Fact Check: ರೈತರಿಗೆ ಪೊಲೀಸರು ಹೊಡೆದೇ ಇಲ್ಲವೇ? ಅವರು ಖಲಿಸ್ತಾನ ಉಗ್ರರೇ?
ಹಿರಿಯ ರೈತರೊಬ್ಬರ ಮೇಲೆ ಪೊಲೀಸ್ ಸಿಬ್ಬಂದಿ ಲಾಠಿ ಬೀಸುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೊ ತೆಗೆಯುವ ಗಳಿಗೆ ನನಗೆ ಬಹಳ ಕಷ್ಟಕರವೆನಿಸಿತ್ತು ಎಂದು ಪಿಟಿಐ ಛಾಯಾಗ್ರಾಹಕ ರವಿ ಚೌಧರಿ ಅವರು ಫೋಟೊ ಹಂಚಿಕೊಂಡಿದ್ದರು.
ಈ ಫೋಟೊವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮೋದಿ ಸರ್ಕಾರವನ್ನು ಟೀಕಿಸಲು ಬಳಸಿಕೊಂಡಿದ್ದರು. ಆದರೆ ಈ ಫೋಟೊದಲ್ಲಿರುವಂತೆ ಲಾಠಿ ಆ ರೈತನಿಗೆ ಸ್ಪರ್ಶ ಕೂಡ ಆಗಿಲ್ಲ. ಹೀಗಾಗಿ ರೈತರ ಮೇಲೆ ಪೊಲೀಸರ ಲಾಠಿ ಚಾರ್ಜ್ ಪ್ರಯತ್ನ ದೃಢಪಟ್ಟಿಲ್ಲ ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದರು.
ರಾಹುಲ್ ಗಾಂಧಿ ಟ್ವೀಟ್ಗೆ ತಿರುಗೇಟು ನೀಡಿದ ಬಿಜೆಪಿ: ಫೋಟೊ ಹಿಂದಿನ ರಹಸ್ಯ ಬಯಲು
ಫೋಟೊ ಮತ್ತು ವಿಡಿಯೋ ಸಂಯೋಜನೆಯನ್ನು ಹಂಚಿಕೊಂಡಿದ್ದ ಅಮಿತ್ ಮಾಳವೀಯ, ಭಾರತವು ಕಂಡ ಅತ್ಯಂತ ಅಪಕೀರ್ತಿಯುಳ್ಳ ವಿರೋಧ ಪಕ್ಷದ ನಾಯಕರೆಂದರೆ ಅದು ರಾಹುಲ್ ಗಾಂಧಿ ಎಂದು ಟೀಕಿಸಿದ್ದರು. ಈ ವಿಡಿಯೋವನ್ನು ಬಿಜೆಪಿ ಪ್ರಚಾರ ಪುಟ ಪೊಲಿಟಿಕಲ್ ಕೀಡಾ ತಯಾರಿಸಿದೆ. ಉದ್ಯಮಿ ಎಂದು ಹೇಳಿಕೊಂಡಿರುವ ಅರುಣ್ ಪುಡುರ್ ಎಂಬುವವರು ಮೊದಲು ಈ ವಿಡಿಯೋ ಹಂಚಿಕೊಂಡಿದ್ದರು.
ಸತ್ಯದ ಹೋರಾಟವನ್ನು ಸರ್ಕಾರಗಳು ತಡೆಯಲಾಗಲ್ಲ: ರಾಹುಲ್ ಗಾಂಧಿ
'ಇಂದು ಮೋದಿ ಅವರ ದರ್ಪವು ಸೈನಿಕರು ಕೂಡ ರೈತರ ವಿರುದ್ಧ ನಿಲ್ಲುವಂತೆ ಮಾಡಿದೆ' ಎಂದು ರಾಹುಲ್ ಗಾಂಧಿ ಬರೆದಿದ್ದರು. ಅದರಲ್ಲಿ ಅವರು ಎಲ್ಲಿಯೂ ಲಾಠಿ ರೈತನಿಗೆ ಹೊಡೆದಿದೆ ಎಂದು ಹೇಳಿರಲಿಲ್ಲ. ಆದರೆ ಮಾಳವೀಯ ಅವರ ಟ್ವೀಟ್, ಪೊಲೀಸರು ರೈತನಿಗೆ ಹೊಡೆದಿದ್ದಾರೆ ಎಂದೇ ರಾಹುಲ್ ಗಾಂಧಿ ಆರೋಪಿಸಿದ್ದಾರೆ ಎಂದು ತಿರುಚಿತ್ತು. ಮುಂದೆ ಓದಿ.
