ಮಾನವನ ವಿನಾಶಕ್ಕೆ ಮುನ್ನುಡಿ..! ಮಹಾಮಳೆಗೆ ಹಿಮದ ಹೊದಿಕೆ ಚಿಂದಿ ಚಿತ್ರಾನ್ನ..!
ಬಾಹ್ಯಾಕಾಶಕ್ಕೆ ರಾಕೆಟ್ ಹಾರಿಸಿದ್ದಾಯ್ತು, ಮಂಗಳ ಗ್ರಹದ ಮೇಲೆ ನೌಕೆ ಲ್ಯಾಂಡ್ ಮಾಡಿದ್ದಾಯ್ತು. ಆದ್ರೆ ಮನುಷ್ಯ ಬುದ್ಧಿ ಕಲಿಯೋದು ಯಾವಾಗ..? ಅರೆರೆ ಯಾಕೆ ಈ ಪ್ರಶ್ನೆ ಎನ್ನಬೇಡಿ ಮತ್ತೆ! ಯಾಕಂದ್ರೆ ಎಲ್ಲಾ ವಿಚಾರದಲ್ಲೂ ಹಿಡಿತ ಸಾಧಿಸಿರುವ ಮನುಷ್ಯ, ಪ್ರಕೃತಿಯ ಆಳ-ಅಗಲ ಅಳೆಯುವಲ್ಲಿ ಎಡವಿ ಬಿಳುತ್ತಿದ್ದಾನೆ. ಮನಷ್ಯರು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಅದೆಷ್ಟೇ ಮುಂದುವರಿದರೂ ಭೂತಾಯಿ ಹಾಗೂ ಭೂಮಿಯ ವಾತಾವರಣ ರಕ್ಷಣೆಯಲ್ಲಿ ಪದೇಪದೆ ಸೋಲುತ್ತಿದ್ದಾನೆ. ಈಗ ಮತ್ತೊಮ್ಮೆ ಮನುಷ್ಯನ ಸೋಲು ನಿಖರವಾಗಿದೆ.
ಅಭಿವೃದ್ಧಿಯ ದಾವಂತದಲ್ಲಿ ಮನುಷ್ಯ ಮಾಡಿದ ಮಹಾತಪ್ಪಿಗೆ ಗ್ರೀನ್ ಲ್ಯಾಂಡ್ನಲ್ಲಿ ಭೀಕರ ಮಳೆ ಬಿದ್ದಿದೆ..! ಅಯ್ಯೋ ಮಳೆಬಿದ್ದರೆ ಸಮಸ್ಯೆ ಏನು ಅನ್ನಬೇಡಿ, ಏಕೆಂದರೆ ಈಗ ಮಳೆ ಬಿದ್ದಿರುವುದು ಮರುಭೂಮಿಯಲ್ಲಲ್ಲ. ಅಪಾರ ಪ್ರಮಾಣದ ಹಿಮದ ಹೊದಿಕೆ ಹೊಂದಿರುವ ಗ್ರೀನ್ ಲ್ಯಾಂಡ್ನಲ್ಲಿ. ಜಗತ್ತಲ್ಲೇ ಅತಿದೊಡ್ಡ ದ್ವೀಪ ಈ ಗ್ರೀನ್ ಲ್ಯಾಂಡ್.
ಪ್ರಳಯ ಫಿಕ್ಸ್ ಅಂತಿದ್ದಾರೆ ವಿಜ್ಞಾನಿಗಳು, ಮುಳುಗಿ ಹೋಗಲಿದೆ 'ಮಾನವ ಸಾಮ್ರಾಜ್ಯ'..!
ಸುಮಾರು 21 ಲಕ್ಷ ಸ್ಕ್ವೇರ್ ಕಿಲೋಮೀಟರ್ ಭೂಪ್ರದೇಶ ಹೊಂದಿರುವ ಗ್ರೀನ್ ಲ್ಯಾಂಡ್ ಮುಕ್ಕಾಲು ಭಾಗ ಶಾಶ್ವತವಾದ ಹಿಮದ ಹೊದಿಕೆ ಹೊಂದಿದೆ. ಗ್ರೀನ್ ಲ್ಯಾಂಡ್ನ ಇತಿಹಾಸದಲ್ಲೇ ಈವರೆಗೂ ಮಳೆ ಬಿದ್ದಿರಲಿಲ್ಲ. ಏಕೆಂದರೆ ಅಲ್ಲಿ ಬರೀ ಹಿಮವೇ ಬೀಳುತ್ತಿತ್ತು. ಆದರೆ ವಾತಾವರಣ ಬದಲಾವಣೆ ಅವಾಂತರ ಗ್ರೀನ್ ಲ್ಯಾಂಡ್ನಲ್ಲೂ ಮಳೆ ಬೀಳುವಂತೆ ಮಾಡಿದೆ. ಹೀಗೆ ಮಳೆ ಬಿದ್ದಿರುವ ಪರಿಣಾಮ ಗ್ರೀನ್ ಲ್ಯಾಂಡ್ನಲ್ಲಿ ಸಾಕಷ್ಟು ಹಿಮ ಕರಗುವ ಆತಂಕ ಎದುರಾಗಿದೆ.
