ಕೊರೊನಾ ನಂತರದ ಹೊಸ ಜೀವನಶೈಲಿಗೆ ಒಗ್ಗಿಕೊಳ್ಳುವುದು ಕಷ್ಟಕರ
ಕೊರೊನಾ ಎಂಬ ಚೀನಿ ಭೂತದಿಂದ ಜಗತ್ತೇ ತಲ್ಲಣಿಸಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೇರಿಕಾದ ಕೈಯಲ್ಲೇ ಇದನ್ನು ನಿಭಾಯಿಸುವುದು ಕಷ್ಟಕರವಾಗಿದ್ದು ಭಾರತದಲ್ಲಿ ವೈದ್ಯೋ ನಾರಾಯಣ ಹರಿ ಎಂಬಂತೆ ಭಾರತೀಯ ವೈದ್ಯಕೀಯ ಸೇವೆಗಳು ಬಲವಾಗಿರುವುದರಿಂದ, ಸರ್ಕಾರ ತೆಗೆದುಕೊಳ್ಳುತ್ತಿರುವ ಕಟ್ಟುನಿಟ್ಟಿನ ಕ್ರಮಗಳಿಂದ ಇತರೆ ದೇಶಗಳಿಗೆ ಹೋಲಿಸಿಕೊಂಡರೆ ಕೊರೊನಾ ಎಂಬ ಚೀನಿ ಭೂತವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರಲ್ಲಿ ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟುವಲ್ಲಿ ಸಾಧ್ಯವಾದಷ್ಟು ಯಶಸ್ವಿಯಾಗಿದೆ ಎಂದರೆ ತಪ್ಪೇನಿಲ್ಲ. ಇನ್ನೂ ಹೆಚ್ಚಿನ ಮಟ್ಟದ ಯಶಸ್ಸು ಸಾಧಿಸಬೇಕೆಂದರೆ ದೇಶದ ಪ್ರಜೆಗಳ ಸಹಕಾರ ಅತ್ಯಗತ್ಯ.
ಹಳ್ಳಿಗಳಿಂದ ಬಣ್ಣದ ಬದುಕನ್ನು ಅರಸಿ ಹೋದಂತಹ ಯುವ ಜನಾಂಗಕ್ಕೆ ಅಕ್ಷರಶಃ ವೃದ್ದಾಶ್ರಮದಂತಿದ್ದ ಹಳ್ಳಿಯ ತಮ್ಮ ಮನೆಯ, ಹೊಲಗದ್ದೆಗಳ ನೆನಪುಗಳೇ ಇರಲಿಲ್ಲ. ಚೀನಿ ಭೂತದ ಪ್ರಭಾವದಿಂದ ಹಳ್ಳಿಯ ಮನೆಮನಗಳು ತುಂಬಿ ಕೂಡುಕುಟುಂಬವಾಗಿದೆ. ಸಂಬಂಧ ಬಾಂಧವ್ಯಗಳ ಬೆಲೆ ತಿಳಿಸಿಕೊಟ್ಟಿದೆ. ವಯಸ್ಸಾದ ತಂದೆತಾಯಿಗಳಿಗೆ ಯೌವನದ ಹುರುಪು ಬಂದಿದೆ. ಮಕ್ಕಳು ಮೊಮ್ಮಕ್ಕಳೊಂದಿಗೆ ತಮ್ಮ ಯೌವನದ ದಿನಗಳನ್ನು ನೆನಪುಗಳನ್ನು ಮೆಲುಕು ಹಾಕುತ್ತಾ ನೈಜ ಜಗತ್ತಿನ ಪರಿಚಯ ಮಾಡಿಸುತ್ತಿದ್ದಾರೆ.
ಆಧುನಿಕ ಯಾಂತ್ರಿಕ ಜೀವನಕ್ಕೆ ಒಗ್ಗಿ ಹೋಗಿದ್ದ ಜೀವಗಳಿಗೆ ಹೊಸ ಹುರುಪು, ಉತ್ಸಾಹ, ನಿರ್ಮಲ ಸ್ವಚ್ಚ ವಾತಾವರಣದ ಜಗತ್ತಿನ ಪರಿಚಯವಾಗಿದೆ. ಒಂದು ಇಡೀ ಕುಟುಂಬ ಮನೆಯಲ್ಲಿಯೇ ಇರುವುದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು, ಎಲ್ಲರ ಭಾವನೆಗಳು, ಸಂಬಂಧಗಳ ಬೆಲೆಗಳು ತಿಳಿಯುತ್ತಿದೆ.
