ಪಂಚರಾಜ್ಯ ಫಲಿತಾಂಶ: ಬಿಜೆಪಿಗಷ್ಟೇ ಅಲ್ಲ, ಮಾಯಾವತಿಗೂ ಮುಖಭಂಗ!
ಪಂಚರಾಜ್ಯಗಳ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಒಂದು ಹಮತದಲ್ಲಿ ಬಿಎಸ್ಪಿ(ಬಹುಜನ ಸಮಾಜವಾದಿ ಪಕ್ಷ) ನಾಯಕಿ ಮಾಯಾವತಿಯವರೇ ಕಿಂಗ್ ಮೇಕರ್ ಎಂಬ ಪರಿಸ್ಥಿತಿ ಏರ್ಪಟ್ಟಿತ್ತು.
ತಕ್ಷಣವೇ ಬಿಎಸ್ಪಿಯ ಶಾಸಕರನೇಕರನ್ನು ದೆಹಲಿಗೆ ಕರೆಸಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, ನಂತರ ತಮ್ಮ ಬೆಂಬಲ ಕಾಂಗ್ರೆಸ್ಸಿಗೆ ಎಂದು ಘೋಷಿಸಿದರು.
ಅವೆಲ್ಲ ಸರಿ. ಆದರೆ ಈ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯಷ್ಟೇ ಮುಖಭಂಗವನ್ನು ಮಾಯಾವತಿಯವರೂ ಅನುಭವಿಸಿದ್ದಾರೆ ಎಂದರೆ ನಂಬಲೇ ಬೇಕು! ಕಾಂಗ್ರೆಸ್ಸಿಗೆ ಸರ್ಕಾರ ರಚಿಸುವುದುಕ್ಕೆ ಬಿಎಸ್ಪಿ ಅನಿವಾರ್ಯವಾಗುತ್ತದೆ ಎಂಬ ಮಾಯಾವತಿ ಯೋಚನೆ ತಲೆಕೆಳಗಾಗಿದೆ. 'ನೀವಿಲ್ಲದೆಯೂ ನಾವು ಸರ್ಕಾರ ರಚಿಸಬಲ್ಲೆವು' ಎಂಬ ಸಂದೇಶವನ್ನು ಕಾಂಗ್ರೆಸ್ ಈಗಾಗಲೇ ಮೂರೂ ರಾಜ್ಯಗಳಲ್ಲಿ ನೀಡಿದೆ.
ಪಂಚರಾಜ್ಯ ಫಲಿತಾಂಶ: ಬಿಜೆಪಿ ಧೂಳಿಪಟವಾಗೋಕೆ 5 ಕಾರಣ
ಛತ್ತೀಸ್ ಗಢ, ರಾಜಸ್ಥಾನ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಈ ಮೂರು ರಾಜ್ಯಗಳಲ್ಲೂ ಕಾಂಗ್ರೆಸ್ ಬಹುಮತ ಗಳಿಸಿದೆ. ಮಿಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದರೆ, ತೆಲಂಗಾಣದಲ್ಲಿ ಟಿಆರ್ ಎಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಟಿಕೆಟ್ ಹಂಚಿಕೆ ಭಿನ್ನಾಭಿಪ್ರಾಯ
ಪಂಚ ರಾಜ್ಯಗಳ ಚುನಾವಣೆ ಲೋಕಸಭಾ ಚುನಾವಣೆಯ ಫೈನಲ್ ಮ್ಯಾಚಿಗೂ ಮುನ್ನ ಇರುವ ಸೆಮಿಫೈನಲ್ ಎಂದುಕೊಂಡಿತ್ತು ಕಾಂಗ್ರೆಸ್. ಅದಕ್ಕೆಂದೇ ಲೋಕಸಭೆ ಚುನಾವಣೆಗೆ ಅಗತ್ಯವಿರುವ ಮಹಾಮೈತ್ರಿಕೂಟದ ಕನಸಿಗೆ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಎಸ್ಪಿ, ಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ನೀರೆರೆಯುವ ಯತ್ನಕ್ಕೆ ಕೈಹಾಕಿತ್ತು. ಆದರೆ ಇಂತಿಷ್ಟೇ ಸೀಟು ಬೇಕು ಎಂಬ ಬೇಡಿಕೆಗೆ ಬಿದ್ದ ಮಾಯಾವತಿ ತಮ್ಮ ಹಠ ಬಿಡದೆ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದರು. ಎಸ್ಪಿ, ಬಿಎಸ್ಪಿಯ ಬೆಂಬಲಕ್ಕೆ ನಿಂತಿತ್ತು. ಮಾಯಾವತಿ ಅವರನ್ನು ಸಂಭಾಳಿಸುವ ಕಾಂಗ್ರೆಸ್ಸಿನ ಎಲ್ಲಾ ತೆರೆಮರೆಯ ಪ್ರಯತ್ನಗಳೂ ವಿಫಲವಾಗಿದ್ದವು!
ಪಂಚರಾಜ್ಯ ಚುನಾವಣೆ ಫಲಿತಾಂಶ LIVE: 5 ರಾಜ್ಯಗಳಲ್ಲೂ ಬಿಜೆಪಿ ಧೂಳಿಪಟ!
