1 ವರ್ಷದ ಗೆಲುವು: ದೆಹಲಿಯಲ್ಲಿ ಸೇರುವ ಸಾವಿರಾರು ರೈತರ ನಿಯಂತ್ರಣಕ್ಕೆ ಹೆಚ್ಚಿದ ಭದ್ರತೆ
ನವದೆಹಲಿ, ನವೆಂಬರ್ 24: ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದ ರೈತರು ನಡೆಸಿದ ಆಂದೋಲನವು ಶುಕ್ರವಾರಕ್ಕೆ ಒಂದು ವರ್ಷ ಪೂರೈಸಲಿದೆ. ಈ ಹಿನ್ನೆಲೆ ದೆಹಲಿಯ ಗಡಿಯಲ್ಲಿ ಸಾವಿರಾರು ಸಂಖ್ಯೆಯ ರೈತರು ಸೇರುವ ಸಾಧ್ಯತೆಗಳಿವೆ.
ರೈತರ ಪ್ರತಿಭಟನೆಗೆ ಒಂದು ವರ್ಷ ಪೂರೈಸಿದ ಹಿನ್ನೆಲೆ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಯೋಜಿಸಲಾಗಿದೆ. ಇದರ ಭಾಗವಾಗಿ ಸಾವಿರಾರು ಸಂಖ್ಯೆಯಲ್ಲಿ ರೈತರು ಸೇರುವ ನಿರೀಕ್ಷೆಯಿದ್ದು, ರಾಷ್ಟ್ರ ರಾಜಧಾನಿಯ ವಿವಿಧ ಗಡಿ ಭಾಗಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ ಎಂದು ದೆಹಲಿ ಪೊಲೀಸರು ಗುರುವಾರ ಹೇಳಿದ್ದಾರೆ.
ಕಳೆದ ನವೆಂಬರ್ 26, 2020 ರಿಂದ ಒಂದು ವರ್ಷದವರೆಗೂ ದೆಹಲಿಯ ಮೂರು ಗಡಿಗಳಲ್ಲಿ ರೈತರು ಪ್ರತಿಭಟನೆ ಕುಳಿತಿದ್ದಾರೆ. ಸಿಂಘು, ಟಿಕ್ರಿ ಮತ್ತು ಗಾಜಿಪುರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಮೊಕ್ಕಾಂ ಹೂಡಿದ್ದಾರೆ. ಕಳೆದ ವರ್ಷ ನವೆಂಬರ್ 26 ಮತ್ತು 27ರಂದು "ದಿಲ್ಲಿ ಚಲೋ" ಕಾರ್ಯಕ್ರಮದೊಂದಿಗೆ ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಚಳುವಳಿ ಪ್ರಾರಂಭಿಸಲಾಗಿತ್ತು.
Timeline: ವಿವಾದಿತ ಕೃಷಿ ಕಾಯ್ದೆ ವಿರುದ್ಧ ಅನ್ನದಾತರ ಹೋರಾಟದ ಹಾದಿ
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರ ವಿರೋಧಕ್ಕೆ ಕಾರಣವಾಗಿದ್ದವು. ರೈತರ ಸುದೀರ್ಘ ಹೋರಾಟದಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರವು ಕಳೆದ ವಾರವಷ್ಟೇ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದು, ನವೆಂಬರ್ 24ರಂದು ಕೃಷಿ ಕಾಯ್ದೆ ರದ್ದುಗೊಳಿಸುವ ಮಸೂದೆಗೆ ಸಂಪುಟದಿಂದ ಅನುಮೋದನೆ ಪಡೆಯಲಾಗಿದೆ.
ರೈತರ ಸುದೀರ್ಘ ಹೋರಾಟವು ಸರ್ಕಾರದ ಸೊಕ್ಕಿನ ಸಂಕೇತ
ದೇಶದಲ್ಲಿ ರೈತರು ಒಂದು ವರ್ಷಗಳವರೆಗೂ ಸುದೀರ್ಘ ಹೋರಾಟ ನಡೆಸುತ್ತಾರೆ ಎಂದರೆ ಅದು ಸಂವೇದನಾಶೀಲತೆ ಮತ್ತು ದುರಹಂಕಾರವನ್ನು ತೋರಿಸುತ್ತದೆ. ಶ್ರಮಜೀವಿಗಳ ಬಗ್ಗೆ ಸರ್ಕಾರ ತೋರುವ ನಿಲುವಿನ ಸ್ಪಷ್ಟ ಪ್ರತಿಬಿಂಬವಾಗಿರುತ್ತದೆ," ಎಂದು ರೈತ ಆಂದೋಲನದಲ್ಲಿ 40ಕ್ಕೂ ಹೆಚ್ಚು ರೈತ ಸಂಘಟನೆಗಳ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
"ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ಮತ್ತು ಸುದೀರ್ಘವಾದ ಪ್ರತಿಭಟನಾ ಚಳುವಳಿಯ 12 ತಿಂಗಳ ಅವಧಿಯಲ್ಲಿ, ಕೋಟ್ಯಂತರ ಜನರು ಭಾಗವಹಿಸಿದ್ದರು. ಇದು ಭಾರತದ ಪ್ರತಿ ರಾಜ್ಯ, ಪ್ರತಿ ಜಿಲ್ಲೆ ಮತ್ತು ಪ್ರತಿ ಹಳ್ಳಿಗೆ ವ್ಯಾಪಿಸಿತು. ಮೂರು ರೈತ ವಿರೋಧಿ ಕಾನೂನುಗಳ ರದ್ದತಿಗೆ ಸರ್ಕಾರದ ನಿರ್ಧಾರ ಮತ್ತು ಕ್ಯಾಬಿನೆಟ್ ಅನುಮೋದನೆಯ ಹೊರತಾಗಿ, ಆಂದೋಲನವು ರೈತರು, ಸಾಮಾನ್ಯ ನಾಗರಿಕರು ಮತ್ತು ರಾಷ್ಟ್ರಕ್ಕೆ ಹಲವು ಗೆಲುವನ್ನು ತಂದುಕೊಟ್ಟಿದೆ," ಎಂದು ಕಿಸಾನ್ ಮೋರ್ಚಾ ತಿಳಿಸಿದೆ.
ಕೃಷಿ ಕಾಯ್ದೆ ರದ್ದು ರೈತರಿಗೆ ಸಿಕ್ಕ ಮೊದಲ ಗೆಲುವು
ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದು ರೈತರ ಆಂದೋಲನಕ್ಕೆ ಸಿಕ್ಕ ಮೊದಲ ಗೆಲುವಾಗಿದೆ. ಪ್ರತಿಭಟನಾನಿರತ ರೈತರು ಉಳಿದ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ಕಾಯುತ್ತಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
"ದೆಹಲಿಯಲ್ಲಿ ಬೃಹತ್ ಪ್ರತಿಭಟನೆಯೊಂದಿಗೆ ಐತಿಹಾಸಿಕ ಕೃಷಿ ಚಳುವಳಿಯ ಒಂದು ವರ್ಷವನ್ನು ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾದ ಕರೆ ನೀಡಿದ್ದು, ದೂರದ ರಾಜ್ಯಗಳ ರಾಜಧಾನಿಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಮೋರ್ಚಾಗಳು, ರೈತರು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ದೆಹಲಿಯ ವಿವಿಧ ಪ್ರತಿಭಟನಾ ಸ್ಥಳಗಳಿಗೆ ಸಾವಿರಾರು ರೈತರು ಆಗಮಿಸುತ್ತಿದ್ದಾರೆ. ದೆಹಲಿಯಿಂದ ದೂರವಿರುವ ರಾಜ್ಯಗಳಲ್ಲಿ ರ್ಯಾಲಿಗಳು, ಧರಣಿಗಳು ಮತ್ತು ಇತರ ಕಾರ್ಯಕ್ರಮಗಳೊಂದಿಗೆ ದಿನವನ್ನು ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ," ಎಂದು ಎಸ್ಕೆಎಂ ಹೇಳಿದೆ.
ತಮಿಳುನಾಡು, ಬಿಹಾರ, ಮಧ್ಯಪ್ರದೇಶದಲ್ಲಿ ಪ್ರತಿಭಟನೆ
ಕರ್ನಾಟಕದಲ್ಲಿ ರೈತರು ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಲಿದ್ದಾರೆ. ತಮಿಳುನಾಡು, ಬಿಹಾರ ಮತ್ತು ಮಧ್ಯಪ್ರದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರೈತರು ಕಾರ್ಮಿಕ ಸಂಘಟನೆಗಳೊಂದಿಗೆ ಜಂಟಿಯಾಗಿ ಪ್ರತಿಭಟನೆ ನಡೆಸಲಿದ್ದಾರೆ. ರಾಯ್ಪುರ ಮತ್ತು ರಾಂಚಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿಗಳನ್ನು ನಡೆಸಲಾಗುವುದು. ಪಶ್ಚಿಮ ಬಂಗಾಳದ ಕೋಲ್ಕತ್ತಾ ಮತ್ತು ಜಿಲ್ಲೆಗಳಲ್ಲಿ ರ್ಯಾಲಿಗಳನ್ನು ಯೋಜಿಸಲಾಗಿದೆ.
