Fact Check: ಮಂಗಳೂರು ಕಡಲತೀರದಲ್ಲಿ ಮತ್ಸ್ಯಕನ್ಯೆ?
ಮಂಗಳೂರು, ಅಕ್ಟೋಬರ್ 22: ನಾವೆಲ್ಲರೂ ಮತ್ಸ್ಯಕನ್ಯೆಯರ ಕಥೆಗಳನ್ನು ಕೇಳಿದ್ದೇವೆ. ಮತ್ಸ್ಯಕನ್ಯೆ ಅರ್ಧ ಮಾನವ ಮತ್ತು ಅರ್ಧ ಮೀನಿನ ಆಕಾರದಲ್ಲಿರುವುದನ್ನು ಕೆಲ ಚಿತ್ರಗಳಲ್ಲಿ ಚಿತ್ರಿಸಿರುವುದನ್ನು ನೋಡಿದ್ದೇವೆ. ಆದರೆ ಅದು ನಂಬಲು ಅನರ್ಹವಾದ ಸಂಗತಿ ಎನ್ನುವುದು ಬಹುತೇಕರ ಅನಿಸಿಕೆ. ಕೆಲ ಜನ ಅದನ್ನು ನಿಜವಾಗಲೂ ನೋಡಲು ಬಯಸುತ್ತಾರೆ. ಆದರೆ ನೋಡುವ ಭಾಗ್ಯ ಒಲಿದು ಬಂದಿಲ್ಲ. ಭಾರತದಲ್ಲಿ ಮತ್ಸ್ಯಕನ್ಯೆಯನ್ನು ನೋಡುವ ಭಾಗ್ಯ ಸಿಕ್ಕಿದೆ. ಭಾರತದ ಕರ್ನಾಟಕ ರಾಜ್ಯದ ಮಂಗಳೂರು ಜಿಲ್ಲೆಯ ಕಡಲ ತೀರದಲ್ಲಿ ಮತ್ಸ್ಯಕನ್ಯೆ ಸಿಕ್ಕಿದ್ದಾಳೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಅಗಿದೆ. ಜೊತೆಗೆ ಕಡಲತೀರದಲ್ಲಿರುವ ಮತ್ಸ್ಯಕನ್ಯೆಯ ವಿಡಿಯೋ ಸಹ ಹರಿಬಿಡಲಾಗಿದೆ.
ಮಂಗಳೂರಿನ ಕಡಲತೀರದಲ್ಲಿ ಮತ್ಸ್ಯಕನ್ಯೆ ಕಾಣಿಸಿಕೊಂಡಿದ್ದಾಳೆ ಎಂಬ ಹೇಳಿಕೆಯೊಂದಿಗೆ ಮಹಿಳೆಯೊಬ್ಬಳ ದೇಹದ ಅರ್ಧದಷ್ಟು ಭಾಗ ಮೀನಿನಂತೆ ಕಾಣುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಒಂದೆರಡು ಯುವಕರು ಅವಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಮರಳಿನ ಮೇಲೆ ಬಿದ್ದಿರುವ ಮತ್ಸ್ಯಕನ್ಯೆ ಕಸದಿಂದ ಕತ್ತು ಹಿಸುಕಿದಂತೆ ಕೂಗುತ್ತಿರುವುದನ್ನು ಕಾಣಬಹುದು.
Real #mermaid in #Karnataka #Manglaore #Beach @publictvnews @tv9kannada @AshishSinghLIVE pic.twitter.com/somFbWIpNA
— Country First 🇮🇳 (@_Netaji) October 20, 2021
ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್ಡಬ್ಲ್ಯೂಎ) ವಿಡಿಯೋದೊಂದಿಗೆ ತಪ್ಪು ಸಂದೇಶ ರವಾನೆ ಮಾಡಲಾಗಿದೆ ಎಂದು ಕಂಡು ಹಿಡಿದಿದೆ. ವೈರಲ್ ಕ್ಲಿಪಿಂಗ್ನ್ನು ಶ್ರೀಲಂಕಾದಲ್ಲಿ ಚಿತ್ರೀಕರಿಸಲಾಗಿದೆ. ಇದು ಸಮುದ್ರದ ಜಲಚರಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ವೀಡಿಯೋದ ಭಾಗವಾಗಿದೆ. ಈ ಪೋಸ್ಟ್ ಫೇಸ್ಬುಕ್ ಮತ್ತು ಯೂಟ್ಯೂಬ್ನಲ್ಲೂ ಪ್ರಸಾರವಾಗುತ್ತಿದೆ.
