Fact Check: ವಿವಾದಿತ ಕೃಷಿ ಕಾನೂನು ರದ್ದು ಬಳಿಕ ಸಭೆ ಧ್ವಂಸ?
ಪ್ರಧಾನಿ ನರೇಂದ್ರ ಮೋದಿಯವರು ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು. ಜೊತೆಗೆ ವಿವಾದಾತ್ಮಕ ಕಾನೂನುಗಳನ್ನು ರದ್ದುಗೊಳಿಸುವ ಕರಡು ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟವು ಈಗಾಗಲೇ ಅನುಮೋದನೆ ನೀಡಿದೆ. ನವೆಂಬರ್ 29 ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ವಿವಾದಿತ ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಪರಿಚಯಿಸುವ ನಿರೀಕ್ಷೆಯಿದೆ. ಈ ನಡುವೆ ಕಾರ್ಯಕ್ರಮದ ಸ್ಥಳದಲ್ಲಿ ವಿಧ್ವಂಸಕ ಕೃತ್ಯದ ವಿಡಿಯೋ ವೈರಲ್ ಆಗಿದ್ದು, ಇದು ಕಾನೂನು ರದ್ದತಿಯ ಪರಿಣಾಮವಾಗಿದೆ ಎಂದು ಹೇಳಿಕೊಂಡು ವೈರಲ್ ಮಾಡಲಾಗಿದೆ.
ಅನೇಕ ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದು ಜನರು ವೇದಿಕೆಯ ಮೇಲೆ ಕುರ್ಚಿಗಳನ್ನು ಎಸೆಯುವುದು ಮತ್ತು ಬ್ಯಾನರ್ಗಳನ್ನು ಹರಿದು ಹಾಕುವುದನ್ನು ತೋರಿಸುತ್ತದೆ. ಫೇಸ್ಬುಕ್ ವೀಡಿಯೊದಲ್ಲಿ ಹಿಂದಿ ಶೀರ್ಷಿಕೆ ಹೀಗಿದೆ: "ನೋಡಿ ಸಹೋದರರೇ, ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಘೋಷಣೆಯ ನಂತರ, ಇದು ನಡೆದಿದೆ. ಆದರೆ ಮಾಧ್ಯಮಗಳು ಇದನ್ನು ತೋರಿಸುವುದಿಲ್ಲ" ಎಂದು ಬರೆಯಲಾಗಿದೆ. ಆದರೆ ಈ ವಿಡಿಯೋ ವಿವಾದಿತ ಕೃಷಿ ಕಾನೂನುಗಳಿಗೆ ಸಂಬಂಧಿಸಿದ್ದಲ್ಲ ಎಂದು ಕಂಡು ಹಿಡಿಯಲಾಗಿದೆ.
ಹರಿಯಾಣದ ಕರ್ನಾಲ್ನಲ್ಲಿ ಜನವರಿ 10, 2021 ರಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕಿಸಾನ್ ಮಹಾಪಂಚಾಯತ್ನಲ್ಲಿ ಭಾಗವಹಿಸಬೇಕಿದ್ದಾಗ ವೈರಲ್ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಇಂಡಿಯಾ ಟುಡೇ ಆಂಟಿ-ಫೇಕ್ ನ್ಯೂಸ್ ವಾರ್ ರೂಮ್ (AFWA) ಕಂಡುಹಿಡಿದಿದೆ. ಆದರೆ ರೈತರ ಕಾನೂನನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಕುರ್ಚಿಗಳನ್ನು ಎಸೆದು, ಬ್ಯಾನರ್ ಹರಿದು ಹಾಕಿ ಸ್ಥಳವನ್ನು ಧ್ವಂಸಗೊಳಿಸಿದ್ದರಿಂದ ಅವರು ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು.
ತನಿಖೆ
ರಿವರ್ಸ್ ಇಮೇಜ್ ಹುಡುಕಾಟದ ಸಹಾಯದಿಂದ, ವೈರಲ್ ವೀಡಿಯೊ ಈ ವರ್ಷದ ಜನವರಿಯಿಂದ ಇಂಟರ್ನೆಟ್ನಲ್ಲಿದೆ ಎಂದು ಕಂಡುಕೊಳ್ಳಲಾಗಿದೆ.