ಜಗತ್ತಿನಾದ್ಯಂತ ಶುಕ್ರವಾರದಿಂದ ಒಗ್ಗಟ್ಟಿನ ಕಾರ್ಯಗಳು ನಡೆಯಲಿವೆ. ದೆಹಲಿಯ ಮೂರು ಗಡಿ ಪ್ರದೇಶಗಳಲ್ಲಿ ವರ್ಷವಿಡೀ ನಡೆದ ಚಳವಳಿಯಲ್ಲಿ ಇಲ್ಲಿಯವರೆಗೆ ಕನಿಷ್ಠ 683 ರೈತರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಎಸ್ಕೆಎಂ ಹೇಳಿದೆ.
ದೆಹಲಿ ಗಡಿಯಲ್ಲಿ ಹೆಚ್ಚಿದ ಭದ್ರತಾ ಸಿಬ್ಬಂದಿ ನಿಯೋಜನೆ
ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಪಡೆಯನ್ನು ನಿಯೋಜಿಸಲಾಗುತ್ತಿದೆ. ದೆಹಲಿ ಪೊಲೀಸ್ ಸಿಬ್ಬಂದಿ ಜೊತೆ ಅರೆಸೇನಾ ಪಡೆಗಳ ಹೆಚ್ಚುವರಿ ನಿಯೋಜನೆ ಮಾಡಲಾಗಿದೆ. "ಸಾಕಷ್ಟು ಭದ್ರತಾ ನಿಯೋಜನೆಯನ್ನು ಮಾಡಲಾಗಿದೆ. ಸ್ಥಳದಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ನಿಕಟ ಮೇಲ್ವಿಚಾರಣೆ ಇರುತ್ತದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಪ್ಪಿಸಲು ನಾವು ವೃತ್ತಿಪರ ಪೋಲೀಸಿಂಗ್ ಅನ್ನು ಬಳಸುತ್ತಿದ್ದೇವೆ," ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ವಲಯ - 1ರ ವಿಶೇಷ ಪೊಲೀಸ್ ಆಯುಕ್ತ ದೇವೇಂದ್ರ ಪಾಠಕ್ ಹೇಳಿದ್ದಾರೆ. ಈ ಸಂಬಂಧ ಗುರುವಾರ ರೈತ ಮುಖಂಡರ ಜತೆ ಸಭೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. "ನಾವು ರೈತರೊಂದಿಗೆ ಮಾತನಾಡುತ್ತಿದ್ದೇವೆ ಮತ್ತು ನಮ್ಮೊಂದಿಗೆ ಸಹಕರಿಸಲು ಮನವೊಲಿಸುತ್ತಿದ್ದೇವೆ" ಎಂದು ಪಾಠಕ್ ಹೇಳಿದ್ದಾರೆ.
ಗಡಿ ದಾಟಲು ಯತ್ನಿಸಿದರೆ ಕಠಿಣ ಕ್ರಮದ ಎಚ್ಚರಿಕೆ
ದೆಹಲಿಯ ಪ್ರತಿಭಟನಾ ಸ್ಥಳದಲ್ಲಿ ಒಂದು ವೇಳೆ ಪ್ರತಿಭಟನಾಕಾರರು ಗಡಿ ದಾಟಲು ಯತ್ನಿಸಿದರೆ ಅಥವಾ ಅನಾಹುತ ಸೃಷ್ಟಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಳೆದ ಬಾರಿ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ರೈತರು ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ದೆಹಲಿ ಪ್ರವೇಶಿಸಿದ ರೈತರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆಯಿತು. ಪೊಲೀಸರ ವರ್ತನೆಯಿಂದ ಕೆರಳಿದ ಪ್ರತಿಭಟನಾಕಾರರು ಬ್ಯಾರಿಕೇಡ್ ಮುರಿದರು, ವಾಹನಗಳನ್ನು ಉರುಳಿಸಿದರು, ಅಂತಿಮವಾಗಿ ಗಡಿಯನ್ನು ದಾಟಿ ನಗರವನ್ನು ಪ್ರವೇಶಿಸದರು. ಅಂತಿಮವಾಗಿ ಐತಿಹಾಸಿಕ ಕೆಂಪು ಕೋಟೆಯ ಮೇಲೆ ಧಾರ್ಮಿಕ ಧ್ವಜವನ್ನು ಹಾರಿಸಿದ್ದರು. ಅಂದು ನಡೆದ ಹಿಂಸಾಚಾರದಲ್ಲಿ 300ಕ್ಕೂ ಹೆಚ್ಚು ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, 22 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
Recommended Video