ಅನಂತ ಕುಮಾರ್ ಮಾಡಿದ ಮಹತ್ವದ ಸಾಧನೆಗಳೇನು? ವಿವರ ಇಲ್ಲಿದೆ...
ಬೆಂಗಳೂರು, ನವೆಂಬರ್ 12: ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಆಪ್ತರ ವಲಯದಲ್ಲಿ ಗುರುತಿಸಿಕೊಂಡಿದ್ದ ಅನಂತ ಕುಮಾರ್, ಕೇಂದ್ರದ ಎಲ್ಲ ಸಚಿವರು ಮತ್ತು ಸಂಸದರ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದರು.
ರಾಷ್ಟ್ರಮಟ್ಟದಲ್ಲಿ ತಮ್ಮದೇ ಪ್ರಭಾವಳಿ ಹೊಂದಿದ್ದ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಜತೆಗೂ ಅಷ್ಟೇ ಆಪ್ತ ಸಂಬಂಧ ಇತ್ತು.
ಸ್ನೇಹಜೀವಿ ಅನಂತ್ ಕುಮಾರ್ ವ್ಯಕ್ತಿಚಿತ್ರ: ಸಚಿತ್ರ ವಿವರ
ಹೀಗಾಗಿ ವಿವಿಧ ರಾಜ್ಯಗಳ ಸಂಸದರು, ಮುಖ್ಯಮಂತ್ರಿಗಳು ತಮ್ಮ ಕೆಲಸವನ್ನು ಅನಂತ ಕುಮಾರ್ ಅವರ ಮೂಲಕ ಮಾಡಿಸಿಕೊಳ್ಳುತ್ತಿದ್ದರು. ಕರ್ನಾಟಕ ಮಾತ್ರವಲ್ಲದೆ, ಬೇರೆ ರಾಜ್ಯಗಳೂ ಅನಂತ ಕುಮಾರ್ ಅವರ ನೆರವನ್ನು ಬಳಸಿಕೊಂಡಿವೆ ಎಂದು ಅವರನ್ನು ಬಲ್ಲವರು ಹೇಳುತ್ತಾರೆ.
ರಾಜಕೀಯ ವಿರೋಧಿಗಳಿದ್ದರೂ, ಅನಂತ ಕುಮಾರ್ ಅವರು ದ್ವೇಷಿಗಳನ್ನು ಬೆಳೆಸಿಕೊಂಡಿದ್ದು ಕಡಿಮೆ. ರಾಜ್ಯದಿಂದ ಆಯ್ಕೆಯಾದ ಬೇರೆ ಬಿಜೆಪಿ ಸಂಸದರು, ಸಚಿವರು ಇದ್ದರೂ, ಇಲ್ಲಿನ ಮುಖ್ಯಮಂತ್ರಿಗಳು, ಸಚಿವರುಗಳು ವಿವಿಧ ಕಾರ್ಯಗಳಿಗಾಗಿ ಅನಂತ ಕುಮಾರ್ ಅವರನ್ನೇ ಭೇಟಿ ಮಾಡಿ ಚರ್ಚಿಸುತ್ತಿದ್ದರು ಎಂದರೆ ಅವರ ಪ್ರಭಾವಳಿಯನ್ನು ಊಹಿಸಬಹುದು.
ಮಾಜಿ ಸಿಎಂ ಪತ್ನಿಯನ್ನು ಸೋಲಿಸಿ ರಾಜಕೀಯ ಬದುಕು ಆರಂಭಿಸಿದ್ದ ಅನಂತ್ ಕುಮಾರ್
ಹಾಗೆಯೇ ಅನುಂತ ಕುಮಾರ್ ಸಂಸದ ಮತ್ತು ಸಚಿವರಾಗಿ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರ ಸಾಧನೆಗಳಲ್ಲಿ ಕೆಲವೊಂದರ ಮಾಹಿತಿ ಇಲ್ಲಿದೆ.
ಚಿತ್ರಕೃಪೆ: ಅನಂತ್ ಡಾಟ್ ಓಆರ್ಜಿ ವೆಬ್ಸೈಟ್
ಕೈಗೆಟುಕಿದ ಹೃದಯದ ಸ್ಟೆಂಟ್
ಹೃದಯದ ಸ್ಟೆಂಟ್ಗಳ ಮೊತ್ತವನ್ನು ಶೇ 85ರಷ್ಟು ಇಳಿಕೆ ಮಾಡುವ ಮೂಲಕ ಬಡವರ್ಗದ ಜನರಿಗೆ ಸ್ಟೆಂಟ್ಗಳು ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡಿದ್ದು ಅನಂತ ಕುಮಾರ್ ಅವರ ಮಹತ್ವದ ಸಾಧನೆ. 1.5 ಲಕ್ಷ ರೂ.ನಷ್ಟು ವೆಚ್ಚ ತಗುಲುತ್ತಿದ್ದ ಸ್ಟೆಂಟ್ 27,890 ರೂಗೆ ಲಭ್ಯವಾಗುವಂತೆ ಅನಂತ್ ಮಾಡಿದ್ದರು.
