ಸಿಬಿಐ ದಾಳಿ ಮಾಡಿದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಯಾರು
ಬೆಂಗಳೂರು, ಸೆಪ್ಟೆಂಬರ್ 26 : ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್. ನಕ್ಸಲ್ ನಿಗ್ರಹ ದಳ, ಸಿಸಿಬಿ, ಬೆಂಗಳೂರು ನಗರ ಪೊಲೀಸ್, ಕಲಬುರಗಿ ಐಜಿಪಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ ಒಳ್ಳೆಯ ಹೆಸರುಗಳಿಸಿದವರು. ಉತ್ತಮ ಹೆಸರಿನ ಜೊತೆ ಹಲವು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡವರು. ಒಂದು ವರ್ಷದ ಅಮಾನತು ಶಿಕ್ಷೆಯನ್ನು ಎದುರಿಸಿದವರು.
Recommended Video
ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ನಿವಾಸದ ಮೇಲೆ ಗುರುವಾರ ಸಿಬಿಐ ದಾಳಿ ನಡೆದಿದೆ. ರಾಜಕಾರಣಿಗಳ ಫೋನ್ ಟ್ಯಾಪಿಂಗ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲೋಕ್ ಕುಮಾರ್ ಮನೆ ಮೇಲೆ ದಾಳಿ ಮಾಡಿದ್ದು, ಅವರ ವಿಚಾರಣೆ ನಡೆಸಿದೆ.
ಪೊಲೀಸ್ ಆಯುಕ್ತರ ನೇಮಕ : ಅಲೋಕ್ ಕುಮಾರ್ ಅರ್ಜಿ ವಾಪಸ್
ಬಿಹಾರದ ಸಹರಾ ಜಿಲ್ಲೆಯವರಾದ ಅಲೋಕ್ ಕುಮಾರ್ 1994ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡಿರುವ ಅವರು ಉತ್ತಮ ಹೆಸರುಗಳಿಸಿದ್ದಾರೆ. ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮನೆ ಮೇಲೆ ಸಿಬಿಐ ದಾಳಿ
ಒಂದಂಕಿ ಲಾಟರಿ ಹಗರಣದಲ್ಲಿ ಅಲೋಕ್ ಕುಮಾರ್ ಹೆಸರು ಕೇಳಿ ಬಂದಿತ್ತು. 1 ವರ್ಷ ಅವರು ಸೇವೆಯಿಂದ ಅಮಾನತುಗೊಂಡಿದ್ದರು. ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕ ಬಳಿಕ ಪುನಃ ಸೇವೆಗೆ ಮರಳಿದ್ದಾರೆ. ಈಗ ಫೋನ್ ಟ್ಯಾಪಿಂಗ್ ಹಗರಣದಲ್ಲಿ ಅವರ ಹೆಸರು ಕೇಳಿಬರುತ್ತಿದೆ, ಸಿಬಿಐ ವಿಚಾರಣೆ ನಡೆಸುತ್ತಿದೆ.
ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಗಾವಣೆ
ಬಿಹಾರ ಮೂಲದವರು
ಅಲೋಕ್ ಕುಮಾರ್ ಬಿಹಾರ ಮೂಲದ ಸಹರಾ ಜಿಲ್ಲೆಯವರು. 1969 ಮಾರ್ಚ್ 8ರಂದು ಜನಿಸಿದ ಅವರು ಎಂಎ, ಎಂಬಿಎ ಪದವಿ ಪಡೆದಿದ್ದಾರೆ. 1994ರಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಐಪಿಎಸ್ ಅಧಿಕಾರಿಯಾಗಿ ನೇಮಕಗೊಂಡರು.
ಕರ್ನಾಟಕದಲ್ಲಿ ಮೊದಲು ಕೆಲಸ ಆರಂಭಿಸಿದ ಅಲೋಕ್ ಕುಮಾರ್ ಬೆಳಗಾವಿಯಲ್ಲಿ ಎಎಸ್ಪಿಯಾಗಿ ಕಾರ್ಯ ಆರಂಭಿಸಿದರು. ಚಿತ್ರದುರ್ಗ, ಕಲಬುರಗಿ, ದಾವಣಗೆರೆ ಜಿಲ್ಲೆಯಲ್ಲಿ ಅವರು ಕೆಲಸ ಮಾಡಿದ್ದಾರೆ.
