ಭಾರತ, ಭಾರತೀಯ ಸೈನ್ಯದ ಹೆಮ್ಮೆ ವಿಜಯ ದಿವಸ್ (ಬಾಂಗ್ಲಾ ವಿಮೋಚನೆ)
ಬೆಂಗಳೂರು, ಡಿಸೆಂಬರ್ 13: ಸ್ವಾತಂತ್ರೋತ್ತರ ಭಾರತದ ಇತಿಹಾಸದಲ್ಲಿ ಡಿಸೆಂಬರ್ 16, 1971 ಅತ್ಯಂತ ಮಹತ್ವದ ದಿನ. ಈ ದಿನ ಭಾರತ ತನ್ನ ಪಾರಂಪರಿಕ ವೈರಿ ಪಾಕಿಸ್ತಾನವನ್ನು ಬಗ್ಗು ಬಡಿದು, ಬಾಂಗ್ಲಾವನ್ನು ಅದರ ಕಪಿಮುಷ್ಠಿಯಿಂದ ಬಿಡಿಸಿ, ಬಾಂಗ್ಲಾದೇಶ ಉದಯವಾಗಲು ಕಾರಣವಾದ ದಿನ. 'ವಿಜಯ್ ದಿವಸ್' ಗೆ ಕಾರಣವಾಗಿದ್ದು ಭಾರತೀಯ ಸೈನ್ಯದ ಅಪ್ರತಿಮ ಶೌರ್ಯ, ಸಾಹಸ ಹಾಗೂ ಉಕ್ಕಿನ ಮಹಿಳೆ ಇಂದಿರಾ ಗಾಂಧಿ.
ಪಶ್ಚಿಮ ಪಾಕಿಸ್ತಾನದ (ಇಂದಿನ ಪಾಕಿಸ್ತಾನ) ಹಿಡಿತದಲ್ಲಿದ್ದ ಪೂರ್ವ ಪಾಕಿಸ್ತಾನವನ್ನು (ಇಂದಿನ ಬಾಂಗ್ಲದೇಶ) ಪಾಕಿಸ್ತಾನದ ದಬ್ಬಾಳಿಕೆಯಿಂದ ಹೊರತಂದು ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದು ಭಾರತ. ಇದಕ್ಕಾಗಿ ಭಾರತ ತನ್ನ ಹೆಮ್ಮೆಯ ನೂರಾರು ಸೈನಿಕರನ್ನು ಕಳೆದುಕೊಂಡಿತು. ಭಾರತೀಯ ಸೈನಿಕರ ಶೌರ್ಯ ಸಾಹಸದ ಮುಂದೆ ಪಾಕಿಸ್ತಾನ ಮಣ್ಣು ಮುಕ್ಕಿತು. ಬಾಂಗ್ಲಾಗೆ ವಿಮೋಚನೆ ನೀಡುವ ಮೂಲಕ ಭಾರತ ಪ್ರಪಂಚಕ್ಕೆ ತನ್ನ ಶಕ್ತಿಯನ್ನು ತೋರಿಸಿದರೆ, ಭಾರತದ ಅಮೂಲ್ಯ ಸಹಾಯದಿಂದ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಡಿಸೆಂಬರ್ 16 ನ್ನು ಭಾರತ ತನ್ನ ವಿಜಯ ದಿವಸ್ ಎಂದು ಆಚರಿಸಿದರೆ, ಬಾಂಗ್ಲಾದೇಶ ಆ ದಿನವನ್ನು ಸ್ವಾತಂತ್ರ್ಯ ದಿನವಾಗಿ ಆಚರಿಸುತ್ತಿದೆ.
ಏತಕ್ಕಾಗಿ ಬಾಂಗ್ಲಾ ವಿಮೂಚನೆ?
ಸ್ವಾತಂತ್ರ್ಯಾನಂತರ ಅಖಂಡ ಭಾರತ, ಭಾರತ-ಪಾಕಿಸ್ತಾನ ಎಂದು ವಿಭಜನೆಯಾಯಿತು. ಮುಸ್ಲಿಂರು ಅಧಿಕವಿದ್ದ ಇಂದಿನ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂದಾಯಿತು. ಪೂರ್ವ ಬಂಗಾಳ, ಪೂರ್ವ ಪಾಕಿಸ್ತಾನವಾಯಿತು. ಆದರೆ, ಸ್ವಾತಂತ್ರ್ಯಾನಂತರ ಪಶ್ಚಿಮ ಪಾಕಿಸ್ತಾನದಲ್ಲಿ ಅರಾಜಕತೆ, ಅನ್ಯಾಯ, ದೌರ್ಜನ್ಯ ಹೆಚ್ಚಾದವು. ಪಶ್ಚಿಮ ಪಾಕಿಸ್ತಾನದ ಬಿಗಿ ಹಿಡಿತ ಪೂರ್ವ ಪಾಕಿಸ್ತಾನದ ಮೇಲಿತ್ತು. 1951 ರಿಂದ ಪ್ರತ್ಯೇಕ ಬಾಂಗ್ಲಾದೇಶ ಕೂಗು ಪ್ರಾರಂಭವಾಯಿತು. ಆದರೆ, ಇದಕ್ಕೆ ಪಶ್ಚಿಮ ಪಾಕಿಸ್ತಾನ ಸೊಪ್ಪು ಹಾಕಲಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಸ್ವತಂತ್ರ ಬಾಂಗ್ಲಾ ಕೂಗು ಹೆಚ್ಚಾಯಿತು.