ಜೆನರಿಕ್ ಮಳಿಗೆಗಳ ಸ್ಥಾಪನೆ
ಮೊಣಕಾಲು ಮರುಜೋಡಣೆಯ ವೆಚ್ಚವನ್ನು ಶೇ 69ರಷ್ಟು ತಗ್ಗಿಸಿದ್ದರು. 'ಸುವಿಧಾ' ಯೋಜನೆಯಡಿ ಪರಿಸರ ಸ್ನೇಹಿ ಮತ್ತು ಜೈವಿಕವಾಗಿ ನಾಶಪಡಿಸಬಹುದಾದ ಸ್ಯಾನಿಟರಿ ಪ್ಯಾಡ್ಗಳು ಕೇವಲ 2.50 ರೂಪಾಯಿಯಲ್ಲಿ ಮಹಿಳೆಯರಿಗೆ ಲಭ್ಯವಾಗುವಂತೆ ಮಾಡಿದರು. ಬಡಜನರಿಗೆ ದುಬಾರಿ ಮಾತ್ರೆ, ಚುಚ್ಚುಮದ್ದು ಮತ್ತಿತರ ಔಷಧಗಳು ಕಡಿಮೆ ಬೆಲೆಗೆ ಲಭ್ಯವಾಗುವಂತೆ ಎಲ್ಲೆಡೆ ಜೆನರಿಕ್ ಮಳಿಗೆಗಳನ್ನು ಸ್ಥಾಪಿಸುವುದು ಅವರ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿತ್ತು.
ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಇತಿಹಾಸ ನಿರ್ಮಿಸಿದ್ದ ಅನಂತ್
ರಸಗೊಬ್ಬರದಲ್ಲಿ ಕ್ರಾಂತಿ
ಸ್ಥಗಿತಗೊಂಡಿದ್ದ 6 ರಸಗೊಬ್ಬರ ಘಟಕಗಳಲ್ಲಿ 48 ಸಾವಿರ ಕೋಟಿ ಹೂಡಿಕೆ ಮಾಡುವ ಮೂಲಕ ಅವುಗಳಿಗೆ ಮರುಜೀವ ನೀಡಿದ್ದರು. ರಸಗೊಬ್ಬರು ಆಮದು ಮಾಡಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿರುವ ದೇಶವನ್ನು 2022ರ ವೇಳೆಗೆ ರಸಗೊಬ್ಬರು ರಫ್ತು ಮಾಡುವುದರಲ್ಲಿ ಮುಂಚೂಣಿಗೆ ತರುವ ಪ್ರಯತ್ನ ಪ್ರಗತಿಯಲ್ಲಿತ್ತು.
ಶೇ 200ರಷ್ಟು ಬೇವು ಲೇಪಿತ ಯೂರಿಯಾ ಬಿಡುಗಡೆ ಮಾಡುವ ಮೂಲಕ ಭಾರತದ ರಸಗೊಬ್ಬರ ವಲಯದಲ್ಲಿ ಕ್ರಾಂತಿ ಮಾಡಿದರು. ಸಬ್ಸಿಡಿ ಸಹಿತ ಯೂರಿಯಾ ಕೃಷಿಯಿಂದ ಕೈಗಾರಿಕೆಗಳಿಗೆ ತಪ್ಪಿಹೋಗುವುದನ್ನು ತಡೆಯುವ ಮೂಲಕ ವಾರ್ಷಿಕ 10 ಸಾವಿರ ಕೋಟಿಗೂ ಹೆಚ್ಚು ಹಣ ಉಳಿತಾಯವಾಗುವಂತೆ ಮಾಡಿದರು.
