Fact check : ಈ ಫೋಟೋಗಳು ಇಂದಿನ 'ರೈಲು ತಡೆ' ಪ್ರತಿಭಟನೆಯದ್ದಾ?
ನವದೆಹಲಿ ಅಕ್ಟೋಬರ್ 18 : ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಇಂದು (ಅ.18) ರೈತ ಸಂಘಗಳಿಂದ ರಾಷ್ಟ್ರವ್ಯಾಪಿ 'ರೈಲು ರೋಕೋ' ಪ್ರತಿಭಟನೆ ಮಾಡಲಾಯಿತು. ಇದು ಪಂಜಾಬ್ ಮತ್ತು ಹರಿಯಾಣದಲ್ಲಿ 200 ಕ್ಕೂ ಹೆಚ್ಚು ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಮೇಲಿನ ಹಿಂಸಾಚಾರ ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ರೈಲು ರೋಕೋ ಪ್ರತಿಭಟನೆಯು ಸೋಮವಾರ ಉತ್ತರ ರೈಲ್ವೇ ವಲಯದ 160 ಪ್ರದೇಶಗಳಲ್ಲಿ ಪರಿಣಾಮ ಬೀರಿದೆ. 50 ರೈಲುಗಳ ಓಡಾಟಕ್ಕೆ ಅಡ್ಡಿಯಾಗಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಒ) ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸೋಮವಾರದ 'ರೈಲು ರೋಕೋ' ಪ್ರತಿಭಟನೆಗಳಂತೆ ಹಲವಾರು ಚಿತ್ರಗಳನ್ನು ಹರಿಬಿಡಲಾಗಿದೆ. ವೈರಲ್ ಆಗುತ್ತಿರುವ ಚಿತ್ರಗಳಲ್ಲಿ ಜನರು ಟ್ರಾಕ್ಟರುಗಳ ಮೇಲೆ ಕುಳಿತುಕೊಂಡಿರುವುದು, ರೈಲು ಹಳಿಗಳ ಕುಳಿತಿರುವುದು ಮತ್ತು ಧ್ವಜಗಳನ್ನು ಹಿಡಿದಿರುವುದನ್ನು ಕಾಣಬಹುದು.
ಆದರೆ ಇಂದಿನ ರೈಲು ತಡೆ ಪ್ರತಿಭಟನೆಯ ಫೋಟೋಗಳೆಂದು ವೈರಲ್ ಆಗಿರುವ ಫೋಟೋಗಳಲ್ಲಿ ಕೆಲವು ಫೋಟೋಗಳು ಹಳೆಯ ಫೋಟೋಗಳು ಎಂದು ಇಂಡಿಯಾ ಟುಡೇ ಫೇಕ್ ನ್ಯೂಸ್ ವಾರ್ ರೂಮ್ (AFWA) ಕಂಡು ಹಿಡಿದಿದೆ. AFWA ಇಂದು ವೈರಲ್ ಆದ ಮೂರು ಚಿತ್ರಗಳ ಮೂಲವನ್ನು ಪತ್ತೆ ಹಚ್ಚಿದೆ. ಇವು ಈ ವರ್ಷದ ಆರಂಭದಲ್ಲಿ ಮತ್ತು ಕಳೆದ ವರ್ಷದ ಅಂತ್ಯದಲ್ಲಿ ರೈತರು ನಡೆಸಿದ ಇದೇ ರೀತಿಯ ಪ್ರತಿಭಟನೆಗಳ ಹಳೆಯ ಚಿತ್ರಗಳು ಎಂದು ಕಂಡುಬಂದಿದೆ.
ಚಿತ್ರ ಒಂದು
ಪ್ರತಿಭಟನಾಕಾರರು ಟ್ರ್ಯಾಕ್ಟರ್ನಲ್ಲಿ ರೈಲ್ವೇ ಮಾರ್ಗವನ್ನು ನಿರ್ಬಂಧಿಸುವ ಚಿತ್ರವನ್ನು ಅಕ್ಟೋಬರ್ 2020 ರಲ್ಲಿ "ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್" ನಲ್ಲಿ ಪ್ರಕಟಿಸಿದ ವರದಿಯಲ್ಲಿ ನೋಡಬಹುದು. ಈ ಫೋಟೋವನ್ನು ಅಕ್ಟೋಬರ್ 13, 2020 ರಂದು ಅಂಬಾಲಾದ ದೇವಿ ದಾಸ್ ಪುರ ಗ್ರಾಮದಲ್ಲಿ ಪಿಟಿಐ ತೆಗೆದಿದೆ.
ಚಿತ್ರ ಎರಡು
ಕೈಯಲ್ಲಿ ಬಿಳಿ-ಹಸಿರು ಧ್ವಜದೊಂದಿಗೆ ಟ್ರ್ಯಾಕ್ ಮೇಲೆ ಕುಳಿತಿರುವ ಕಿತ್ತಳೆ ಪೇಟ ಧರಿಸಿದ ವ್ಯಕ್ತಿಯ ಚಿತ್ರವೂ ಹಳೆಯದು. ಅಕ್ಟೋಬರ್ 18 ಪ್ರತಿಭಟನೆಗೆ ಇದಕ್ಕೆ ಸಂಬಂಧಿಸಿಲ್ಲ. ಈ ಚಿತ್ರವನ್ನು ಪಿಟಿಐ ತೆಗೆದಿದೆ. ಈ ವರ್ಷ ಫೆಬ್ರವರಿಯಲ್ಲಿ ಹಲವಾರು ಸುದ್ದಿ ವೆಬ್ಸೈಟ್ಗಳಲ್ಲಿ ಈ ಫೋಟೊದೊಂದಿಗೆ ಸುದ್ದಿ ಪ್ರಕಟಿಸಲಾಗಿದೆ. ಅಂಬಾಲಾದ ಶಹಪುರದ ರೈಲ್ವೆ ಸೇತುವೆಯ ಬಳಿ ರೈತರು ಇದೇ ರೀತಿಯ 'ರೈಲು ರೋಕೋ' ಪ್ರತಿಭಟನೆಯ ಸಮಯದಲ್ಲಿ ಚಿತ್ರವನ್ನು ತೆಗೆದುಕೊಳ್ಳಲಾಗಿದೆ.
