ಮೆಡಿಕಲ್ ಸೀಟು ದಂಧೆ ಪ್ರಕರಣ, ರಾಧಿಕಾ ಕುಮಾರಸ್ವಾಮಿ ವಿವಾದ
ಬೆಂಗಳೂರು, ಜನವರಿ 07: ನಟಿ ರಾಧಿಕಾ ಕುಮಾರಸ್ವಾಮಿ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿರುವ ಆರ್ಎಸ್ ಎಸ್ ನಕಲಿ ನಾಯಕನ ಇನ್ನೊಂದು ಮುಖ ಅನಾವರಣಗೊಂಡಿದೆ. ಸ್ವಾಮಿ ಅಲಿಯಾಸ್ ಯುವರಾಜ ಮೊದಲು ನಿಜವಾಗಿಯೂ ಮಠದ ಪಟ್ಟ ಏರಿದ್ದರು. ಅದ್ಯಾಕೋ ರುಚಿಯಿಲ್ಲದ ಊಟ ಜೀವನ ಇಷ್ಟವಾಗಿಲ್ಲ. ಐಶರಾಮಿ ಜೀವನಕ್ಕಾಗಿ ಡೀಲಿಂಗ್ ಮುಖವಾಡ ಧರಿಸಿ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ ಹಣ ಪಡೆದು ಮೋಸ ಮಾಡಿದ್ದ. ಈ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಆಸಾಮಿ ನಾಲ್ಕು ವರ್ಷಗಳಿಂದ ಎತ್ತಿರುವ ದಶಾವತಾರಗಳ ಚಿತ್ರಣ ಇಲ್ಲಿದೆ ನೋಡಿ.
ರಾಜ್ಯಪಾಲರನ್ನಾಗಿ ಮಾಡ್ತೀನಿ ಅಂತ 10 ಕೋಟಿ ವಂಚಿಸಿದ ಯುವರಾಜ !
ಜ್ಯೋತಿಷಿ :
ಪ್ರತಿಷ್ಠಿತ ಉದ್ಯಮಿಗಳಿಗೆ ಉನ್ನತ ಸ್ಥಾನ ಕೊಡುವುದಾಗಿ ನಂಬಿಸಿ ಸಿಸಿಬಿ ಪೊಲೀಸರಿಗೆ ಸೆರೆ ಸಿಕ್ಕ ಸ್ವಾಮೀಜಿ ಮೊದಲು ಜ್ಯೋತಿಷಿ ಅವತಾರ ಎದ್ದಿದ್ದ. ಕೆಲವರಿಗೆ ಭವಿಷ್ಯ ನುಡಿಯುವ ಮೂಲಕ ಪರಿಚಯನಾಗಿದ್ದ. ಜ್ಯೋತಿಷಿಯಾಗಿ ಯುವರಾಜ್ ನಟಿ ರಾಧಿಕಾ ಅವರ ಕುಟುಂಬಕ್ಕೆ ಹತ್ತಿರ ವಾಗಿದ್ದರು ಎಂಬುದನ್ನು ಅವರೇ ಸ್ಪಷ್ಟಪಡಿಸಿದ್ದರು. ಈತನ ಭವಿಷ್ಯವೇ ಕಟ್ಟಿಕೊಳ್ಳದೇ ಬೇರೆಯವರ ಬಗ್ಗೆ ಭವಿಷ್ಯ ನುಡಿದು ಕೆಲವರ ಪ್ರತಿಷ್ಠಿತ ವ್ಯಕ್ತಿಗಳ ಸಂಪರ್ಕ ಸಾಧಿಸಿದ್ದ. ಜ್ಯೋತಿಷಿ, ಪೂಜೆ ನೆಪದಲ್ಲಿ ಪಡೆಯುತ್ತಿದ್ದ ಬಿಗಿಗಾಸು ಸ್ವಾಮೀಜಿ ಹೊಟ್ಟೆ ತುಂಬಿಸುತ್ತಿರಲಿಲ್ಲ. ಜ್ಯೋತಿಷಿ ಅವತಾರ ಬಿಟ್ಟು ಬೇರೆ ಅವತಾರ ಎತ್ತಿದ್ದ.
