ಪಂಚರಾಜ್ಯ ಚುನಾವಣಾ ಫಲಿತಾಂಶ ಯಾರಿಗೆ ಎಚ್ಚರಿಕೆಯ ಗಂಟೆ?
Recommended Video
ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿರುವಾಗಲೇ ಪಂಚವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಧೂಳಿಪಟವಾಗಿರುವುದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ನಿದ್ದೆಗೆಡಿಸುವಂತೆ ಮಾಡಿದೆ. ಕಾಂಗ್ರೆಸ್ ಮುಕ್ತ ಮಾಡುತ್ತೇನೆ ಎಂಬ ಘೋಷಣೆಯೊಂದಿಗೆ ಸತತ ಗೆಲುವಿನ ಹಾದಿಯಲ್ಲಿದ್ದ ನರೇಂದ್ರ ಮೋದಿಗೆ ಮುಂದಿನ ದಿನಗಳು ಅಷ್ಟೊಂದು ಸುಲಭವಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಪಂಚರಾಜ್ಯ ವಿಧಾನಸಭಾ ಚುನಾವಣೆಗಳ ಫಲಿತಾಂಶ ರವಾನಿಸಿದೆ.
ಬಹುಶಃ ಇಂತಹದೊಂದು ಅಚ್ಚರಿಯ ಫಲಿತಾಂಶವನ್ನು ಬಹುಶಃ ಬಿಜೆಪಿಯ ನಾಯಕರಾರು ನಿರೀಕ್ಷೆ ಮಾಡಿರಲಿಲ್ಲ. ಆದರೆ ಮತದಾರರಿಗೆ ಯಾರನ್ನು ಗೆಲ್ಲಿಸಬೇಕು? ಯಾವಾಗ ಗೆಲ್ಲಿಸಬೇಕು? ಏಕೆ ಗೆಲ್ಲಿಸಬೇಕು ಎಂಬುದನ್ನು ಚಿಂತನೆ ಮಾಡುವ ಶಕ್ತಿಯೂ ಇದೆ ಎಂಬುದನ್ನು ಈ ಚುನಾವಣೆಯ ಫಲಿತಾಂಶ ತೋರಿಸಿಕೊಟ್ಟಿದೆ.
ಒಂದು ವೇಳೆ ಲೋಕಸಭಾ ಚುನಾವಣೆ ನಡೆಯಲು ಇನ್ನು ಒಂದೋ, ಎರಡೋ ವರ್ಷವೇನಾದರೂ ಇದ್ದಿದ್ದರೆ ಬಹುಶಃ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮುಂದೆ ಏನಾದರೂ ಗಿಮಿಕ್ ಮಾಡಿದರಾಯಿತು ಎಂದು ಸುಮ್ಮನಾಗಬಹುದಿತ್ತು. ಆದರೆ ಕಾಲ ಸರಿದು ಹೋಗಿದೆ.
ಐದು ರಾಜ್ಯಗಳ ಚುನಾವಣೆ: ಕೊನೆಗೂ ಮೌನ ಮುರಿದ ಯೋಗಿ ಆದಿತ್ಯನಾಥ್
ಇನ್ನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆಗೆ ಇಡೀ ದೇಶ ಸಿದ್ದವಾಗುತ್ತಿದೆ. ಮತ್ತೊಮ್ಮೆ ಪ್ರಧಾನಿಯಾಗುವ ನರೇಂದ್ರಮೋದಿ ಅವರ ನಡೆಗೆ ಅಡ್ಡಗಾಲಾಗಿ ನಿಲ್ಲಲು ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಒಂದಾಗುತ್ತಿವೆ. ಎಲ್ಲವೂ ಸೇರಿ ಮಹಾಘಟಬಂಧನ್ ಗೆ ಸಿದ್ಧತೆ ನಡೆಸಿವೆ.
ಮೋದಿ ಅಲೆ ನಿಧಾನವಾಗಿ ಕುಗ್ಗುತ್ತಿದೆಯಾ?
