2G ಹಗರಣ ಕೇಸ್ ದಿಕ್ಕು ತಪ್ಪಿದ್ದೆಲ್ಲಿ?: ತೀರ್ಪಿನ ಮುಖ್ಯಾಂಶ
ಸಿಬಿಐ ವಿಶೇಷ ಕೋರ್ಟ್ ನಿಂದ ಬಂದಿರುವ 2G ಹಗರಣದ ತೀರ್ಪು 1522 ಪುಟಗಳಿವೆ. ನ್ಯಾ.ಒ.ಪಿ.ಸೈನಿ ತೀರ್ಪು ನೀಡಿದ್ದಾರೆ. ಇನ್ನು ತೀರ್ಪಿನ ಒಟ್ಟಾರೆ ವಿಷಯ ತಿಳಿಸಲಾಗದಿದ್ದರೂ ಕೆಲವು ಮುಖ್ಯ ಅಂಶಗಳ ಕಡೆಗೆ ಗಮನ ಸೆಳೆಯುವ ಪ್ರಯತ್ನ ಇದು. ಸರಕಾರಿ ವ್ಯವಸ್ಥೆಯನ್ನು ಜನರ ಮಧ್ಯೆ ತಂದು ನಿಲ್ಲಿಸುವಂಥ, ಮುಜುಗರಕ್ಕೆ ಈಡಾಗುವಂಥ ಪರಿಸ್ಥಿತಿ ಏಕಾಗುತ್ತದೆ ಎಂಬುದು ಇದರಿಂದ ತಿಳಿಯುತ್ತದೆ.
2ಜಿ ಸ್ಪೆಕ್ಟ್ರಂ, ಏನಿದು ಹಗರಣ? ಇಲ್ಲಿದೆ ಟೈಮ್ ಲೈನ್
ಸಿಬಿಐ ವಿಶೇಷ ಕೋರ್ಟ್ ನ ತೀರ್ಪಿನಿಂದ ಹಗರಣದ ಸುಳಿಗೆ ಸಿಲುಕಿದ್ದ ಕೇಂದ್ರದ ಮಾಜಿ ಸಚಿವ ಎ.ರಾಜಾ, ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೊಳಿ ಖುಲಾಸೆಯಾಗಿದ್ದಾರೆ. ಆದರೆ ಅವರ ತಪ್ಪಿಲ್ಲ ಎಂದೆನಿಸುವಂಥ ಅಂಶಗಳು ಯಾವುವು? ಯಾವ ಕಾರಣಕ್ಕೆ ಇಂಥದ್ದೊಂದು ತೀರ್ಪು ಬಂದಿದೆ ಎಂಬ ವಿವರಗಳಿವು.
ಎ. ರಾಜಾಗೆ ಸಿಕ್ಕಿದ್ದು 3 ಸಾವಿರ ಕೋಟಿ ರು ಅಷ್ಟೇನಾ?
ಆರೋಪ ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ಹೀನಾಯವಾಗಿ ಸೋತಿದೆ ಎಂಬ ಅಂಶವನ್ನು ನ್ಯಾ.ಸೈನಿ ಪ್ರಸ್ತಾವಿಸಿದ್ದಾರೆ. ಅಂದಹಾಗೆ ಇದು ಕೋರ್ಟ್ ನ ಪರಿಭಾಷೆಯಲ್ಲಿರುವುದರಿಂದ ಅದನ್ನು ಸರಳ ಮಾಡಿ ತಿಳಿಸುವ ಪ್ರಯತ್ನವಾಗಿದೆ. ಹಾಗಂತ ಅರ್ಥ- ಉದ್ದೇಶ ಆಚೀಚೆ ಆಗುವುದಿಲ್ಲ. ಒಂದೊಂದೇ ಅಂಶಗಳು ಎಷ್ಟು ಆಸಕ್ತಿಕರವಾಗಿದೆಯೋ ಮುಂದೆ ಓದುತ್ತಾ ಹೋಗಿ.
