Fact check: 18 ರಿಂದ 40 ವರ್ಷದೊಳಗಿನವರಿಗೆ ಕೇಂದ್ರದಿಂದ ತಿಂಗಳಿಗೆ 1800 ರೂ.
ಸಾಮಾಜಿಕ ಜಾಲತಾಣದಲ್ಲಿ ಅನೇಕ ಸಂದೇಶಗಳು ಹರಿದಾಡುತ್ತಲೇ ಇರುತ್ತವೆ. ಇವುಗಳಲ್ಲಿ ಕೆಲವು ಉತ್ತಮ ಸಂದೇಶಗಳೇ ಆಗಿದ್ದರೂ ಇನ್ನೂ ಕೆಲವು ಜನರನ್ನು ದಾರಿ ತಪ್ಪಿಸುವಂತಹ ಹಾಗೂ ವೈಯಕ್ತಿ ಲಾಭಕ್ಕಾಗಿ ಕಳಿಸುವ ಸಂದೇಶಗಳು ಆಗಿರುತ್ತವೆ. ಇವುಗಳ ಬಗ್ಗೆ ಜನ ಎಚ್ಚರಕೆಯಿಂದಿರಬೇಕು. ಇದರಿಂದಾಗಿ ನಿಮ್ಮಿಂದ ಹಣ ಪಡೆಯುವಂತಹ, ಹಣ ನೀಡುವಂತಹ ಸಂದೇಶ ನೀಡಿ ವೈಯಕ್ತಿ ಮಾಹಿತಿ ನೀಡುವ ಮುನ್ನ ಎಚ್ಚರವಾಗಿರಿ. ಇದರಿಂದ ನೀವು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಇತ್ತೀಚೆಗೆ ಇಂತಹದ್ದೇ ಒಂದು ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅದನ್ನು ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಸುಳ್ಳು ಸಂದೇಶ ಎಂದು ಹೇಳಿದೆ. ಹಾಗಾದರೆ ವೈರಲ್ ಸಂದೇಶದಲ್ಲಿ ಏನಿದೆ?
18 ರಿಂದ 40 ವರ್ಷದೊಳಗಿನ ಜನರು ಆನ್ಲೈನ್ ಫಾರ್ಮ್ ಅನ್ನು ಭರ್ತಿ ಮಾಡಿದರೆ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿ ತಿಂಗಳು 1800 ರೂಪಾಯಿಗಳನ್ನು ನೀಡುತ್ತಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಕಠ್ಮಂಡು ಪಬ್ನಲ್ಲಿ ರಾಹುಲ್ ಗಾಂಧಿ ಜೊತೆಗಿದ್ದ ಮಹಿಳೆ ಯಾರು?
|
ಏನಿದು ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆ?
ಆದರೆ ಈ ಸಂದೇಶ ತಪ್ಪಾಗಿದೆ ಎಂದು PIB FactCheck ಹೇಳಿದೆ. ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆ ಪಿಂಚಣಿ ಯೋಜನೆಯಾಗಿದೆ. ಇದರಿಂದ ಫಲಾನುಭವಿಗಳಿಗೆ 60 ವರ್ಷ ತುಂಬಿದ ನಂತರವೇ ಪಿಂಚಣಿ ಸಿಗಲಿದೆ. ಇದನ್ನು ಹೊರತಾಗಿ ಯಾರಿಗೂ ಹಣವನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಬೀದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಕಟ್ಟಡ ಕಾರ್ಮಿಕರು, ಮನೆಕೆಲಸದವರು, ಕೃಷಿ ಕಾರ್ಮಿಕರು, ಕಸ ಸಂಗ್ರಹ ಮಾಡುವವರು, ಬೀಡಿ ಕಾರ್ಮಿಕರು, ಹ್ಯಾಡ್ಲೂಮ್ ಕಾರ್ಮಿಕರು, ಚರ್ಮೋದ್ಯಮ, ಚಿಂದಿ ಆಯುವವರು ಮತ್ತು ಇತರೇ ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರು ಕಂಡು ಬರುತ್ತಾರೆ. ಈ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ರಕ್ಷಣೆ ಕಲ್ಪಿಸಲು ಪಿಂಚಣಿ ಸೌಲಭ್ಯವನ್ನು ವಿಸ್ತರಿಸಿ ಭಾರತ ಸರ್ಕಾರವು ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ (ಪಿಎಮ್-ಸಿಮ್) ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ.
ಮಾಸಿಕ ಆದಾಯ ಎಷ್ಟಿರಬೇಕು?
ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆಗೆ ಸೇರಲು ಕೆಲ ಅರ್ಹತೆಗಳನ್ನು ಹೊಂದಿರಬೇಕು.
* 18 ರಿಂದ 40 ವರ್ಷದೊಳಗಾಗಿರಬೇಕು.
* ಅವರ ಮಾಸಿಕ ಆದಾಯ ರೂ.15,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು.
* ಆದಾಯ ತೆರಿಗೆ ಪಾವತಿಸುವವರಾಗಿರಬಾರದು.
* ಸಂಘಟಿತ ವಲಯದ ಕಾರ್ಮಿಕರಾಗಿರಬಾರದು ಹಾಗೂ ಇ.ಎಸ್.ಐ/ ಪಿ.ಎಫ್/ ಎನ್.ಪಿ.ಎಸ್ ಯೋಜನೆಗೆ ಒಳಪಟ್ಟಿರಬಾರದು.
