Fact Check: ವಾಂಖೆಡೆ ನೇತೃತ್ವದ ಎನ್ಸಿಬಿ ತಂಡದ ಮೇಲೆ ಗೋರೆಗಾಂವ್ನಲ್ಲಿ ದಾಳಿ?
ಮುಂಬೈ ಅಕ್ಟೋಬರ್ 27: ಬಾಲಿವುಡ್ ನಟ ಸುಶಾಂತ್ ರಜಪೂತ್ ಸಿಂಗ್ ಸಾವಿನ ಬಳಿಕ ಹುಟ್ಟಿಕೊಂಡ ಮಾದಕಲೋಕದ ತನಿಖೆ ಸದ್ಯ ಆರ್ಯನ್ ಖಾನ್ ವರೆಗೂ ಬಂದು ತಲುಪಿದೆ. ಈ ನಡುವೆ ಸ್ಟಾರ್ ನಟರ ತನಿಖೆ ಕೂಡ ನಡೆದು ಹೋಗಿದೆ. ಆದರೆ ಬಾಲಿವುಡ್ ನಲ್ಲಿ ಮಾದಕಲೋಕ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿದೆ ಎನ್ನುವುದಕ್ಕೆ ಮುಂಬೈ ಕ್ರೂಸ್ ಡ್ರಗ್ ಕೇಸ್ ಸಾಕ್ಷಿಯಾಗಿದೆ. ಈ ಡ್ರಗ್ ಕೇಸ್ನಲ್ಲಿ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಭಾಗಿಯಾಗಿದ್ದಾನೆಂದು ಆರೋಪಿಸಿ ಬಂಧಿಸಲಾಗಿದೆ. ಇಂದು ನಡೆದ ಆತನ ಜಾಮೀನು ಅರ್ಜಿ ವಿಚಾರಣೆ ಕೂಡ ನಾಳೆಗೆ ಮುಂದೂಡಲಾಗಿದೆ. ಮಾತ್ರವಲ್ಲದೇ ಪ್ರಕರಣದ ತನಿಖಾಧಿಕಾರಿ ಸಮೀರ್ ವಾಂಖೆಡೆ ವಿರುದ್ಧವೂ ಹಲವಾರು ಆರೋಪಗಳು ಕೇಳಿಬಂದಿವೆ.
ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಇದೀಗ ಮುಂಬೈ ವಲಯದ ನಿರ್ದೇಶಕ ಸಮೀರ್ ವಾಂಖೆಡೆ ನೇತೃತ್ವದ ಎನ್ಸಿಬಿ ತಂಡ ಇತ್ತೀಚೆಗೆ ಗೋರೆಗಾಂವ್ನಲ್ಲಿ ದಾಳಿ ಮಾಡಿದೆ. ಈ ವೇಳೆ 60 ಜನರ ಗುಂಪು ಎನ್ಸಿಬಿ ತಂಡದ ಮೇಲೆ ದಾಳಿ ಮಾಡಿದೆ ಎಂದು ಹಲವಾರು ನೆಟಿಜನ್ಗಳು ಹೇಳಿಕೊಳ್ಳುತ್ತಿದ್ದಾರೆ. ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಈ ಘಟನೆಯನ್ನು ನಿರ್ಲಕ್ಷಿಸಿವೆ ಎಂದು ಹೇಳಲಾಗುತ್ತಿದೆ.
