ಪಂಚ ರಾಜ್ಯಗಳ ಫಲಿತಾಂಶದ ಬಗ್ಗೆ ಶ್ವೇತಾ ಆನಂದ್ ಟಾರೋ ಕಾರ್ಡ್ ರೀಡಿಂಗ್
ಮಂಗಳವಾರದಂದು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟ ಆಗಲಿದೆ. ಆ ಹಿನ್ನೆಲೆಯಲ್ಲಿ ಫಲಿತಾಂಶ ಹೇಗೆ ಬರಬಹುದು ಎಂಬ ಬಗ್ಗೆ ಟಾರೋ ಕಾರ್ಡ್ ರೀಡರ್ ಶ್ವೇತಾ ಆನಂದ್ ಒನ್ ಇಂಡಿಯಾ ಕನ್ನಡಕ್ಕಾಗಿ ಒಂದು ಲೇಖನ ಬರೆದಿದ್ದಾರೆ. ಇದು ಜ್ಯೋತಿಷ್ಯವಲ್ಲ, ಮಾರ್ಗದರ್ಶನ. ಆ ಕ್ಷಣದಲ್ಲಿ ಅಂದರೆ ಪ್ರಶ್ನೆ ಮಾಡಿದ ಕಾಲದಲ್ಲಿ ಬಂದ ಫಲಿತಾಂಶ ಎಂದು ಅವರು ತಿಳಿಸಿದ್ದಾರೆ.
ಇದು ಶ್ವೇತಾ ಅವರ ವಿಶ್ಲೇಷಣೆಯೇ ಹೊರತು ಒನ್ ಇಂಡಿಯಾ ಕನ್ನಡದ ಅಭಿಪ್ರಾಯ ಅಲ್ಲ. ಇದಕ್ಕೆ ನಮ್ಮ ವೆಬ್ ಪೋರ್ಟರ್ ಜವಾಬ್ದಾರಿಯೂ ಅಲ್ಲ.- ಸಂಪಾದಕ
ಪ್ರಕಾಶ್ ಅಮ್ಮಣ್ಣಾಯರಿಂದ ಪಂಚ ರಾಜ್ಯ ವಿಧಾನಸಭಾ ಚುನಾವಣೆ ವಿಶ್ಲೇಷಣೆ
*****
ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಶ್ವೇತಾ ಆನಂದ್. ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಗಢ, ಮಿಜೋರಾಂ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆ ಫಲಿತಾಂಶ ಏನಾಗಬಹುದು ಎಂದು ಟಾರೋ ಕಾರ್ಡ್ ರೀಡಿಂಗ್ ಮಾಡಿದ್ದೇನೆ. ಬಹಳ ಮಂದಿ ಜ್ಯೋತಿಷ್ಯಕ್ಕೂ ಟಾರೋ ಕಾರ್ಡ್ ರೀಡಿಂಗ್ ಗೂ ಗೊಂದಲ ಮಾಡಿಕೊಳ್ಳುತ್ತಾರೆ.
ಇದು ಖಂಡಿತಾ ಆ ರೀತಿಯ ಜ್ಯೋತಿಷ್ಯ ಅಲ್ಲ. ಪ್ರಶ್ನೆ ಮಾಡಿದ ಕಾಲಕ್ಕೆ ಕೆಲವು ಕಾರ್ಡ್ ಗಳ ಮೂಲಕ ನಮಗೆ ತೋರಿಬರುವ ಮುಂದಿನ ಆಯ್ಕೆಗಳು. ಇನ್ನೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ ನಮಗೆ ತೋರಿಬರುವುದು ಮುಂದಿನ ಆಯ್ಕೆಗಳು. ಉದಾಹರಣೆ ನನಗೆ ಮೂರು ಅವಕಾಶಗಳು ಬಂದಿವೆ, ಯಾವುದಕ್ಕೆ ಹೋದರೆ ಉತ್ತಮ ಎಂಬ ಪ್ರಶ್ನೆ ಮುಂದಿಟ್ಟರೆ ಅದಕ್ಕೆ ಟಾರೋ ರೀಡಿಂಗ್ ಮೂಲಕ ಮಾರ್ಗದರ್ಶನ ಪಡೆಯಬಹುದು.
ಮಧ್ಯಪ್ರದೇಶದ ಮುಂದಿನ ಸಿಎಂ ಯಾರು? ಕಮಲ್ ನಾಥ್ ಏನಂತಾರೆ?
ಅದೇ ರೀತಿ ವ್ಯಕ್ತಿಯ ಗುಣ- ಸ್ವಭಾವ ಕೂಡ ಈ ಕಾರ್ಡ್ ಗಳ ಮೂಲಕ ಗೊತ್ತಾಗುತ್ತದೆ. ಆದರೆ ಇದು ಆ ಕ್ಷಣದಲ್ಲಿ ಅಂದರೆ ಪ್ರಶ್ನೆ ಮಾಡುವ ಸಮಯದಲ್ಲಿ ನಮಗೆ ತಿಳಿದುಬರುವ ಸಂಗತಿ. ಅದೇ ರೀತಿ ಐದು ರಾಜ್ಯಗಳ ಚುನಾವಣೆ ಸಂಪೂರ್ಣ ಆದ ಮೇಲೆ ಮಾಡಿದಂಥ ಟಾರೋ ಕಾರ್ಡ್ ನಲ್ಲಿ ಗೊತ್ತಾದ ಸಂಗತಿಯನ್ನು ನಿಮ್ಮೆದುರು ಹಂಚಿಕೊಳ್ಳುತ್ತಾ ಇದ್ದೀನಿ.
