ಭಾರತದ ಪಾಲಾದ ನಿಜಾಮರ ಆಸ್ತಿ, ಉರಿದುಕೊಂಡು ಪಾಕಿಗಳೇನ್ಮಾಡ್ಬಹುದು?
ಹೈದರಾಬಾದ್/ಲಂಡನ್, ಅಕ್ಟೋಬರ್ 03: ಭಾರತ ಹಾಗೂ ಪಾಕಿಸ್ತಾನ ವಿಭಜನೆಯಾದ ಬಳಿಕವೂ ಭಾರತ ಒಕ್ಕೂಟಕ್ಕೆ ಸೇರಲು ಹಿಂದೇಟು ಹಾಕಿದ್ದ ಹೈದರಾಬಾದಿನ ನಿಜಾಮರ ಆಸ್ತಿ ಮೇಲೆ ಪಾಕಿಸ್ತಾನ ಇನ್ನೂ ಆಸೆ ಇರಿಸಿಕೊಂಡಿದೆ. ಭಾರತ ಪಾಕ್ ನಡುವಿನ ಈ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಯುಕೆ ಕೋರ್ಟ್ ನೀಡಿರುವ ತೀರ್ಪು ಭಾರತ ಪರವಾಗಿ ಬಂದಿದೆಯಾದರೂ ಪಾಕಿಸ್ತಾನ ಇನ್ನೂ ತನ್ನ ಪ್ರಯತ್ನ ನಿಲ್ಲಿಸಿಲ್ಲ.
ಹೈದರಾಬಾದ್ ಪ್ರಾಂತ್ರ್ಯದ ನಿಜಾಮರಿಗೆ ಸೇರಿರುವ ಸುಮಾರು 35 ಮಿಲಿಯನ್ ಪೌಂಡ್ ಮೌಲ್ಯದ ಆಸ್ತಿ ತನಗೆ ಸಲ್ಲಬೇಕು ಎಂದು ಪಾಕಿಸ್ತಾನ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್ ಹೈಕೋರ್ಟ್ ಬುಧವಾರದಂದು ತಳ್ಳಿ ಹಾಕಿದೆ. ಆದರೆ ಪಾಕಿಸ್ತಾನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಮರ ಮುಂದುವರೆಸಲು ಮುಂದಾಗಿದೆ. ಇದಕ್ಕಾಗಿ ಉನ್ನತ ಮಟ್ಟದ ವಿದೇಶಿ ಅಧಿಕಾರಿಗಳ ಸಭೆಯನ್ನು ನಡೆಸುತ್ತಿದ್ದು, ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಹೈದರಾಬಾದ್ ನಿಜಾಮರ ಕದ್ದ ಟಿಫನ್ ಬಾಕ್ಸ್ ನಲ್ಲೇ ಊಟ ಮಾಡ್ತಿದ್ದ ಕಳ್ಳ
7 ದಶಕಗಳ ಹಳೆಯ ಈ ಪ್ರಕರಣದಲ್ಲಿ ಭಾರತದ ಪರವಾಗಿ ತೀರ್ಪು ನೀಡಲಾಗಿದೆ. ನಿಜಾಮ್ ವಂಶಸ್ಥ ಕರಮ್ ಜಾಹ್ ಹಾಗೂ ಸಹೋದರ ಮುಫಖಮ್ ಜಾ ಅವರು ಈ ಕಾನೂನು ಹೋರಾಟದಲ್ಲಿ ಭಾರತದ ಪರವಾಗಿದ್ದರು. ನಿಜಾಮರಿಗೆ ಸೇರಿದ 35 ಮಿಲಿಯನ್ ಪೌಂಡ್ ನಿಧಿ ಲಂಡನ್ನಿನ ನ್ಯಾಟ್ವೆಸ್ಟ್ ಬ್ಯಾಂಕಿನಲ್ಲಿದೆ. ನಿಜಾಮನ ವಂಶಸ್ಥರು ಹಾಗೂ ಭಾರತ ಈ ನಿಧಿಗೆ ಹಕ್ಕುದಾರರಾಗಿದ್ದಾರೆ. ಪಾಕಿಸ್ತಾನ ಇದರಲ್ಲಿ ಯಾವುದೇ ಹಕ್ಕು ಹೊಂದಿಲ್ಲ ಎಂದು ಬ್ರಿಟಿಷ್ ಹೈಕೋರ್ಟ್ ತೀರ್ಪಿನಲ್ಲಿ ಹೇಳಲಾಗಿದೆ.