ನೊಂದಣಿದಾರರು ಹೊಂದಿರಬೇಕಾದ ವಿವರಗಳಿವು-
ಅರ್ಹ ಫಲಾನುಭವಿಗಳು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ) ಗಳಲ್ಲಿ ಯೋಜನೆಯಡಿ ನೋಂದಾಯಿಸಬಹುದಾಗಿರುತ್ತದೆ. ಸಿ.ಎಸ್.ಸಿ.ಗಳ ವಿವರಗಳನ್ನು ಹತ್ತಿರದ ಎಲ್.ಐ.ಸಿ. ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ಇ.ಎಸ್.ಐ. ಕಾರ್ಪೋರೇಷನ್, ಹಾಗೂ ಭವಿಷ್ಯನಿಧಿ ಇಲಾಖೆ ಹಾಗೂ ಅವರ ವೆಬ್ ವಿಳಾಸಗಳು ಹಾಗೂ ವೆಬ್ ವಿಳಾಸ http://locator.csccloud.in ಗಳಲ್ಲಿ ಪಡೆಯಬಹುದಾಗಿರುತ್ತದೆ. ಫಲಾನುಭವಿಗಳು ತಮ್ಮೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಐ.ಎಫ್.ಎಸ್.ಸಿ ಕೋಡ್ ವಿವರಗಳೊಂದಿಗೆ (ಬ್ಯಾಂಕ್ ಪಾಸ್ ಪುಸ್ತಕ/ಚೆಕ್ ಪುಸ್ತಕ/ಬ್ಯಾಂಕ್ ಸ್ಟೇಟ್ಮೆಂಟ್) ಮತ್ತು ಮೊಬೈಲ್ನೊಂದಿಗೆ ಕಾಮನ್ ಸರ್ವಿಸ್ ಸೆಂಟರ್ಗಳಿಗೆ ತೆರಳುವುದು. ಅನುಬಂದಲ್ಲಿ ತಿಳಿಸಿರುವಂತೆ ವಯಸ್ಸಿಗೆ ಅನುಗುಣವಾಗಿ ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಲು ತೆರಳುವುದು. ತದ ನಂತರ ಮಾಸಿಕ ವಂತಿಕೆಯನ್ನು ಅವರ ಖಾತೆಯಿಂದ ಆಟೋ-ಡೆಬಿಟ್ ಮಾಡಲಾಗುವುದು.
60 ವರ್ಷ ಪೂರ್ಣಗೊಂಡ ನಂತರ ಮಾಸಿಕ ಪಿಂಚಣಿ
*ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಪಾವತಿಸುತ್ತದೆ.
*60 ವರ್ಷ ಪೂರ್ಣಗೊಂಡ ನಂತರ ಚಂದಾದಾರರು (ಫಲಾನುಭವಿಯು) ತಿಂಗಳಿಗೆ ನಿಶ್ಚಿತ ರೂ.3,000-ಗಳ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ.
*ಪಿಂಚಣಿ ಆರಂಭಗೊಂಡ ನಂತರ ಚಂದಾದಾರರು ಮೃತ ಪಟ್ಟಲ್ಲಿ ಅವರ ಪತ್ನಿ/ ಪತಿ ಪಿಂಚಣಿಯ ಶೆ.50 ರಷ್ಟು ಪಿಂಚಣೆಯನ್ನು ಪಡೆಯಲು ಅರ್ಹರು.
*ಫಲಾನುಭವಿಯು ನಿರಂತರವಾಗಿ ವಂತಿಕೆಯನ್ನು ಪಾವತಿಸಿದ್ದು ಅವರು 60 ವರ್ಷದ ಒಳಗಾಗಿ ಮೃತ ಪಟ್ಟಲ್ಲಿ ಅವನು/ ಅವಳ ಸಂಗಾತಿಯು ತದನಂತರವೂ ಯೋಜನೆಗೆ ಸೇರಬಹುದಾಗಿದ್ದು ವಂತಿಕೆಯನ್ನು ಪಾವತಿಸಿ ಮುಂದುವರಿಸಬಹುದಾಗಿರುತ್ತದೆ.
*ಚಂದಾದಾರರು ಯೋಜನೆಯಿಂದ 60 ವರ್ಷ ಪೂರ್ವದಲ್ಲೇ (ಮಧ್ಯದಿಂದಲೇ) ನಿರ್ಗಮಿಸಿದಲ್ಲಿ ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಬಡ್ಡಿಯೊಂದಿಗೆ ಹಿಂಪಡೆಯಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು.
Fact Check
ಕ್ಲೇಮು
ಆನ್ಲೈನ್ನಲ್ಲಿ ನಿಮ್ಮ ವೈಯಕ್ತಿ ವಿವರ ಭರ್ತಿ ಮಾಡುವ ಮೂಲಕ 18 ರಿಂದ 40 ವರ್ಷದೊಳಗಿನವರಿಗೆ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆಯಡಿ ತಿಂಗಳಿಗೆ 1800 ರೂ. ನೀಡಲಾಗುತ್ತದೆ.
ಪರಿಸಮಾಪ್ತಿ
ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆ ಪಿಂಚಣಿ ಯೋಜನೆಯಾಗಿದೆ ಹೀಗಾಗಿ ವೈರಲ್ ಸಂದೆಶ ತಪ್ಪಾಗಿದೆ ಎಂದು PIB FactCheck ಹೇಳಿದೆ.