ತೆಲಂಗಾಣದಲ್ಲಿ ಟಿಆರ್ ಎಸ್ ವರ್ಸಸ್ ಕಾಂಗ್ರೆಸ್ ಮಿತ್ರ ಪಕ್ಷ
ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಹಾಗೂ ಕಾಂಗ್ರೆಸ್ ಮಿತ್ರ ಪಕ್ಷಗಳ ಮಧ್ಯೆ ಹೋರಾಟ ಕಂಡುಬರುತ್ತದೆ. ಆ ಹೋರಾಟದಲ್ಲಿ ಕೆ.ಚಂದ್ರಶೇಖರ್ ರಾವ್ ಅವರ ಬಲ ಮೇಲಾಗುವ ರೀತಿಯಲ್ಲಿ ಟಾರೋ ಕಾರ್ಡ್ ಬಂದಿದೆ. ಆದರೆ ಹೋರಾಟವಂತೂ ಕಂಡುಬರುತ್ತದೆ.
ರಾಜಸ್ತಾನದಲ್ಲಿ ನಿರೀಕ್ಷೆಗಿಂತ ಭಿನ್ನ ಫಲಿತಾಂಶ
ಇನ್ನು ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ಈಗ ಪಕ್ಷವೂ ಸೇರಿದ ಹಾಗೆ ಯಾರೆಲ್ಲ ಏನು ನಿರೀಕ್ಷೆ ಮಾಡಿದ್ದಾರೋ ಅದಕ್ಕಿಂತ ಭಿನ್ನವಾದ ಹಾಗೂ ಸಕಾರಾತ್ಮಕವಾದ ಫಲಿತಾಂಶವನ್ನು ಬಿಜೆಪಿ ಅಲ್ಲಿ ಪಡೆಯಲಿದೆ. ಆ ಫಲಿತಾಂಶ ಖಂಡಿತಾ ನಿರೀಕ್ಷೆಗಿಂತ ಭಿನ್ನವಾಗಿ ಇರಲಿದೆ ಎಂಬ ಬಗ್ಗೆ ಅನುಮಾನ ಬೇಡ.
ಇವಿಎಂ ವಿರುದ್ಧದ ಅಭಿಯಾನವನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡ ಕಾಂಗ್ರೆಸ್
ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಗೆ ಮುನ್ನಡೆ
ಛತ್ತೀಸ್ ಗಢ ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆ ಮುನ್ನಡೆ ಕಾಣುವ ಎಲ್ಲ ಅವಕಾಶಗಳಿವೆ. ಈ ರಾಜ್ಯದಲ್ಲಿ ಅದೆಂಥ ಫಲಿತಾಂಶ ಬಂದರೂ ಬಿಜೆಪಿ ಪಾಲಿಗೆ ಆಘಾತವಾಗಿರಲಿದೆ ಎಂಬ ಸೂಚನೆಗಳು ದೊರಕಿವೆ. ಇಲ್ಲಿನ ಫಲಿತಾಂಶವು ಬಿಜೆಪಿ ಪಾಲಿಗೆ ಹೊಸ ಚಿಂತೆಯನ್ನು ಹುಟ್ಟು ಹಾಕುವ ಲಕ್ಷಣಗಳಿವೆ.
ಮಧ್ಯಪ್ರದೇಶದಲ್ಲಿ ಹಿರಿಯರೊಬ್ಬರ ಶ್ರಮದ ಫಲ ಬಿಜೆಪಿ ಪಾಲಿಗೆ
ಮಧ್ಯಪ್ರದೇಶದಲ್ಲಿ ನಿಜವಾದ ಪೈಪೋಟಿಯನ್ನು ಎದುರಿಸುವ ಬಿಜೆಪಿಗೆ ಕೆಲವು ಅನುಕೂಲಕರ ಅಂಶಗಳು ಸಿಗುತ್ತವೆ. ಅಲ್ಲಿನ ಫಲಿತಾಂಶ ಬಿಜೆಪಿ ಪಾಲಿಗೆ ಒಂದು ಬಗೆಯಲ್ಲಿ ಧೈರ್ಯ ನೀಡುತ್ತದೆ. ಹಿರಿಯರೊಬ್ಬರ ಕೊನೆ ಕ್ಷಣದ ಶ್ರಮವು ಫಲಿತಾಂಶದಲ್ಲಿ ತೂಕದ ಬಟ್ಟು ಬಿಜೆಪಿ ಪಾಲಿಗೆ ವಾಲಿದಂತೆ ಮಾಡಿರುವುದು ಗಮನಕ್ಕೆ ಬರಲಿದೆ.
ಮಿಜೋರಾಂನಲ್ಲಿ ಮಹಿಳೆ ಬಳಿಗೆ ಅಧಿಕಾರ ಅರಸಿ ಬರಲಿದೆ
ಮಿಜೋರಾಂನಲ್ಲಿ ಮಹಿಳೆಯೊಬ್ಬರ ಬಳಿಗೆ ಅಧಿಕಾರ ಹುಡುಕಿಕೊಂಡು ಬರುವಂಥ ಕಾರ್ಡ್ ಬಂದಿದೆ. ಅದರರ್ಥ ಇಲ್ಲಿ ಪೂರ್ಣ ಪ್ರಮಾಣದ ಬಹುಮತ ಇಲ್ಲದಿದ್ದರೂ ಮಹಿಳೆಯು ಮುಂಚೂಣಿಯಲ್ಲಿ ಇರುವ ಅಥವಾ ಮಹಿಳೆಯು ಪ್ರಮುಖ ಪಾತ್ರ ನಿರ್ವಹಿಸುವ ಕಾಂಗ್ರೆಸ್ ಪಾಲಿಗೆ ಅನುಕೂಲಕರ ಸನ್ನಿವೇಶ ಇರಲಿದೆ.