ಕಾನೂನಿನಲ್ಲಿ ಬದಲಾವಣೆ ತರುವವರೆಗೂ, ಅತ್ಯಾಚಾರ ಪ್ರಕರಣ ಹೆಚ್ಚುತ್ತಲೇ ಇರುತ್ತವೆ!
ಪತ್ರಿಕೆಗಳಲ್ಲಿ ಸುದ್ದಿ ವಾಹಿನಿಗಳಲ್ಲಿ ಬರುವ ಅತ್ಯಾಚಾರದ ಸುದ್ದಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಯಾವ ಸುದ್ದಿಯನ್ನು ನಾವು ಪ್ರತಿದಿನ ಓದುತ್ತೀವೊ ಅದು ನಮಗೆ ಸಹಜ ಸುದ್ದಿಯೇನೊ ಎಂಬಂತೆ ಆಗಿಬಿಡುತ್ತದೆ. ಅತ್ಯಾಚಾರದ ಸುದ್ದಿಗಳು ಕೂಡ ಸಹಜ ಸುದ್ದಿಯೇನೊ ಎಂದು ಭಾವಿಸುವ ದಿನಗಳು ದೂರವಿಲ್ಲ ಎನಿಸುತ್ತದೆ.
ಎಷ್ಟೋ ಹೆಣ್ಣು ಮಕ್ಕಳು ಮರ್ಯಾದೆಗೆ ಅಂಜಿ ಅತ್ಯಾಚಾರದ ವಿಷಯವನ್ನು ಎಲ್ಲೂ ಬಾಯಿ ಬಿಡುವುದಿಲ್ಲ. ಈಗಂತೂ ಕೆಲವು ನೀಚರು, ಅತ್ಯಾಚಾರ ಮಾಡುವುದನ್ನು ವೀಡಿಯೊ ಮಾಡಿಕೊಂಡು; ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೀವಿ ಎಂದು ಹೆದರಿಸುತ್ತಾರೆ. ಹಣಕ್ಕೆ ಬೇಡಿಕೆ ಇಡುತ್ತಾರೆ. ಹೆದರಿಸಿ ಮತ್ತೆ ಮತ್ತೆ ತಮ್ಮ ವಿಕೃತ ಲೈಂಗಿಕ ಬಯಕೆಯನ್ನು ತೀರಿಸಿಕೊಳ್ಳಲು ಆ ಹುಡುಗಿಯನ್ನು ಬಳಸಿಕೊಳ್ಳುತ್ತಾರೆ.
ಪುತ್ತೂರು ಗ್ಯಾಂಗ್ ರೇಪ್ ಪ್ರಕರಣ, ಕಠಿಣ ಕ್ರಮಕ್ಕೆ ಡಿವೈಎಫ್ಐ ಆಗ್ರಹ
ಮರ್ಯಾದೆಗೆ ಹೆದರುವ ಹೆಣ್ಣುಮಕ್ಕಳಿಗೆ ಅವರು ಹೇಳಿದಂತೆ ಕೇಳದೆ ಬೇರೆ ದಾರಿ ಇರುವುದಿಲ್ಲ. ಆ ಹುಡುಗಿ ಹೆದರಿದ್ದಾಳೆ ಎಂದು ಗೊತ್ತಾದ ಕೂಡಲೇ ಇವರು ಅವಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ.
ದೂರು ನೀಡಿದರೂ ಸಮಸ್ಯೆಯೇ!
