Fact Check: ಕೇರಳದಲ್ಲಿ ರಿಲಯನ್ಸ್ ಜಿಯೋ ಇಂಟರ್ನೆಟ್ ನಿಷೇಧ
ನವದೆಹಲಿ, ಜನವರಿ 2: ಪ್ರತಿಭಟನೆ ನಡೆಸುತ್ತಿರುವ ರೈತರು ಪಂಜಾಬ್ನಲ್ಲಿ ಇತ್ತೀಚೆಗೆ ರಿಲಾಯನ್ಸ್ ಮೊಬೈಲ್ ಟವರ್ ಅನ್ನು ಸುಟ್ಟುಹಾಕಿದ್ದರು ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಡೆಹ್ರಾಡೂನ್ನಲ್ಲಿ ಟವರ್ ಒಂದು ಹೊತ್ತಿ ಉರಿಯುವ ಹಳೆಯ ಫೋಟೊವನ್ನು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗಳೊಂದಿಗೆ ತಳುಕುಹಾಕಲಾಗಿತ್ತು.
ಇದರ ನಡುವೆ ಕೇರಳದಲ್ಲಿ ಜಿಯೋ ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಲಾಗಿದೆ ಎಂಬ ಹೊಸ ಸುದ್ದಿ ಹರಿದಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಕೇಶ್ ಅಂಬಾನಿ ಅವರಿಗೆ ಕೇರಳದ ಕಮ್ಯುನಿಸ್ಟ್ ಸರ್ಕಾರದ ಅತ್ಯಂತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೊಬ್ಬರು ಹೇಳಿದ್ದಾರೆ.
Fact Check: ರೈತರ ಪ್ರತಿಭಟನೆ ವೇಳೆ ರಿಲಾಯನ್ಸ್ ಜಿಯೋ ಟವರ್ ಸುಟ್ಟು ಭಸ್ಮ?
ಕೇರಳದಲ್ಲಿ ಜಿಯೋ ಇಂಟರ್ನೆಟ್ ಸೇವೆಗಳು ಸ್ಥಗಿತಗೊಳ್ಳುತ್ತಿದ್ದು, ಜಿಯೋ ನೀಡುತ್ತಿದ್ದ ದರದ ಅರ್ಧ ಬೆಲೆ ಕೇರಳ ಫೈಬರ್ ನೆಟ್ ಜನರಿಗೆ ಇಂಟರ್ನೆಟ್ ಆಫರ್ ನೀಡಿದೆ ಎಂದು ಹೇಳಲಾಗಿದೆ. ಆದರೆ ಈ ಹೇಳಿಕೆ ಸುಳ್ಳು. ಕೇರಳ ಸರ್ಕಾರವು ರಾಜ್ಯದಲ್ಲಿ ಜಿಯೋ ಇಂಟರ್ನೆಟ್ ಸೇವೆಯನ್ನು ನಿಷೇಧಿಸಿಲ್ಲ ಮತ್ತು ತನ್ನದೇ ಇಂಟರ್ನೆಟ್ ಸೇವೆಯನ್ನು ಆರಂಭಿಸಿಲ್ಲ.'
ಕೇರಳದಲ್ಲಿ ಒಂದು ವೇಳೆ ಜಿಯೋ ನಿಷೇಧವಾಗಿದ್ದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು. ಸರ್ಕಾರಿ ಸಂಸ್ಥೆಗಳಿಗೆ ಮತ್ತು ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ 20 ಲಕ್ಷ ಕುಟುಂಬಗಳಿಗೆ ಕೇರಳ ಫೈಬರ್ ಆಪ್ಟಿಕ್ ನೆಟ್ವರ್ಕ್ ಮೂಲಕ ಉಚಿತ ಇಂಟರ್ನೆಟ್ ಒದಗಿಸಲು ಚಿಂತನೆ ನಡೆಸಿರುವುದು ಸತ್ಯ. ಈ ಸೇವೆ ಒದಗಿಸಲು ಸರ್ಕಾರವು ರಿಲಯನ್ಸ್ ಜಿಯೋ, ಬಿಎಸ್ಎನ್ಎಲ್ ಮತ್ತು ಏರ್ಟೆಲ್ ಜತೆ ಸಹಭಾಗಿತ್ವ ಹೊಂದುತ್ತಿದೆ.
Fact Check: ಸಿಖ್ಖರಿಗೆ ಮೋದಿ ಸರ್ಕಾರದ ಸಂಬಂಧ ನೆನಪಿಸಿದ ಐಆರ್ಸಿಟಿಸಿ
ನಿಯಮಾವಳಿಗಳ ಪ್ರಕಾರ ಯಾವುದೇ ರಾಜ್ಯ ಸರ್ಕಾರ ಯಾವುದೇ ಟೆಲಿಕಾಂ ನೆಟ್ವರ್ಕ್ಅನ್ನು ನಿಷೇಧಿಸುವಂತಿಲ್ಲ. ಹಾಗೆಯೇ ಯಾವುದೇ ರಾಜ್ಯದಲ್ಲಿ ಸೇವೆ ಆರಂಭಿಸಲು ಎಲ್ಲ ದೂರಸಂಪರ್ಕ ಸಂಸ್ಥೆಗಳಿಗೂ ಸಮಾನ ಅಧಿಕಾರವಿದೆ. ಹೀಗಾಗಿ ಕೇರಳ ಸರ್ಕಾರ ಜಿಯೋ ನಿಷೇಧ ಮಾಡಿರುವುದು ಸುಳ್ಳು ಹೇಳಿಕೆ.
Fact Check
ಕ್ಲೇಮು
ಕೇರಳ ಸರ್ಕಾರ ರಿಲಯನ್ಸ್ ಜಿಯೋ ಅನ್ನು ನಿಷೇಧಿಸಿದೆ.
ಪರಿಸಮಾಪ್ತಿ
ಇದು ಸುಳ್ಳು ಹೇಳಿಕೆ. ರಾಜ್ಯ ಸರ್ಕಾರಕ್ಕೆ ಯಾವುದೇ ಟೆಲಿಕಾಂ ನೆಟ್ವರ್ಕ್ ನಿಷೇಧಿಸಲು ಅಧಿಕಾರವಿಲ್ಲ.