ಅಲ್ಲಿ ಮಳೆ ಬರಬಾರದಿತ್ತು ಕಣ್ರೀ..!
ಜಾಗತಿಕ ತಾಪಮಾನದ ಪರಿಣಾಮ ಹೇಗೆಲ್ಲಾ ಪೆಟ್ಟು ಕೊಡುತ್ತಿದೆ ಅಂದ್ರೆ ಮನುಷ್ಯರ ಭವಿಷ್ಯದ ಬುಡ ಅಲ್ಲಾಡಿ ಹೋಗುತ್ತಿದೆ. ಹೀಗೆ ಆರ್ಕ್ಟಿಕ್ ಹಾಗೂ ಅಟ್ಲಾಂಟಿಕ್ ಸಾಗರಗಳ ನಡುವೆ ಇರುವ ಜಗತ್ತಿನ ಅತಿದೊಡ್ಡ ದ್ವೀಪ ಗ್ರೀನ್ ಲ್ಯಾಂಡ್ನಲ್ಲಿ ಭೀಕರ ಮಳೆ ಬಿದ್ದಿದೆ. ಆದ್ರೆ ಇಲ್ಲಿ ಮಳೆ ಆಗಬಾರದಿತ್ತು. ಏಕೆಂದರೆ ಈಗಾಗಲೇ ಗ್ರೀನ್ ಲ್ಯಾಂಡ್ನಲ್ಲಿ ಗಟ್ಟಿಯಾಗಿ ಲಕ್ಷಾಂತರ ವರ್ಷಗಳಿಂದ ನೆಲೆ ನಿಂತಿರುವ ಹಿಮ ಕರಗುತ್ತಿದೆ. ಅದರಲ್ಲೂ ಮಳೆಯ ಆರ್ಭಟದ ನಂತರ ಹಿಮ ಕರಗುವಿಕೆ ಪ್ರಮಾಣ 7 ಪಟ್ಟು ಹೆಚ್ಚಾಗಿದೆಯಂತೆ. ಶನಿವಾರ ಭೀಕರ ಮಳೆ ಬಿದ್ದಿದ್ದು, ಭಾನುವಾರು ಗ್ರೀನ್ ಲ್ಯಾಂಡ್ನಲ್ಲಿ ಭಾರಿ ಪ್ರಮಾಣದ ಹಿಮ ಕರಗಿ ಸಮುದ್ರಕ್ಕೆ ಸೇರಿಬಿಟ್ಟಿದೆ.
ಮುಳುಗಲಿವೆ ‘ಮಹಾನಗರ’ಗಳು..!
1950 ರಲ್ಲಿ ಗ್ರೀನ್ ಲ್ಯಾಂಡ್ ದಾಖಲೆ ಪ್ರಮಾಣದ ಹಿಮದ ಹೊದಿಕೆ ಕಂಡಿತ್ತು. ಈಗ ನೋಡಿದ್ರೆ ಆ ಹಿಮದ ಹೊದಿಕೆ ಕರಗಿ ನೀರಾಗಿ ಸಮುದ್ರ ಸೇರುತ್ತಿದೆ. ಹೀಗೆ ಸಮುದ್ರಕ್ಕೆ ಸೇರುತ್ತಿರುವ ಹಿಮದ ನೀರು, ಸಮುದ್ರದಲ್ಲಿ ನೀರಿನ ಮಟ್ಟ ಏರಲು ಕಾರಣವಾಗುತ್ತದೆ. 2019 ರಲ್ಲಿ ಗ್ರೀನ್ ಲ್ಯಾಂಡ್ ದ್ವೀಪ ಸುಮಾರು 532 ಬಿಲಿಯನ್ ಟನ್ ಮಂಜುಗಡ್ಡೆ ಕಳೆದುಕೊಂಡಿತ್ತು. ಆ ವರ್ಷದ ಜುಲೈನಲ್ಲಿ ಬಿಸಿಯಾದ ವಾತಾವರಣ ಆವರಿಸಿ, ಜಾಗತಿಕ ಸಮುದ್ರದ ನೀರಿನ ಮಟ್ಟ ಶಾಶ್ವತವಾಗಿ 1.5 ಮಿಲಿಮೀಟರ್ ಏರಿಕೆಯಾಗಿತ್ತು.