ಅಧಿಕಾರಿಗಳ ಗೊಂದಲ
ದಾಖಲೆಗಳ ಆಧಾರದಲ್ಲಿ ಹೇಳುವುದಾದರೆ ಡಿಪಾರ್ಟ್ ಮೆಂಟ್ ಆಫ್ ಟೆಲಿಕಾಂ (ದೂರಸಂಪರ್ಕ ಇಲಾಖೆ) ಮಾಡಿರುವ ಗೊಂದಲ ಸ್ಪಷ್ಟವಾಗುತ್ತದೆ. ಯುಎಎಸ್ ಎಲ್ ಅರ್ಜಿಯ ಪ್ರಕ್ರಿಯೆಯಲ್ಲಿ, ಲೈಸೆನ್ಸ್ ಕೊಡುವ ಸಂದರ್ಭದಲ್ಲಿ ಅಧಿಕಾರಿಗಳು ಗೊಂದಲ ಮಾಡಿದ್ದಾರೆ. ಅವರ ಜವಾಬ್ದಾರಿ ಸರಿಯಾಗಿ ನಿರ್ವಹಿಸದ ಕಾರಣಕ್ಕೆ ಆಗಿರುವಂಥದ್ದು.
ಅಧಿಕೃತ ವ್ಯವಹಾರ ಹೇಗೆ ಮಾಡಬೇಕು ಎಂಬ ಸ್ಪಷ್ಟತೆಯೇ ಇವರಿಗಿಲ್ಲ. ಅಷ್ಟೇ ಅಲ್ಲ ಲಿಖಿತ ದಾಖಲೆಗಳು ನಮ್ಮ ಜವಾಬ್ದಾರಿಯಲ್ಲ ಎನ್ನುವ ಮೂಲಕ ಬಹಳ ಅಧಿಕಾರಿಗಳು ಚಂಚಲಬುದ್ಧಿ ಹಾಗೂ ಅಂಜುಬುರುಕತನ ತೋರಿಸಿದ್ದಾರೆ. ತಾವೇ ತಯಾರಿಸಿದ ದಾಖಲೆ ತಮ್ಮದಲ್ಲ ಎಂದಿದ್ದಾರೆ. ಮತ್ತೊಬ್ಬರ ಮೇಲೆ ತಪ್ಪು ಹೊರಿಸಿ ಅಧಿಕೃತ ದಾಖಲೆಗೆ ಮೌಖಿಕ ಹೇಳಿಕೆ ನೀಡಿದ್ದಾರೆ.
ಆರೋಪಕ್ಕೆ ಸಾಕ್ಷ್ಯವಿಲ್ಲ
ಎ.ರಾಜಾ ಅವರು ಇನ್ನೂರು ಕೋಟಿ ರುಪಾಯಿಯನ್ನು ಕಾನೂನು ಬಾಹಿರ ಕೊಡುಗೆಯಾಗಿ ನೀಡಿದ್ದಾರೆ ಎಂದು ಆರೋಪ ಮಾಡಿದ್ದು, ಅದಕ್ಕೆ ಪೂರಕ ಸಾಕ್ಷ್ಯಗಳಿಲ್ಲ. ಆದ್ದರಿಂದ ಕಲೈಂಜರ್ ಟಿವಿ (ಪ್ರೈ) ಲಿಮಿಟೆಡ್ ಗೆ ಎ.ರಾಜಾ ಹಣ ತೊಡಗಿಸಿದ್ದಾರೆ ಯಾವುದೇ ಸಾಕ್ಷ್ಯವೇ ಇಲ್ಲ. ಎ.ರಾಜಾ ಅವರು ಇನ್ನೂರು ಕೋಟಿ ವರ್ಗಾವಣೆ ಮಾಡಿದ್ದಾರೆ ಎಂಬುದಕ್ಕೆ ಒಪ್ಪುವಂಥ ದಾಖಲೆ ಇಲ್ಲ.
ಸಾಂದರ್ಭಿಕ ಸಾಕ್ಷ್ಯ
ಪ್ರಾಸಿಕ್ಯೂಷನ್ ಪರ ವಕೀಲರು ಇದೊಂದು ದೊಡ್ಡ ಮಟ್ಟದ ರಾಜಕೀಯ ಭ್ರಷ್ಟಾಚಾರ ಎಂದು ವಿಚಾರಣೆ ಕೈಗೆತ್ತಿಕೊಂಡಿತು. ಆದರೆ ಇಲ್ಲಿ ಮೌಖಿಕ ಅಥವಾ ದಾಖಲೆಯ ಯಾವುದೇ ನೇರ ಸಾಕ್ಷ್ಯಗಳಿಲ್ಲ. ಇಂಥ ಸನ್ನಿವೇಶದಲ್ಲಿ ವಿಚಾರವನ್ನು ದಾಕಲೆಗಳ ಪ್ರಕಾರ ಸಿಗುವ ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲೇ ನಿರ್ಧರಿಸಬೇಕು.