ಬಾಂಗ್ಲಾ ಹುಟ್ಟಿಗೆ ಕಾರಣ; ಇಂದಿರಾ ಎಂಬ 'ದುರ್ಗಿ'
1970 ರ ಪಾಕಿಸ್ತಾನ ಚುನಾವಣೆ
ಬ್ರಿಟೀಷರಿಂದ ಸ್ವಾತಂತ್ರ ಸಿಕ್ಕ ನಂತರ ಪಾಕಿಸ್ತಾನ ತನ್ನ ಮಿಲಿಟರಿ ಶಕ್ತಿಯನ್ನು ಹಾಗೂ ಬಹುತೇಕ ಅಧಿಕಾರವನ್ನು ತನಗೆ ಮಾತ್ರ ಸಿಮೀತವಾಗುವಂತೆ ಮಾಡಿಕೊಂಡಿತು. ಇದರಿಂದ ಪೂರ್ವ ಪಾಕಿಸ್ತಾನ ಕೇವಲ ಪಾಕಿಸ್ತಾನದ ಅಡಿಯಾಳಾಯಿತು. 1970 ರಲ್ಲಿ ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನದ 'ಅನಾಮಿ ಲಿಗ್' ಪಕ್ಷ 169 ಸ್ಥಾನಗಳ ಪೈಕಿ 167 ಸ್ಥಾನಗಳನ್ನು ಗೆದ್ದಿತು (ಪೂರ್ವ ಪಾಕಿಸ್ತಾನದಲ್ಲಿ ಮಾತ್ರ. ಒಟ್ಟು 319 ಸ್ಥಾನಗಳು ಇದ್ದವು). ಶೇಖ್ ಮುಜಿಬುರ್ ರೆಹಮಾನ (ಇಂದಿನ ಬಾಂಗ್ಲಾ ದೇಶದ ಪ್ರಧಾನಿ ಶೇಖ ಹಸಿನಾ ತಂದೆ) ನೇತೃತ್ವದ ಅನಾಮಿ ಲಿಗ್ ಸ್ವತಂತ್ರ ಬಾಂಗ್ಲಾ ಪರವಾಗಿತ್ತು. ಸಹಜವಾಗಿ ಅವರು ಪ್ರತ್ಯೇಕ ಬಾಂಗ್ಲಾ ಕೂಗನ್ನು ಪಾಕಿಸ್ತಾನದಲ್ಲಿ ಮೊಳಗಿಸಿದರು. ಆದರೆ, ಇದಕ್ಕೆ ಅಂದಿನ ಪಾಕಿಸ್ತಾನದ ಅಧ್ಯಕ್ಷ ಯಾಹ್ಯಾಖಾನ್ ಮತ್ತು ಪಿಪಿಪಿ ಅಧ್ಯಕ್ಷ ಜುಲ್ಪಿಕರ ಬುಟ್ಟೊ ತೀವ್ರ ವಿರೋಧ ವ್ಯಕ್ತಪಡಿಸಿ, ಪೂರ್ವ ಬಂಗಾಳಿಗರ ಮೇಲೆ ಕೆಂಡಕಾರತೊಡಗಿದರು.