ವೈರಲ್ ಸಂದೇಶ:
ಫೇಸ್ಬುಕ್ ಬಳಕೆದಾರರೊಬ್ಬರು ಹಿಂದಿಯಲ್ಲಿ ಬರೆದು ಪೋಸ್ಟ್ ಮಾಡಿದ್ದಾನೆ. "ನಿನ್ನೆ ಮಹಾರಾಷ್ಟ್ರದ ಗೋರೆಗಾಂವ್ನಲ್ಲಿ ಮಹತ್ವದ ಘಟನೆಯೊಂದು ಸಂಭವಿಸಿದೆ. ಆದರೆ ನಮ್ಮ ಮಾಧ್ಯಮಗಳು ಅದನ್ನು ಅಷ್ಟೇನೂ ಗಮನಿಸಲಿಲ್ಲ. ಸಮೀರ್ ವಾಂಖೆಡೆ ನೇತೃತ್ವದ ಆರು ಎನ್ಸಿಬಿ ಅಧಿಕಾರಿಗಳ ತಂಡವು ಡ್ರಗ್ ಪೆಡ್ಲರ್ ಬಗ್ಗೆ ಮಾಹಿತಿ ಪಡೆದು ಗೋರೆಗಾಂವ್ಗೆ ತೆರಳಿದೆ. ಪೆಡ್ಲರ್ ಡ್ರಗ್ ತಲುಪಿಸಲು ಆಗಮಿಸಿದ ತಕ್ಷಣ ತಂಡವು ಅವನನ್ನು ಹಿಡಿದು ತಮ್ಮ ಕಾರಿನೊಳಗೆ ಬಲವಂತದಿಂದ ಕರೆದೊಯ್ದಿದೆ. ಆಗ ಆತ ಕೂಗಲು ಪ್ರಾರಂಭಿಸಿದ್ದಾನೆ. ಈ ವೇಳೆ 60 ಜನರ ಗುಂಪು NCB ತಂಡದ ಮೇಲೆ ದಾಳಿ ಮಾಡಿದೆ".
"ನಂತರ ವಾಂಖೆಡೆ ಸಮಯ ಪ್ರಜ್ಞೆ ತೋರಿದ್ದಾರೆ. ಸಮೀರ್ ಅವರು ತಮ್ಮ ಪಿಸ್ತೂಲ್ ತೆಗೆದು ಕಾರಿನಲ್ಲಿ ಕುಳಿತಿದ್ದ ಪೆಡ್ಲರ್ಗೆ ಕೊಲೆ ಬೆದರಿಕೆ ಹಾಕಿದ್ದಾರೆ. ನಂತರ ಪೆಡ್ಲೆರ್ ಅಪಾಯದಲ್ಲಿದ್ದಾನೆ ಎಂದು ಗ್ರಹಿಸಿದ ಜನಸಮೂಹ ಹಿಂದೆ ಸರಿದಿದೆ. ಶೀಘ್ರದಲ್ಲೇ ಮುಂಬೈ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಪೆಡ್ಲರ್ನನ್ನು ಬಂಧಿಸಲಾಗಿದೆ ಮತ್ತು ಎನ್ಸಿಬಿ ತಂಡ ಸುರಕ್ಷಿತವಾಗಿ ಹಿಂದಿರುಗಿದೆ. ಈ ಘಟನೆಯು ಉದ್ಧವ್ ಠಾಕ್ರೆ ಸರ್ಕಾರ ಮತ್ತು ಮುಂಬೈ ಪೊಲೀಸರ ವಿಶ್ವಾಸಾರ್ಹತೆಯನ್ನು ಸಹ ಪ್ರಶ್ನಿಸುತ್ತದೆ. ಅಂತಹ ಬೃಹತ್ ಡ್ರಗ್ ದಂಧೆ ಅವರ ಆಡಳಿತದಲ್ಲಿ ಹೇಗೆ ಬೆಳೆಯುತ್ತಿದೆ?" ಎಂದು ಬರೆದಿದ್ದಾರೆ.
ತನಿಖೆಯಿಂದ ಸತ್ಯಾಸತ್ಯತೆ ಬಯಲು
ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ವೈರಲ್ ಸಂದೇಶ ತಪ್ಪಾಗಿದೆ ಎಂದು ಕಂಡುಹಿಡಿದಿದೆ. ಇದು ಒಂದು ವರ್ಷದ ಹಿಂದಿನ ಘಟನೆ ಎಂದು ಗೋರೆಗಾಂವ್ ಪೊಲೀಸರು ಮತ್ತು ವಾಂಖೆಡೆ ಇಬ್ಬರೂ ಖಚಿತಪಡಿಸಿದ್ದಾರೆ. ಇತ್ತೀಚೆಗೆ ಇಂತಹ ಘಟನೆ ನಡೆದಿಲ್ಲ.
