2020ರ ನೋಟ: ರಾಜ್ಯ ರಾಜಕಾರಣದಲ್ಲಿ ಬೆಳಗಾವಿಯೇ ಸೂಪರ್ ಪವರ್!
ಬೆಳಗಾವಿ, ಡಿಸೆಂಬರ್ 14: ವಿಸ್ತೀರ್ಣದಲ್ಲಿ ಕರ್ನಾಟಕದ ಅತ್ಯಂತ ದೊಡ್ಡ ಜಿಲ್ಲೆ, ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆ ಹಾಗೂ ಗಡಿನಾಡು ಎಂದೇ ಖ್ಯಾತಿ ಪಡೆದಿರುವ ಬೆಳಗಾವಿ ಸದಾ ಸುದ್ದಿಯಲ್ಲಿರುವ ಜಿಲ್ಲೆಯಾಗಿದೆ. ಭಾಷೆ, ಗಡಿ ವಿಚಾರ, ರಾಜಕೀಯ, ನೀರು, ರೈತ ಹೋರಾಟಗಳಂತಹ ವಿಷಯಗಳಿಗೆ ಬೆಳಗಾವಿ ಪ್ರಚಲಿತದಲ್ಲಿರುತ್ತದೆ.
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಬೆಳಗಾವಿಯ ಪಾತ್ರ ಮಹತ್ವ ಪಡೆದಿರುವಂತಹದ್ದು. ಪ್ರಭಾವಿ ರಾಜಕೀಯ ಕುಟುಂಬಗಳು ಬೆಳಗಾವಿಯ ಅಧಿಪತ್ಯ ಹಿಡಿಯಲು ಸದಾ ಪ್ರಯತ್ನಿಸುತ್ತಿರುತ್ತಾರೆ. ಆ ಮೂಲಕ ರಾಜ್ಯ ರಾಜಕೀಯದಲ್ಲಿ ಪ್ರಭಾವ ಹೊಂದಲು ಬೆಳಗಾವಿಯಲ್ಲಿ ಅಧಿಪತ್ಯ ಸಾಧಿಸುವುದು ಪ್ರತಿಷ್ಠೆಯ ವಿಷಯವಾಗಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನದ ಆರಂಭ
ಕಳೆದ ವರ್ಷ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಹಾಗೂ ಬಿಜೆಪಿ ಸರ್ಕಾರ ರಚನೆಗೆ ಇದೇ ಬೆಳಗಾವಿ ರಾಜಕೀಯ ಪ್ರಮುಖ ಪಾತ್ರ ವಹಿಸಿತ್ತು. ಈ ಕಾರಣದಿಂದಲೇ ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಇಂದು ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿದೆ. ಬೆಳಗಾವಿ ಜಿಲ್ಲೆಗೆ ಹಿಂದೆಂದೂ ಸಿಗದಷ್ಟು ರಾಜಕೀಯ ಪ್ರಾತಿನಿಧ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಿಕ್ಕಿದೆ.
ಸುವರ್ಣಸೌಧದ ಮುಂದೆ ರೈತರ ಬೃಹತ್ ಹೋರಾಟ
ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಹುದ್ದೆ
ಪ್ರಮುಖವಾಗಿ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಅಚ್ಚರಿಯ ಬೆಳವಣಿಗೆಯಲ್ಲಿ ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ, ಸಾರಿಗೆ ಸಚಿವ ಸ್ಥಾನ ನೀಡಲಾಗಿದೆ. ಇನ್ನು ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣನರಾದ ರಮೇಶ್ ಜಾರಕಿಹೊಳಿಗೆ ಪ್ರಮುಖ ಜಲಸಂಪನ್ಮೂಲ ಖಾತೆ ಜವಾಬ್ದಾರಿ ವಹಿಸಲಾಗಿದೆ. ಅಲ್ಲದೇ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಇನ್ನು ಶಶಿಕಲಾ ಜೊಲ್ಲೆ ಅವರಿಗೆ ಮಹಿಳಾ ಕೋಟಾದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಶ್ರೀಮಂತ ಪಾಟೀಲ ಅವರಿಗೆ ಜವಳಿ ಖಾತೆ ನೀಡಲಾಗಿದೆ.
ಡೆಪ್ಯುಟಿ ಸ್ಪೀಕರ್ ಆಗಿ ಆನಂದ ಮಾಮನಿ
ಡೆಪ್ಯುಟಿ ಸ್ಪೀಕರ್ ಆಗಿ ಆನಂದ ಮಾಮನಿ, ಕೆಎಂಎಫ್ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ, ಪರಿಷತ್ ಸರ್ಕಾರದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ತಾಂಡಾ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಕುಡಚಿ ಶಾಸಕ ಪಿ.ರಾಜೀವ, ಅಂಬೇಡ್ಕರ್ ನಿಗಮದ ಅಧ್ಯಕ್ಷರಾಗಿ ರಾಯಭಾಗ ಶಾಸಕ ದುರ್ಯೋಧನ ಐಹೊಳೆ, ಒಳಚರಂಡಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಮಹೇಶ ಕುಮಟಳ್ಳಿ, ದೆಹಲಿ ವಿಶೇಷ ಪ್ರತಿನಿಧಿಯಾಗಿ ಶಂಕರಗೌಡ ಪಾಟೀಲ, ಕಾಡಾ ಅಧ್ಯಕ್ಷರಾಗಿ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಅವರಿಗೆ ಪ್ರಸ್ತುತ ಸರ್ಕಾರದಲ್ಲಿ ಸ್ಥಾನ ಸಿಕ್ಕಿವೆ. ಅಲ್ಲದೆ ರಾಜ್ಯಸಭಾ ಸದಸ್ಯರನ್ನಾಗಿ ಈರಣ್ಣ ಕಡಾಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಶಾಸಕ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಅವರನ್ನು ಆಯ್ಕೆ ಮಾಡಿದ್ದಲ್ಲದೇ ಸ್ಥಳೀಯ ಮೂವರು ಪಕ್ಷದ ಕಾರ್ಯಕರ್ತರಿಗೆ ನಿಗಮ ಮಂಡಳಿಯ ಜವಾಬ್ದಾರಿ ನೀಡಲಾಗಿದೆ.