ಹಲವು ಯೂಟ್ಯೂಬ್ ಚಾನೆಲ್ಗಳು ಜನವರಿ 10 ರಂದು ಅದೇ ವೀಡಿಯೊವನ್ನು ಹಿಂದಿ ಶೀರ್ಷಿಕೆಯೊಂದಿಗೆ ಅಪ್ಲೋಡ್ ಮಾಡಿವೆ. ರೈತರು ಖಟ್ಟರ್ ಅವರ ಕಾರ್ಯಕ್ರಮದ ಸ್ಥಳವನ್ನು ಧ್ವಂಸಗೊಳಿಸಿದರ ಬಗ್ಗೆ ವಿವಿರಿಸಿವೆ. ಕೀವರ್ಡ್ ಹುಡುಕಾಟದ ಸಹಾಯದಿಂದ ಇದನ್ನು ಸುಳಿವಿನಂತೆ ತೆಗೆದುಕೊಂಡು. ಜನವರಿ 10, 2021 ರಂದು ಹಿಂದಿಯಲ್ಲಿ ಶೀರ್ಷಿಕೆಯೊಂದಿಗೆ ಅಪ್ಲೋಡ್ ಮಾಡಿದ ಇಂಡಿಯಾ ಟಿವಿಯ ಸುದ್ದಿ ಕ್ಲಿಪ್ ಅನ್ನು ಕಂಡುಕೊಳ್ಳಲಾಗಿದೆ. "ಹರಿಯಾಣ: ಕರ್ನಾಲ್ನಲ್ಲಿ ಪ್ರತಿಭಟನೆಯ ನಂತರ ಸಿಎಂ ಖಟ್ಟರ್ ಅವರ ಮಹಾಪಂಚಾಯತ್ ಅನ್ನು ರದ್ದುಗೊಳಿಸಲಾಗಿದೆ" ಎಂದು ಬಹುತೇಕ ಕ್ಲಿಪ್ ಗಳ ಶಿರ್ಷಿಕೆ ತೋರುತ್ತದೆ. ಈ ಘಟನೆಯ ಸಮಯದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿದ್ದವು.
ಈ ಸುದ್ದಿ ವರದಿಗಳ ಪ್ರಕಾರ, ಖಟ್ಟರ್ ಅವರು ಕರ್ನಾಲ್ನಲ್ಲಿ ಕಿಸಾನ್ ಮಹಾಪಂಚಾಯತ್ನಲ್ಲಿ ಭಾಗವಹಿಸಬೇಕಿತ್ತು. ಆದರೆ ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಧರಣಿ ನಿರತ ರೈತರು ಅವರ ಸಭೆಯ ಸ್ಥಳವನ್ನು ಧ್ವಂಸಗೊಳಿಸಿದ ನಂತರ ಅವರು ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು. ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮತ್ತು ಜಲಫಿರಂಗಿಗಳನ್ನು ಬಳಸಬೇಕಾಯಿತು.
ಆದ್ದರಿಂದ, ವಿಧ್ವಂಸಕತೆಯು ಕೃಷಿ ಕಾನೂನುಗಳ ರದ್ದತಿಯ ಪರಿಣಾಮವಾಗಿದೆ ಎಂದು ಹೇಳುವ ವೈರಲ್ ಪೋಸ್ಟ್ ತಪ್ಪುದಾರಿಗೆಳೆಯುವಂತಿದೆ. ಏಕೆಂದರೆ ವೈರಲ್ ವೀಡಿಯೊವನ್ನು ಕಾನೂನುಗಳನ್ನು ಹಿಂತೆಗೆದುಕೊಳ್ಳುವ 10 ತಿಂಗಳ ಮೊದಲು ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.
Fact Check
ಕ್ಲೇಮು
ವಿವಾದಿತ ಕೃಷಿ ಕಾನೂನು ರದ್ದು ಬಳಿಕ ಸಭೆ ಧ್ವಂಸ ಮಾಡಲಾಗಿದೆ.
ಪರಿಸಮಾಪ್ತಿ
ಹರಿಯಾಣದಲ್ಲಿ ನಡೆದ ಹಳೆ ವಿಡಿಯೋ ವೈರಲ್ ಮಾಡಲಾಗಿದೆ. ವಿವಾದಿತ ಕೃಷಿ ಕಾನೂನು ರದ್ದು ಬಳಿಕ ಸಭೆ ಧ್ವಂಸ ಮಾಡಲಾಗಿಲ್ಲ.