ಸಂದರ್ಶನ: ಕೆಪಿಜೆಪಿ ಬಗ್ಗೆ 10 ಪ್ರಶ್ನೆಗಳಿಗೆ ಉಪ್ಪಿ ಕೊಟ್ಟ ರುಚಿಕಟ್ಟು ಉತ್ತರ
"ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ) ಸ್ಕ್ರಿಪ್ಟ್ ವರ್ಕ್ ನಡೀತಿದೆ. ನಾನಾ ಇಲಾಖೆಯ ಅಧಿಕಾರಿಗಳು, ವೈದ್ಯರು, ಶಿಕ್ಷಣತಜ್ಞರ ಜತೆ ಮಾತನಾಡ್ತಿದ್ದೀನಿ. ಬಜೆಟ್ ಹೇಗೆ ಸಿದ್ಧವಾಗುತ್ತದೆ? ಅದರ ಖರ್ಚು ಹೇಗೆ ಆಗುತ್ತದೆ ಇವೆಲ್ಲದರ ಅಧ್ಯಯನ ನಡೀತಾ ಇದೆ" ಎಂದು ಉತ್ತರಿಸಿದರು ನಟ- ಕೆಪಿಜೆಪಿಯ ಸಂಸ್ಥಾಪಕ ಉಪೇಂದ್ರ.
ಪಕ್ಷದ ಹೆಸರಿನ ಘೋಷಣೆ ಮಾಡಿದ ನಂತರ ಏನು ಮಾಡುತ್ತಿದ್ದಾರೆ ಎಂಬ ಕುತೂಹಲದಿಂದ ಒನ್ಇಂಡಿಯಾ ಕನ್ನಡ ಉಪೇಂದ್ರ ಅವರ ಸಂದರ್ಶನ ಮಾಡಿದೆ. ಇಲ್ಲಿ ಪ್ರಶ್ನೆಗಿಂತ ಅವರು ನೀಡಿದ ಮಾಹಿತಿ ಆಸಕ್ತಿಕರವಾಗಿದೆ ಹಾಗೂ ಕುತೂಹಲಕರವಾಗಿದೆ. ಒಟ್ಟಿನಲ್ಲಿ ವಿವಿಧ ವೆಬ್ ಸೈಟ್ ಗಳು, ಪುಸ್ತಕಗಳ ಅಧ್ಯಯನದಲ್ಲಿ ತೊಡಗಿರುವ ಬಗ್ಗೆ ಹೇಳಿಕೊಂಡರು.
ಬೆಳಗಾವಿಯಲ್ಲಿ ಆಟೋ ಓಡಿಸಿದ ಕೆಪಿಜೆಪಿ ಸಂಸ್ಥಾಪಕ ಉಪೇಂದ್ರ!
ದಿನಕ್ಕೆ ಎಷ್ಟು ಗಂಟೆ ಕೆಲಸ ಆಗುತ್ತಿದೆ ಎಂಬ ಪ್ರಶ್ನೆಗೆ, ಕೆಲ ಸಲ ಮಧ್ಯರಾತ್ರಿ ಒಂದು ಗಂಟೆ, ಮೂರು ಗಂಟೆ ಆಗುತ್ತದೆ ಎಂದರು. ಒಟ್ಟಾರೆ ಹೇಳುವಾಗ ಎಷ್ಟು ಸಮಯ ಪಕ್ಷದ ಕೆಲಸಕ್ಕೆ ಮೀಸಲಾಗಿಟ್ಟಿದ್ದೀರಿ ಎಂಬ ಪ್ರಶ್ನೆಗೆ, ಅದೆಲ್ಲ ಬರೆಯುವುದು ಬೇಡ ಬಿಡಿ. ಅಂಥದ್ದನ್ನೆಲ್ಲ ಹೇಳಿಕೊಳ್ಳಬಾರದು ಎಂದು ನಕ್ಕರು ಉಪೇಂದ್ರ.
ಪ್ರಶ್ನೋತ್ತರಗಳಿಗಾಗಿ ಮುಂದೆ ಓದಿ.
1.ಪಕ್ಷದ ಕೆಲಸ ಹೇಗೆ ನಡೆಯುತ್ತಿದೆ?
ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ನಾನಾ ವೆಬ್ ಸೈಟ್ ಗಳಲ್ಲಿ ಮಾಹಿತಿ ನೋಡಿಕೊಳ್ಳುತ್ತಿದ್ದೀನಿ. ಜನರ ಮುಂದೆ ಸುಮ್ಮನೆ ನಿಲ್ಲುವುದಕ್ಕಾಗಲ್ಲ. ಮಾಹಿತಿ ಸಂಗ್ರಹಿಸಬೇಕು. ಜತೆಗೆ ನಾನಾ ಇಲಾಖೆಯ ಹಿರಿಯ ಅಧಿಕಾರಿಗಳು, ವೈದ್ಯರು, ಶಿಕ್ಷಣ ತಜ್ಞರನ್ನು ಭೇಟಿ ಮಾಡಿ, ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಅಂತೆಲ್ಲ ತಿಳಿದುಕೊಳ್ಳುತ್ತಿದ್ದೀನಿ.
