Flashback 2019; ಟಾಪ್ 10 ಟ್ರೆಂಡಿಂಗ್ ಸುದ್ದಿಗಳು
ಮಹತ್ವದ ನಿರ್ಣಯಗಳಿಗೆ ಸಾಕ್ಷಿಯಾದ ವರ್ಷ 2019. ದೇಶದಲ್ಲಿ ಹಲವು ಬದಲಾವಣೆಗಳನ್ನು ತಂದ ವರ್ಷ ಕೂಡ 2019. ಈ ವರ್ಷ ಏನೇನೆಲ್ಲಾ ಘಟನೆಗಳು ನಡೆದವು? ಯಾವ ಘಟನೆ ಜನರನ್ನು ಸೆಳೆದವು? ಯಾವ ಪ್ರಮುಖ ಸಂಗತಿಗಳು ಈ ವರ್ಷ ದಾಖಲಾದವು? ರಾಜಕೀಯ ಸ್ಥಿತ್ಯಂತರ, ಪ್ರಾಕೃತಿಕ ವಿಕೋಪಗಳು, ಮಹತ್ವದ ಚಂದ್ರಯಾನ 2, ಈ ವರ್ಷ ಏನೆಲ್ಲಾ ನಡೆದಿವೆ...
2019ರಲ್ಲಿ ಇಂಟರ್ ನೆಟ್ ನಲ್ಲಿ ಟ್ರೆಂಡ್ ಆದ ಸುದ್ದಿಗಳು ಸಾಕಷ್ಟಿವೆ. ಅವುಗಳಲ್ಲಿ ಟಾಪ್ 10 ಟ್ರೆಂಡಿಂಗ್ ಸುದ್ದಿಗಳನ್ನು ಇಲ್ಲಿ ನೀಡಲಾಗಿದೆ.
#LoksabhaElectionResult
17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಈ ವರ್ಷದ ನ್ಯೂಸ್ ವಿಭಾಗದ ಟಾಪ್ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಗಳಿಸಿದೆ. ಬಿಜೆಪಿ ಸ್ವತಂತ್ರವಾಗಿ 303 ಕ್ಷೇತ್ರಗಳಲ್ಲಿ, ಒಟ್ಟಾರೆ ಎನ್.ಡಿ ಎ ಮೈತ್ರಿ ಕೂಟ 353 ಸೀಟು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 2ನೇ ಬಾರಿಗೆ ನರೇಂದ್ರ ಮೋದಿ ಭಾರತದ ಪ್ರಧಾನಿಯಾದರು.
ಫ್ಲಾಶ್ ಬ್ಯಾಕ್ 2019; ಜನ ಹೆಚ್ಚು ಓದಿದ ಟಾಪ್ 10 ಒನ್ ಇಂಡಿಯಾ ಕನ್ನಡ ಸುದ್ದಿಗಳು
#chandrayana 2
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಕೊನೆ ಕ್ಷಣದಲ್ಲಿ ಕೈಕೊಟ್ಟಿತು. ವಿಕ್ರಂ ಲ್ಯಾಂಡರ್ ಕೊನೆಯ ನಿರ್ಣಾಯಕ ಕ್ಷಣದಲ್ಲಿ ಸಂವಹನ ಕಡಿತ ಉಂಟಾಗಿ ತೀವ್ರ ನಿರಾಸೆ ಎದುರಾಯಿತು. ಸೆಪ್ಟೆಂಬರ್ 2ರಂದು ಆರ್ಬಿಟರ್ ನಿಂದ ವಿಕ್ರಮ್ ನನ್ನು ಬೇರ್ಪಡಿಸಲಾಯಿತು. ಆದರೆ, ಸೆಪ್ಟೆಂಬರ್ 7ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ವಿಕ್ರಮ್ ಲ್ಯಾಂಡಿಂಗ್ ಆಗುವಾಗ ಸಂಪರ್ಕ ಕಳೆದುಕೊಂಡಿತು. ಶೇ 95ರಷ್ಟು ಕಾರ್ಯ ಸಾಧಿಸಿತ್ತು. ಇಸ್ರೋದ ಈ ಸಾಧನೆಯನ್ನು ನಾಸಾ ಹಾಗೂ ಇಡೀ ಭಾರತವೇ ಕೊಂಡಾಡಿತ್ತು.