ಒಂದೆಡೆ ಎಲ್ಲ ಸಣ್ಣಪುಟ್ಟ ಪಕ್ಷಗಳು ಒಂದಾಗಿ ಕಾಂಗ್ರೆಸ್ನ ಬೆನ್ನಿಗೆ ನಿಲ್ಲಲು ನೋಡುತ್ತಿವೆ. ಮತ್ತೊಂದೆಡೆ ತನ್ನ ಆಡಳಿತದಲ್ಲಿದ್ದ ರಾಜ್ಯಗಳು ಕೂಡ ಕೈಬಿಟ್ಟು ಹೋಗುತ್ತಿವೆ. ಎಲ್ಲೋ ಒಂದು ಕಡೆ ಮೋದಿ ಅಲೆ ನಿಧಾನವಾಗಿ ಕುಗ್ಗುತ್ತಿದೆಯಾ ಎಂಬ ಭಾವನೆ ಬಿಜೆಪಿಯಲ್ಲಿ ಮೂಡತೊಡಗಿದೆ.
ಇದಕ್ಕೆ ಬಿಜೆಪಿ ಹೈಕಮಾಂಡ್ ಸ್ಥಳೀಯ ನಾಯಕರನ್ನು ನಗಣ್ಯ ಮಾಡಿರುವುದು, ಸಾಮೂಹಿಕ ನಾಯಕತ್ವಕ್ಕೆ ಮಣೆ ಹಾಕದೆ ಎಲ್ಲದಕ್ಕೂ ಮೋದಿಯನ್ನೇ ಅವಲಂಬಿಸಿರುವುದು ಕಾರಣ ಎಂದರೆ ತಪ್ಪಾಗಲಾರದು. ಸಾಮೂಹಿಕ ನಾಯಕತ್ವ ಮಾತ್ರ ಪಕ್ಷ ಉಳಿಸೋದು ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರಮೋದಿ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್ಶಾ ಆಗಮಿಸಿದರೆ ಮಾತ್ರ ಮತದಾರರ ಮನಗೆಲ್ಲಬಹುದು ಎಂಬ ಆಲೋಚನೆ ಬಿಜೆಪಿ ನಾಯಕರದ್ದಾಗಿದೆ. ಹೀಗಾಗಿ ಸ್ಥಳೀಯ ಪ್ರಭಾವಿ ನಾಯಕರಿದ್ದರೂ ಕೇಂದ್ರದತ್ತ ಬೊಟ್ಟು ಮಾಡುವ ಪ್ರಯತ್ನಗಳು ನಡೆಯುತ್ತವೆ.
ತೆಲಂಗಾಣ ಮುಖ್ಯಮಂತ್ರಿಯಾಗಿ ಇಂದು ಕೆಸಿಆರ್ ಪ್ರಮಾಣ ವಚನ
ತಳಮಟ್ಟದಿಂದ ಸಂಘಟನೆಗೊಳ್ಳಬೇಕು
ಯಾವುದೇ ಪಕ್ಷವಿರಲಿ ಅದು ಭದ್ರವಾಗಿ ನೆಲೆಯೂರುವುದು ತಳಮಟ್ಟದಿಂದ ಸಂಘಟನೆಗೊಂಡಾಗ ಮಾತ್ರ ಎಂಬುದು ಅಷ್ಟೇ ಸತ್ಯ. ಏಕ ವ್ಯಕ್ತಿ ಕೇಂದ್ರಬಿಂದುವಾಗಿ ಆತನ ಅಲೆಯಲ್ಲಿ ನಾಯಕರು, ಕಾರ್ಯಕರ್ತರು ಕೊಚ್ಚಿ ಹೋಗುತ್ತಾ ಎಲ್ಲದಕ್ಕೂ ಆತನನ್ನೇ ಅವಲಂಬಿಸುತ್ತಾ ಹೋದರೆ ಅದು ಒಂದು ಹಂತದವರೆಗೆ ಚೆನ್ನಾಗಿ ನಡೆಯುತ್ತಿರುವಂತೆ ಗೋಚರಿಸುತ್ತದೆ.
