ಕಾಶ್ಮೀರಿ ಪಂಡಿತರ ಬಗ್ಗೆ ಹೇಳಿಕೆ ವಿವಾದ: ಸ್ಪಷ್ಟನೆ ನೀಡಿದ ಸಾಯಿ ಪಲ್ಲವಿ
ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯೆಯ ಕುರಿತಾದ ವಿವಾದದ ನಡುವೆ ನಟಿ ಸಾಯಿ ಪಲ್ಲವಿ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದಾರೆ. ಪ್ರತಿ ರೂಪದಲ್ಲಿ ಹಿಂಸೆಯನ್ನು ಖಂಡಿಸುವುದು ನನ್ನ ಉದ್ದೇಶವಾಗಿತ್ತು ಎಂದು ಸಾಯಿಪಲ್ಲವಿ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಹೊಸ ಚಿತ್ರ 'ವಿರಾಟ ಪರ್ವಂ' ಕುರಿತು ಗ್ರೇಟ್ ಆಂಧ್ರದ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡುವ ವೇಳೆ, ಸಾಯಿ ಪಲ್ಲವಿ ಮಾತನಾಡುತ್ತಾ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸಾಚಾರ ಖಂಡಿಸಿ ಹೇಳಿಕೆ ನೀಡಿದ್ದರು. ನಟಿಯ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ವ್ಯಕ್ತವಾಗಿತ್ತು.
ಸಾಯಿ ಪಲ್ಲವಿಯವರ ಸಂವಿಧಾನಾತ್ಮಕ ಮಾತುಗಳು
ಗೋರಕ್ಷಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಜರಂಗದಳದ ಮುಖಂಡರು ಹೈದರಾಬಾದ್ನಲ್ಲಿ ದೂರು ದಾಖಲಿಸಿದ್ದಾರೆ. ಕಾಶ್ಮೀರಿ ಪಂಡಿತರ ದುರಂತವನ್ನು ಗೋವು ಸಾಗಿಸುತ್ತಿದ್ದ ವ್ಯಕ್ತಿಯ ಸಾವಿನೊಂದಿಗೆ ಹೋಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಪರ, ವಿರೋಧದ ಚರ್ಚೆ ಹೆಚ್ಚಾಗುತ್ತಿದ್ದಂತೆ, ನಟಿ ಸಾಯಿ ಪಲ್ಲವಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಯಾವುದೇ ಧರ್ಮವಾದರೂ ಹಿಂಸೆಯನ್ನು ಖಂಡಿಸುತ್ತೇನೆ ಎಂದು ಹೇಳಿದ್ದೇನೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ.
ತಟಸ್ಥ ನಿಲುವು ಪುನರುಚ್ಚರಿಸಿದ ಸಾಯಿ ಪಲ್ಲವಿ
ತನ್ನ ತಟಸ್ಥ ನಿಲುವನ್ನು ಪುನರುಚ್ಚರಿಸಿದ ಸಾಯಿ ಪಲ್ಲವಿ ತನ್ನ ಇತ್ತೀಚಿನ ವೀಡಿಯೊದಲ್ಲಿ ಜನಸಮೂಹದ ಹತ್ಯೆಯನ್ನು ಸಮರ್ಥಿಸುತ್ತಿರುವ ಜನರನ್ನು ನೋಡುವುದು ಗೊಂದಲದ ಸಂಗತಿ ಎಂದು ಹೇಳಿದ್ದಾರೆ. "ನಮ್ಮಲ್ಲಿ ಯಾರಿಗೂ ಇನ್ನೊಬ್ಬರ ಜೀವ ತೆಗೆಯುವ ಹಕ್ಕು ಇಲ್ಲ ಎಂದು ನಾನು ಭಾವಿಸುತ್ತೇನೆ. ವೈದ್ಯಕೀಯ ಪದವಿ ಪಡೆದಿರುವುದರಿಂದ, ನಾನು ಎಲ್ಲಾ ಜೀವಗಳು ಸಮಾನ ಮತ್ತು ಎಲ್ಲಾ ಜೀವಗಳು ಮುಖ್ಯ ಎಂದು ನಂಬಿದ್ದೇನೆ. ಮಗು ಜನಿಸಿದಾಗ ಅದು ತನ್ನ ಅಸ್ಮಿತೆ ಬಗ್ಗೆ ಭಯಪಡುವ ದಿನ ಬರುವುದಿಲ್ಲ ಎಂದು ನಾನು ಭಾವಿಸುತ್ತೇನೆ," ಎಂದು ಸಾಯಿಪಲ್ಲವಿ ಹೇಳಿದರು. ವಿವಾದದ ಕಾರಣದಿಂದ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ, ಸಂಘರ್ಷದಲ್ಲಿದ್ದೆ ಎಂದು ಹೇಳಿದ್ದಾರೆ.