ಮೆಟ್ರೋ ಮತ್ತು ಉಪ ನಗರ ರೈಲು
ರಾಜಧಾನಿ ಬೆಂಗಳೂರಿಗೆ 'ನಮ್ಮ ಮೆಟ್ರೋ'ವನ್ನು ತರುವುದರಲ್ಲಿ ಅನಂತ ಕುಮಾರ್ ಅವರ ಶ್ರಮವೂ ದೊಡ್ಡದಿತ್ತು. ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ದೆಹಲಿ ಬಳಿಕ ಮೆಟ್ರೋ ಆರಂಭಿಸುವ ಡಿಪಿಆರ್ಗೆ 2003ರಲ್ಲಿ ವಾಜಪೇಯಿ ಸಂಪುಟ ಅನುಮೋದನೆ ನೀಡಿತು. ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ವ್ಯವಸ್ಥೆಯ ಪ್ರಸ್ತಾಪವನ್ನೂ ಅನಂತ ಕುಮಾರ್ ಮುಂದಿಟ್ಟಿದ್ದರು. ಈ ಎರಡು ಯೋಜನೆಗಳು ಬೆಂಗಳೂರಿನ ಸಂಚಾರ ದಟ್ಟಣೆಗೆ ಪ್ರಮುಖ ಪರಿಹಾರವಾಗಲಿದ್ದವು. ಬೆಂಗಳೂರಿನಿಂದ ಅಜ್ಮೀರ್, ಜೋಧಪುರ ಮುಂತಾದೆಡೆ ನೇರ ರೈಲು ಸಂಪರ್ಕವೂ ಅನಂತ್ ಅವರ ಆಶಯವಾಗಿತ್ತು.
'ತಾನು ನಿರ್ಮಿಸಿದ ರಾಕೆಟ್ ಎಲ್ಲಿಗೆ ತಲುಪಬೇಕು ಅಂತ ದೇವರೇ ನಿರ್ಧರಿಸುತ್ತಾನೆ'
ಸುವರ್ಣ ಚತುಷ್ಪಥ
ರಾಷ್ಟ್ರೀಯ ಮೂಲಸೌಕರ್ಯ ಕಾರ್ಯಪಡೆಯ ಸದಸ್ಯರಾಗಿದ್ದಾಗ ಸುವರ್ಣ ಚತುಷ್ಪಥ ಹೆದ್ದಾರಿ ಯೋಜನೆಯಲ್ಲಿ ಬೆಂಗಳೂರಿಗೂ ಸಂಪರ್ಕ ಕಲ್ಪಿಸಲು ಸಾಧ್ಯವಾಗುವಂತೆ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಬೆಂಗಳೂರಿಗೆ ಕಾವೇರಿ ನಾಲ್ಕನೆ ಹಂತದ ನೀರು ತರುವುದರಲ್ಲಿ ಅನಂತ ಕುಮಾರ್ ಕೆಲಸ ಮಾಡಿದ್ದರು. 900 ಎಂಎಲ್ಡಿ ನೀರಿಗೆ 500 ಎಂಎಲ್ಡಿ ಹೆಚ್ಚುವರಿ ನೀರು ಸರಬರಾಜು ಮಾಡುವಂತೆ ಯೋಜನೆ ಅಭಿವೃದ್ಧಿಪಡಿಸುವುದು ಅವರ ಬಯಕೆಯಾಗಿತ್ತು. ಅವರ ಕ್ಷೇತ್ರದ ಎಲ್ಲ ಕಡೆಗೂ ಹೆಚ್ಚುವರಿ 500ಕ್ಕೂ ಹೆಚ್ಚು ಮಿನಿ ನೀರು ಯೋಜನೆಗಳನ್ನು ಆರಂಭಿಸಿದ್ದರು.
ಎಚ್ಎಎಲ್ ಉನ್ನತೀಕರಣ
ವಾಜಪೇಯಿ ಅವರ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದಾಗ ಎಚ್ಎಎಲ್ ವಿಮಾನ ನಿಲ್ದಾಣವನ್ನು ಏರೋ ಬ್ರಿಡ್ಜಸ್ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳ ಅಭಿವೃದ್ಧಿ ಮೂಲಕ ಉನ್ನತೀಕರಿಸಿದ್ದರು. ಸರಕು ಮತ್ತು ಸಾಮಾನುಗಳ ಸಾಗಾಣಿಕೆಗೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಕಲ್ಪಿಸಿದ್ದರು.
ಇಂದು ಜಗತ್ತಿನಲ್ಲಿ ಅತಿ ಗುಣಮಟ್ಟದ ವಿಮಾನ ನಿಲ್ದಾಣಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕನಸು ನನಸು ಮಾಡಲು ಅನಂತ ಕುಮಾರ್ ಅವರು ಸಹಿ ಹಾಕಿದ ಯೋಜನೆಯ ಒಪ್ಪಂದವೇ ಕಾರಣ.
ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದ ಕನಸುಗಾರ ಅನಂತ್ ಕುಮಾರ್
ಬಡವರಿಗೆ ಮನೆಗಳು
ವಾಲ್ಮೀಕಿ ಅಂಬೇಡ್ಕರ್ ಆವಾಸ್ ಯೋಜನೆ ಅಡಿಯಲ್ಲಿ ನಗರದಲ್ಲಿನ ಬಡವರಿಗೆ ಮನೆಗಳು ಮತ್ತು ಸಮುದಾಯ ಶೌಚಾಲಯಗಳನ್ನು ಕಲ್ಪಿಸುವುದು ಅವರು ಯೋಜನೆಯಾಗಿತ್ತು. ಕರ್ನಾಟಕದಲ್ಲಿ 33 ಸಾವಿರಕ್ಕೂ ಹೆಚ್ಚು ಮತ್ತು ಬೆಂಗಳೂರಿನಲ್ಲಿ 10 ಸಾವಿರಕ್ಕೂ ಅಧಿಕ ಮನೆ ಮತ್ತು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಯೋಜನೆಯಲ್ಲಿನ ಮನೆಗಳು ಕುಟುಂಬದ ಮಹಿಳೆಯರ ಹೆಸರಿನಲ್ಲಿ ನೋಂದಣಿಯಾಗಿರುವುದು ವಿಶೇಷ.
ಮಕ್ಕಳಿಗೆ ಊಟ
ಬೆಂಗಳೂರಿನಲ್ಲಿ 2003ರಿಂದಲೂ ಪ್ರತಿ ನಿತ್ಯ 72 ಸಾವಿರಕ್ಕೂ ಅಧಿಕ ಮಕ್ಕಳಿಗೆ ಮಧ್ಯಾಹ್ನದ ಪೌಷ್ಟಿಕಾಂಶಯುಕ್ತ ಊಟವನ್ನು ಒದಗಿಸುತ್ತಿದ್ದರು. ಇದು ಸಾವಿರಾರು ಬಡ ಮಕ್ಕಳಿಗೆ ಹೊಟ್ಟೆ ತುಂಬಿಸುವುದರ ಜತೆಗೆ, ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುತ್ತಿದೆ.
ಇ-ಕ್ಷೇಮ ಎಂಬ ಆರೋಗ್ಯ ಯೋಜನೆಯನ್ನು ಆರಂಭಿಸಿದರು. ಇದು ಅವರ ಕ್ಷೇತ್ರದ 18 ಬಿಬಿಎಂಪಿ ಆರೋಗ್ಯ ಕೇಂದ್ರಗಳಲ್ಲಿ ಮೊದಲು ಆರಂಭಗೊಂಡಿತ್ತು. ಅತ್ಯಂತ ಕಡಿಮೆ ಬೆಲೆಯಲ್ಲಿ ವೈದ್ಯಕೀಯ ತಪಾಸಣೆಗಳನ್ನು ಮಾಡಿಕೊಳ್ಳಲು ಇದು ನೆರವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಅನಂತ್ ನೆನೆದು ಮಿಡಿದ ಕಂಬನಿ
ವಿಶ್ವಸಂಸ್ಥೆಯಲ್ಲಿ ಕನ್ನಡ
2012ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಜಾಗತಿಕ ತಾಪಮಾನ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅವರು ಮಾಡಿದ ಭಾಷಣಕ್ಕೆ ಜಾಗತಿಕ ನಾಯಕರಿಂದ ಪ್ರಶಂಸೆ ವ್ಯಕ್ತವಾಗಿತ್ತು. ಮಿಗಿಲಾಗಿ ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೊದಲಿಗ ಎಂಬ ಕೀರ್ತಿಗೆ ಪಾತ್ರರಾದರು.
ಆರೋಗ್ಯ ಶಿಬಿರಗಳ ಆಯೋಜನೆ
ಅವರ ಲೋಕಸಭೆ ಕ್ಷೇತ್ರವ್ಯಾಪ್ತಿಯಲ್ಲಿ ಉಚಿತ ಆರೋಗ್ಯ ತಪಾಸಣೆಯ ಶಿಬಿರಗಳು ನಿರಂತರವಾಗಿ ನಡೆಯುತ್ತಿದ್ದವು. ಅದರಲ್ಲಿಯೂ 50ಕ್ಕೂ ಹೆಚ್ಚು ಉಚಿತ ನೇತ್ರ ತಪಾಸಣೆ ಶಿಬಿರಗಳನ್ನು ಅದಮ್ಯ ಚೇತನ ಟ್ರಸ್ಟ್ ಮೂಲಕ ಮಾಡಿಸಲಾಗಿದೆ. ಸಾವಿರಾರು ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿದ್ದಾರೆ.
