ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರದ ಹಿರಿ ತಲೆಗಳಿಗೆ 4 ಪ್ರಶ್ನೆ
Recommended Video
ಕರ್ನಾಟಕದಲ್ಲಿ ಅಸ್ತಿತ್ವದಲ್ಲಿ ಇರುವ ಜೆಡಿಎಸ್- ಕಾಂಗ್ರೆಸ್ ಸರಕಾರದ ಪ್ರಮುಖ ಪಾತ್ರಧಾರಿಗಳಿಗೆ ಇವತ್ತಿನ ಸನ್ನಿವೇಶಕ್ಕೆ ಕೆಲವು ಪ್ರಶ್ನೆಗಳಿವೆ. ಪ್ರಮುಖ ಪಾತ್ರಧಾರಿಗಳು ಅಂದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ.
ಇಬ್ಬರಿಗೂ ಕೆಲವು ಪ್ರಶ್ನೆಗಳಿವೆ. ಏಕೆಂದರೆ, ಯಾವುದೇ ಸರಕಾರದಿಂದ ಜನರ ನಿರೀಕ್ಷೆಗಳು ಅಭಿವೃದ್ಧಿ ಪರವಾಗಿರುತ್ತವೆ. ಮೈತ್ರಿ ಸರಕಾರ ಅಂತ ರಚನೆಯಾದಾಗ ಸಾರ್ವಜನಿಕವಾಗಿ ಎಷ್ಟು ಸಾಧ್ಯವೋ ಅಷ್ಟು ಒಗ್ಗಟ್ಟು ತೋರಿಸುವುದು ಅಗತ್ಯವಾಗಿರುತ್ತದೆ. ಇಲ್ಲದಿದ್ದರೆ ಮುಜುಗರ ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ.
ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಖರ್ಗೆಯನ್ನು ಸಿಎಂ ಮಾಡಲಿ: ಬಿಎಸ್ವೈ
ಈಗಿನ ಮೈತ್ರಿ ಸರಕಾರ ರಚನೆ ಆಗಿದ್ದು ಆಕಸ್ಮಿಕ ಎಂಬುದು ನಿಜವೇ ಇರಬಹುದು. ಆದರೆ ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದು, ಫಲಿತಾಂಶ ಬಂದ ಒಂದು ವರ್ಷದ ನಂತರವೂ ಎದ್ದು ಕಾಣುವಂಥ ಬಿರುಕು ಇದ್ದರೆ ಏನು ಮಾಡುವುದಕ್ಕೆ ಸಾಧ್ಯ? ಹಾಗೆ ನೋಡಿದರೆ ಸರಕಾರಕ್ಕೆ ಸಂಬಂಧಿಸಿದ ವಿಚಾರಗಳಿದ್ದರೆ ಮಾತ್ರ ಅದು ಸಾರ್ವಜನಿಕ ಚರ್ಚೆಯ ವಿಷಯ ಆಗಬೇಕು. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ. ಆದ್ದರಿಂದಲೇ ಪ್ರಶ್ನೆಗಳು ಉದ್ಭವಿಸಿವೆ ಮತ್ತು ಅವುಗಳು ಹೀಗಿವೆ.
ಮಲ್ಲಿಕಾರ್ಜುನ ಖರ್ಗೆ ಅವರ ವಿಷಯ ಈಗೇಕೆ?
ಮೊದಲಿಗೆ, ಮಲ್ಲಿಕಾರ್ಜುನ ಖರ್ಗೆಯವರು ಯಾವಾಗಲೋ ಮುಖ್ಯಮಂತ್ರಿ ಆಗಬೇಕಿತ್ತು ಎಂಬುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈಗ ಹೇಳಿದ್ದು ಏಕೆ? ಅದರ ಅಗತ್ಯ ಏನಿತ್ತು? ಈ ವಿಚಾರವನ್ನು ಮಾತನಾಡಿದರೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ದರಾಮಯ್ಯ ಅವಕಾಶ ತಪ್ಪಿಸಿದರು ಎಂಬ ಸಂದೇಶ ರವಾನಿಸಿದಂತಾಗುತ್ತದೆ ಎಂಬ ಅಳುಕು ಮಾಜಿ ಮುಖ್ಯಮಂತ್ರಿಗಳಿಗೆ ಇರಬಹುದು. ಏಕೆಂದರೆ, ಯಾವುದೇ ವಿಚಾರ ಮಾತನಾಡುವುದಕ್ಕೆ ಹಿನ್ನೆಲೆ ಬಹಳ ಮುಖ್ಯವಾಗುತ್ತದೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಿ ಎಂಬ ಧ್ವನಿ ಏಳುತ್ತಿದ್ದಂತೆಯೇ ಒಂದು ಕಡೆ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು, ಸಿದ್ದರಾಮಯ್ಯ ಸಾಧನೆ ಏನು ಅಂದರು. ಅದರ ಬೆನ್ನಿಗೆ, ಕುಮಾರಸ್ವಾಮಿ ಅವರಿಂದ ಮಲ್ಲಿಕಾರ್ಜುನ ಖರ್ಗೆ ಕಾರ್ಡ್ ಪ್ಲೇ ಆಯಿತು.