ಆರೋಪಕ್ಕೆ ಸಾಯಿಪಲ್ಲವಿ ತಿರುಗೇಟು
ಕಾಶ್ಮೀರಿ ಪಂಡಿತರ ನೋವನ್ನು ಗೋ ಕಳ್ಳರ ಥಳಿತಕ್ಕೆ ಹೋಲಿಸಿ ಕೀಳಾಗಿ ಕಾಣುತ್ತಿದ್ದಾರೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಸಾಯಿ ಪಲ್ಲವಿ, "ಹತ್ಯಾಕಾಂಡದಂತಹ ದುರಂತವನ್ನು ಮತ್ತು ಅದರಿಂದ ಬಳಲುತ್ತಿರುವ ಜನರ ಪೀಳಿಗೆಯನ್ನು ಎಂದಿಗೂ ಕೇವಲವಾಗಿ ನೋಡುವುದಿಲ್ಲ, ಹಾಗೆಯೇ ಕೋವಿಡ್ ಸಮಯದಲ್ಲಿ ನಡೆದ ಗುಂಪು ಹತ್ಯೆಯ ಘಟನೆಗಳ ನೋವಿನಿಂದ ನಾನು ಹೊರ ಬರಲು ಸಾಧ್ಯವಾಗಲಿಲ್ಲ" ಎಂದು ಸಾಯಿ ಪಲ್ಲವಿ ಹೇಳಿದರು.
"ನಾನು ಇನ್ನು ಮುಂದೆ ಹೃದಯದಿಂದ ಮಾತನಾಡುವ ಮೊದಲು ಎರಡು ಬಾರಿ ಯೋಚಿಸುತ್ತೇನೆ, ಏಕೆಂದರೆ ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು" ಎಂದು ಅವರು ಹೇಳಿದ್ದಾರೆ.
ಧರ್ಮದ ಹೆಸರಲ್ಲಿ ಹಿಂಸೆ ಬೇಡ ಎಂದಿದ್ದ ಸಾಯಿಪಲ್ಲವಿ
ಯೂಟ್ಯೂಬ್ ಚಾನೆಲ್ ಗ್ರೇಟ್ ಆಂಧ್ರಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸಾಯಿಪಲ್ಲವಿ, "ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂದು ಕಾಶ್ಮೀರಿ ಫೈಲ್ಸ್ ಚಲನಚಿತ್ರದಲ್ಲಿ ತೋರಿಸಲಾಗಿದೆ. ಈ ವಿಷಯವನ್ನು ಧಾರ್ಮಿಕ ಸಂಘರ್ಷ ಎಂದು ನೀವು ಪರಿಗಣಿಸುತ್ತೀರಿ ಎಂದಾದರೆ, ಕೋವಿಡ್ ಕಾಲದಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಚಾಲಕನನ್ನು ಥಳಿಸಿ 'ಜೈ ಶ್ರೀ ರಾಮ್' ಎಂದು ಹೇಳಲು ಒತ್ತಾಯಿಸಿದ ಘಟನೆ ನಡೆಯಿತು, ಹಾಗಾದರೆ ಎರಡೂ ಘಟನೆಗಳ ನಡುವೆ ಏನು ವ್ಯತ್ಯಾಸ ಇದೆ" ಎಂದು ಪ್ರಶ್ನಿಸಿದ್ದರು.
ನಟಿ ಹೇಳಿಕೆ ಬೆನ್ನಲ್ಲೇ ಹಲವರು ಪರ, ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಿಂದೂ ಪರ ಸಂಘಟನೆಗಳು ಸಾಯಿ ಪಲ್ಲವಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದವು. ನಟಿ ವಿರುದ್ಧ ಹೈದರಾಬಾದ್ನಲ್ಲಿ ದೂರು ಕೂಡ ದಾಖಲು ಮಾಡಲಾಗಿದೆ.
ನಾವು ಯಾವುದೇ ಪಂಥವಲ್ಲ
"ನಾನು ಎಡ ಅಥವಾ ಬಲಪಂಥೀಯ ಬೆಂಬಲಿಗರೇ ಎಂದು ಕೇಳಿದ್ದರು, ನಾವು ಯಾವ ಪಂಥಕ್ಕೂ ಸೇರುವುದಿಲ್ಲ, ತಟಸ್ಥವೆಂದು ನಂಬುತ್ತೇನೆ ಎಂದು ಹೇಳಿದ್ದಾರೆ. ನಮ್ಮ ನಂಬಿಕೆಗಳೊಂದಿಗೆ ನಮ್ಮನ್ನು ಗುರುತಿಸಿಕೊಳ್ಳುವ ಮೊದಲು ನಾವು ಉತ್ತಮ ಮನುಷ್ಯರಾಗಬೇಕು ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಮತ್ತು ತುಳಿತಕ್ಕೊಳಗಾದವರನ್ನು ರಕ್ಷಿಸಬೇಕು" ಎಂದು ನಟಿ ಹೇಳಿದ್ದಾರೆ.
"ನನ್ನ ಶಾಲಾ ಜೀವನದ 14 ವರ್ಷಗಳು ನಾನು ಪ್ರತಿದಿನ ಶಾಲೆಗೆ ಹೋಗುವುದನ್ನು ನೆನಪಿಸಿಕೊಳ್ಳುತ್ತೇನೆ ಮತ್ತು ಎಲ್ಲಾ ಭಾರತೀಯರು ನನ್ನ ಸಹೋದರರು ಮತ್ತು ಸಹೋದರಿಯರು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ ಮತ್ತು ಅದರ ಶ್ರೀಮಂತ ಮತ್ತು ವೈವಿಧ್ಯಮಯ ಪರಂಪರೆಯ ಬಗ್ಗೆ ನಾನು ಹೆಮ್ಮೆಪಡುತ್ತೇನೆ" ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.