2017ರಿಂದ ಆರಂಭವಾದದ್ದು ಡಿಕೆಶಿ ಜೈಲು ಸರಳುಗಳ ಹಿಂದೆ ನಿಲ್ಲುವ ತನಕ
ಕರ್ನಾಟಕ ಕಾಂಗ್ರೆಸ್ ನಲ್ಲಿ ಪ್ರಭಾವಿ ಹಾಗೂ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕ, ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರನ್ನು ಮಂಗಳವಾರ ರಾತ್ರಿ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಬಂಧಿಸಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಅಂತಲೇ ಬಿಂಬಿತರಾಗಿದ್ದ ಶಿವಕುಮಾರ್ ಅವರ ಕನಸಿಗೆ ಇದರಿಂದ ಹಿನ್ನಡೆ ಆಗಬಹುದಾ? ಅದಕ್ಕೆ ಕಾಲವೇ ಉತ್ತರಿಸಬೇಕು.
ಎರಡು ವರ್ಷಗಳ (2017) ಹಿಂದೆ ಗುಜರಾತ್ ರಾಜ್ಯಸಭೆ ಚುನಾವಣೆ ನಡೆಯುವ ವೇಳೆ ಅಲ್ಲಿಂದ ಅಹ್ಮದ್ ಪಟೇಲ್ ಸ್ಪರ್ಧಿಸಿದ್ದರು. ಅಹ್ಮದ್ ಪಟೇಲ್ ಅಂದರೆ ಇಡೀ ಕಾಂಗ್ರೆಸ್ ನಲ್ಲಿ ಗೊತ್ತಿರುವ ವಿಚಾರ ಏನೆಂದರೆ, ಅವರು ಸೋನಿಯಾ ಗಾಂಧಿ ಆಪ್ತರು. ಕಾಂಗ್ರೆಸ್ ನಿಷ್ಠರು. ಅಂಥ ಅಹ್ಮದ್ ಪಟೇಲ್ ರನ್ನು ರಾಜ್ಯಸಭೆಯಿಂದ ಗೆಲ್ಲಿಸಿಕೊಳ್ಳಬೇಕು ಅಂದರೆ ಗುಜರಾತ್ ನಲ್ಲಿ ಪಕ್ಷದ ಶಾಸಕರನ್ನು ಕಾಯ್ದುಕೊಳ್ಳುವ ಸವಾಲು ಎದುರಾಗಿತ್ತು.
'ಕ್ರಾಸ್ ಬಾರ್ಡರ್ ಹವಾಲ': ಆಪ್ತರಿಗೇ ಅಚ್ಚರಿ ತಂದ ಡಿಕೆಶಿ ಬಂಧನಕ್ಕೆ ಬಿಜೆಪಿ ನೀಡಿದ ಟ್ವಿಸ್ಟ್ ಇದು!
ಆ ಜವಾಬ್ದಾರಿಯನ್ನು ಕರ್ನಾಟಕದ ಪ್ರಭಾವಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ವಹಿಸಿಕೊಂಡರು. ಗುಜರಾತ್ ನಲ್ಲಿ ಅಹ್ಮದ್ ಪಟೇಲ್ ಗೆಲುವು ಸಾಧ್ಯವಾಯಿತು. ಕಾಂಗ್ರೆಸ್ ಹೈಕಮಾಂಡ್ ಸಂತುಷ್ಟವಾಯಿತು. ಶಿವಕುಮಾರ್ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತವಾಯಿತು. ಆದರೆ ಅಲ್ಲಿಂದ ಶುರುವಾಯಿತು ಶಿವಕುಮಾರ್ ಪಾಲಿನ 'ಕಷ್ಟದ ದಿನಗಳು'.
ಡಿ. ಕೆ. ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು. ಜಾರಿ ನಿರ್ದೇಶನಾಲಯಕ್ಕೆ ಪ್ರಕರಣ ವರ್ಗಾವಣೆ ಆಯಿತು. ಆ ನಂತರ ಹಿಡಿತ ಬಿಗಿಯಾಗುತ್ತಾ ಬಂದು, ಸ್ಥಿತಿ ಇಲ್ಲಿಗೆ ಬಂದು ನಿಂತಿದೆ.