ಆಗ ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿಲ್ಲವಾ?
ಇನ್ನು ಸಿದ್ದರಾಮಯ್ಯ ಅವರು ಹೇಳುವಂತೆ ಎಚ್.ಡಿ.ರೇವಣ್ಣ ಮುಖ್ಯಮಂತ್ರಿ ಮಟೀರಿಯಲ್ ಅನ್ನೋದಾದರೆ, ಅನಾರೋಗ್ಯ ಇದ್ದ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಏಕೆ ಎಂಬ ಪ್ರಶ್ನೆ ಬರುತ್ತದೆ. ಜೆಡಿಎಸ್ ಸ್ವತಂತ್ರವಾಗಿ ಅಧಿಕಾರ ಹಿಡಿದಿದ್ದರೆ ಆಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದು ಯಾರಿಂದಲೂ ತಪ್ಪಿಸಲು ಆಗುತ್ತಿರಲಿಲ್ಲ. ಆದರೆ ಇದು ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ. ಎಂಬತ್ತು ಸ್ಥಾನದಲ್ಲಿ ಗೆದ್ದಿದ್ದ ಕಾಂಗ್ರೆಸ್ ನಿಂದ, ರೇವಣ್ಣ ಅವರೇ ಮುಖ್ಯಮಂತ್ರಿ ಆಗಲಿ ಎನ್ನಬಹುದಿತ್ತು. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಅಗಲಿ ಎಂದು ತಾವಾಗಿಯೇ ಬಿಟ್ಟುಕೊಟ್ಟು, ಮಲ್ಲಿಕಾರ್ಜುನ ಖರ್ಗೆ ಹೆಸರು ಮೇಲಕ್ಕೆ ಬಂದ ಮೇಲೆ ರೇವಣ್ಣ ಮೇಲೆ ಪ್ರೀತಿ ಬಂತಾ?
ಮೂರು ಪಕ್ಷದ್ದೂ ಒಂದೇ ಕಥೆ
'ದಲಿತ ಮುಖ್ಯಮಂತ್ರಿ' ಎಂಬುದನ್ನು ಪದೇ ಪದೇ ಚಾಲ್ತಿಗೆ ತರುವುದರ ಹಿಂದೆ ಏನು ಕಾರಣವಿದೆ? ಈ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಅಥವಾ ಬಿಜೆಪಿ ಮೂರು ಪಕ್ಷಗಳಿಗೂ ಅದೇನು ಪ್ರೀತಿ ಬಂದುಬಿಡುತ್ತದೋ ಅರ್ಥವಾಗಲ್ಲ. ಚುನಾವಣೆಗೆ ಮುನ್ನವೇ ಜೆಡಿಎಸ್ ನಿಂದ ಒಂದು ಘೋಷಣೆ ಮಾಡಲಾಗಿತ್ತು: ದಲಿತರೊಬ್ಬರನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಇನ್ನು ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ್ ಯಾವಾಗಿನಿಂದಲೋ ಸಿಎಂ ರೇಸ್ ನಲ್ಲಿ ಇದ್ದಾರೆ. ಬಿಜೆಪಿಯಲ್ಲಿ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ ಅಂಥವರಿದ್ದಾರೆ. ಮುಂಚೆಯೇ ಘೋಷಿಸಿ, ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ದಲಿತರನ್ನೇ ಮುಖ್ಯಮಂತ್ರಿ ಮಾಡುವುದಾಗಿ ಹೇಳಲಿ. ಖಂಡಿತಾ ಹೇಳಲ್ಲ. ಮುಂದೆ ಕಾಂಗ್ರೆಸ್ ಗೆ ಅವಕಾಶ ಸಿಕ್ಕರೆ ಡಿ.ಕೆ.ಶಿವಕುಮಾರ್ ರಂಥ ಒಕ್ಕಲಿಗ ನಾಯಕನ ಹೆಸರೇ ಮುಂಚೂಣಿಗೆ ಬರುತ್ತದೆ. ಜೆಡಿಎಸ್ ನಿಂದಲೂ ಒಕ್ಕಲಿಗ ಸಮುದಾಯ ಹಾಗೂ ಬಿಜೆಪಿಯಿಂದ ಲಿಂಗಾಯತ ಅಥವಾ ಬ್ರಾಹ್ಮಣ ಅಥವಾ ಒಕ್ಕಲಿಗರನ್ನು ಮುಂಚೂಣಿಗೆ ತರಲಾಗುತ್ತದೆ. ಏಕೆಂದರೆ, ದಲಿತರ ಮತಗಳಿಗಾಗಿ ಹೀಗೆ 'ದಲಿತ ಮುಖ್ಯಮಂತ್ರಿ' ಎಂಬ ಪದ ತೇಲಿ ಬಿಡಲಾಗುತ್ತದೆ.