1970 ರ ಚಂಡಮಾರುತ
1970 ನೇ ವರ್ಷ ಬಾಂಗ್ಲಾ ಪಾಲಿಗೆ ಕರಾಳವಾದ ವರ್ಷವಾಗಿತ್ತು. ಆ ವರ್ಷ ಪೂರ್ವ ಪಾಕಿಸ್ತಾನದಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿ ಲಕ್ಷಾಂತರ ಜನ ಸಾವನ್ನಪ್ಪಿದರು. ಕೋಟ್ಯಂತರ ಜನ ಮನೆ ಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದರು. ಆಡಳಿತ ಕೇಂದ್ರವಾಗಿದ್ದ ಪಾಕಿಸ್ತಾನ ಮಾತ್ರ ಇದಕ್ಕೂ ತನಗೂ ಸಂಬಂಧವಿಲ್ಲದಂತೆ ವರ್ತಿಸಿತು. ಇದು ಬಾಂಗ್ಲಾದವರಿಗೆ ಸ್ವತಂತ್ರದ ಕಿಚ್ಚು ಹಬ್ಬಲು ಕಾರಣವಾಯಿತು. ಅಲ್ಲಿಯವರೆಗೂ ಒಳಗೊಳಗೆ ನಡೆಯುತ್ತಿದ್ದ ಪ್ರತ್ಯೇಕ ದೇಶದ ಕೂಗು, ಕಹಳೆಯಾಗಿ ಮಾರ್ಪಟ್ಟಿತು. ಪೂರ್ವ ಬಂಗಾಳದ ತುಂಬ ಭಿನ್ನಮತೀಯ ಚಟುವಟಿಕೆಗಳು ಪ್ರಾರಂಭವಾದವು. ಪಾಕಿಸ್ತಾನ ವಿರುದ್ಧ ಪ್ರತಿಬಟನೆ, ಗಲಭೆ, ಗದ್ದಲ ಶುರು ಆದವು. ಇದನ್ನು ಹತ್ತಿಕ್ಕಲು ಪಾಕಿಸ್ತಾನ ದೊಡ್ಡ ಸೈನಿಕ ಪಡೆಯನ್ನು ಬಾಂಗ್ಲಾಕ್ಕೆ ಕಳಿಸಿತು. ಪಾಕಿಸ್ತಾನ ಸೈನಿಕರ ಹಿಂಸಾಚಾರ ಒಂದು ಕಡೆಯಾದರೆ, ಚಂಡಮಾರುತದ ಪರಿಣಾಮವಾಗಿ ಲಕ್ಷಾಂತರ ಜನ ನಿರಾಶ್ರೀತರಾಗಿ ಭಾರತದ ಕಡೆ ವಲಸೆ ಪ್ರಾರಂಭಿಸಿದರು. 1971 ರ ಮಾರ್ಚನಲ್ಲಿ ಪಾಕಿಸ್ತಾನ ಸೈನ್ಯ ಡಾಕಾದ ಮೇಲೆ ದಾಳಿ ಮಾಡಿ ಅನಾಮಿ ಲಿಗ್ ನ ಮುಖಂಡರನ್ನು ಬಂಧಿಸಿತು. ಅಲ್ಲಿಂದ ಬಾಂಗ್ಲಾ ಹೋರಾಟ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿತು.
ವಿಜಯ್ ದಿವಸ್: ಭಾರತ-ಪಾಕ್ ಯುದ್ಧದ ಬಗ್ಗೆ ತಿಳಿದಿರಬೇಕಾದ 22 ಅಂಶಗಳು
ಯುದ್ಧ ಪ್ರಾರಂಭ
ಪಶ್ಚಿಮ ಪಾಕಿಸ್ತಾನ ಹಾಗೂ ಪೂರ್ವ ಪಾಕಿಸ್ತಾನದ ದಾಯಾದಿ ಜಗಳವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಭಾರತ, 1971 ರ ಡಿಸೆಂಬರ್ ನಲ್ಲಿ ಬಾಂಗ್ಲಾ ವಿಮೋಚನೆಗೆ ಸಹಾಯ ಮಾಡುವುದಾಗಿ ಘೋಷಣೆ ಮಾಡಿತು. ಇದಕ್ಕಾಗಿ ಭಾರತ ತನ್ನ ಈಶಾನ್ಯ ರಾಜ್ಯಗಳಲ್ಲಿ ಬಾಂಗ್ಲಾ ನಿರಾಶ್ರಿತರಿಗೆ ಕ್ಯಾಂಪ್ ಗಳನ್ನು ತೆರೆಯಿತು. ಇದರ ನೇತೃತ್ವವನ್ನು ವಹಿಸಿಕೊಂಡಿದ್ದು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ. 