ಪ್ರಾಸಿಕ್ಯೂಷನ್ ಸುಮ್ಮನಾಗಿದೆ
ಇಂಥ ಪ್ರಕರಣದಲ್ಲಿ ವಿಚಾರಗಳನ್ನು ಸಾಂದರ್ಭಿಕ ಹಿನ್ನೆಲೆಯಲ್ಲಿ ನೋಡಬೇಕು. ಯಾರನ್ನೇ ಆಗಲಿ ಸಾಕ್ಷ್ಯವಿಲ್ಲದೆ ಅಥವಾ ಒಪ್ಪಬಹುದಾದ ಸಾಕ್ಷ್ಯವಿಲ್ಲದೆ ಅಪರಾಧಿ ಎನ್ನಲು ಸಾಧ್ಯವಿಲ್ಲ. ಕಟಕಟೆಯಲ್ಲಿ ನಿಲ್ಲುವ ಸಾಕ್ಷಿಗಳು ಎಲ್ಲ ಸನ್ನಿವೇಶವನ್ನೂ ವಿವರಿಸಬಹುದು. ಎಲ್ಲವೂ ದಾಖಲೆಯಲ್ಲಿರುವ ಸಾಕ್ಷ್ಯದಿಂದಲೇ ತಿಳಿಸಲಾಗಿದೆ. ದಾಖಲೆಗಳಲ್ಲಿನ ಕೊರತೆಗಳನ್ನು ಸಾಕ್ಷಿಗಳು ವಿವರಿಸುವಂತೆ ಕೇಳುವ ಅವಕಾಶ ಕೂಡ ಪ್ರಾಸಿಕ್ಯೂಷನ್ ಬಳಸದೆ ಸುಮ್ಮನಾಗಿದೆ.
ತಪ್ಪಿತಸ್ಥರು ಅನ್ನಲು ಸಾಧ್ಯವಿಲ್ಲ
ಇದು ರಾಜಕೀಯ ಭ್ರಷ್ಟಾಚಾರ ಪ್ರಕರಣ ಎಂದು ನಿಯೋಜಕರು ಹೇಳಿದ್ದಾರೆ. ಆದರೆ ಇಲ್ಲಿ ಸಾಕ್ಷ್ಯಗಳ ಕೊರತೆ ಇದೆ. ಇನ್ನೂ ಹೇಳಬೇಕು ಅಂದರೆ ದಾಖಲೆಗಳ ಪ್ರಕಾರ ಸಾಕ್ಷ್ಯವೇ ಇಲ್ಲ. ಇದು ಹೈ ಪ್ರೊಫೈಲ್ ಕೇಸ್ ಇರಬಹುದು. ಆದರೆ ಕಾನೂನಿನ ಪ್ರಕಾರ ಸಾಕ್ಷ್ಯವಿಲ್ಲದೆ ತಪ್ಪಿತಸ್ಥರು ಎನ್ನಲು ಸಾಧ್ಯವಿಲ್ಲ.
ನಂಬಿಕೆಗೆ ಅರ್ಹವಾಗಿಲ್ಲ
ಈ ಪ್ರಕರಣ ನಿಂತಿದ್ದಿದ್ದು ದೂರ ಸಂಪರ್ಕ ಇಲಾಖೆಯ ಅಧಿಕಾರಿಗಳು ಹಾಗೂ ಆರೋಪ ಹೊತ್ತಿದ್ದ ಕಂಪೆನಿಗಳ ಮೇಲೆ. ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯೇ ನಂಬಿಕೆಗೆ ಅರ್ಹವಾಗಿಲ್ಲ. ಇನ್ನು ಆರೋಪಿ ಸ್ಥಾನದಲ್ಲಿರುವ ಕಂಪೆನಿಗಳು ನೀಡಿದ ಹೇಳಿಕೆಗಳು ಪ್ರಾಸಿಕ್ಯೂಷನ್ ನ ವಾದ ಸರಣಿಗೆ ಪೂರಕವಾಗಿಲ್ಲ.