ಮಲ್ಲಿಕಾರ್ಜುನ ಖರ್ಗೆ ಮೇಲೆ ಏಕಿಷ್ಟು ಪ್ರೀತಿ
ಇನ್ನು ಕರ್ನಾಟಕದ ಮುಖ್ಯಮಂತ್ರಿ ಆಗಿಲ್ಲ ಅನ್ನೋದು ಬಿಟ್ಟರೆ ಕಾಂಗ್ರೆಸ್ ನಿಂದ ಎಲ್ಲವನ್ನೂ (ಸ್ಥಾನ, ಮಾನ, ಗೌರವ, ಅಧಿಕಾರ) ಪಡೆದಿರುವ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಆಗಾಗ ಮಾತ್ರ ಕರುಣೆ- ಕಕ್ಕುಲಾತಿ ಮೂಡುತ್ತದಲ್ಲಾ ಏಕೆ? ಹಾಗೇ ಒಮ್ಮೆ ಇತಿಹಾಸದ ಪುಟಗಳನ್ನು ನೋಡಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಏನು ಅನ್ಯಾಯ ಆಗಿದೆ? ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ ಅನ್ನೋದು ಬಿಟ್ಟರೆ, ಪಕ್ಷದೊಳಗೆ- ಸರಕಾರದಲ್ಲಿ ಅತ್ಯಂತ ಮುಖ್ಯ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕೇಂದ್ರದಲ್ಲೂ ಪ್ರಭಾವಿ ಖಾತೆಯನ್ನು ಹೊಂದಿದ್ದರು. ಹಾಗಂತ ಅವರು ಮುಖ್ಯಮಂತ್ರಿ ಆಗೋದು ಬೇಡ ಅಂತಲ್ಲ. ಆದರೆ ಅವರಿಗೆ ಅನ್ಯಾಯ ಆಗಿದೆ ಎಂದು ವಾದಿಸುವವರಿಗೆ ಗೊತ್ತಾಗಬೇಕಾದದ್ದು ಏನೆಂದರೆ, ಸಿಎಂ ಗಾದಿ ಮೇಲೆ ಖರ್ಗೆ ಕೂತಿಲ್ಲ, ಅಷ್ಟೇ. ಉಳಿದಂತೆ ಎಲ್ಲ ಅಧಿಕಾರ- ಹುದ್ದೆಗೆ ಅವರು ಏರಿದ್ದಾರೆ. ಯಾವಾಗೆಲ್ಲ ಕಾಂಗ್ರೆಸ್ ವಿರುದ್ಧ ದಲಿತರನ್ನು ಎತ್ತಿ ಕಟ್ಟಬೇಕೋ ಆಗ ಖರ್ಗೆ ಹೆಸರನ್ನು ತರಲಾಗುತ್ತದೆ. ಅವರ ಮೇಲೆ ಅಷ್ಟು ಪ್ರೀತಿ ಇದ್ದರೆ ಕಾಂಗ್ರೆಸ್ ಹೈ ಕಮ್ಯಾಂಡ್ ಜತೆ ಮಾತನಾಡಿ, ಕುಮಾರಸ್ವಾಮಿ ಅವರು ಸ್ವತಃ ಸಿಎಂ ಹುದ್ದೆಯನ್ನು ಖರ್ಗೆ ಅವರಿಗೆ ಬಿಟ್ಟುಕೊಡುತ್ತಾರಾ?