ಕರೋನಾ ನಂತರದ ಜೀವನ ಹೇಗೆ?
ಆದರೆ ಕರೋನಾ ನಂತರದ ಜೀವನವನ್ನು ನೆನಪಿಸಿಕೊಳ್ಳುವುದು ವ್ಯರ್ಥ. ಯಾಕೆಂದರೆ ದೇಶದ ಆರ್ಥಿಕ ಅರ್ಥ ವ್ಯವಸ್ಥೆ ತೀರಾ ಕೆಳಮಟ್ಟಕ್ಕೆ ಕುಸಿಯುವುದಲ್ಲದೇ ದೇಶ ಸರಿ ಸುಮಾರು 25 ರಿಂದ 30 ವರ್ಷಗಳ ಹಿಂದೆ ಸರಿದು ಹೋಗುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟು ಸಾಕಷ್ಟು ಜನ ಕೆಲಸ ಕಳೆದುಕೊಳ್ಳುತ್ತಾರೆ. ಆನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ಒಂದು ಲಕ್ಷ ಸಂಬಳ ತೆಗೆದುಕೊಳ್ಳುವವ ಅದಕ್ಕೆ ತಕ್ಕ ಜೀವನ ಶೈಲಿಗೆ ಒಗ್ಗಿಕೊಂಡಿರುತ್ತಾರೆ. ಏಕಾಏಕಿ ಕೆಲಸ ಕಳೆದುಕೊಂಡಲ್ಲಿ ಬೇರೆ ಜೀವನ ಶೈಲಿಗೆ ಹೊಂದಿಕೊಳ್ಳಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ.
ಸರ್ಕಾರಿ ಶಾಲೆಗೆ ದಾಖಲಾತಿ ಹೆಚ್ಚಳ
ಇನ್ನೊಂದು ವಿಶೇಷವೆನೆಂದರೆ ಈ ವರ್ಷದ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಾಗಬಹುದೆಂಬ ನೀರೀಕ್ಷೆ ಇದೆ. ಕಾರಣ ಹಳ್ಳಿಗಳಿಗೆ ಮರಳಿದ ಮಧ್ಯಮ ವರ್ಗದ ಜನ ಪಟ್ಟಣದಲ್ಲಿ ತಮ್ಮ ಅಕ್ಕಪಕ್ಕದ ಮನೆಯವರು ಇಂಗ್ಲೀಷ್ ಮಾಧ್ಯಮದ ಹೆಸರುವಾಸಿಯಾದ ಶಾಲೆಗೆ ಸೇರಿಸುವುದನ್ನು ಕಂಡು ತಮ್ಮ ಮಕ್ಕಳನ್ನು ಸಾಲ ಮಾಡಿ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಮುಂಗಡ ಹಣ ಪಡೆದು ಸೇರಿಸುತ್ತಿದ್ದರು ಈಗಿನ ಪರಿಸ್ಥಿತಿಯಲ್ಲಿ ಕೆಲಸ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿರುವ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವುದು ದುಸ್ತರವಾಗಬಹುದು ಆದ್ದರಿಂದ ಓದುವ ಮಕ್ಕಳು ಎಲ್ಲಿದ್ದರು ಓದುತ್ತಾರೆಂಬ ಹಿರಿಯರ ನಾಣ್ಣುಡಿಯಂತೆ ಪ್ರಕೃತಿಯ ಮಡಿಲಲ್ಲಿರುವ ಸುಂದರವಾದ ಸರ್ಕಾರಿ ಶಾಲೆಗಳಿಗೆ ಸೇರಿಸಬಹುದು.
