ಕೋಟಿ ಕಿಲೋಮೀಟರ್ ದೂರದಲ್ಲೂ ಫಳಫಳ ಹೊಳೆಯುತ್ತಿದೆ ದೊಡ್ಡ ‘ಧೂಮಕೇತು’!
ವಿಜ್ಞಾನ ಲೋಕವೇ ಹಾಗೆ, ಯಾವಾಗ ಅದೆಂಥ ಸಂಶೋಧನೆ ಸಕ್ಸಸ್ ಆಗುತ್ತೆ ಅನ್ನೋದೆ ಗೊತ್ತಾಗೋದಿಲ್ಲ. ಈಗ ಕೂಡ ಅಂತಹದ್ದೇ ವಿಸ್ಮಯಕ್ಕೆ ಸಾಕ್ಷಿಯಾಗಿದೆ ಬಾಹ್ಯಾಕಾಶ ಲೋಕ. ವಿಜ್ಞಾನಿಗಳು ಸುಮ್ಮನೇ ಹಳೆಯ ದಾಖಲೆಗಳನ್ನ ಕೆದಕುವ ಸಂದರ್ಭದಲ್ಲಿ, ಧೂಮಕೇತು ಒಂದರ ಮಾಹಿತಿ ಸಿಕ್ಕಿದೆ. ಪುನರ್ ಪರಿಶೀಲನೆ ನಡೆಸಿ ನೋಡಿದಾಗ ವಿಜ್ಞಾನಿಗಳಿಗೆ ವಿಸ್ಮಯವೇ ಕಾದಿತ್ತು. ಸುಮಾರು 100ರಿಂದ 370 ಕಿಲೋ ಮೀಟರ್ ಅಗಲವಿದ್ದ '2014 ಯುಎನ್ 271' ಹೆಸರಿನ ಧೂಮಕೇತು ಸೌರಮಂಡಲದ ಒಳಗೆ ಮತ್ತು ಹೊರಗೆ ತಿರುಗಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಈ ಬೃಹದಾಕಾರದ ಧೂಮಕೇತು ಸುಮಾರು ನೆಪ್ಚೂನ್ ಗ್ರಹದ ಸಮೀಪ ಸುಳಿದು, ನಂತರ ಮತ್ತೆ ಮಾಯವಾಗಿ ಹೋಗುತ್ತಿತ್ತು. ಆದರೆ ಈ ಧೂಮಕೇತು ಬಗೆಗಿನ ಹಳೆಯ ದಾಖಲೆಗಳನ್ನು ಬೆದಕಿ ನೋಡಿದಾಗ ಅಚ್ಚರಿ ಕಾದಿತ್ತು. ಏಕೆಂದರೆ ಈ ಧೂಮಕೇತು ಬರುಬರುತ್ತಾ ತನ್ನ ಪ್ರದೇಶವನ್ನು ವಿಸ್ತರಿಸುತ್ತಿದ್ದು, ಭವಿಷ್ಯದಲ್ಲಿ ಶನಿಗ್ರಹದ ಸಮೀಪ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಹೀಗೆ ಬೃಹತ್ ಧೂಮಕೇತು ಸೂರ್ಯನ ಸಮೀಪ ಬರುತ್ತಿರುವುದು ವಿಜ್ಞಾನಿಗಳಿಗೆ ಅಚ್ಚರಿ ಮೂಡಿಸಿದೆ. ಭವಿಷ್ಯದಲ್ಲಿ ನಮ್ಮ ಸೌರಮಂಡಲದ ಹೊರಗಿನ ಪ್ರದೇಶದ ಅಧ್ಯಯನಕ್ಕೆ ಈ ಧೂಮಕೇತು ಸಹಾಯ ಮಾಡು ಸಾಧ್ಯತೆ ಇದೆ.
ನೀರಿನ ಮೂಲ ಧೂಮಕೇತು..!
ಭೂಮಿ ಮೇಲೆ ಇಷ್ಟು ನೀರು ಹೇಗೆ ಬಂತು ಎಂಬುದನ್ನ? ವಿಜ್ಞಾನಿಗಳು ಹಲವು ವಿಧವಾಗಿ ವಿವರಿಸಿದ್ದಾರೆ. ಈ ಪೈಕಿ ಹೆಚ್ಚು ಒಪ್ಪಿಕೊಳ್ಳಬಹುದಾದ ವಾದ ಎಂದರೆ 'ಧೂಮಕೇತು' ಮೂಲದ್ದು. ಅಷ್ಟಕ್ಕೂ ಕ್ಯೂಪರ್ ಬೆಲ್ಟ್ ಎಂಬುದು ನಮ್ಮ ಸೌರಮಂಡಲದ ಕೊನೆಯಲ್ಲಿ ಸಿಗುವ ಪ್ರದೇಶವಾಗಿದೆ. ಇಲ್ಲಿ ಊಹೆಗೂ ನಿಲುಕದಷ್ಟು ಚಳಿ ಇರುತ್ತದೆ. ಅಷ್ಟು ಚಳಿಯನ್ನು ನೀವು ಸೌರವ್ಯೂಹದಲ್ಲಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.