ನಕಲಿರಾಜನ ಬ್ಯಾಂಕ್ ಖಾತೆಯಿಂದ ನಟಿ ರಾಧಿಕಾ ಖಾತೆಗೆ ಕೋಟಿ ರೂ. ವರ್ಗ
ಸೇವಾಲಾಲ್ ಬಸವ ಸ್ವಾಮೀಜಿ:
ಇನ್ನು ಟೋಪಿರಾಜ್ ಮೊದಲ ಸೇವಾಲಾಲ್ ಸಂಗಮ ಬಸವ ಸ್ವಾಮೀಜಿಯಾಗಿ ಗುರುತಿಸಿಕೊಂಡಿದದ್ದರು. ಸೇವಾಲಾಲ್ ಸಂಗಮ ಬಸವ ಸ್ವಾಮಿಯಾಗಿ ಮೆಡಿಕಲ್ ಸೀಟು ಆಕಾಂಕ್ಷಿಗಳಿಗೆ ಗಾಳ ಹಾಕಿದ್ದರು. 2003 ರಲ್ಲಿಯೇ ಹಲವು ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ಪೀಕಿದ್ದ. ಉತ್ತರ ಪ್ರದೇಶ, ಆಂಧ್ರ ಪ್ರದೆಶ, ರಾಜಸ್ಥಾನ ಮೂಲದ ವಿದ್ಯಾರ್ಥಿಗಳಿಂದ ಲಕ್ಷಾಂತರ ಹಣ ಪಡೆದಿದ್ದ. ಆದರೆ ಮೆಡಿಕಲ್ ಸೀಟು ಕೊಡಿಸದೇ ಪರಾರಿಯಾಗಿದ್ದ. ಸೇವಾಲಾಲ್ ಬಸವ ಸ್ವಾಮಿಯನ್ನು ನಂಬಿ ಮೆಡಿಕಲ್ ಸೀಟಿಗಾಗಿ ಕಾಯುತ್ತಿದ್ದವರು ಬೀದಿಗೆ ಬಿದ್ದಿದ್ದರು. ಹಣವೂ ಇಲ್ಲದೇ ಸೀಟು ಇಲ್ಲದೇ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸೆವಾಲಾಲ್ ಸ್ವಾಮೀಜಿಯನ್ನು ಬಂಧಿಸಿದ್ದ ಉಪ್ಪಾರಪೇಟೆ ಪೊಲೀಸರು ಜೈಲಿಗೆ ಅಟ್ಟಿದ್ದರು.
ನ್ಯೂಸ್ ಚಾನೆಲ್ ಮಾಲೀಕನಿಗೆ ಆರು ಕೋಟಿ ವಂಚಿಸಿದ ನಕಲಿ ಆರ್ ಎಸ್ ಎಸ್ ನಾಯಕ!
ಕಿಲಾಡಿ ಖೈದಿ:
ಮೆಡಿಕಲ್ ಸೀಟು ಕೊಡಿಸುವುದಾಗಿ ವಂಚಿಸಿದ್ದ ಸೇವಾಲಾಲ್ ಅಲಿಯಾಸ್ ಟೋಪಿರಾಜನಿಗೆ ನ್ಯಾಯಾಲಯ ಜಾಮೀನು ನೀಡಿರಲಿಲ್ಲ. ಹೀಗಾಗಿ ವಿಚಾರಣಾಧೀನ ಕೈದಿಯಾಗಿ ಸೇವಾಲಾಲ್ ಬಸವ ಸ್ವಾಮೀಜಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐದು ತಿಂಗಳ ಕಾಲ ಮುದ್ದೆ ಮುರಿದಿದ್ದರು. ಆನಂತರ ಜಾಮೀನು ಮೇಲೆ ಬಿಡುಗಡೆಯಾಗಿ ಹೊರ ಬಂದಿದ್ದ. ಇದೀಗ ಸೇವಾಲಾಲ್ ಬಸವ ಸ್ವಾಮಿ ಹೆಸರಿನಲ್ಲಿ ಕಣ್ಮರೆಯಾಗಿದ್ದ ಯುವರಾಜನನ್ನು ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಮೆಡಿಕಲ್ ಸೀಟು ಡೀಲ್ ಪ್ರಕರಣದ ತನಿಖೆ ಎದುರಿಸಬೇಕಾಗಿದೆ.