ಪರಿಶೀಲನೆ ವೇಳೆ ನವೆಂಬರ್ 22, 2020 ರಂದು ಮುಂಬೈನ ಗೋರೆಗಾಂವ್ನಲ್ಲಿ ಎಲ್ಎಸ್ಡಿ ಪೂರೈಕೆದಾರರ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಆರು ಎನ್ಸಿಬಿ ಅಧಿಕಾರಿಗಳನ್ನು ಜನಸಮೂಹವು ದಾಳಿ ಮಾಡಿದೆ ಎಂದು ಕಂಡುಬಂದಿದೆ. ವಾಂಖೆಡೆ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ತಂಡವು ದಂಧೆಕೋರರನ್ನು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಸುಮಾರು 60 ಜನರು ಅಲ್ಲಿ ಜಮಾಯಿಸಿ ತಂಡದ ಮೇಲೆ ಹಲ್ಲೆ ನಡೆಸಿದರು. ಘಟನೆಯಲ್ಲಿ ಇಬ್ಬರು ಎನ್ಸಿಬಿ ಅಧಿಕಾರಿಗಳು ಗಾಯಗೊಂಡಿದ್ದಾರೆ. ಆದರೆ, ಪೊಲೀಸರು ಸಮಯೋಚಿತ ನೆರವು ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ವೈರಲ್ ಹೇಳಿಕೆಗೆ ವಿರುದ್ಧವಾಗಿ ಆ ಸಮಯದಲ್ಲಿ ಮಾಧ್ಯಮಗಳು ಈ ಘಟನೆಯನ್ನು ವ್ಯಾಪಕವಾಗಿ ವರದಿ ಮಾಡಿದ್ದವು.
ವಾಂಖೆಡೆ ಸ್ಪಷ್ಟನೆ
ಈ ಬಗ್ಗೆ ಎನ್ಸಿಬಿ ಅಧಿಕಾರ ವಾಂಖೆಡೆ ಅವರನ್ನು ಪ್ರಶ್ನಿಸಿದಾಗ "ನಮ್ಮಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೂ, ಪ್ರಶ್ನೆಯಲ್ಲಿರುವ ಘಟನೆ ಹಳೆಯದು. ಈ ದಾಳಿಯಲ್ಲಿ ಇಬ್ಬರು ಎನ್ಸಿಬಿ ಸಿಬ್ಬಂದಿ ಗಾಯಗೊಂಡಿದ್ದಾರೆ" ಎಂದು ಖಚಿತಪಡಿಸಿದ್ದಾರೆ. ಜೊತೆಗೆ ಗೋರೆಗಾಂವ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿದಾಗ, ಅವರು ಇತ್ತೀಚೆಗೆ ಈ ಪ್ರದೇಶದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದರು.
ಮುಂಬೈ ಕ್ರೂಸ್ ಡ್ರಗ್ ಪ್ರಕರಣದ ತನಿಖೆ ಪ್ರಾರಂಭವಾದಾಗಿನಿಂದ, ವಾಂಖೆಡೆಗೆ ಸಂಬಂಧಿಸಿದ ಬಹಳಷ್ಟು ತಪ್ಪು ಮಾಹಿತಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡಲಾಗುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಗೋರೆಗಾಂವ್ನಲ್ಲಿ ಎನ್ಸಿಬಿ ತಂಡದ ಮೇಲೆ ಗುಂಪು ದಾಳಿಯ ವಿಚಾರ ಒಂದು ವರ್ಷದ ಹಿಂದಿನ ಘಟನೆಯಾಗಿದ್ದು ಅದನ್ನು ಇತ್ತೀಚೆಗೆ ಹಂಚಿಕೊಳ್ಳಲಾಗುತ್ತಿದೆ.
Fact Check
ಕ್ಲೇಮು
ಮಹಾರಾಷ್ಟ್ರದ ಗೋರೆಗಾಂವ್ನಲ್ಲಿ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ತಂಡದ ಮೇಲೆ ಹಲ್ಲೆ
ಪರಿಸಮಾಪ್ತಿ
ಮಹಾರಾಷ್ಟ್ರದ ಗೋರೆಗಾಂವ್ನಲ್ಲಿ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ತಂಡದ ಮೇಲೆ ಹಲ್ಲೆ ಪ್ರಕರಣ ಒಂದು ವರ್ಷದ ಹಳೆಯದು. ಇತ್ತೀಚೆಗೆ ನಡೆದ ಘಟನೆ ಎಂದು ಹಂಚಿಕೊಳ್ಳಲಾಗಿದೆ.