ಹೆಣ್ಣು ಮಕ್ಕಳು ಹೆದರಬಾರದು ಧೈರ್ಯವಾಗಿ ದೂರು ದಾಖಲಿಸಬೇಕು ಎಂಬ ಮಾತು ಸರಿ. ಆದರೆ ದೂರು ದಾಖಲಿಸದ ಮೇಲೆ ಆ ಹುಡುಗಿ ಮತ್ತು ಅವಳ ಮನೆಯವರು ಎದುರಿಸುವ ಸಮಸ್ಯೆಗಳು ಒಂದೆರೆಡಾ? ಆಕೆಯದೇನೂ ತಪ್ಪಿಲ್ಲದಿದ್ದರೂ, ಸಮಾಜ ಅವಳನ್ನು ನೋಡುವ ರೀತಿಯೇ ಬೇರೆ. ಅದನ್ನು ಎದುರಿಸಲು ತುಂಬ ಮನಸ್ಥೈರ್ಯ ಬೇಕು. ಕೇಸ್ ದಾಖಸಿದ ಮೇಲೆ ಒಂದೆರೆಡು ದಿನದಲ್ಲಿ ನ್ಯಾಯ ಸಿಗುತ್ತಾ? ಖಂಡಿತಾ ಇಲ್ಲ. ಹಲವು ವರ್ಷಗಳೇ ಬೇಕು. ಇದೆಲ್ಲದರ ಮಧ್ಯೆ, 'ನನ್ನ ಯಾರು ಮದುವೆ ಆಗ್ತಾರೆ? ನನ್ನ ಬದುಕು ಇಲ್ಲಿಗೆ ಮುಗಿಯಿತಾ?' ಎಂಬ ಪ್ರಶ್ನೆ ಭಯ ತರಿಸುತ್ತದೆ. ಇವೆಲ್ಲ ತಲೆಗೆ ಬಂದು ಅತ್ಯಾಚಾರಕ್ಕೊಳಗಾದ ಕೆಲವು ಹುಡುಗಿಯರು ಭಯದಿಂದ ದೂರು ದಾಖಲಿಸುವುದೇ ಇಲ್ಲ. ಈ ಭಯವೇ ವಿಕೃತ ಕಾಮಿಗಳಿಗೆ ಅತ್ಯಾಚಾರ ಮಾಡಾಲು ಪ್ರೋತ್ಸಾಹ ನೀಡುತ್ತಿರುವುದು. ಇದು ಇಡೀ ವ್ಯವಸ್ಥೆಯ ದೌರ್ಬಲ್ಯ.
ಎಷ್ಟು ಆರೊಪಿಗಳಿಗೆ ಶಿಕ್ಷೆಯಾಗಿದೆ?
ಎಲ್ಲಾದರೂ ಅತ್ಯಾಚಾರವಾದಾಗ ಆ ಆರೋಪಿಯನ್ನು ಪತ್ತೆ ಮಾಡಿ ಜೈಲಿಗೆ ಹಾಕಲು ಒಂದಿಷ್ಟು ಹೋರಾಟಗಳು ನಡೆಯುತ್ತೆ. ಪೊಲೀಸರು ಜೈಲಿಗೇನೊ ಹಾಕುತ್ತಾರೆ. ಆದರೆ ನಂತರ ನಡೆಯುವುದೇನು? ಯಾರೊ ಜಾಮೀನು ಕೊಟ್ಟು ಆ ಆರೋಪಿಯನ್ನು ಬಿಡಿಸುತ್ತಾರೆ. ಇನ್ನು ಕೆಲವು ಪ್ರಕರಣಗಳು ಸಾಕ್ಷಿಗಳ ಕೊರತೆಯಿಂದ ವಜಾ ಆಗುತ್ತದೆ. ಆದ್ದರಿಂದ ಎಷ್ಟೇ ಹೋರಾಟ ಮಾಡಿದರೂ ಯಾವ ಪ್ರಯೋಜನವೂ ಇಲ್ಲ. ಹೋರಾಟಗಳು ಜಾಸ್ತಿ ಆಗುತ್ತಿವೆ. ಆದರೆ ಅತ್ಯಾಚಾರ ಪ್ರಕರಣಗಳು ಕಮ್ಮಿ ಆಗುತ್ತಿದೆಯಾ? ಇಲ್ಲ.
ಅತ್ಯಾಚಾರ ದೂರು: ತನಿಖೆಗೆ ಹೋದ ಪೊಲೀಸರಿಗೆ ಕಾದಿತ್ತು ಅಚ್ಚರಿ
ಹೋರಾಟದಿಂದ ಇಂಥ ಪ್ರಕರಣಗಳು ನಿಲ್ಲುತ್ತವಾ?