ನಿಜಾಮರು ನೀಡಿದ್ದ 10,07,940 ಪೌಂಡ್
1948ರಲ್ಲಿ ನೂತನವಾಗಿ ರಚನೆಯಾದ ಪಾಕಿಸ್ತಾನದ ಅಂದಿನ ರಾಯಭಾರಿಗೆ 7ನೇ ನಿಜಾಮರು 10,07,940 ಪೌಂಡ್ ಹಾಗೂ ಒಂಭತ್ತು ಶಿಲ್ಲಿಂಗ್ ಗಳನ್ನು ರವಾನಿಸಿ ಭದ್ರವಾಗಿ ಇರಿಸುವಂತೆ ಕೋರಿದ್ದರು. ಸದ್ಯ ಈ ಮೊತ್ತ 35 ಮಿಲಿಯನ್ ಪೌಂಡ್ ಗಳಷ್ಟಾಗಿದೆ. ಇದು ತಮಗೆ ಸೇರಿದ್ದು ಎಂದು ನಿಜಾಮನ ವಂಶಸ್ಥರ ಬೆಂಬಲದೊಂದಿಗೆ ಭಾರತ ವಾದ ಮಂಡಿಸಿತ್ತು. ಇಂದಿನ ತೀರ್ಪಿನಿಂದ ನಮಗೆ ಸಂತೋಷವಾಗಿದೆ. ಪ್ರಕರಣ ದಾಖಲಾದಾಗ ನಮ್ಮ ಕಕ್ಷಿದಾರ ಮಗುವಾಗಿದ್ದ. ಈಗ ಅವರಿಗೆ 80 ವರ್ಷ ವಯಸ್ಸಾಗಿದೆ. ಅಂತಿಮವಾಗಿ ಅವರ ಜೀವನ ಕಾಲದಲ್ಲೇ ಪ್ರಕರಣ ಬಗೆಹರಿದಿದೆ ಎಂದು 7ನೇ ನಿಜಾಮ್ ಪರವಾಗಿ ವಾದ ಮಂಡಿಸಿದ್ದ ವಕೀಲ ಪಾಲ್ ಹೆವಿಟ್ ಹೇಳಿದ್ದಾರೆ.
ನಿಜಾಮರು ಶಸ್ತ್ರಾಸ್ತ್ರ ಖರೀದಿಗಾಗಿ ಈ ಮೊತ್ತ
ಆದರೆ ಪಾಕಿಸ್ತಾನ ಇದಕ್ಕೆ ವಿರುದ್ಧವಾಗಿ ವಾದಿಸಿದ್ದು, "ಅಂತಾರಾಷ್ಟ್ರೀಯ ಕಾನೂನು, ನಾಗರಿಕ ಸಂಹಿತೆಗಳನ್ನು ಭಾರತ ಮುರಿದಿದ್ದು, ಬಲವಂತವಾಗಿ ನಿಜಾಮರ ಪ್ರಾಂತ್ಯವನ್ನು ಭಾರತಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಪ್ರಕ್ರಿಯೆಯಲ್ಲಿ ತನ್ನ ಪ್ರಾಂತ್ಯದ ಜನರ ರಕ್ಷಣೆಗಾಗಿ ನಿಜಾಮರು ಹೋರಾಡಿದ್ದಾರೆ' ಹೀಗಾಗಿ, ನಿಜಾಮರ ಆಸ್ತಿಯಲ್ಲಿ ಭಾರತಕ್ಕೆ ಪಾಲು ನೀಡುವುದು ಸರಿಯಲ್ಲ. ದೇಶ ವಿಭಜನೆಯಾದ ಬಳಿಕ ಭಾರತ ವಿರುದ್ಧ ಹೋರಾಟಕ್ಕಾಗಿ ನಿಜಾಮರು ಶಸ್ತ್ರಾಸ್ತ್ರ ಖರೀದಿಗಾಗಿ ಈ ಮೊತ್ತ ಬಳಸಿದ್ದರು, ಇದರಲ್ಲಿ ಭಾರತಕ್ಕೆ ಪಾಲು ನೀಡುವುದು ಎಷ್ಟು ಸರಿ? ಎಂದು ಪ್ರಾಕಿಸ್ತಾನ ಪ್ರಶ್ನಿಸಿದೆ"
ಪಾಕಿಸ್ತಾನದ ಪರ ವಕೀಲರ ವಾದ
ಪಾಕಿಸ್ತಾನದ ಪರ ವಕೀಲರ ವಾದವನ್ನು ಒಪ್ಪದ ಹೈಕೋರ್ಟ್, ಪಾಕಿಸ್ತಾನದ ರಾಯಭಾರಿ ನಿಧಿಯನ್ನು ಕಾಯಲು ತಿಳಿಸಿ ನಿಜಾಮ್ ಉಸ್ಮಾನ್ ಅಲಿ ಖಾನ್ ನೀಡಿದ್ದರೆ ಹೊರತೂ, ಪಾಕಿಸ್ತಾನಕ್ಕೆ ಬಳಸಲು ಕೊಟ್ಟಿದ್ದಲ್ಲ. ಈ ಬಗ್ಗೆ ಯಾವುದೇ ಪುರಾವೆಗಳಿಲ್ಲ. 7ನೇ ನಿಜಾಮ ಹಾಗೂ ಭಾರತಕ್ಕೆ ಈ ನಿಧಿ ಬಳಕೆ ಹಕ್ಕು ಇದೆ. ಇದನ್ನು ಪಡೆದುಕೊಳ್ಳುವ ಹಾಗೂ ಬಳಕೆ ಬಗ್ಗೆ ಅವರು ನಿರ್ಧರಿಸಬಹುದು. ಇದರಲ್ಲಿ ಪಾಕಿಸ್ತಾನದ ವಾದ ಒಪ್ಪಲು ಸಾಕ್ಷಿಗಳಿಲ್ಲ ಎಂದಿದೆ.
ರಾಯಲ್ ಕೋರ್ಟ್ಸ್ ಆಫ್ ಜಸ್ಟೀಸ್ ಮಾರ್ಕಸ್
ನಿಜಾಮರ ಪ್ರಿನ್ಸ್ ಮುಕಾರಂ ಜಾ, 8ನೇ ನಿಜಾಮ್ ಆಫ್ ಹೈದರಾಬಾದ್ ಹಾಗೂ ಅವರ ಕಿರಿಯ ಸೋದರ ಮುಝಾಫರ್ ಜಾ ಇಬ್ಬರು ಭಾರತದ ಜೊತೆ ಕೈಜೋಡಿಸಿ, ಕಾನೂನು ಸಮರದಲ್ಲಿ ಸಾಥ್ ನೀಡಿದ್ದಾರೆ. 1948ರಲ್ಲಿ ಪಾಕ್ ರಾಯಭಾರಿ ಹಬಿಬ್ ಇಬ್ರಾಹಿಂ ರಹಿಂತೂಲಾ ಅವರ ಕೈ ಸೇರಿದ್ದ ನಿಧಿ ಈಗ ನ್ಯಾಟ್ ವೆಸ್ಟ್ ಬ್ಯಾಂಕಿನಿಂದ ಭಾರತ ಹಾಗೂ ನಿಜಾಮರ ಸುಪರ್ದಿಗೆ ಸಿಗಲಿದೆ ಎಂದು ರಾಯಲ್ ಕೋರ್ಟ್ಸ್ ಆಫ್ ಜಸ್ಟೀಸ್ ನ ನ್ಯಾ. ಮಾರ್ಕಸ್ ಸ್ಮಿತ್ ಮಹತ್ವದ ತೀರ್ಪು ನೀಡಿದ್ದಾರೆ.