ಆದರೂ ಒಂದು ವೇಳೆ ಆ ವ್ಯಕ್ತಿಯ ಜನಪ್ರಿಯತೆ ಕುಗ್ಗಿದ್ದೇ ಆದರೆ ಅದರ ಹೊಡೆತ ಇಡೀ ಪಕ್ಷದ ಮೇಲೆ ಬೀರುತ್ತದೆ. ಭಾರತದ ರಾಜಕೀಯ ಇತಿಹಾಸದಲ್ಲಿ ಇಂತಹ ಸನ್ನಿವೇಶಗಳು ಬೇಕಾದಷ್ಟು ನಡೆದಿವೆ. ಜನ ಎಲ್ಲವನ್ನು, ಎಲ್ಲರನ್ನು ಎಷ್ಟು ವೇಗವಾಗಿ ಸ್ವೀಕರಿಸುತ್ತಾರೆಯೋ ಅಷ್ಟೇ ವೇಗವಾಗಿ ತಿರಸ್ಕರಿಸುವ ಗುಣವನ್ನು ಕೂಡ ಹೊಂದಿದ್ದಾರೆ ಎನ್ನುವುದನ್ನು ಇಲ್ಲಿ ಮರೆಯಬಾರದು.
3 ರಾಜ್ಯಗಳ ಮುಂದಿನ ಮುಖ್ಯಮಂತ್ರಿ ಯಾರು? ರಾಹುಲ್ ಹೊಸ ಐಡಿಯಾ!
ಜನ ಒಳ್ಳೆಯ ಆಡಳಿತ ಬಯಸುತ್ತಾರೆ
ಆಡಳಿತ ವಿರೋಧಿ ಅಲೆ ಸಾಮಾನ್ಯ ಪ್ರಜಾಪ್ರಭುತ್ವದಲ್ಲಿ ಆಡಳಿದ ಪಕ್ಷದ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದೇ ಇರುತ್ತದೆ. ಅದು ಶೇಕಡವಾರು ಮಟ್ಟದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವ್ಯತ್ಯಾಸಗಳಾಗಬಹುದು. ಒಬ್ಬ ಉತ್ತಮ ನಾಯಕ ಆಡಳಿತಕ್ಕೆ ಬಂದಿದ್ದಾನೆ ಅಂದರೆ ಆತನಿಂದ ಜನ ಒಳ್ಳೆಯ ಆಡಳಿತವನ್ನು ಬಯಸುತ್ತಾರೆ.
ಅಷ್ಟೇ ಅಲ್ಲ ಆತನ ಆಡಳಿತಾವಧಿಯಲ್ಲಿ ಶ್ರೀಸಾಮಾನ್ಯನಿಗೆ ಯಾವ ರೀತಿಯ ಅನುಕೂಲವಾಗಿದೆ ಎಂಬುದನ್ನು ಕೂಡ ಗಮನಿಸುತ್ತಾನೆ. ಆತನಿಗೆ ಇಷ್ಟವಾಗಿಲ್ಲ ಎನ್ನುವುದಾದರೆ ಆತ ತಿರಸ್ಕರಿಸಲು ಹಿಂಜರಿಯುವುದಿಲ್ಲ. ಸೋತ ನಾಯಕರೆಲ್ಲರೂ ಆತ್ಮಾವಲೋಕನ ಮಾತುಗಳನ್ನಾಡುತ್ತಾರೆ.
ಸೋತಿದಕ್ಕೆ ಆಡಳಿತದಲ್ಲಿನ ಲೋಪದೋಷ ಕಾರಣ ಎಂಬುದನ್ನು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ ಬದಲಾಗಿ ಗೆದ್ದ ಪಕ್ಷಗಳ ಮೇಲೆ ಗೂಬೆ ಕೂರಿಸುತ್ತಾರೆ. ಒಂದು ವೇಳೆ ಪ್ರಜೆಗಳಿಗೆ ತೃಪ್ತಿಯಾಗುವ ಆಡಳಿತ ನೀಡಿದ್ದರೆ ಬಹುಶಃ ಮತದಾರರ ಮತ ನೀಡುತ್ತಿದ್ದನು ಎಂಬುದನ್ನು ಯಾರೂ ಕೂಡ ಹೇಳುವುದಿಲ್ಲ.
ಲೋಕಸಭಾ ಚುನಾವಣೆ ಹಾಗಲ್ಲ
ಕಳೆದ ಒಂದೆರಡು ದಶಕಗಳ ಚುನಾವಣೆಯನ್ನು ಮುಂದಿಟ್ಟುಕೊಂಡು ಇವತ್ತಿನ ಚುನಾವಣೆಗಳ ಬಗ್ಗೆ ಮಾತನಾಡಿದರೆ ಅದು ಮೂರ್ಖತನವಾಗಿ ಬಿಡುತ್ತದೆ. ಇವತ್ತಿನ ಯುವ ಮತದಾರ ಪ್ರಬುದ್ಧನಾಗಿದ್ದಾನೆ. ವಿದ್ಯಾವಂತನನಾಗಿದ್ದಾರೆ. ವಿಚಾರ, ಚಿಂತನೆ ಮಾಡುವುದು ಗೊತ್ತಿದೆ. ಅದಕ್ಕಿಂತ ಹೆಚ್ಚಾಗಿ ಮಾಧ್ಯಮಗಳು ಪ್ರಬಲವಾಗಿವೆ.