2.ಮೂರು ರಾಜಕೀಯ ಪಕ್ಷಗಳ ಯಾತ್ರೆ ಮಧ್ಯೆ ಉಪೇಂದ್ರರ ಪಕ್ಷಕ್ಕೆ ಮೀಡಿಯಾ ಮೈಲೇಜ್ ಸಿಕ್ತಿಲ್ಲವಲ್ಲ?
ಹೀಗೆ ಆಗುತ್ತೆ ಅಂತ ನನಗೆ ಗೊತ್ತಿತ್ತು. ಇನ್ನು ಮುಂದೆ ಹೇಳುವ ವಿಚಾರ ಆಳವಾಗಿ ಹೇಳಬೇಕಾಗುತ್ತೆ. ಯಾವ ರೀತಿ ಹೇಳಿದರೆ ಜನರಿಗೆ ತಲುಪುತ್ತದೆ ಎಂಬುದರ ಬಗ್ಗೆ ನಮ್ಮದೊಂದು ಆಲೋಚನೆ ಇದೆ. ಆ ರೀತಿ ಹೇಳುತ್ತೇವೆ.
3.ಉಳಿದ ಪಕ್ಷಗಳು ಜನರನ್ನು ತಲುಪುತ್ತಿವೆ, ನಿಮ್ಮ ಪಕ್ಷದಿಂದ ಹೇಗೆ ತಲುಪುತ್ತೀರಿ?
ಜನರಿಗೆ ತಲುಪುವುದು ಒಂದು ಬಗೆ, ತಲುಪಿದಂತೆ ತೋರಿಸಿಕೊಳ್ಳುವುದು ಒಂದು ಬಗೆ. ತುಂಬ ವರ್ಷದಿಂದ ನಡೆದುಕೊಂಡು ಬಂದಿರುವುದು ತೋರಿಸಿಕೊಳ್ಳುವುದೇ. ಅಂದಹಾಗೆ ಎಷ್ಟು ಕೆಲಸ ಮಾಡಿದ್ದಾರೆ, ಈ ಬಗ್ಗೆ ದಾಖಲೆ ಮುಂದಿಟ್ಟಿದ್ದಾರಾ? ಎಷ್ಟು ಬಜೆಟ್ ಇತ್ತು, ಖರ್ಚಾಗಿದ್ದೆಷ್ಟು ಇದೆಲ್ಲ ತಿಳಿಸಬೇಕು ಅಲ್ವಾ?
4.ನಿಮ್ಮ ಪಕ್ಷಕ್ಕೆ ಸಲಹೆಗಳನ್ನು ತೆಗೆದುಕೊಳ್ತಿದ್ದೀರಾ?
ಐಎಎಸ್, ಐಪಿಎಸ್ ಅಧಿಕಾರಿಗಳು ವಿವಿಧ ಅಧಿಕಾರಿಗಳ ಜತೆ ಮಾತುಕತೆ ನಡೆಸ್ತಿದೀನಿ. ಅವರ ಸಲಹೆ ಪಡೆದುಕೊಳ್ತಿದೀನಿ.
5.ಪಕ್ಷ ಆರಂಭಿಸಿದ ಮೇಲೆ ಮರೆಯಲಾರದಂಥ ಘಟನೆ, ವ್ಯಕ್ತಿಗಳ ಬಗ್ಗೆ ಹೇಳ್ತೀರಾ?
ಒಂದು ಘಟನೆ ಅಲ್ಲ. ಅಪ್ಲಿಕೇಷನ್ ಮಾಡುವುದರಿಂದ ಹಿಡಿದು ಎಲ್ಲಕ್ಕೂ ಒಳ್ಳೆ ಸ್ಪಂದನೆ ಸಿಕ್ಕಿದೆ. ಇನ್ನು ವ್ಯಕ್ತಿಗಳ ಹೆಸರು ಹೇಳಬೇಕು ಅಂದರೆ ಬಹಳ ಜನರ ಹೆಸರು ಹೇಳಬೇಕಾಗುತ್ತದೆ. ಒಂದೊಂದು ಹಂತದಲ್ಲಿ ಬಂದು ಸಹಾಯ ಮಾಡಿದ ಎಲ್ಲರನ್ನೂ ನೆನಪಿಸಿಕೊಳ್ಳಬೇಕು.
