ಠಾಕ್ರೆಯ ಶಿವಸೇನೆಯೋ, ಶಿಂಧೆಯ ಶಿವಸೇನೆಯೋ? ಗೊಂದಲದಲ್ಲಿ ಕಾರ್ಯಕರ್ತ
ಹಿಂದುತ್ವದ ಬಲವಾದ ಪ್ರತಿಪಾದಕ ಬಾಳಾ ಸಾಹೇಬ್ ಠಾಕ್ರೆ ಹುಟ್ಟು ಹಾಕಿದ ಶಿವಸೇನೆ ಈಗ ನಲುಗುತ್ತಿದೆ. ಮುಂಬೈನ ವಿಲೇಪರ್ಲೆಯ ಮಾತೋಶ್ರೀಯಲ್ಲಿ ಕೂತು ಬಾಳ್ ಠಾಕ್ರೆ ಆದೇಶ ಹೊರಡಿಸಿದರು ಎಂದರೆ ಶಿವಸೈನಿಕರು ಅದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು.
ಹಿಂದು, ಹಿಂದೂತ್ವದ ಹೆಸರಿನಲ್ಲೇ ಅಧಿಕಾರ ನಡೆಸುವ ಹಂತಕ್ಕೆ ಬಂದಿರುವ ಶಿವಸೇನೆ, ರಾಷ್ಟ್ರಮಟ್ಟದಲ್ಲಿ ಬಹುತೇಕ ಅದೇ ವಾದವನ್ನು ಪಾಲಿಸಿಕೊಂಡು ಬರುತ್ತಿರುವ ಬಿಜೆಪಿಯ ಜೊತೆ ಮುನಿಸಿಕೊಂಡಿದ್ದೇ ಇಂದಿನ ಸಂದಿಗ್ದ ಪರಿಸ್ಥಿತಿಗೆ ಕಾರಣವಾಯಿತೇ?
ಮಹಾರಾಷ್ಟ್ರ ಬಿಕ್ಕಟ್ಟು: ಎನ್ಸಿಪಿ ನಾಯಕ ಅಜಿತ್ ಪವಾರ್ ಅಚ್ಚರಿಯ ಹೇಳಿಕೆ
ಶಿವಸೇನೆಯ ಹೆಸರಿನಲ್ಲಿ ಗೆದ್ದು ಬಂದಿರುವ 56 ಶಾಸಕರು ಬಹುತೇಕ ಬಾಳ್ ಠಾಕ್ರೆಯ ಹಿಂದುತ್ವದ ಸಿದ್ದಾಂತವನ್ನೇ ಪಾಲಿಸಿಕೊಂಡು ಬಂದವರು ಎನ್ನುವ ವಾದ ಒಂದು ಕಡೆ. ಪರಿಸ್ಥಿತಿ ಹೀಗಿರುವಾಗ ರಾಜಕೀಯವಾಗಿ ಮತ್ತು ಸೈದ್ದಾಂತಿಕವಾಗಿ ತಮ್ಮ ಬದ್ದ ವಿರೋಧಿಯಾಗಿರುವ ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಎಷ್ಟು ಸರಿ ಎನ್ನುವುದು ಪಕ್ಷದೊಳಗಿರುವ ಇನ್ನೊಂದು ವಾದ.
ಈ ಎರಡೂ ವಿಚಾರದಲ್ಲಿ ಬಿಜೆಪಿಯ ಜೊತೆ ಸಖ್ಯ ಬೇಡ ಎಂದಿದ್ದೇ ಶಿವಸೇನೆಯ ಇಂದಿನ ಪರಿಸ್ಥಿತಿಗೆ ಕಾರಣ ಎಂದು ಗುವಹಾಟಿಯ ಐಷಾರಾಮಿ ರ್ಯಾಡಿಶನ್ ಬ್ಲೂ ಹೊಟೇಲ್ ನಲ್ಲಿ ಬಂಡಾಯ ಕೂತಿರುವ ಮುಕ್ಕಾಲು ಪಾಲು ಶಿವಸೇನೆ ಶಾಸಕರ ಮಾತು. ಶಿವಸೇನೆಗೆ ಮುಂದಿನ ದಿಕ್ಕು ಯಾರು ಠಾಕ್ರೆ ಕುಟುಂಬವೋ ಅಥವಾ ಏಕನಾಥ್ ಶಿಂಧೆಯೋ ಎನ್ನುವ ಗೊಂದಲ ಕಾರ್ಯಕರ್ತರಲ್ಲಿ ಮನೆ ಮಾಡಿದೆ ಎಂದರೆ ಬಂಡಾಯದ ಬಿಸಿ ಕಾರ್ಯಕರ್ತರಲ್ಲಿ ಆ ಮಟ್ಟಿಗೆ ಮುಟ್ಟಿದೆ ಎಂದೇ ಅರ್ಥೈಸಿಕೊಳ್ಳಬಹುದು.
ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಳ್ಳಲು ಸಿದ್ದರಿದ್ದೇವೆ
ನಿಮ್ಮನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ, ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಳ್ಳಲು ಸಿದ್ದರಿದ್ದೇವೆ, ಮೊದಲು ಶಾಸಕರನ್ನು ಕರೆದುಕೊಂಡು 24ಗಂಟೆಯೊಳಗೆ ಮುಂಬೈಗೆ ಬನ್ನಿ ಎಂದು ಶಿವಸೇನೆಯ ಪ್ರಮುಖ ಸಾಲಿನಲ್ಲಿ ನಿಲ್ಲುವ ಸಂಜಯ್ ರಾವತ್ ಹೇಳಿದರೂ, ಶಾಸಕರು ಗುವಹಾಟಿಯಿಂದ ಜಪ್ಪೆನ್ನುತ್ತಿಲ್ಲ. ಇವೆಲ್ಲಾ ಬೆಳವಣಿಗೆಗಳ ನಡುವೆ, ಭಿನ್ನಮತೀಯ ಗುಂಪಿನ ಏಕನಾಥ್ ಶಿಂಧೆ ಮುಂಬೈಗೆ ಬರುತ್ತಿದ್ದರೆ, ಇನ್ನೊಂದು ಕಡೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್, ನಡ್ಡಾ ಮತ್ತು ಅಮಿತ್ ಶಾ ಜೊತೆ ಮಾತುಕತೆಗೆ ದೆಹಲಿಗೆ ಬಂದಿದ್ದಾರೆ.
ಏಕನಾಥ್ ಶಿಂಧೆ ಬಣ ಸದ್ಯದ ಮಟ್ಟಿಗೆ ಸ್ಪಷ್ಟವಾಗಿ ಮೇಲುಗೈ
ಯಾರ ಜೊತೆ ಎಷ್ಟು ಶಾಸಕರಿದ್ದಾರೆ ಎನ್ನುವ ನಂಬರ್ ಗೇಂನಲ್ಲಿ ಏಕನಾಥ್ ಶಿಂಧೆ ಬಣ ಸದ್ಯದ ಮಟ್ಟಿಗೆ ಸ್ಪಷ್ಟವಾಗಿ ಮೇಲುಗೈ ಸಾಧಿಸುತ್ತಿದೆ. ಶುಕ್ರವಾರ (ಜೂನ್ 24) ಮತ್ತೆ ಮೂವರು ಶಾಸಕರು ಶಿಂಧೆ ಬಣಕ್ಕೆ ಸೇರಿದ್ದಾರೆ ಎನ್ನುವ ಮಾಹಿತಿಯಿದೆ. ಆ ಮೂಲಕ, ಉದ್ದವ್ ಠಾಕ್ರೆ ಬಣ ಸೊರಗುತ್ತಿದೆ, ಖಾಲಿಯಾಗುತ್ತಿದೆ. "ಬಿಜೆಪಿಯಂತಹ ದೊಡ್ಡ ರಾಷ್ಟ್ರೀಯ ಪಕ್ಷ ನನ್ನ ನಿರ್ಧಾರ ಐತಿಹಾಸಿಕ ಎಂದು ಹೇಳಿದೆ. ಬೇಕಾದಾಗ ನೆರವಿಗೆ ಬರುತ್ತೇವೆ ಎಂದು ಪಕ್ಷದ ವರಿಷ್ಠರು ಹೇಳಿದ್ದಾರೆ. ಹಾಗಾಗಿ, ನಮಗೆ ಇದು ಇನ್ನಷ್ಟು ಬಲವನ್ನು ತುಂಬಿದೆ"ಎಂದು ಏಕನಾಥ್ ಶಿಂಧೆ ಹೇಳಿರುವುದು ಮುಂದಿನ ನಿರ್ಧಾರ ಏನಿರಬಹುದು ಎನ್ನುವ ಸಂದೇಶವನ್ನು ರವಾನಿಸಿದಂತಿದೆ.
ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಉದ್ದವ್ ಠಾಕ್ರೆ ಪರದಾಟ
ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಮತ್ತು ವಿಧಾನಸಭೆಯಲ್ಲಿ ಪಕ್ಷವನ್ನು ವಿಭಜಿಸಲು ಬೇಕಾದ ನಿರ್ಣಾಯಕ ಸಂಖ್ಯೆಯನ್ನು ಈಗಾಗಲೇ ಏಕನಾಥ್ ಶಿಂಧೆ ಬಣ ಗಳಿಸಿದೆ ಎಂದು ಹೇಳಲಾಗುತ್ತಿದೆ. ಶಾಸಕರ ಸಹಿಯಿರುವ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ, ವರ್ಚುಯಲ್ ಮೂಲಕ ಶಕ್ತಿ ಪ್ರದರ್ಶನವನ್ನೂ ಮಾಡಲಾಗಿದೆ. ಶಾಸಕರಲ್ಲದೇ ಸಂಸದರೂ ಏಕನಾಥ್ ಬಣದತ್ತ ವಾಲುತ್ತಿದ್ದಾರೆ. ಹೀಗಾಗಿ, ಸರಕಾರ ಉಳಿಸಿಕೊಳ್ಳುವುದು ಹಾಗಿರಲಿ, ಪಕ್ಷದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಉದ್ದವ್ ಠಾಕ್ರೆ ಪರದಾಡುವಂತಾಗಿದೆ.
ಠಾಕ್ರೆಯ ಶಿವಸೇನೆಯೋ, ಶಿಂಧೆಯ ಶಿವಸೇನೆಯೋ?
ಸಿಎಂ ಅಧಿಕೃತ ನಿವಾಸದಿಂದ ಉದ್ದವ್ ಠಾಕ್ರೆ ಈಗಾಗಲೇ ತಮ್ಮ ನಿವಾಸ ಮಾತೋಶ್ರೀಗೆ ಶಿಫ್ಟ್ ಆಗಿದ್ದಾಗಿದೆ. ಇನ್ನು, ಮುಂಬೈನ ದಾದರ್ ನಲ್ಲಿರುವ ಪಕ್ಷದ ಕೇಂದ್ರ ಕಚೇರಿ ಶಿವಸೇನಾ ಭವನ್ ನಲ್ಲಿ ಯಾರ ಮರ್ಜಿ ನಡೆಯಲಿದೆ? ಹೆಚ್ಚಿನ ಶಾಸಕರ ಬೆಂಬಲವಿರುವ ನಮ್ಮದೇ ನಿಜವಾದ ಶಿವಸೇನೆ ನಮ್ಮದೇ ಎಂದು ಏಕನಾಥ್ ಶಿಂಧೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದರೆ ಅದು ಮಾನ್ಯವಾಗುವ ಸಾಧ್ಯತೆಯೂ ಇದೆ. ಹಾಗಾಗಿ, ನಿಜವಾದ ಶಿವಸೇನೆ ಯಾರದ್ದು ಉದ್ದವ್ ಠಾಕ್ರೆಯದ್ದೋ ಅಥವಾ ಏಕನಾಥ್ ಶಿಂಧೆಯದ್ದೋ ಎನ್ನುವ ಗೊಂದಲದಲ್ಲಿದ್ದಾನೆ ಸೇನೆಯ ಕಾರ್ಯಕರ್ತ.