ಎಬಿಪಿ-ಸಿ ವೋಟರ್ ಸಮೀಕ್ಷೆ: ತಮಿಳುನಾಡಲ್ಲಿ ಸ್ಟಾಲಿನ್ ಸರ್ಕಾರ ಅಧಿಕಾರಕ್ಕೆ
ತಮಿಳುನಾಡು ಸೇರಿದಂತೆ ಒಟ್ಟು ನಾಲ್ಕು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭೆ ಚುನಾವಣೆಗೆ ತಯಾರಿ ನಡೆಯುತ್ತಿದೆ. ಚುನಾವಣೆಗೂ ಮುನ್ನ ಜನಾಭಿಪ್ರಾಯ ಹೇಗಿದೆ? ಯಾವ ಪಕ್ಷ ಹಾಗೂ ಯಾವ ನಾಯಕನ ಕಡೆಗೆ ಜನರ ಒಲವು ಇದೆ ಎಂಬ ಬಗ್ಗೆ ವಿವಿಧ ಸುದ್ದಿ ವಾಹಿನಿಗಳು ಹಾಗೂ ಸಮೀಕ್ಷಾ ಸಂಸ್ಥೆಗಳು ಅಭಿಪ್ರಾಯ ಸಂಗ್ರಹಿಸುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಿಸಿದ್ದ ಎಬಿಪಿ ಸುದ್ದಿ ವಾಹಿನಿ ಮತ್ತೊಂದು ಸಮೀಕ್ಷೆ ಪ್ರಕಟಿಸಿದೆ.
ಎಬಿಪಿ-ಸಿ ವೋಟರ್ ಸಂಸ್ಥೆಗಳು ನಡೆಸಿದ ಸಮೀಕ್ಷೆಯ ಪ್ರಕಾರ, ಈ ಬಾರಿ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆ ಎದುರಾಗಲಿದೆ. ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ.
ABP-C Voter Opinion Poll: ತಮಿಳುನಾಡಿನಲ್ಲಿ ಯುಪಿಎಗೆ ಮತ್ತೆ ಅಧಿಕಾರ
ಮತದಾರರ ಅಭಿಪ್ರಾಯವನ್ನು ತಿಳಿದುಕೊಳ್ಳಲು ನಡೆಸಿದ ಸಮೀಕ್ಷೆಯಲ್ಲಿ, ಜನಾಭಿಪ್ರಾಯವು ಸರ್ಕಾರದ ಬದಲಾವಣೆಯ ಕಡೆಗೆ ಇದೆ ಎಂದು ಹೇಳಲಾಗಿದೆ. ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡಲು ಶೇ 40ರಷ್ಟು ಜನರು ಬಯಸಿದ್ದಾರೆ. ಕೇವಲ ಶೇ 29.7 ಜನರು ಹಾಲಿ ಸಿಎಂ ಪಳನಿಸ್ವಾಮಿ ಮರಳಿ ಅಧಿಕಾರಕ್ಕೆ ಬರುವುದನ್ನು ಅಪೇಕ್ಷಿಸಿದ್ದಾರೆ.
ಆಡಳಿತದ ಬಗ್ಗೆ ಆಕ್ರೋಶ
ಆಡಳಿತದ ವಿಚಾರಕ್ಕೆ ಬಂದರೆ, ಬಹುಪಾಲು ಜನರು ಈಗಿನ ಎಐಎಡಿಎಂಕೆ ಸರ್ಕಾರದ ಆಡಳಿತ ವೈಖರಿ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಶೇ 48ರಷ್ಟು ಜನರು ಪಳನಿಸ್ವಾಮಿ ಆಡಳಿತ ತೀರಾ ಸಾಧಾರಣವಾಗಿದೆ ಎಂದಿದ್ದು, ಸರ್ಕಾರದ ಬದಲಾವಣೆಯನ್ನು ಬಯಸಿದ್ದಾರೆ.
ಯಾರಿಗೆ ಎಷ್ಟು ಸೀಟು?
ಎಬಿಪಿ-ಸಿ ವೋಟರ್ ಸಂಗ್ರಹಿಸಿರುವ ದತ್ತಾಂಶದ ಪ್ರಕಾರ ಎನ್ಡಿಎ ಮೈತ್ರಿಕೂಟವಾದ ಎಐಎಡಿಎಂಕೆ-ಬಿಜೆಪಿ ಮತ್ತು ಇತರರು ಕೇವಲ 53-61 ಸೀಟುಗಳಲ್ಲಿ ಗೆಲುವು ಸಾಧಿಸಲಿವೆ. ಈ ಮೈತ್ರಿಕೂಟ ಶೇ 30.6ರಷ್ಟು ಮತಗಳನ್ನು ಪಡೆಯಲಿದೆ. ಡಿಎಂಕೆ-ಕಾಂಗ್ರೆಸ್ ಮತ್ತು ಇತರರನ್ನು ಒಳಗೊಂಡ ಯುಪಿಎ ಮೈತ್ರಿಕೂಟ 161-169 ಸೀಟುಗಳಲ್ಲಿ ಜಯಭೇರಿ ಬಾರಿಸಲಿದೆ. ಶೇ 43ಕ್ಕಿಂತ ಅಧಿಕ ಮತಗಳು ಸಿಗಲಿವೆ.
ಅಸ್ಸಾಂ ಚುನಾವಣಾಪೂರ್ವ ಸಮೀಕ್ಷೆ: ಕಷ್ಟಪಟ್ಟು ಅಧಿಕಾರಕ್ಕೆ ಬರಲಿದೆ ಬಿಜೆಪಿ
ಉಳಿದ ಪಕ್ಷಗಳ ಸಾಧನೆ
ಕಮಲ ಹಾಸನ್ ಅವರ ಎಂಎನ್ಎಂ ಶೇ 7.0ರಷ್ಟು ಮತಗಳೊಂದಿಗೆ 2-6 ಸೀಟುಗಳನ್ನು, ಎಎಂಎಂಕೆ ಶೇ 6.4ರ ಮತಗಳೊಂದಿಗೆ 1-5 ಸೀಟುಗಳನ್ನು ಹಾಗೂ ಇತರರು ಶೇ 12.3ರಷ್ಟು ಮತಗಳೊಂದಿಗೆ 3.7 ಸೀಟುಗಳನ್ನು ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿದೆ.
ನಿರುದ್ಯೋಗ ಪ್ರಮುಖ ಸಮಸ್ಯೆ
ತಮಿಳುನಾಡಿನಲ್ಲಿ ಶೇ 32.8ರಷ್ಟು ಜನರು ಮುಖ್ಯವಾಗಿ ಕಾಡುತ್ತಿರುವ ಸಮಸ್ಯೆ ನಿರುದ್ಯೋಗ ಎಂದು ಹೇಳಿದ್ದಾರೆ. ಶೇ 11.6ರಷ್ಟು ಜನರಿಗೆ ವಿದ್ಯುತ್ ಮತ್ತು ನೀರಿನ ಸಮಸ್ಯೆ ಮುಖ್ಯವಾಗಿ ಕಂಡಿದೆ. ಇನ್ನು ಶೇ 10.4ರಷ್ಟು ಜನರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿಲ್ಲ ಎಂದಿದ್ದಾರೆ.