ಅನೇಕರಿಗೆ ಲಾಠಿ ಏಟು
ಹಾಗಾದರೆ, ಪ್ರತಿಭಟನೆ ನಡೆಸುತ್ತಿದ್ದ ಯಾವ ರೈತರ ಮೇಲೆಯೂ ಪೊಲೀಸರು ಲಾಠಿ ಪ್ರಹಾರ ನಡೆಸಲೇ ಇಲ್ಲವೇ? ಅದೊಂದು ವಿಡಿಯೋದಲ್ಲಿ ಹಿರಿಯ ರೈತನಿಗೆ ಲಾಠಿ ತಗುಲದೇ ಇರುವುದು, ಇಡೀ ಘಟನೆಯನ್ನು ನಿರಾಕರಿಸಲು ಪುರಾವೆಯೇ? ಲಾಠಿ ತಗುಲಲಿಲ್ಲ, ನಿಜ. ಆದರೆ ಲಾಠಿಯನ್ನು ಜೋರಾಗಿ ಬೀಸಿಲ್ಲವೇ? ಅದು ಹೊಡೆಯುವ ಪ್ರಯತ್ನವಲ್ಲವೇ?
ಇದೇ ವಿಡಿಯೋವನ್ನು ಸಂಪೂರ್ಣವಾಗಿ ನೋಡಿದರೆ ಪೊಲೀಸರು ಬೀಸುವ ಲಾಠಿ ಅನೇಕರಿಗೆ ಪೆಟ್ಟು ನೀಡಿರುವುದು ಕಾಣಿಸುತ್ತದೆ. ಇಬ್ಬರು ಪೊಲೀಸರು ಅಲ್ಲಿ ಓಡಾಡುವ ಎಲ್ಲ ರೈತರ ಮೇಲೆಯೂ ಲಾಠಿ ಬೀಸಿದ್ದಾರೆ. ಮಾಳವೀಯ ವಿಡಿಯೋದಲ್ಲಿ ಎರಡನೆಯ ಪೊಲೀಸ್ ಬೀಸಿದ ಲಾಠಿ ಹಿರಿಯ ರೈತನಿಗೆ ಬಿದ್ದಿಲ್ಲ. ಆದರೆ ಇನ್ನೊಂದು ವಿಡಿಯೋ ಗಮನಿಸಿದರೆ ಅದಕ್ಕೂ ಸೆಕೆಂಡಿನ ಮುಂಚೆಯಷ್ಟೇ ಅದೇ ರೈತನಿಗೆ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಲಾಠಿಯಿಂದ ಬಾರಿಸಿದ್ದು ಕಾಣಿಸುತ್ತದೆ.
|
ಸರ್ಕಾರ ಮಾಹಿತಿ ನೀಡುತ್ತಿಲ್ಲ
ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆಗೆ ಇಳಿದಿರುವ ರೈತರು ದೆಹಲಿ ಪ್ರವೇಶಿಸಿದ್ದಾರೆ. ಕೃಷಿ ಕಾಯ್ದೆ ತಮ್ಮ ಬದುಕನ್ನೇ ಕಸಿದುಕೊಂಡು ತಮ್ಮನ್ನು ಎಲ್ಲಿ ಬಂಡವಾಳಶಾಹಿ ಕಂಪೆನಿಗಳ ಗುಲಾಮರನ್ನಾಗಿ ಮಾಡುತ್ತದೆಯೋ ಎಂಬ ಭಯದಲ್ಲಿದ್ದಾರೆ. ಆದರೆ ಕೇಂದ್ರ ಸರ್ಕಾರ ನಿಮಗೆ ದಲ್ಲಾಳಿಗಳ ಹೊರೆ ಇರುವುದಿಲ್ಲ. ನಿಮಗೆ ಎಲ್ಲಿ ಬೇಕಾದರೂ ಉತ್ಪನ್ನ ಮಾರಾಟಕ್ಕೆ ಅವಕಾಶ ಸಿಗಲಿದೆಎಂದು ತೆಳುವಾಗಿ ಹೇಳಿಕೆಗಳನ್ನು ನೀಡುತ್ತಿದೆಯೇ ವಿನಾ, ಆ ಕಾಯ್ದೆಯ ಪ್ರತಿ ಅಂಶಗಳನ್ನೂ ರೈತರು ಹಾಗೂ ಸಾರ್ವಜನಿಕರಿಗೆ ವಿವರಿಸುವ ಪ್ರಯತ್ನ ಮಾಡುತ್ತಿಲ್ಲ.
ಪ್ರತಿಭಟನಾನಿರತ ರೈತರನ್ನು ರಕ್ಷಿಸಿದ ಯುವಕನ ಮೇಲೆ ಕೊಲೆ ಪ್ರಯತ್ನ ಪ್ರಕರಣ
|
ಅವರು ಖಲಿಸ್ತಾನ ಉಗ್ರರು!
ಈ ನಡುವೆ ಪ್ರತಿಭಟನಾನಿರತ ರೈತರ ಮೇಲೆ ಮತ್ತೊಂದು ಆರೋಪ ಬಂದಿದೆ. ಅದೇನೆಂದರೆ ಪ್ರತಿಭಟನೆ ಮಾಡುತ್ತಿರುವವರು ರೈತರೇ ಅಲ್ಲ. ಅವರು 2019ರಲ್ಲಿ ಖಲಿಸ್ತಾನ ಉಗ್ರರಾಗಿದ್ದರು. ಆಗ ಅವರು ಬ್ರಿಟನ್ನಲ್ಲಿ ಇದ್ದರು. ಈಗ ದೆಹಲಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಲಾಗುತ್ತಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಕೂಡ ಖಲಿಸ್ತಾನ ಬೆಂಬಲದ ಆರೋಪ ಮಾಡಿದ್ದಾರೆ.