6.ನಿಮ್ಮ ಪಕ್ಷಕ್ಕೆ ಯಾರದಾದರೂ ಹೆಸರು ಹೇಳಬಹುದಾದಂಥವರ ಬೆಂಬಲ ಸಿಕ್ಕಿದೆಯಾ?
ಬಹಳ ಜನ ಬೆಂಬಲ ಕೊಟ್ಟಿದ್ದಾರೆ. ಹಾಗಂತ ಹೆಸರು ಹೇಳೋದು ಬೇಡ. ಹಾಗೆ ನೋಡಿದರೆ ನಮಗೆ ಕಲ್ಪನೆಯಲ್ಲೇ ಹೆಚ್ಚು ಸಂತೋಷ. ಇದನ್ನು ಇನ್ಯಾರೋ ಮಾಡಲಿ ಎಂಬುದರಲ್ಲೇ ಖುಷಿ. ಎಜುಕೇಷನ್ ಅಂದರೆ ಬೈ ಹಾರ್ಟ್ ಮಾಡಿ, ಎಕ್ಸಾಂನಲ್ಲಿ ಕಕ್ಕಿ, ಆ ನಂತರ ಮರೆತು ಬಿಡುವುದು ಎಂಬಂತಾಗಿದೆ. ಪ್ರಾಕ್ಟಿಕಲ್ ಜ್ಞಾನ ಯಾರಿಗೂ ಬೇಡವಾಗಿದೆ.
7.ನೀವು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೀರಾ? ಚುನಾವಣೆಗೆ ಐದೇ ತಿಂಗಳಿದೆ.
ಇನ್ನೂ ನೂರೈವತ್ತು ದಿನ. ದಿನಕ್ಕೆ ಇಪ್ಪತ್ನಾಲ್ಕು ಗಂಟೆಯಂತೆ ಎಷ್ಟೊಂದು ಸಮಯವಿದೆ. ಅದಕ್ಕಿನ್ನೂ ಬಹಳ ಸಮಯವಿದೆ.
8.ನಿಮ್ಮ ಪಕ್ಷದಿಂದ ನಗರದಲ್ಲಿ ಹೆಚ್ಚಿನ ಮತ ಸೆಳೆಯುವ ಬಿಜೆಪಿಗೆ ಹೊಡೆತ ಕೊಡುವ ಆಲೋಚನೆ ಇದೆ ಎಂಬ ಮಾತಿದೆ?
ನನಗೆ ಯಾರ ಮತವನ್ನೂ ಕೀಳುವ ಆಲೋಚನೆ ಇಲ್ಲ. ಹಾಗೆ ಮಾಡುವ ಹಾಗಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ. ನನ್ನ ಉದ್ದೇಶ ಯಾವುದಾದರೂ ಒಂದು ಪಕ್ಷಕ್ಕೆ ಅಧಿಕಾರ ಸಿಗಬೇಕು. ಅಂಥ ವ್ಯವಸ್ಥೆಯನ್ನು ಹಾಳು ಮಾಡುವ ಉದ್ದೇಶವಿಲ್ಲ.
9.ಈ ಹಂತದಲ್ಲಿ ಜನರಿಂದ ನಿಮ್ಮ ನಿರೀಕ್ಷೆ ಏನು?
ನಾನೊಂದು ಅಡುಗೆ ಮಾಡಿದ್ದೀನಿ. ಒಂದು ಸ್ಪೂನ್ ನಲ್ಲಿ ತಿಂದು ರುಚಿ ನೋಡಿ, ಹೇಗಿದೆ ಅಂತ ಹೇಳಿ. ನಿಮ್ಮೆಲ್ಲರ ಅಭಿಪ್ರಾಯ ತಿಳಿಸಿ. ಇಷ್ಟವಾದರೆ ಮತ ಹಾಕಿ. ನಾಲ್ಕು ಜನಕ್ಕೆ ತಿಳಿಸಿ.
10.ಎಲ್ಲ ಪಕ್ಷಗಳು ಅಬ್ಬರದಿಂದ ಪ್ರಚಾರ ಮಾಡ್ತಿವೆ. ನೀವು ಯಾವಾಗ ಶುರು ಮಾಡ್ತೀರಿ?
ಕಂಟೆಂಟ್ ಗಟ್ಟಿ ಇದ್ದರೆ ಜನರೇ ಅದನ್ನು ತೆಗೆದುಕೊಂಡು ಹೋಗ್ತಾರೆ. ನಮ್ಮ ಉದ್ದೇಶ- ವಿಚಾರ ಗಟ್ಟಿಯಿದೆ. ಅದು ಇಷ್ಟವಾದರೆ ಅವರೇ ಮುಂದಕ್ಕೆ ತಲುಪಿಸುತ್ತಾರೆ. ನಮಗೆ ಅಬ್ಬರ ಬೇಡ. ವಿಚಾರ ಬೇಕು.