#article370
ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಅನ್ನು ರದ್ದುಗೊಳಿಸಿತು. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಲಾಯಿತು. ಕೇಂದ್ರ ಸರ್ಕಾರದ ಈ ನಡೆ ದೇಶದಾದ್ಯಂತ ಬಹಳ ಚರ್ಚೆಗೆ ಕಾರಣವಾಗಿತ್ತು. ಪಾಕಿಸ್ತಾನ ಈ ವಿಷಯವನ್ನು ಇಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ದೊಡ್ಡ ವಿಷಯವನ್ನಾಗಿ ಮಾಡಲು ಹೊರಟಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
Flashback 2019: ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪುಗಳು
#Pmkisanyojna
ದೇಶದ ಸಣ್ಣ ಹಿಡುವಳಿ ರೈತರಿಗೆ ವಾರ್ಷಿಕವಾಗಿ 6 ಸಾವಿರ ರುಪಾಯಿ ಪ್ರೋತ್ಸಾಹ ಧನ ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು. ಉತ್ತರಪ್ರದೇಶದ ಗೋರಖ್ ಪುರ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇಶದ ಅನೇಕ ರೈತರೊಂದಿಗೆ ಸಂವಾದ ನಡೆಸಿದರು. ಕರ್ನಾಟಕದ ಇಬ್ಬರು ರೈತರೊಂದಿಗೆ ಪ್ರಧಾನಿ ಸಂವಾದ ನಡೆಸಿದರು. ಪುತ್ತೂರಿನ ಜಗನ್ನಾಥ್ ಭಟ್ ಹಾಗೂ ತುಮಕೂರಿನ ಮಹೇಶ್ ಎಂಬ ರೈತರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಸಂವಾದ ನಡೆಸಿದರು.
#maharashtraassemblyelections
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಬಹುಮತಕ್ಕೆ ಬೇಕಾದ ಅಂಕಿ ಅಂಶ ಗಳಿಸಲಿಲ್ಲ. ಬಿಜೆಪಿಯ ಮಿತ್ರಪಕ್ಷವಾಗಿದ್ದ ಶಿವಸೇನಾ ಬಿಜೆಪಿ ಜತೆ ಮೈತ್ರಿ ಮುರಿದುಕೊಂಡಿತು. ಹೀಗಾಗಿ ರಾಷ್ಟ್ರಪತಿ ಆಡಳಿತ ಹೇರಲಾಯಿತು. ಆದರೆ ರಾತ್ರೋ ರಾತ್ರಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯಿತು. ಇದು ಇಡೀ ದೇಶವೇ ಮಹಾರಾಷ್ಟ್ರದತ್ತ ತಿರುಗಿ ನೋಡುವಂತೆ ಮಾಡಿತು. ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್, ಉಪ ಮುಖ್ಯಮಂತ್ರಿಯಾಗಿ ಎನ್ ಸಿಪಿಯ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ ಬಹುಮತ ಸಾಬೀತು ಪಡಿಸಲು ಆಗಲಿಲ್ಲ. ಮೂರೇ ದಿನಕ್ಕೆ ಸರ್ಕಾರ ಪತನವಾಯಿತು. ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುವಲ್ಲಿ ಸಫಲವಾಯಿತು. ಶಿವ ಸೇನೆಯ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಸಿಎಂ ಆದರು.
Flashback 2019; ದೇಶವನ್ನು ಬೆಚ್ಚಿ ಬೀಳಿಸಿದ ಘಟನೆಗಳು
#haryanaassemblyelectionresults
90 ವಿಧಾನಸಭಾ ಕ್ಷೇತ್ರದ ಹರಿಯಾಣದಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯಲಿಲ್ಲ. ಹೀಗಾಗಿ ಹರಿಯಾಣದಲ್ಲಿ ಬಿಜೆಪಿ-ಜೆಪಿಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಮನೋಹರ್ ಲಾಲ್ ಖಟ್ಟರ್ 2ನೇ ಬಾರಿಗೆ ಮುಖ್ಯಮಂತ್ರಿಯಾದರು. ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ನೀಡಿದ ಜೆಪಿಪಿ ಪಕ್ಷದ ದುಷ್ಯಂತ್ ಚೌಟಾಲಾ ಉಪ ಮುಖ್ಯಮಂತ್ರಿಯಾದರು.
#pulwamaattack
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರದಲ್ಲಿ ನಡೆದ ರಣಹೇಡಿಗಳ ಹೇಯಕೃತ್ಯದಿಂದ 44 ಸೈನಿಕರು ಹುತಾತ್ಮರಾದರು. ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರ ಸಿಆರ್ ಪಿಎಫ್ ಯೋಧರಿದ್ದ ಬಸ್ ಗೆ ಸ್ಫೋಟಕ ತುಂಬಿದ ಕಾರ್ ಅನ್ನು ಡಿಕ್ಕಿ ಹೊಡೆಸಿದ ಪರಿಣಾಮ ಸಂಭವಿಸಿದ ಭೀಕರ ಸ್ಫೋಟದಲ್ಲಿ 44 ಯೋಧರು ವೀರ ಮರಣವನ್ನಪ್ಪಿದ್ದರು.ಈ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಯೋಧ ಗುರು ಕೂಡ ಹುತಾತ್ಮರಾದರು.