ನೀರು ಮಂಜುಗಡ್ಡೆ ರೂಪದಲ್ಲಿ ಇರುತ್ತದೆ
ಪರಿಸ್ಥಿತಿ ಹೀಗಿರುವಾಗ ಅಲ್ಲಿರುವ ಕ್ಷುದ್ರಗ್ರಹ ಹಾಗೂ ಉಲ್ಕೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಮಂಜುಗಡ್ಡೆ ರೂಪದಲ್ಲಿ ಇರುತ್ತದೆ. ಆದರೆ ಸೂರ್ಯನ ಗುರುತ್ವದ ಬಲದಿಂದ ಈ ಕ್ಷುದ್ರಗ್ರಹಗಳು ಅಥವಾ ಉಲ್ಕೆಗಳು ಕ್ಯೂಪರ್ ಬೆಲ್ಟ್ ಗುರುತ್ವ ಬಂಧನದಿಂದ ತಪ್ಪಿಸಿಕೊಂಡು ಸೂರ್ಯನತ್ತ ಓಡೋಡಿ ಬರುತ್ತವೆ. ಹೀಗೆ ಬರುವ ಉಲ್ಕೆ, ಕ್ಷುದ್ರಗ್ರಹಗಳು ಭೂಮಿಗೂ ನೀರು ತಂದಿದ್ದವು ಎಂಬ ವಾದವಿದೆ.
ಮನುಷ್ಯ ಹೋಗಲಾಗದ ಜಾಗ..!
ಧೂಮಕೇತು ಹುಟ್ಟುವುದೇ 'ಕ್ಯೂಪರ್ ಬೆಲ್ಟ್' ಎಂಬ ಸ್ವರ್ಗದಲ್ಲಿ. ಇಲ್ಲಿ ಅಪಾರ ಪ್ರಮಾಣದ ಚಳಿ ಇರುತ್ತದೆ. ಈ ಚಳಿ ನಮ್ಮ ಊಹೆಗೂ ನಿಲುಕಲು ಸಾಧ್ಯವಿಲ್ಲ. ಇಂತಹ ಚಳಿಯಲ್ಲಿ ಮಾನವ ಬದುಕುವುದು ಬಿಡಿ, ಅಲ್ಲಿಗೆ ಹೋಗುವುದನ್ನ ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಅಂತಹ ಭೀಕರ ವಾತಾವರಣ ಕ್ಯೂಪರ್ ಬೆಲ್ಟ್ ಸುತ್ತ ಆವರಿಸಿದೆ. ಆದರೆ ಇದೇ ಜಾಗದಲ್ಲಿ ಮಾನವರ ಬದುಕಿಗೆ ಮೂಲ ಎನಿಸಿರುವ ನೀರು ಉತ್ಪತ್ತಿಯಾಗಿದ್ದು, ಈ ನೀರು ಭೂಮಿ ತಲುಪಲು ಸಹಾಯ ಮಾಡಿದ್ದು ಇದೇ 'ಕ್ಯೂಪರ್ ಬೆಲ್ಟ್'. ಹೀಗಾಗಿ ಹೊಸ ಧೂಮಕೇತು ಕಂಡ ತಕ್ಷಣ ವಿಜ್ಞಾನಿಗಳು ಅದಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ, ಹೆಚ್ಚಿನ ಅಧ್ಯಯನ ನಡೆಸುತ್ತಾರೆ.
ಅಲ್ಲಿ ಇರುವುದು ಕಸ..!
ಸೌರಮಂಡಲ ಹೇಗೆ ರೂಪುಗೊಂಡಿತು ಎಂಬುದು ಬಹುತೇಕರಿಗೆ ಗೊತ್ತು, ಹೀಗೆ ಸೌರಮಂಡಲ ಹುಟ್ಟುವ ಮೊದಲು ಭೀಕರ ಸ್ಫೋಟ ಸಂಭವಿಸಿತ್ತು. ಇದೇ ಸ್ಫೋಟದ ಸಂದರ್ಭದಲ್ಲಿ ಸೂರ್ಯನ ತ್ಯಾಜ್ಯ ಕ್ಯೂಪರ್ ಬೆಲ್ಟ್ ವಲಯಕ್ಕೆ ದೂಡಲ್ಪಟ್ಟಿದೆ ಎಂಬ ವಾದ ಇದೆ. ಆದರೆ ಇದನ್ನ ಪ್ರತಿಪಾದಿಸಲು ಇನ್ನೂ ಸೂಕ್ತವಾದ ಸಾಕ್ಷ್ಯಗಳ ಸಂಗ್ರಹ ಅಗತ್ಯವಿದೆ. ಇದೇ ಕಾರಣಕ್ಕೆ ವಿಜ್ಞಾನಿಗಳು ಸೌರಮಂಡಲ ಬಿಟ್ಟು, ಹೊರಗಿನ ಜಾಗಕ್ಕೆ ನೌಕೆಗಳನ್ನು ಕಳಿಸಲು ಆಸಕ್ತಿ ತೋರುತ್ತಿದ್ದಾರೆ. ಆದರೆ ಹೀಗೆ ನೌಕೆ ಕಳುಹಿಸಲು ಹತ್ತಾರು ವರ್ಷ ಬೇಕಾಗುತ್ತೆ. ಇದೇ ಕಾರಣಕ್ಕೆ ಹತ್ತಾರು ವರ್ಷಗಳ ಬೃಹತ್ ಪ್ಲ್ಯಾನ್ ರೂಪಿಸುತ್ತಿದ್ದಾರೆ ಬಾಹ್ಯಾಕಾಶ ವಿಜ್ಞಾನಿಗಳು.