ಸಿಸಿಬಿ ಕಸ್ಟಡಿಯಲ್ಲಿರುವ ಯುವರಾಜ ಆಲಿಯಾಸ್ ಸ್ವಾಮಿ 'ಮುಂಡಾಯಿಸಿದ' ಕಥೆ ಬಗೆದಷ್ಟು
ಅಜ್ಞಾತವಾಸಿ:
ಜಾಮೀನು ಮೇಲೆ ಬಿಡುಗಡೆಯಾಗಿ ಹೊರ ಬಂದಿದ್ದ ಸೇವಾಲಾಲ್ ಬಸವ ಸ್ವಾಮೀಜಿ ಪೊಲೀಸರ ಕಣ್ಣಿಗೆ ಕಾಣದಂತೆ ಸುಮಾರು ನಾಲ್ಕು ವರ್ಷಗಳ ಕಾಲ ಅಜ್ಞಾತವಾಸಿಯಾಗಿ ಜೀವನ ಸಾಗಿಸುತ್ತಿದ್ದ. ಸೇವಾಲಾಲ್ ಹೆಸರು ಬದಲಿಸಿದ್ದ ಈತ ಮೊದಲಿನ ಜ್ಯೋತಿಷಿ ಅವತಾರದಲ್ಲಿದ್ದಾಗ ಪರಿಚಿತರಾಗಿದ್ದವರ ಸಂಪರ್ಕ ಸಾಧಿಸಿದ್ದ. ಹೀಗೆ ನಾಲ್ಕು ವರ್ಷ ಅಜ್ಞಾತವಾಸಿಯಾಗಿದ್ದ ಸ್ವಾಮೀಜಿಯ ಐಶರಾಮಿ ಜೀವನ ಕನಸು ನನಸಾಗಿರಲಿಲ್ಲ. ಆನಂತರ ಎತ್ತಿದ್ದೇ ಆರ್ಎಸ್ ಎಸ್ ಲೀಡರ್ ಅವತಾರ !
ಆರ್ಎಸ್ಎಸ್ ನಾಯಕ !:
ನಾಲ್ಕೈದು ಅವತಾರ ಎತ್ತಿದ್ದ ಸ್ವಾಮಿಗೆ ಬದುಕು ಏನೆಂಬುದು ಅರ್ಥವಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತಿದೆ.ಆರ್ಎಸ್ಎಸ್ ನಾಯಕರಿಗೆ ಎಲ್ಲಿಲ್ಲದ ಗೌರವ. ಹೀಗಾಗಿ ಪ್ಯಾಂಟು ಗೆಟಪ್ ಬಿಟ್ಟು ಥೇಟ್ ಆರ್ಎಸ್ ಎಸ್ ನಾಯಕನಂತೆ ಬದಲಾದ. ಹಣೆಯಲ್ಲಿ ಕುಂಕಮ, ಬಿಳಿ ಖಾದಿ ಪಂಚೆ, ಅಂಗಿ ಧರಿಸಿದ್ದ. ವಯಸ್ಸೂ ಕೂಡ ಮಾಗಿತ್ತು. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿಂದ ಹಿಡಿದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ನಂಬುವ ರೀತಿ ಗೆಟಪ್ ಬದಲಿಸಿದ್ದ. ಸ್ವಾಮಿಯ ಆರ್ಎಸ್ ಎಸ್ ನಾಯಕ ನಂತೆ ಬಿಂಬಿಸುವ ಶೈಲಿಯಲ್ಲಿ ಬೆಂಗಳೂರಿನಿಂದ ದೆಹಲಿ ವರೆಗೂ ಪ್ಲೈಟ್ ನಲ್ಲಿ ಓಡಾಟ ಶುರು ಮಾಡಿದ. ಪ್ಲೈಟ್ ನಲ್ಲಿ ಪ್ರಯಾಣಿಸುವಾಗ ಸಿಗುವ ಪ್ರಭಾವಿ ಉದ್ಯಮಿಗಳು, ರಾಜಕೀಯ ನಾಯಕರಿಗೆ ನಾನು ಆರ್ಎಸ್ ಎಸ್ ನಾಯಕ. ಕೇಂದ್ರ ಗೃಹ ಸಚಿವರಿಂದ ಹಿಡಿದು ಎಲ್ಲರೂ ಗೊತ್ತಿರುವರು. ನನ್ನ ಮಾತಿಗೆ ಅಡ್ಡ ಹೇಳುವರೇ ಇಲ್ಲ ಎಂದು ಬೂಚಿ ಬಿಟ್ಟಿದ್ದ. ನಕಲಿ ಆರ್ಎಸ್ಎಸ್ ನಾಯಕನ ಅವತಾರಕ್ಕೆ ಹಲವಾರು ಉದ್ಯಮಿಗಳು, ಅಧಿಕಾರಿಗಳು, ಶಾಸಕರು ಮರುಳಾಗಿದ್ದರು. ಕೋಟ್ಯಂತರ ರೂಪಾಯಿ ಪಡೆದು ಆಗರ್ಭ ಶ್ರೀಮಂತನಾಗಿದ್ದ. ನಾಗರಭಾವಿಯಲ್ಲಿ ಬಂಗಲೆ, ಸಕಲೇಶಪುರದ ಬಳಿ ಕಾಫಿ ಎಸ್ಟೇಟ್ ಸಂಪಾದಿಸಿದ್ದ. ಈತನ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ 90 ಕೋಟಿ ರೂಪಾಯಿ ಮೊತ್ತದ ಖಾಲಿ ಚೆಕ್ ಗಳು ಸಿಕ್ಕಿದ್ದವು. ಇವನ ಬ್ಯಾಂಕ್ ಖಾತೆಗಳು 47. ಪ್ರಭಾವಿ ರಾಜಕೀಯ ವ್ಯಕ್ತಿಗಳ ಸಂಪರ್ಕ ಇರುವಂತೆ ಪೋಟೋಗಳನ್ನೇ ತೋರಿಸಿ ಟೋಪಿ ಹಾಕುತ್ತಿದ್ದ. ಉನ್ನತ ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ ಕೆಲವು ಅಧಿಕಾರಿಗಳು ಕೂಡ ವರ್ಗಾವಣೆ ಬಯಸಿ ಸ್ವಾಮಿ ಖಾತೆಗೆ ಹಣ ಹಾಕಿ ನಾಮ ಹಾಕಿಸಿಕೊಂಡಿದ್ದಾರೆ. ಸದ್ಯ ಎಂಟು ವಂಚನೆ ಪ್ರಕರಣ ದಾಖಲಾಗಿವೆ.