ಪ್ರೀತಿ ಗಾಂಧಿ ಟ್ವೀಟ್
ಬಿಜೆಪಿ ಮಹಿಳಾ ಮೋರ್ಚಾದ ಸಾಮಾಜಿಕ ಮಾಧ್ಯಮ ರಾಷ್ಟ್ರೀಯ ಉಸ್ತುವಾರಿ ಪ್ರೀತಿ ಗಾಂಧಿ ಎಂಬುವವರು ಖಲಿಸ್ತಾನ ಪರ ಘೋಷಣೆ ಕೂಗುವ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ. 'ರೈತರ ಪ್ರತಿಭಟನೆಯಲ್ಲಿ ಪಾಕಿಸ್ತಾನದ ಪರ ಮತ್ತು ಖಲಿಸ್ತಾನದ ಪರ ಘೋಷಣೆ ಕೂಗಲಾಗುತ್ತದೆ. ಇವರು ನಿಜವಾದ ರೈತರೇ?' ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದನ್ನು ಅನೇಕರು ಹಂಚಿಕೊಂಡು ಇವರು ರೈತರಲ್ಲ, ಖಲಿಸ್ತಾನದ ಉಗ್ರರು ಎಂದು ಬಿಂಬಿಸುತ್ತಿದ್ದಾರೆ. ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ರೈತರನ್ನು ಖಲಿಸ್ತಾನ ಉಗ್ರರು ಮತ್ತು ಕೆಂಪು ಉಗ್ರರು (ನಕ್ಸಲರು) ಎಂದು ಕರೆದಿದ್ದಾರೆ.
2019ರ ಮೂಲ ವಿಡಿಯೋ
ವಾಸ್ತವವಾಗಿ ಈ ವಿಡಿಯೋ 2019ರಲ್ಲಿ ಬ್ರಿಟನ್ನಲ್ಲಿರುವ ಖಲಿಸ್ತಾನ ಪರ ಸಂಘಟನೆಯ ಸದಸ್ಯರು ಘೋಷಣೆ ಕೂಗಿದ ಘಟನೆಯದ್ದು ಎನ್ನುವುದು ಫ್ಯಾಕ್ಟ್ ಚೆಕ್ನಿಂದ ದೃಢಪಟ್ಟಿದೆ. ಕೃಪಾಣ ಧರಿಸಿದ ಸಿಖ್ ವ್ಯಕ್ತಿಗಳೆಲ್ಲರನ್ನೂ ಖಲಿಸ್ತಾನ ಉಗ್ರರು ಎಂದು ಬಿಂಬಿಸುವುದು ಸುಲಭ. ಇಲ್ಲಿ ಹಳೆಯ ವಿಡಿಯೋಗಳೊಂದಿಗೆ ಹೋಲುವ ವ್ಯಕ್ತಿಗಳನ್ನು ಈಗಿನ ಪ್ರತಿಭಟನೆಯ ವಿಡಿಯೋಗಳೊಂದಿಗೆ ಜೋಡಿಸಿ ರೈತರನ್ನು ಉಗ್ರರೆಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ.
ಹೀಗಾಗಿ ಖಲಿಸ್ತಾನ ಉಗ್ರರ ಪ್ರತಿಭಟನೆಗಳು, ಪಂಜಾಬ್ ಮತ್ತು ಹರಿಯಾಣದಂತಹ ಸಿಖ್ ಜನರು ಹೆಚ್ಚಿರುವ ಪ್ರದೇಶಗಳಲ್ಲಿ ನಡೆದ ವಿವಿಧ ಪ್ರತಿಭಟನೆ ಮತ್ತು ಗಲಭೆಗಳ ಹಳೆಯ ವಿಡಿಯೋಗಳನ್ನು ಹುಡುಕಿ ತೆಗೆದು, ಅವು ಈಗ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದ್ದು ಎಂದು ಬಿಂಬಿಸುವ ಮತ್ತಷ್ಟು ಪ್ರಯತ್ನಗಳು ನಡೆಯುವ ಸಾಧ್ಯತೆ ಇದೆ ಎಂದು ಫ್ಯಾಕ್ಟ್ ಚೆಕ್ ಮಾಧ್ಯಮಗಳು ಎಚ್ಚರಿಕೆ ನೀಡಿವೆ.
Fact Check
ಕ್ಲೇಮು
ರೈತರಿಗೆ ಪೊಲೀಸರು ಲಾಠಿ ಪ್ರಹಾರ ಮಾಡಿಯೇ ಇಲ್ಲ
ಪರಿಸಮಾಪ್ತಿ
ಪೊಲೀಸರು ಲಾಠಿಯಿಂದ ರೈತರಿಗೆ ಹೊಡೆದಿದ್ದಾರೆ