ಭಾರತಕ್ಕೂ ಅಪಾಯ ಇದ್ಯಾ..?
ಇದೇ ರೀತಿ ಗ್ರೀನ್ ಲ್ಯಾಂಡ್ನಲ್ಲಿ ಹಿಮ ಕರಗುತ್ತಾ ಸಾಗಿದರೆ ಮಾನವನ ವಿನಾಶಕ್ಕೆ ಮುನ್ನುಡಿ ಬರೆಯಲಿದೆ. ಪರಿಸ್ಥಿತಿ ಹೀಗೆ ಮುನ್ನಡೆದರೆ ಆರ್ಕ್ಟಿಕ್ ಸಾಗರ 2050ರ ಬೇಸಿಗೆ ವೇಳೆಗೆ 'ಐಸ್ ಮುಕ್ತ'ವಾಗಲಿದೆ ಎನ್ನುತ್ತಾರೆ ವಿಜ್ಞಾನಿಗಳು. ಇಂತಹ ಭೀಕರ ಸನ್ನಿವೇಶ ಎದರಾದರೆ ಸಮುದ್ರ ಮಟ್ಟವು 20 ಅಡಿಗಳಷ್ಟು ಹೆಚ್ಚಾಗಬಹುದು, ಇದು ಮುಂಬೈ, ನ್ಯೂಯಾರ್ಕ್ ಸೇರಿದಂತೆ ಹಲವು ಮಹಾನಗರಗಳನ್ನೇ ಬಲಿಪಡೆಯಲಿದೆ. ಭಾರತಕ್ಕೆ ದೊಡ್ಡ ಗಂಡಾಂತರ ತರಲಿದೆ ಎದುರಾಗಲಿದೆ ಎನ್ನುತ್ತಿವೆ ವರದಿಗಳು. ಹೀಗಾಗಿ ಗ್ರೀನ್ ಲ್ಯಾಂಡ್ನಲ್ಲಿ ಬಿದ್ದ ಮೊದಲ ಮಳೆಗೆ ಇಡೀ ಜಗತ್ತು ಬೆಚ್ಚಿಬಿದ್ದಿದೆ. ವಿಜ್ಞಾನಿಗಳ ತಂಡ ಸಂಶೋಧನೆ ನಡೆಸಲು ಗ್ರೀನ್ ಲ್ಯಾಂಡ್ಗೆ ಓಡಿದೆ.
ಕ್ಲೈಮೆಟ್ ಚೇಂಜ್ ಎಫೆಕ್ಟ್
ಮಳೆಗಾಲದಲ್ಲಿ ವಿಪರೀತ ಬಿಸಿಲು, ಚಳಿಗಾಲದಲ್ಲಿ ಮಳೆ, ಇನ್ನು ಬೇಸಿಗೆಯಲ್ಲೂ ವರುಣನ ಅಬ್ಬರ. ಹೀಗೆ ಭೂ ವಾತಾವರಣ ವಿಪರೀತ ಬದಲಾಗುತ್ತಿದೆ. ಮಾನವನ ದುರಾಸೆಯಿಂದಾಗಿ ಮಾಲಿನ್ಯ ಸೃಷ್ಟಿಯಾಗಿದೆ. ಮಾಲಿನ್ಯದ ಪರಿಣಾಮ ಭೂಮಿ ಮೇಲಿನ ವಾತಾವರಣ ನಾಶವಾಗುತ್ತಿದೆ. ಯಾವ ಸಮಯದಲ್ಲಿ ಏನಾಗಬೇಕೋ ಅದೆಲ್ಲಾ ಉಲ್ಟಾ ಆಗುತ್ತಿದೆ. ಇದು ಪರಿಸ್ಥಿತಿಯನ್ನ ಮತ್ತಷ್ಟು ಕಠಿಣಗೊಳಿಸಿದೆ. ರೈತರ ಬೆಳೆ ನಾಶವಾಗುವ ಜೊತೆಗೆ ಇದು ಆಹಾರ ಭದ್ರತೆಗೂ ಕಂಟಕ ಎದುರಾಗುವಂತೆ ಮಾಡಿದೆ. ಅಕಾಲಿಕ ಮಳೆ ನೂರಾರು ಅವಾಂತರ ಸೃಷ್ಟಿಸುತ್ತಿದೆ. ಮತ್ತೊಂದು ಕಡೆ ಹಿಮವೆಲ್ಲಾ ಕರಗಿ ನೀರಾಗಿ ಸಮುದ್ರ ಸೇರುತ್ತಿದ್ದು, ಭೂಮಿ ಮುಳುಗುತ್ತಿದೆ.