ಬೇನಾಮಿದಾರ:
ಟೋಪಿ ಸ್ವಾಮಿ ಬೇನಾಮಿ ವಹಿವಾಟು ನಡೆಸಿ ತನ್ನ ಆಪ್ತರೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿಚಾರಣೆ ಎದುರಿಸುವಂತೆ ಮಾಡಿದ್ದ. ಚಾಲಕನ ಬ್ಯಾಂಕ್ ಖಾತೆ ಮೂಲಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದ. ಅಕ್ರಮ ವಹಿವಾಟು ನೋಡಿ ಸ್ವಾಮಿ ಚಾಲಕನಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಈ ವಿಚಾರವಾಗಿ ಸ್ವಾಮಿಯನ್ನು ಕೇಳಿದಾಗ ಹಲ್ಲೆ ನಡೆಸಿದ್ದ. ರೌಡಿಗಳ ಕೈಯಲ್ಲಿ ಮುಗಿಸುವ ಬೆದರಿಕೆ ಹಾಕಿದ್ದ. ಈ ಕುರಿತು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಹೀಗೆ ಪರಿಚಿತರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆಗೆದು ಅವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ತನಿಖೆ ಎದುರಿಸುವಂತೆ ಮಾಡುತ್ತಿದ್ದ. ಈತ ಹಲವಾರು ಬೇನಾಮಿ ಬ್ಯಾಂಕ್ ಖಾತೆ ಮೂಲಕ ವಹಿವಾಟು ನಡೆಸಿವ ಮೂಲಕ ಬೇನಾಮಿದಾರನಾಗಿಯೂ ಕುಖ್ಯಾತಿ ಹೊಂದಿದ್ದಾನೆ.
ಫೈನಾನ್ಸಿಯರ್ :
ನಟಿ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದ ಪ್ರಕಾರ, ಸ್ವಾಮಿ ಅಲಿಯಾಸ್ ಟೋಪಿರಾಜ್ ಸಿನಿಮಾ ನಿರ್ಮಾಣಕೈ ಹೂಡಿಕೆ ಮಾಡಿದ್ದರು. ಇದರ ಭಾಗವಾಗಿಯೇ ನಾಟ್ಯರಾಣಿ ಸಿನಿಮಾ ನಿರ್ಮಿಸುವ ರಾಧಿಕಾ ಕುಮಾರಸ್ವಾಮಿ ಮನವಿಗೆ ಸ್ಪಂದಿಸಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿರುವ ಸಂಗತಿ ಬಯಲಾಗಿತ್ತು. ಸದ್ಯ ಟೋಪಿರಾಜ್ ನ ಇನ್ನೂ ನಲವತ್ತೇಳು ಬ್ಯಾಂಕ್ ಖಾತೆಗಳ ವಿವರಗಳನ್ನು ಸಿಸಿಬಿ ಪೊಲೀಸರು ಜಾಲಾಡುತ್ತಿದ್ದಾರೆ. ಅವುಗಳ ಮಾಹಿತಿ ಬಹಿರಂಗವಾದರೆ ಸ್ವಾಮಿಯ ಇನ್ನೂ ಹಲವು ನಕಲಿ ಅವತಾರಗಳು ಹೊರಬೀಳಲಿವೆ. ಟೋಪಿರಾಜನ ಆರ್ ಎಸ್ ಎಸ್ ನಾಯಕ ಅವತಾರಕ್ಕೆ ಬಲಿಪಶು ಆಗಿರುವ ಮತ್ತಷ್ಟು ಮಂದಿ ವಿವರಗಳು ಲಭ್ಯವಾಗಲಿವೆ.