ಸಾಮಾಜಿಕ ಜಾಲ ತಾಣಗಳು ಕೂಡ ಕಾರ್ಯೋನ್ಮುಖವಾಗಿವೆ. ಹೀಗಿರುವಾಗ ಸಮಯ ಬಂದಾಗ ಉತ್ತರಕೊಡುವುದು ಮತದಾರರಿಗೂ ಗೊತ್ತಿದೆ ಎಂಬುದು ಪಂಚರಾಜ್ಯ ಚುನಾವಣಾ ಫಲಿತಾಂಶಗಳಿಂದ ಗೊತ್ತಾಗಿದೆ. ಮೂರು ರಾಜ್ಯಗಳಲ್ಲಿ ಆಡಳಿತ ಹಿಡಿಯಲಿರುವ ಕಾಂಗ್ರೆಸ್ ಆತ್ಮವಿಶ್ವಾಸದಿಂದ ಬೀಗುತ್ತಿರಬಹುದು.
ಜತೆಗೆ ಇದೇ ಚುನಾವಣೆ ಲೋಕಸಭೆಗೂ ದಿಕ್ಸೂಚಿ ಎಂದು ನಂಬಿದರೆ ಮೂರ್ಖತನವಾಗಿ ಬಿಡುತ್ತದೆ. ಏಕೆಂದರೆ ವಿಧಾನಸಭಾ ಚುನಾವಣೆಗಳಲ್ಲಿ ಸ್ಥಳೀಯ ಆಡಳಿತದ ವಿರುದ್ಧ ವಿರೋಧಿ ಅಲೆ ಹುಟ್ಟು ಹಾಕುವುದು ಕಷ್ಟವಲ್ಲ. ಸ್ಥಳೀಯ ಮಟ್ಟದ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡಬಹುದು ಆದರೆ ಲೋಕಸಭಾ ಚುನಾವಣೆ ಹಾಗಲ್ಲವಲ್ಲ.
ಹಗರಣಗಳು ಸದ್ಯಕ್ಕೆ ಕಾಣುತ್ತಿಲ್ಲ
ಮೋದಿ ವಿರುದ್ಧ ವಿರೋಧಿ ಅಲೆ ಸೃಷ್ಟಿಸೋದು ಕಷ್ಟ ಕೇಂದ್ರದ ವಿರುದ್ಧ ಅರ್ಥಾತ್ ಮೋದಿ ವಿರುದ್ಧ ಆರೋಪ ಮಾಡಿ ಇಡೀ ದೇಶದಲ್ಲಿ ಸಂಚಲನ ಹುಟ್ಟು ಹಾಕುವಂತಹ ಹಗರಣಗಳು ಸದ್ಯಕ್ಕೆ ಕಾಣುತ್ತಿಲ್ಲ. ಹೀಗಾಗಿ ಒಂದಿಷ್ಟು ಚಿಕ್ಕಪುಟ್ಟ ವಿಚಾರಗಳನ್ನೇ ಜನರ ಮುಂದೆ ಇಡಬೇಕಾಗುತ್ತದೆ. ಆದರೆ ಅದು ಹೆಚ್ಚಿನ ಪರಿಣಾಮ ಬೀರಬಹುದಾ ಅದು ಗೊತ್ತಿಲ್ಲ.
ಅದೇನೇ ಇರಲಿ ಪಂಚ ರಾಜ್ಯಗಳ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ಗೆ ಯಾವ ರೀತಿಯ ಲಾಭ ತಂದುಕೊಡುತ್ತದೆ ಮತ್ತು ಬಿಜೆಪಿಗೆ ಯಾವ ರೀತಿಯ ಹೊಡೆತ ನೀಡುತ್ತದೆ ಎಲ್ಲವನ್ನೂ ಕಾದು ನೋಡೋಣ..!