ಶಾಲಾ ಮಕ್ಕಳಿಗೆ ಕಡಿಮೆ ಪ್ರೀಮಿಯಂನ ಆರೋಗ್ಯ ಚೇತನಾ ನಗದುರಹಿತ ಮೆಡಿಕ್ಲೈಮ್ ಸಮೂಹ ವಿಮೆ ಸೌಲಭ್ಯವನ್ನು ಒದಗಿಸಿದ್ದರು. ಇದನ್ನು ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಉದ್ಘಾಟಿಸಿದ್ದರು. ಇದು ಸಣ್ಣ ಮತ್ತು ದೊಡ್ಡ ಪ್ರಮಾಣದ ಆರೋಗ್ಯ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳನ್ನು ಪಡೆದುಕೊಳ್ಳಲು ಸಾವಿರಾರು ಮಕ್ಕಳಿಗೆ ನೆರವಾಗಿದೆ.
ಬೆಂಗಳೂರಿನಲ್ಲಿ ಕಲಾ ಕೇಂದ್ರ
ದೆಹಲಿಯ ಆಚೆಗೆ ಬೆಂಗಳೂರಿನಲ್ಲಿ ಮೊದಲ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರವನ್ನು (ಐಜಿಎನ್ಸಿಎ) ಸ್ಥಾಪಿಸಿದರು. ಬೆಂಗಳೂರಿನಲ್ಲಿ ಮಾಡರ್ನ್ ಆರ್ಟ್ ಗ್ಯಾಲರಿ ಸ್ಥಾಪಿಸಿದರು. ಶೂನ್ಯ ತ್ಯಾಜ್ಯ ಸಮುದಾಯ ಸಂಸ್ಕರಣೆಯ ಮಾದರಿಯನ್ನು ಆರಂಭಿಸಿದ್ದರು.
ಎಂಪಿಲ್ಯಾಡ್ ನಿಧಿಯ ಮೂಲಕ ಶಾಲಾ ಕೊಠಡಿಗಳ ನಿರ್ಮಾಣ, ಕುಡಿಯುವ ನೀರು ವ್ಯವಸ್ಥೆ, ಶೌಚಾಲಯ ಮತ್ತು ಕಂಪ್ಯೂಟರ್ ಸೌಲಭ್ಯಗಳನ್ನು ಒದಗಿಸುವ ಮೂಲಕ ಕನ್ನಡ ಮಾಧ್ಯಮದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೆರವು ನೀಡಿದ್ದಾರೆ.
ಗಿಡ ಬೆಳೆಸಲು ಉತ್ತೇಜನ
ವಿಜಯನಗರದಲ್ಲಿ ರಾಷ್ಟ್ರೀಯ ಗುಣಮಟ್ಟದ ಅಂಬೇಡ್ಕರ್ ಕ್ರೀಡಾಂಗಣವನ್ನು ನಿರ್ಮಿಸಿದರು. ಬೆಂಗಳೂರಿಗೆ ಪ್ರತ್ಯೇಕ ಅಣುವಿದ್ಯುತ್ ಸ್ಥಾವರ ತರುವ ಕಾರ್ಯದಲ್ಲಿ ಅವರು ಪ್ರಮುಖವಾಗಿ ಶ್ರಮಿಸಿದ್ದಾರೆ. ಸಂಸದರ ನಿಧಿಯಿಂದ ಬೆಂಗಳೂರಿನಲ್ಲಿ ಮೊದಲ ಮಹಿಳಾ ಜಿಮ್ ಸೌಲಭ್ಯ ನಿರ್ಮಿಸಿದ್ದಾರೆ.
ಅದಮ್ಯ ಚೇತನ ಟ್ರಸ್ಟ್ ಮೂಲಕ ಬೆಂಗಳೂರನ್ನು ಹಸಿರೀಕರಣಗೊಳಿಸುವ ಸಸ್ಯಾಗ್ರಹ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ನಡೆಸಿದ್ದರು. 'ನಿಮ್ಮ ತೋಟದಿಂದ ಊಟ' ಎಂಬ ತರಕಾರಿ ತೋಟಗಳನ್ನು ಬೆಳೆಸಲು ಉತ್ತೇಜಿಸುವ ಕಾರ್ಯಗಳು ಇದರಲ್ಲಿ ಒಳಗೊಂಡಿದ್ದವು. ಗಿಡ ನೆಟ್ಟು ಬೆಳೆಸುವುದು, ಕೆರೆಗಳ ಸಂರಕ್ಷಣೆ, ಸೋಲಾರ್ ವಿದ್ಯುತ್ ಬಳಕೆ, ಸ್ವಚ್ಛತಾ ಕಾರ್ಯಗಳನ್ನು ಇದರ ಮೂಲಕ ನಡೆಸಿದ್ದರು.