ಬೆಂಗಳೂರು ನಗರಕ್ಕೆ ಬಂದರು
2006ರಲ್ಲಿ ಬೆಂಗಳೂರು ನಗರದ ದಕ್ಷಿಣ ವಿಭಾಗದ ಡಿಸಿಪಿಯಾಗಿ ನೇಮಕಗೊಂಡ ಅಲೋಕ್ ಕುಮಾರ್ ರೌಡಿಗಳನ್ನು ಮಟ್ಟ ಹಾಕುವ ಕೆಲಸ ಮಾಡಿದರು. ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಆಯುಕ್ತರಾಗಿ, ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿ, ಉಡುಪಿಯಲ್ಲಿರುವ ನಕ್ಸಲ್ ನಿಗ್ರಹ ದಳದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು.
ನಕ್ಸಲ್ ಟೆಂಟ್ ಮೇಲೆ ದಾಳಿ ಮಾಡಿದರು
ಅಲೋಕ್ ಕುಮಾರ್ರನ್ನು ನಕ್ಸಲ್ ನಿಗ್ರಹ ಪಡೆ ಮುಖ್ಯಸ್ಥರಾಗಿ ನೇಮಕ ಮಾಡಲಾಯಿತು. ಕುಕ್ಕೆ ಸುಬ್ರಮಣ್ಯ ಸಮೀಪದ ಅರಣ್ಯದಲ್ಲಿ ನಕ್ಸಲ್ ಟೆಂಟ್ಗಳ ಮೇಲೆ ದಾಳಿ ಮಾಡಿದ ಅಲೋಕ್ ಕುಮಾರ್ ನಕ್ಸಲರಿಂದ ಟಿಫನ್ ಬಾಕ್ಸ್ ಬಾಂಬ್, ಏಳು ಕಿಟ್ ಬ್ಯಾಗ್, ಬಂದೂಕು ವಶಪಡಿಸಿಕೊಂಡಿದ್ದರು. ಉಡುಪಿ ಭಾಗದಲ್ಲಿ ನಕ್ಸಲ್ ಹಾವಳಿಯನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದರು.
ಮತ್ತೆ ಬೆಂಗಳೂರಿಗೆ ವಾಪಸ್
ಅಲೋಕ್ ಕುಮಾರ್ ಕಾರ್ಯ ವೈಖರಿ ನೋಡಿದ ಸರ್ಕಾರ ಬೆಂಗಳೂರಿಗೆ ವಾಪಸ್ ಕರೆಸಿಕೊಂಡಿತು. ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿ ನೇಮಕ ಮಾಡಿತು. ಆಗ ರೌಡಿಗಳ ಪರೇಡ್, ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿದ ಅಲೋಕ್ ಕುಮಾರ್ ರೌಡಿಗಳನ್ನು ಮಟ್ಟಹಾಕಲು ದಿಟ್ಟಕ್ರಮಗಳನ್ನು ಕೈಗೊಂಡರು. ಈ ಮೂಲಕ ಪ್ರಸಿದ್ಧಿ ಪಡೆದರು.
ಒಂದು ವರ್ಷ ಅಮಾನತುಗೊಂಡಿದ್ದರು
ಅಲೋಕ್ ಕುಮಾರ್ರನ್ನು ವಿವಾದಗಳು ಬಿಟ್ಟಿಲ್ಲ. ಒಂದಂಕಿ ಲಾಟರಿ ಹಗರಣದಲ್ಲಿ ಅವರ ಹೆಸರು ಕೇಳಿ ಬಂತು. ಸರ್ಕಾರ ಒಂದು ವರ್ಷಗಳ ಕಾಲ ಅವರನ್ನು ಅಮಾನತು ಮಾಡಿತು. ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕ ಬಳಿಕ ಕಲಬುರಗಿ ಐಜಿಪಿಯಾಗಿ ನೇಮಕಗೊಂಡರು.
2017ರಲ್ಲಿ ಬೆಳಗಾವಿ ಐಜಿಪಿಯಾಗಿ ನೇಮಕವಾದರು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಿಸಿಬಿ ಆಯುಕ್ತರನ್ನಾಗಿ ನೇಮಿಸಲಾಯಿತು. ಬಳಿಕ ಬೆಂಗಳೂರು ಪೊಲೀಸ್ ಆಯುಕ್ತರಾಗಿ ನೇಮಕಗೊಂಡರು.