1971 ರ ಡಿಸೆಂಬರ್ ಸಮೀಪಿಸುತ್ತಿದ್ದಂತೆ ಭಾರತ ಸರ್ಕಾರ ದೊಡ್ಡ ಮಟ್ಟದ ಸೈನ್ಯದ ಜಮಾವಣೆಯನ್ನು ಪೂರ್ವದ ಗಡಿಯಲ್ಲಿ ಮಾಡಿತು. ಅಂದುಕೊಂಡಂತೆ ಪಾಕಿಸ್ತಾನ ಅಧ್ಯಕ್ಷ ಯಾಹ್ಯಾಖಾನ್, ಎರಡೂ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ಡಿಸೆಂಬರ್ 3 ರಿಂದ ಭಾರತದೊಂದಿಗೆ ಯುದ್ಧಕ್ಕೆ ನಿಂತರು. ಡಿಸೆಂಬರ್ 3 ರಂದು ಆಗ್ರಾ ಸೇರಿದಂತೆ ಭಾರತದ ಎಂಟು ವಾಯುನೆಲೆಗಳ ಮೇಲೆ ಪಾಕಿಸ್ತಾನ ವಾಯು ದಾಳಿ ಮಾಡಿತು. ಆದರೆ, ಇದನ್ನು ಭಾರತ ಅಷ್ಟೇ ಕ್ಷೀಪ್ರವಾಗಿ ಹಿಮ್ಮೆಟ್ಟಿಸಿ, ಪಾಕಿಸ್ತಾನಕ್ಕೆ ಸರಿಯಾದ ಏಟು ನೀಡಿತು. ಪ್ರತ್ಯೇಕ ಬಾಂಗ್ಲಾಕ್ಕೆ ಹೋರಾಟ ನಡೆಸುತ್ತಿದ್ದ, ಬಾಂಗ್ಲಾದ ಮುಕ್ತಿ ವಾಹಿನಿ ಸಶಸ್ತ್ರ ಪಡೆ ಭಾರತೀಯ ಸೇನೆಯನ್ನು ಕೂಡಿಕೊಂಡಿತು. ಅಂದಿನ ಸೇನಾ ಮುಖ್ಯಸ್ಥ ಜಗಜೀತ್ ಸಿಂಗ್ ಅರೋರಾ ನೇತೃತ್ವದಲ್ಲಿ ಕ್ಷೀಪ್ರವಾಗಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನ ವಿಧಿಯಿಲ್ಲದೇ ಭಾರತದ ಮುಂದೆ ಮಂಡೆಯೂರಿ, ಬಾಂಗ್ಲಾ ವಿಮೋಚನೆಗೆ ಬದ್ದ ಎಂದು ಘೋಷಿಸಿತು. ಅದರಂತೆ ಡಿಸೆಂಬರ್ 16 ರಂದ ಯುದ್ಧ ಕೊನೆಗೊಂಡು ಬಾಂಗ್ಲಾ 'ಬಾಂಗ್ಲಾದೇಶ' ಎಂದು ಸ್ವತಂತ್ರ ದೇಶವಾಯಿತು. ಆದರೆ ಪಾಕಿಸ್ತಾನ ಭಾರತದಿಂದ ಮರೆಯದ ಪಾಠ ಕಲಿತು ತನ್ನ ಸಾವಿರಾರು ಸೈನಿಕರನ್ನು ಕಳೆದುಕೊಂಡಿತು.
ಇಂದಿರಾ ಗಾಂಧಿಯ ಚಾಣಾಕ್ಷ ನಡೆ
ಪಾಕಿಸ್ತಾನ ಕಪಿಮುಷ್ಠಿಯಿಂದ ಬಾಂಗ್ಲಾದೇಶವನ್ನು ಬಿಡುಗಡೆ ಮಾಡಬೇಕು ಎಂಬ ದಿಟ್ಟ ನಿರ್ಧಾರವನ್ನು ಅಂದು ತೆಗೆದುಕೊಂಡಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ. ಅಮೆರಿಕ ಹಾಗೂ ಚೀನಾದ ಪರೋಕ್ಷ ಬೆಂಬಲದಿಂದ ಪಾಕಿಸ್ತಾನ ಕೊಬ್ಬುತ್ತಿರುವುದನ್ನು ಅರಿತ ಇಂದಿರಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡಿದ್ದು ಇಂದಿರಾಗೆ ರಾಜತಾಂತ್ರಿಕ ನಿಪುಣೆ, ಉಕ್ಕಿನ ಮಹಿಳೆ ಎಂಬ ಹೆಸರು ತಂದು ಕೊಟ್ಟಿತು. 'ಸೋವಿಯತ್ ರಷ್ಯಾ-ಭಾರತ ಸ್ನೇಹ ಒಪ್ಪಂದ 1971' ಅಮೆರಿಕ ಹಾಗೂ ಚೀನಾ ಪಾಕಿಸ್ತಾನದ ಜೊತೆ ಹೋಗದಂತೆ ತಡೆಯಿತು. ಅದಾಗಲೇ ಯುದ್ಧೊನ್ಮಾದದಲ್ಲಿದ್ದ್ ಪಾಕಿಸ್ತಾನ ಅಕ್ಷರಶಃ ಏಕಾಂಗಿಯಾಗಿ ಯುದ್ಧ ಸೋಲಬೇಕಾಯಿತು. ಪಾಕಿಸ್ತಾನವನ್ನು ಬಗ್ಗು ಬಡಿದ ಡಿಸೆಂಬರ್ 16 ನ್ನು ಭಾರತ ವಿಜಯ್ ದಿವಸ್ ಆಗಿ ಆಚರಿಸಿಕೊಂಡು ಬರುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವೇ ಸರಿ.