ತಗ್ಗಿದ ಮಾಲಿನ್ಯ, ಸುಧಾರಿಸಿದ ಮಾನಸಿಕ ಆರೋಗ್ಯ
ಕರೋನಾ ಚೀನಿ ಭೂತದಿಂದ ನಿರ್ಗತಿಕರಿಗೆ, ಮಧ್ಯಮವರ್ಗದವರಿಗೆ, ದಿನಕೂಲಿಯವರಿಗೆ ಸಾಕಷ್ಟು ಸಮಸ್ಯೆಯಾಗಿದ್ದು ಊಟ ತಿಂಡಿಗೂ ಸವಾಲಾಗಿದೆ. ಇದನ್ನೇ ಕೆಲವು ಜನ ಸಹಾಯ ಮಾಡುವ ನೆಪದಲ್ಲಿ ಅವರ ಬಡತನವನ್ನು ಕಂಡು ಕನಿಕರ ಪಟ್ಟು ಸಹಾಯ ಮಾಡುವ ಬದಲು ಫೋಟೋಗಾಗಿ, ಸುದ್ದಿಗಾಗಿ, ಸಹಾಯ ಮಾಡುವ ತರಹ ನಟಿಸುತ್ತಿದ್ದಾರೆ. ಮಾನವೀಯ ಮೌಲ್ಯದ ಅರಿವಿದ್ದರು ಸಹಾಯ ಮಾಡುತ್ತಾ ತೆರೆಮರೆಯಲ್ಲೇ ಇದ್ದಾರೆ. ಇನ್ನೂ ಮದ್ಯಪಾನ, ಧೂಮಪಾನಿಗಳಿಗೆ ಅವುಗಳೆಲ್ಲ ಸಿಗದೇ ಶೇಕಡಾ 40 ರಿಂದ ಶೇಕಡಾ 60 ರಷ್ಟು ಜನರು ತಮ್ಮ ಆರೋಗ್ಯ ಸ್ಥಿರತೆ ಕಂಡುಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯ , ಶಬ್ದ ಮಾಲಿನ್ಯ ಕೂಡ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದ್ದು ಆರೋಗ್ಯಕರ ವಾತಾವರಣ ನಿರ್ಮಾಣವಾಗಿ ಪ್ರಾಣಿಪಕ್ಷಿಗಳು ನಗರಗಳಲ್ಲಿ ಕಾಣಸಿಗುತ್ತಿದೆ.
ಹಳ್ಳಿಗೆ ಮರಳುವವರ ಸಂಖ್ಯೆ ಹೆಚ್ಚಳ
ಬಣ್ಣದ ಬದುಕನ್ನು ಅರಸಿ ಹೋದವರಲ್ಲಿ ಸಾಕಷ್ಟು ಜನ ಆರ್ಥಿಕವಾಗಿ ಸದೃಢರಾದವರು ಹಾಗೂ ಹೊಲ ಗದ್ದೆ ಇದ್ದಂತವರು. ಆದರೆ ಯಾಂತ್ರಿಕ ಆಧುನಿಕ ಬದುಕಿಗೆ ಮಾರುಹೋಗಿ ಹಳ್ಳಿ ತೊರೆದಂತವರು ಇನ್ನೂ ಮುಂದಿನ ಜೀವನವನ್ನು ತಮ್ಮ ಹಳ್ಳಿಯಲ್ಲಿಯೇ ಹೊಲಗದ್ದೆಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸಬಹುದು. ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸ ಮಾಡಲು ತೊಂದರೆಯದ್ದದ್ದರಿಂದ ಸಾಕಷ್ಟು ಜನ ವಿದ್ಯಾವಂತರು ಇರದಿದ್ದರಿಂದ ಸಾಹುಕಾರರ ಅಡಿಯಾಳಾಗಿರುತ್ತಿದ್ದರು ಅಷ್ಟೇ. ಆದರೆ ಇಂದು ವಿದ್ಯಾವಂತರಿರುವುದರಿಂದ ಏನಾದರೊಂದು ಕೆಲಸ ಮಾಡಿಕೊಂಡು ಜಿವನ ಸಾಗಿಸುವುದಂತೂ ನಿಜ.
ಇನ್ನೂ ಚೀನಿ ಭೂತವನ್ನು ಓಡಿಸಲು ದೇಶದ ಪ್ರಜೆಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರ ಹಾಗೂ ವೈದ್ಯಕೀಯ ವಲಯ ತಿಳಿಸಿದಂತೆ ಜೀವನ ನಡೆಸುವುದರೊಂದಿಗೆ ಹೆಚ್ಚಿನ ಮಟ್ಟದಲ್ಲಿ ಹಬ್ಬುವುದನ್ನು ತಡೆಗಟ್ಟಬಹುದು. ಸರ್ವೇಜನ ಸುಖೀನೋಭವಂತು.