#cyclonefani
ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಫೋನಿ ಚಂಡಮಾರುತ ಎದ್ದಿತ್ತು. ಇಡೀ ಒಡಿಶಾವನ್ನು ಅಲ್ಲೋಲಕಲ್ಲೋಲ ಮಾಡಿತು. ಲಕ್ಷಾಂತರ ಜನರನ್ನು ಸ್ಥಳಾಂತರ ಮಾಡಲಾಯಿತು. ಈ ಚಂಡಮಾರುತದ ಅಬ್ಬರಕ್ಕೆ ಒಡಿಶಾದಲ್ಲಿ 60 ಕ್ಕೂ ಹೆಚ್ಚು ಜನ ಮೃತರಾದರು. 'ಫೋನಿ' ಚಂಡಮಾರುತಕ್ಕೆ ಸಂಬಂಧಿಸಿದಂತೆ ನಾಸಾ ಚಿತ್ರಗಳನ್ನು ಬಿಡುಗಡೆ ಮಾಡಿತು. ಈ ಸಂದರ್ಭದಲ್ಲಿ ತೆಗೆಯಲಾದ ಚಿತ್ರ ಫೋನಿಗೂ ಮೊದಲು ಭುವನೇಶ್ವರ ಮತ್ತು ಕಟಕ್ ಹೇಗಿದ್ದವು, ಫೋನಿ ನಂತರ ಹೇಗಾದವು ಎಂಬುದನ್ನು ತೋರಿಸಿಕೊಟ್ಟಿತು. ಒಡಿಶಾ ರಾಜ್ಯವೊಂದಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಯಿತು.
#ayodhyaverdict
ಅಯೋಧ್ಯೆಯ ರಾಮಮಂದಿರದ ಕುರಿತು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನವೆಂಬರ್ 09 ರಂದು ಪ್ರಕಟಗೊಂಡಿತು. ವಿವಾದಿತ ಭೂಮಿಯನ್ನು ಸರ್ಕಾರೇತರ ಸಂಸ್ಥೆಗೆ ನೀಡಲಾಗಿದ್ದು, ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ನೀಡುವ ಹೊಣೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿತ್ತು. ಅಕ್ಟೋಬರ್ ತಿಂಗಳಿನಲ್ಲಿ 40 ದಿನಗಳ ಪ್ರತಿದಿನದ ವಿಚಾರಣೆ ಬಳಿಕ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠವು ನವೆಂಬರ್ 9ರ ಬೆಳಗ್ಗೆ 10.30ಕ್ಕೆ ಅಂತಿಮ ತೀರ್ಪು ನೀಡಿದೆ. 2010ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ 14ಕ್ಕೂ ಅಧಿಕ ಮೇಲ್ಮನವಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿತ್ತು. ಅಲಹಾಬಾದ್ ಕೋರ್ಟ್ ಆದೇಶವನ್ನು ಬದಿಗೊತ್ತಿ, ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ವಿವಾದಿತ ಭೂಮಿ ಹಾಗೂ ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಬೋರ್ಡ್ ಗೆ ಪ್ರತ್ಯೇಕವಾಗಿ 5 ಎಕರೆ ಭೂಮಿ ನೀಡುವ ಹೊಣೆ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.
#amazonforestfire
ಅಮೇಜಾನ್ ಕಾಡು ಜಾಗತಿಕ ತಾಪಮಾನವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವಿಶ್ವದ ಶೇ.20ರಷ್ಟು ಆಮ್ಲಜನಕವನ್ನು ಈ ಅಮೆಜಾನ್ ಕಾಡು ಹೊರಸೂಸುತ್ತದೆ. ಅಪಾರ ಹಾಗೂ ಅಪರೂಪದ ಸಸ್ಯ ಮತ್ತು ಪ್ರಾಣಿ ಜಗತ್ತಿಗೆ ಆಶ್ರಯ ನೀಡಿರುವ ಅಮೇಜಾನ್ ಅರಣ್ಯ ಹೊತ್ತಿ ಉರಿಯಿತು. ಬ್ರೆಜಿಲ್, ಪೆರು, ಕೊಲಂಬಿಯಾ, ಫ್ರಾನ್ಸ್, ವೆನೆಜುವೆಲಾ, ಈಕ್ವೆಡಾರ್, ಗಯಾನಾ, ಬೊಲಿವಿಯಾ ಮತ್ತು ಸುರಿನೇಮ್ ದೇಶಗಳಲ್ಲಿ ಹರಡಿಕೊಂಡಿರುವ ಅಮೇಜಾನ್ ಕಾಡಿನಲ್ಲಿ ಉಂಟಾದ ಕಾಳ್ಗಿಚ್ಚು ಭಾರಿ ಪ್ರಮಾಣದ ಅನಾಹುತ ಸೃಷ್ಟಿಸಿತು.