ಲಿ ಬಿಜೆಪಿ, ಮೇಘಾಲಯದಲ್ಲಿ ಎನ್ ಪಿಪಿ, ನಾಗಾಲ್ಯಾಂಡ್ ನಲ್ಲಿ ಎನ್ಡಿಪಿಪಿ, ಕರ್ನಾಟಕದಲ್ಲಿ ಅಲ್ಪಾವಧಿ ಸರ್ಕಾರ, ಮಿಜೋರಾಂನಲ್ಲಿ ಎಂಎನ್ ಎಫ್ ಅಧಿಕಾರಕ್ಕೆ ಬಂದರೆ, ಛತ್ತೀಸ್ ಗಢ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ತೆಲಂಗಾಣದಲ್ಲಿ ತೆಲಂಗಾಣಾ ರಾಷ್ಟ್ರ ಸಮಿತಿ ಅಧಿಕಾರಕ್ಕೆ ಬಂದಿವೆ.
2019ರಲ್ಲಿ ಬಿಜೆಪಿಗೆ ಮಿಶ್ರಫಲ
ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯದೊಂದಿಗೆ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರು. ಕರ್ನಾಟಕದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಪತನ ನಂತರ ಯಡಿಯೂರಪ್ಪ ಮತ್ತೆ ಅಧಿಕಾರ ಹಿಡಿದರು.
ಆದರೆ, ಈಗ ಆರೆಸ್ಸೆಸ್ ಕೇಂದ್ರ ಕಚೇರಿ ಹೊಂದಿರುವ ಮಹಾರಾಷ್ಟ್ರದಲ್ಲಿ ಶಿವಸೇನಾ, ಎನ್ಸಿಪಿ ನಡುವಿನ ತಂತ್ರಗಾರಿಕೆ ಮುಂದೆ ಬಿಜೆಪಿ ಹಿಂದೆ ಬಿದ್ದು ಅಧಿಕಾರ ಸಿಕ್ಕರೂ ಉಳಿಸಿಕೊಳ್ಳಲಾಗದೆ ವಿಪಕ್ಷ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಸದ್ಯ ಭಾರತ ಭೂಪಟದಲ್ಲಿ ಕೇಸರಿ ಪತಾಕೆ ಶೇ 40 ಭಾಗ ಮಾತ್ರ ತುಂಬಿದೆ.