LIVE Updates: ಡಿಕೆಶಿ ಬಂಧನ: ಇಂದು ನ್ಯಾಯಾಲಯಕ್ಕೆ ಹಾಜರಿಲ್ಲ
-ಸದ್ಯಕ್ಕೆ ಚರ್ಚೆ ಆಗುತ್ತಿರುವ ಡಿ.ಕೆ. ಶಿವಕುಮಾರ್ ಬಂಧನದ ಬಗೆಗಿನ ವಿಶ್ಲೇಷಣೆ ಇದು. ಮಂಗಳವಾರ ರಾತ್ರಿ ತಮ್ಮ ಬಂಧನ ಆದ ನಂತರ ಮಾಧ್ಯಮದ ಎದುರು ಅಸ್ಪಷ್ಟವಾಗಿ ಅವರು ಹೇಳಿದ್ದು, ಇದು ರಾಜಕೀಯ ದ್ವೇಷ. ಕಾಂಗ್ರೆಸ್ ನ ಕೆಲಸ ಮಾಡಿದ ನನ್ನ ವಿರುದ್ಧ ತೆಗೆದುಕೊಂಡು ನಿರ್ಧಾರ ಇದು ಎಂದಿದ್ದಾರೆ.
ಅಂದ ಹಾಗೆ, ಡಿ.ಕೆ. ಶಿವಕುಮಾರ್ ತುಂಬ ಸಣ್ಣ ವಯಸ್ಸಿನಲ್ಲಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು, ಸಚಿವರಾದರು. ಎಸ್ಸೆಂ ಕೃಷ್ಣ ಅವರ ಸರಕಾರದಲ್ಲಿ ಶಿವಕುಮಾರ್ ಪ್ರಭಾವ ತುಂಬ ದೊಡ್ಡ ಮಟ್ಟದಲ್ಲಿತ್ತು. ಆ ನಂತರ ಜೆಡಿಎಸ್- ಕಾಂಗ್ರೆಸ್ ಮೈತ್ರಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಎಚ್ ಡಿಕೆ ಬೆನ್ನಿಗಿದ್ದ ಕಾಂಗ್ರೆಸ್ ನ ಪ್ರಮುಖ ನಾಯಕ ಡಿಕೆಶಿ.
ಬಿಜೆಪಿ ಗೆಳೆಯರಿಗೆ ಅಭಿನಂದನೆ ಹೇಳಿದ ಡಿ.ಕೆ.ಶಿವಕುಮಾರ್
ಒಂದು ಕಾಲದಲ್ಲಿ ದೇವೇಗೌಡರು- ಕುಮಾರಸ್ವಾಮಿ ವಿರುದ್ಧ ಕಟು ಶಬ್ದಗಳನ್ನು ಬಳಸಿ, ದಾಳಿ ಮಾಡುತ್ತಿದ್ದ ಶಿವಕುಮಾರ್ ಇವರೇನಾ ಎಂಬ ಅನುಮಾನ ಮೂಡುವಷ್ಟು ಬದಲಾಗಿದ್ದರು. ನಾಯಕತ್ವದಲ್ಲಿ ಪರಿಪಕ್ವತೆ ಕಾಣುತ್ತಿತ್ತು. ಮಾಧ್ಯಮಗಳ ಮುಂದೆ ತಾವೇ ಈ ಮಾತನ್ನು ಹೇಳಿದ್ದರು.
ಶಿವಕುಮಾರ್ ಅವರಿಗೆ ಪಕ್ಷಾತೀತವಾಗಿ ಸ್ನೇಹಿತರಿದ್ದಾರೆ. ಪ್ರಾಯಶಃ ಅದೇ ಪ್ರಮಾಣದಲ್ಲಿ ಪ್ರತಿಸ್ಪರ್ಧಿಗಳು, ವಿರೋಧಿಗಳೂ ಇದ್ದಾರೆ. ಯಡಿಯೂರಪ್ಪ ಅವರ ಜತೆಗಿನ ಶಿವಕುಮಾರ್ ಸ್ನೇಹ ಕೂಡ ಸ್ಮರಿಸುವಂಥದ್ದು. ಅಂಥ ನಾಯಕನ ಬಂಧನ ಆಗಿದೆ. ಮುಂದೇನು ಎಂಬ ಬಗ್ಗೆ ಸದ್ಯಕ್ಕೆ ಪ್ರಶ್ನಾರ್ಥಕ ಚಿಹ್ನೆಯೊಂದಿದೆ.