ಸ್ವತಂತ್ರವಾಗಿ ಸ್ಪರ್ಧೆ
ತಾನು ಈ ರಾಜ್ಯಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂದ ಮಾಯಾವತಿ ಕಾಂಗ್ರೆಸ್ಸಿಗೆ ಕ್ಯಾರೇ ಎನ್ನಲಿಲ್ಲ. ನಂತರ ತಾನು ಕಾಂಗ್ರೆಸ್ ಮೇಲೆ ಮುನಿಸಿಕೊಂಡಿದ್ದೇನೆ ಎಂಬುದರ ಸೂಚನೆಯಾಗಿ ಕರ್ನಾಟಕದ ಏಕೈಕ ಬಿಎಸ್ಪಿ ಶಾಸಕ ಮಹೇಶ್ ಅವರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಸಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ ಆಚೆ ಬರುವಂತೆ ಮಾಡಿದರು. ಕಾಂಗ್ರೆಸ್ ಪಕ್ಷವೂ 'ಮಹಾಘಟಬಂಧನ'ದ ಭಾಗವಾಗುವುದಾದರೆ ನಾನು ಈ 'ಆಟಕ್ಕೆ ಬರೋಲ್ಲ' ಎಂದರು! ಒಟ್ಟಿನಲ್ಲಿ ಕಾಂಗ್ರೆಸ್ ವಿರುದ್ಧ ತಮಗಿರುವ ಮುನಿಸನ್ನು ಹೇಗೆಲ್ಲ ತೋರಿಸಿಕೊಳ್ಳಬೇಕೋ ಹಾಗೆಲ್ಲ ತೋರಿಸಿಕೊಂಡರು. ಅದರದೇ ಭಾಗವಾಗಿ ಡಿ.10 ರಂದು ನವದೆಹಲಿಯಲ್ಲಿ ನಡೆದ ಬಿಜೆಪಿ ವಿರೋಧಿ ಪಕ್ಷಗಳ ಸಭೆಯಲ್ಲೂ ಅವರು ಭಾಗವಹಿಸಲಿಲ್ಲ.
ಪಂಚ ರಾಜ್ಯ ವಿಧಾನಸಭಾ ಚುನಾವಣೆಯ ಸಮಗ್ರ ಫಲಿತಾಂಶ
ಕಿಂಗ್ ಮೇಕರ್ ಆಗುವ ಕನಸು ಭಗ್ನ!
ರಾಜಸ್ಥಾನ ಮತ್ತು ಮಧ್ಯಪ್ರದೇಶ ಎರಡೂ ರಾಜ್ಯಗಳಲ್ಲಿ ಅತಂತ್ರ ವಿಧಾನಸಭೆ ತಲೆದೋರಬಹುದು ಎಂಬ ಸೂಚನೆಯನ್ನು ಎಕ್ಸಿಟ್ ಪೋಲ್ ಗಳು ನೀಡಿದ್ದವು. ತಾವು ಕಿಂಗ್ ಮೇಕರ್ ಆಗಿಯೇ ಆಗುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಮಾಯಾವತಿ ಅವರು ಸಹ ಇದ್ದರು. ಆದರೆ ಹಾಗಾಗಲಿಲ್ಲ. ಸದ್ಯದ ಟ್ರೆಂಡ್ ಪ್ರಕಾರ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಹುಮತ ಗಳಿಸಬಹುದು. ಇಲ್ಲವೆಂದರೂ ಪಕ್ಷೇತರರ ಸಹಾಯದಿಂದ ಸರ್ಕಾರ ರಚಿಸಬಹುದು. ರಾಜಸ್ಥಾನದಲ್ಲಿ ಬಹುಮತವಿದೆ. ಮಾಯಾವತಿ ಇಲ್ಲದೆಯೂ ತನ್ನ ಅಸ್ತಿತ್ವವಿದೆ ಎಂಬುದನ್ನು ಕಾಂಗ್ರೆಸ್ ತೋರಿಸಿಕೊಟ್ಟಿದೆ.
ಏನಾಗಿತ್ತು ಮಾಯಾವತಿ ಲೆಕ್ಕಾಚಾರ?
ಮಾಯಾವತಿ ಲೆಕ್ಕಾಚಾರ ಕೇವಲ ಬಿಎಸ್ಪಿಗೆ ಹೆಚ್ಚಿನ ಸೀಟು ಗೆಲ್ಲುವುದಷ್ಟೇ ಆಗಿರಲಿಲ್ಲ. ಕಾಂಗ್ರೆಸ್ಸಿನ ಮತಗಳನ್ನು ಒಡೆಯುವ ಮೂಲಕ ಕಾಂಗ್ರೆಸ್ ಕಡಿಮೆ ಕ್ಷೇತ್ರಗಳಲ್ಲಿ ಗೆಲ್ಲುವಂತೆ ಮಾಡುವುದು. ಆ ಮೂಲಕ ಲೋಕಸಭಾ ಚುನಾವಣೆಯ ಸಮಯದಲ್ಲಿ 'ಮಹಾಘಟಬಂಧನ'ದಲ್ಲಿ ತಮ್ಮ ಅವಶ್ಯಕತೆ ಏನು ಎಂಬುದನ್ನು ತೋರಿಸಿಕೊಡುವುದು. ಆದರೆ ಈ ಎಲ್ಲಾ ಉದ್ದೇಶವೂ ತಲೆಕೆಳಗಾಗಿದೆ. ಇದೀಗ ಬೇರೆ ದಾರಿ ಇಲ್ಲದೆ 'ತಮ್ಮ ಬೆಂಬಲ ಕಾಂಗ್ರೆಸ್ಸಿಗೆ' ಎಂದಿದ್ದಾರೆ ಮಾಯಾವತಿ. ಲೋಕಸಭಾ ಚುನಾವಣೆಯ ಸಮಯದಲ್ಲಿ ಮಹಾಘಟಬಂಧನದಲ್ಲಿ ಮಾಯಾವತಿಯವರೂ ಪಾಲುದಾರರಾಗಬಹುದು ಎಂಬ ಸೂಚನೆ ಈ ಮೂಲಕ ಸಿಕ್ಕಿದೆ. ಇದು ಬಿಜೆಪಿಗೆ ಎಚ್ಚರಿಕೆಯೂ ಹೌದು.