ಕೆಲವು ವರ್ಷಗಳ ಹಿಂದೆ ಶೃಂಗೇರಿಯಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದರು. ಶೃಂಗೇರಿಯ ಜನರೆಲ್ಲಾ ಬೀದಿಗಿಳಿದು ಹೋರಾಟ ಮಾಡಿದರು. ಆರೋಪಿಗಳನ್ನ ಜೈಲಿಗೆ ಹಾಕಲಾಯ್ತು. ಕೆಲವು ದಿನಗಳ ನಂತರ ಅವರು ಹೊರಬಂದು ಆ ಹುಡುಗಿಯ ಅಪ್ಪ-ಅಮ್ಮನ ಕಣ್ಣ ಮುಂದೆಯೇ ರಾಜಾರೋಷವಾಗಿ ಓಡಾಡಿಕೊಂಡಿದ್ದಾರಂತೆ. ಎಷ್ಟೇ ಹೋರಾಟ ಮಾಡಿದರೂ, ದಿನ ಬೆಳಗಾದರೆ ಬರುವ ಇಂಥ ಸುದ್ದಿಗಳು ನಿಲ್ಲುತ್ತದಾ? ಖಂಡಿತಾ ಇಲ್ಲ. "ರೇಪ್ ಮಾಡಿಬಿಡೋಣ, ಸಾಕ್ಷಿ ಸಿಗಬೇಕಲ್ಲ.... ಕೋರ್ಟ್'ನಲ್ಲಿ ತುಂಬ ಟೈಮ್ ಹಿಡ್ಯುತ್ತೆ... ಜೈಲಿಗೆ ಹಾಕಿದ್ರೂ ಎಷ್ಟು ದಿನ ಹಾಕ್ತಾರೆ..." ಇಂಥ ಭಂಡ ಧೈರ್ಯದಿಂದಲೇ ಇಂಥ ಪ್ರಕರಣಗಳು ಜಾಸ್ತಿ ಆಗಿರೋದು.
ಭಯ ಹುಟ್ಟಿಸುವ ಶಿಕ್ಷೆಯೊಂದೇ ಪರಿಹಾರ
ಅತ್ಯಾಚಾರ ಮಾಡಬೇಕು ಎನ್ನುವ ಮನಸ್ಥಿತಿ ಇರೋನಿಗೆ ಭಯ ತರಿಸುವಂಥ ಬದಲಾವಣೆ ಕಾನೂನಲ್ಲಿ ಆಗುವಂತೆ ಹೋರಾಟ ಮಾಡಬೇಕು. ಜೀವ ಉಳಿಸಿಕೊಳ್ಳಲಿಕ್ಕೆ ಹೆಲ್ಮೆಟ್ ಹಾಕಿ ಎಂದರೆ ಎಷ್ಟು ಜನ ಹಾಕುತ್ತಾರೆ? ಪೊಲೀಸ್ ಹಿಡಿದರೆ ಫೈನ್ ಕಟ್ಟಬೇಕು ಎಂಬ ಭಯಕ್ಕೆ ಹೆಲ್ಮೆಟ್ ಹಾಕೋದು. ಹಾಗೆಯೇ ಅತ್ಯಾಚಾರ ಮಾಡೋದು ತಪ್ಪು, ಹೆಣ್ಣನ್ನು ಗೌರವಿಸಿ, ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸಿ; ಈ ನೀತಿ ಪಾಠಗಳಿಂದ ಉಪಯೋಗವಿಲ್ಲ. ಭಯ ಇದ್ದಾಗಲೇ ಕೆಲವೊಂದು ಬದಲಾವಣೆ ತರಲು ಸಾಧ್ಯ. ಅತ್ಯಾಚಾರಿಗಳಿಗೆ ಎಂಥ ಕಠಿಣ ಶಿಕ್ಷೆ ಕೊಡಬೇಕೆಂದರೆ, ಅತ್ಯಾಚಾರ ಮಾಡಬೇಕು ಎನ್ನುವ ಆಲೋಚೆನೆಯೇ ಬರಬಾರದು. ಆ ಶಿಕ್ಷೆ ಅಷ್ಟು ಕಠಿಣವಾಗಿರಬೇಕು. ಮತ್ತು ಯಾವುದೋ ಮೂಲೆಯಲ್ಲಿ ಶಿಕ್ಷೆ ಕೊಡುವುದಕ್ಕಿಂತ; ಸಾರ್ವಜನಿಕವಾಗಿ ಶಿಕ್ಷೆಯಾಗಬೇಕು. ಬಹುಶಃ ಆಗಷ್ಟೆ ಬದಲಾವಣೆ ತರಲು ಸಾಧ್ಯ.