ಬೆಳಗಾವಿ ಲೋಕಸಭಾ ಚುನಾವಣೆ: ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕೆ
ಪ್ರಾತಿನಿಧ್ಯ ಹಿಂದೆಂದೂ ಸಿಕ್ಕಿರಲಿಲ್ಲ
ರಾಜ್ಯದಲ್ಲೇ ಬೆಂಗಳೂರು ನಂತರ ಅತಿ ದೊಡ್ಡ ಜಿಲ್ಲೆ ಎಂಬ ಕೀರ್ತಿಗೆ ಬೆಳಗಾವಿ ಪಾತ್ರವಾಗಿದೆ. ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರವನ್ನು ಬೆಳಗಾವಿ ಹೊಂದಿದೆ. ಹೀಗಿದ್ದರೂ ಜಿಲ್ಲೆಗೆ ಇಷ್ಟೊಂದು ಪ್ರಮಾಣದಲ್ಲಿ ಪ್ರಾತಿನಿಧ್ಯ ಹಿಂದೆಂದೂ ಸಿಕ್ಕಿರಲಿಲ್ಲ. ದೊಡ್ಡ ಜಿಲ್ಲೆ ಆಗಿರುವ ಬೆಳಗಾವಿಗೆ ನಿರೀಕ್ಷೆಗೂ ಮೀರಿ ಈ ಸಲ ಸ್ಥಾನಮಾನ ಸಿಕ್ಕಿವೆ.
ವೇಗವಾಗಿ ಬೆಳೆಯುತ್ತಿರುವ ಜಿಲ್ಲೆ
ಉತ್ತರ ಕರ್ನಾಟಕದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಬೆಳಗಾವಿ ಕೂಡ ಒಂದು. ಜಿಲ್ಲೆಯ ಅಭಿವೃದ್ಧಿಗೆ ಈ ಎಲ್ಲರೂ ಶ್ರಮಿಸಬೇಕು. ಎಲ್ಲ ಕ್ಷೇತ್ರಗಳಲ್ಲಿ ಜಿಲ್ಲೆ ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ಅಧಿಕಾರದಲ್ಲಿರುವ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಶ್ರಮಿಸಬೇಕು ಎಂಬುವುದು ಕೂಡ ಈ ಭಾಗದ ಜನರ ನಿರೀಕ್ಷೆಯಾಗಿದೆ.
ರಾಜ್ಯಮಟ್ಟದ ಇಲಾಖೆಗಳು ಸ್ಥಳಾಂತರವಾಗಬೇಕು
ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಸುವರ್ಣ ಸೌಧವನ್ನು ಕ್ರಿಯಾಶೀಲವಾಗಿಸಬೇಕಿದೆ. ಈಗಾಗಲೇ ಅನೇಕ ಇಲಾಖೆಗಳ ಕಚೇರಿ ಸ್ಥಳಾಂತರ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದ ಜೊತೆಗೆ ರಾಜ್ಯ ಮಟ್ಟದ ಇಲಾಖೆಗಳ ಕಚೇರಿಗಳನ್ನು ಇಲ್ಲಿ ಸ್ಥಳಾಂತರವಾಗಬೇಕಿದೆ. ಅಂದಾಗ ಮಾತ್ರ ಸುವರ್ಣ ಸೌಧ ನಿರ್ಮಾಣ ಸಾರ್ಥಕವಾಗುತ್ತದೆ.
ಪ್ರವಾಹ ಹಾಗೂ ಅತಿವೃಷ್ಟಿ
ಈ ನಿಟ್ಟಿನಲ್ಲಿ ಅಧಿಕಾರದಲ್ಲಿರುವ ಜಿಲ್ಲೆಯ ನಾಯಕರು ಸರ್ಕಾರದ ಗಮನ ಸೆಳೆಯಬೇಕಿದೆ. ಪ್ರವಾಹ ಹಾಗೂ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಜನರ ಕಣ್ಣೀರು ಒರೆಸುವ ಕೆಲಸಕ್ಕೂ ನಮ್ಮ ನಾಯಕರು ಮುಂದಾಗಬೇಕು. ಆಗ ಮಾತ್ರ ರಾಜಕೀಯ ಪ್ರಾತಿನಿಧ್ಯದ ಲಾಭ ಜಿಲ್ಲೆಗೆ ಸಿಕ್ಕಂತಾಗುತ್ತದೆ.
ಕಾಂಗ್ರೆಸ್ ನಿಂದಲೂ ಪ್ರಾತಿನಿಧ್ಯ
ಬೆಳಗಾವಿಯನ್ನು ಶಕ್ತಿ ಕೇಂದ್ರ ಮಾಡಲು ಒಂದೆಂಡೆ ಕಮಲ ನಾಯಕರು ಹೆಚ್ಚಿನ ಪ್ರಾತಿನಿಧ್ಯ ನೀಡಿದರೆ ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಕೂಡ ಸುಮ್ಮನೆ ಕುಳಿತಿಲ್ಲ. ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅಂಜಲಿ ನಿಂಬಾಳ್ಕರ್ ಅವರಿಗೆ ಕೆಪಿಸಿಸಿ ವಕ್ತಾರರ ಜವಾಬ್ದಾರಿ ನೀಡಲಾಗಿದೆ.