ಚಿತ್ರ ಮೂರು
ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯಿಂದ ಕರೆಯಲ್ಪಟ್ಟ ರೈಲು ದಿಗ್ಬಂಧನವನ್ನು ವರದಿ ಮಾಡುವಾಗ ಈ ವರ್ಷ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ "ದಿ ಇಂಡಿಯನ್ ಎಕ್ಸ್ ಪ್ರೆಸ್" ನಲ್ಲಿ ಫೋಟೊದೊಂದಿಗೆ ಸುದ್ದಿ ಪ್ರಕಟವಾಗಿತ್ತು. ಜನರು ರೈಲ್ವೆ ಹಳಿಗಳ ಮೇಲೆ ಕುಳಿತಿರುವುದನ್ನು ತೋರಿಸುವ ಮೂರನೆಯ ಚಿತ್ರವನ್ನು ಅನೇಕ ಬಾರಿ ಬಳಸಲಾಗಿದೆ. ಶೀರ್ಷಿಕೆಯ ಪ್ರಕಾರ, ಛಾಯಾಚಿತ್ರವನ್ನು 2021 ರ ಆರಂಭದಲ್ಲಿ ಅಮೃತಸರದ ಜಂಡಿಯಾಳ ನಿಲ್ದಾಣದ ಬಳಿಯ ಹಳಿಯ ಮೇಲೆ ತೆಗೆಯಲಾಗಿದೆ.
ಅಕ್ಟೋಬರ್ 18 ರಂದು 'ರೈಲು ತಡೆ' ಹೆಚ್ಚಿನ ರಾಜ್ಯಗಳಲ್ಲಿ ವಿರಳ ಪ್ರತಿಕ್ರಿಯೆಗೆ ಸಾಕ್ಷಿಯಾಯಿತು. ಪ್ರತಿಭಟನೆಗಳು ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣ ಮತ್ತು ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳನ್ನು ಕೇಂದ್ರೀಕರಿಸಿದವು. ಈ ರಾಜ್ಯಗಳಲ್ಲಿ ಸಂಚರಿಸುವ ಪ್ರಯಾಣಿಕರು ಹತ್ತಾರು ರೈಲುಗಳು ನಿಲುಗಡೆಯಾಗುತ್ತಿದ್ದಂತೆ ಭಾರೀ ಸಮಸ್ಯೆಯನ್ನು ಎದುರಿಸಿದರು.
ಪ್ರತಿಭಟನೆಗೆ ಕಾರಣ; ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ವಜಾಗೊಳಿಸುವಂತೆ ಆಗ್ರಹಿಸಿ ಸೋಮವಾರ ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರವ್ಯಾಪಿ ರೈಲುತಡೆಗೆ ಕರೆ ಕೊಟ್ಟಿತ್ತು. ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಲಖೀಂಪುರ್ ಖೇರಿ ಹಿಂಸಾಚಾರದಲ್ಲಿ ಮೃತ ರೈತರಿಗೆ ನ್ಯಾಯ ಸಿಗುವವರೆಗೂ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಲಖೀಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾರನ್ನು ಹುದ್ದೆಯಿಂದ ವಜಾಗೊಳಿಸಬೇಕು ಹಾಗೂ ಪೊಲೀಸರು ಅವರನ್ನು ಬಂಧಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.
ಕಳೆದ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಒಬ್ಬ ಪತ್ರಕರ್ತ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ವಿರುದ್ಧ ರೈತರ ಮೇಲೆ ಕಾರು ಹರಿಸಿದ ಆರೋಪ ಮಾಡಲಾಗಿದ್ದು, ಅಕ್ಟೋಬರ್ 9ರಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಜೊತೆಗೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರು ರಾಜೀನಾಮೆಗೆ ಒತ್ತಾಯಿಸಿ ಇಂದು ದೇಶಾದ್ಯಂತ ರೈಲು ತಡೆ ಪ್ರತಿಭಟನೆ ಮಾಡಲಾಯಿತು. ರೈತರ ಪ್ರತಿಭಟನೆಯ ಹಲವಾರು ಹಳೆಯ ಪೋಟೋಗಳನ್ನು ರವಾನಿಸಲಾಗಿದೆ ಎಂದು ದೃಢಪಡಿಸಲಾಗಿದೆ.
Fact Check
ಕ್ಲೇಮು
ಇಂದಿನ ರೈಲು ತಡೆ ಪ್ರತಿಭನಟೆಯ ಫೋಟೋಗಳೆಂದು ಹಳೆಯ ಫೋಟೋಗಳು ವೈರಲ್
ಪರಿಸಮಾಪ್ತಿ
ಇಂದು ರೈತರು ಮಾಡಿದ ರೈಲು ತಡೆಯ ಪ್ರತಿಭಟನೆಯ ಫೋಟೋಗಳೆಂದು ವೈರಲ್ ಮಾಡಲಾದ ಕೆಲ ಫೋಟೋಗಳು ಹಳೆಯ ಫೋಟೋಗಳಾಗಿವೆ.