ಸಾರ್ವಜನಿಕರ ದೃಷ್ಟಿಕೋನಕ್ಕೆ ಅವಕಾಶವಿಲ್ಲ
ಕಳೆದ ಏಳು ವರ್ಷಕ್ಕೂ ಹೆಚ್ಚು ಕಾಲ ಬೇಸಿಗೆಯೂ ಸೇರಿದಂತೆ ಎಲ್ಲ ಕಾರ್ಯ ನಿರ್ವಹಿಸುವ ದಿನಗಳಲ್ಲಿ ಬೆಳಗ್ಗೆ ಹತ್ತರಿಂದ ಸಂಜೆ ಐದರವರೆಗೆ ಇಲ್ಲಿ ಕೂತು ಕಾದಿದ್ದೇನೆ. ಕಾನೂನಿನ ಪ್ರಕಾರ ಒಪ್ಪಬಹುದಾದ ಸಾಕ್ಷ್ಯ ಸಿಗಬಹುದಾ ಎಂದು ಕಾದಿದ್ದೇನೆ. ಆದರೆ ಎಲ್ಲವೂ ವ್ಯರ್ಥವಾಯಿತು. ಒಬ್ಬೇ ಒಬ್ಬರು ಬರಲಿಲ್ಲ. ಎಲ್ಲರೂ ವದಂತಿ, ಗಾಸಿಪ್ ಮತ್ತು ಊಹೆಗಳ ಮೇಲೆ ಜನರ ದೃಷ್ಟಿಯಿಂದ ಯೋಚಿಸುತ್ತಿದ್ದಾರೆ. ನ್ಯಾಯಾಂಗ ಕಲಾಪದಲ್ಲಿ ಸಾರ್ವಜನಿಕರ ದೃಷ್ಟಿಕೋನಕ್ಕೆ ಅವಕಾಶವಿಲ್ಲ್: ನ್ಯಾ.ಸೈನಿ.
ದಿಕ್ಕು ತಪ್ಪಿದ ಕೇಸ್
ಅಪಾರ ಉತ್ಸಾಹದಲ್ಲಿ ಕೇಸಿನ ವಿಚಾರಣೆ ಆರಂಭವಾಯಿತು. ಪ್ರಕರಣದ ವಿಚಾರಣೆ ಮುಂದುವರಿದಂತೆ ಪ್ರಾಸಿಕ್ಯೂಷನ್ ಏನನ್ನು ಸಾಬೀತು ಮಾಡಲು ಯತ್ನಿಸುತ್ತಿದೆ ಎಂಬ ಗೊಂದಲವಾಯಿತು. ಕೊನೆಕೊನೆಗೆ ಪ್ರಾಸಿಕ್ಯೂಷನ್ ಗುಣಮಟ್ಟ ಕುಸಿಯುತ್ತಾ ಸಂಪೂರ್ಣ ದಿಕ್ಕು ತಪ್ಪಿ ಹೋಯಿತು: ನ್ಯಾ.ಸೈನಿ.
ಹೀನಾಯವಾಗಿ ಸೋತ ಪ್ರಾಸಿಕ್ಯೂಷನ್
ಚಾರ್ಜ್ ಶೀಟ್ ನಲ್ಲಿ ದಾಖಲಾದ ಹಲ ಅಂಶಗಳು ವಾಸ್ತವವಾಗಿ ತಪ್ಪಾಗಿದ್ದವು. ಆರ್ಥಿಕ ಕಾರ್ಯದರ್ಶಿ ಪ್ರವೇಶ ಶುಲ್ಕದ ಪರಿಷ್ಕರಣೆಗೆ ಶಿಫಾರಸು ಮಾಡುತ್ತಾರೆ, ಲೆಟರ್ ಆಫ್ ಇಂಡೆಂಟ್ ನ ಅಂಶವು ರಾಜಾ ಅವರಿಂದ ತೆಗೆದುಹಾಕಲಾಗುತ್ತದೆ, ಟ್ರಾಯ್ ನಿಂದ ಪ್ರವೇಶ ಶುಲ್ಕ ಪರಿಷ್ಕರಣೆಗೆ ಶಿಫಾರಸು ಇತ್ಯಾದಿ. ಆದ್ದರಿಂದ ತುಂಬ ಚೆನ್ನಾಗಿ ರೂಪಿಸಿದ ಚಾರ್ಜ್ ಶೀಟ್ ನಲ್ಲಿನ ಆರೋಪವನ್ನು ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ಹೀನಾಯವಾಗಿ ಸೋತಿದೆ. -ನ್ಯಾ.ಸೈನಿ