AFWA ತನಿಖೆ
ವಿಡಿಯೋವನ್ನು ಸೂಕ್ಷ್ಮವಾಗಿ ಆಲಿಸಿದರೆ ಜನರು ಮಾತನಾಡುವ ಭಾಷೆ ಕನ್ನಡವಲ್ಲ ಸಿಂಹಳ ಎನ್ನುವುದು ಗೊತ್ತಾಗುತ್ತದೆ. ಮಂಗಳೂರಿನ ಕೆಲವು ಸ್ಥಳೀಯ ವರದಿಗಾರರೊಂದಿಗೆ ಕ್ಲಿಪಿಂಗ್ ಹಂಚಿಕೊಂಡು ವಿಚಾರಿಸಿದಾಗ ಅವರು ಜಿಲ್ಲೆಯಲ್ಲಿ ಅಂತಹ ಯಾವುದೇ ಘಟನೆ ವರದಿಯಾಗಿಲ್ಲ ಮತ್ತು ಮಂಗಳೂರಿನಲ್ಲಿ ಮಾತನಾಡುವ ಭಾಷೆಗೆ ಈ ಭಾಷೆ ಹೊಂದಿಕೆಯಾಗುವುದಿಲ್ಲ ಎಂದು ದೃಢಪಡಿಸಿದರು.
ಬಳಿಕ ಇದು ಶ್ರೀಲಂಕಾ ಮೂಲದ ಟ್ರಿಪ್ ಪಿಸ್ಸೊ ಎಂಬ ಪರಿಶೀಲಿಸಿದ ಯೂಟ್ಯೂಬ್ ಚಾನೆಲ್ನಲ್ಲಿ ಜೂನ್ 7, 2021 ರಂದು ಅಪ್ಲೋಡ್ ಮಾಡಲಾಗಿತ್ತು. ಈ ವಿಡಿಯೋದ ಶೀರ್ಷಿಕೆಯಲ್ಲಿ "ಶ್ರೀಲಂಕಾದಲ್ಲಿ ಸಿಕ್ಕಿಬಿದ್ದ ನಿಜವಾದ ಮತ್ಸ್ಯಕನ್ಯೆ" ಎಂದು ಬರೆಯಲಾಗಿತ್ತು.
ಸುಮಾರು 5:59 ಸೆಕೆಂಡುಗಳಿರುವ ಈ ವಿಡಿಯೋದಲ್ಲಿ ಮಹಿಳೆ ಕ್ಯಾಮರಾಕ್ಕೆ ಮಣ್ಣನ್ನು ಎಸೆಯುತ್ತಿರುವುದು ಕಂಡುಬರುತ್ತದೆ. ವಿಡಿಯೋ ಸಾಗರವನ್ನು ಸಂರಕ್ಷಿಸುವ ಸಂದೇಶಗಳನ್ನು ಮತ್ತು ಅದರಲ್ಲಿ ಕಸವನ್ನು ಎಸೆಯುವ ಪರಿಣಾಮಗಳಿಗೆ ತೋರಿಸುತ್ತದೆ.
"ನೀವು ತೆಗೆದುಕೊಳ್ಳುವ ಪ್ರತಿ ಎರಡನೇ ಉಸಿರಾಟವು ಸಾಗರದಿಂದ ಬರುತ್ತದೆ. ಇಂದು ಇಡೀ ಜಗತ್ತಿಗೆ ಜೀವ ನೀಡುವ ತಾಯಿಯ ದಿನ(ಜೂನ್ 8). ಇಂದು ವಿಶ್ವ ಸಾಗರ ದಿನ. ನಮಗೆ ಆಮ್ಲಜನಕ ನೀಡುವ ಸಾಗರವನ್ನು ರಕ್ಷಿಸೋಣ. ಸಾಗರ ಮಾಲಿನ್ಯದ ವಿರುದ್ಧ ಹೋರಾಡೋಣ "ಎಂದು ಸಂದೇಶವನ್ನು ವಿಡಿಯೋ ಕೊನೆಯಲ್ಲಿ ಪರದೆಯ ಮೇಲೆ ಕಂಡುಬರುತ್ತದೆ. ವಿಡಿಯೋ ಕೊನೆಯಲ್ಲಿ 'ಮತ್ಸ್ಯಕನ್ಯೆ' ಕಾಣೆಯಾಗುತ್ತಾಳೆ. ಆಕೆಯ ರಕ್ಷಣೆಗೆ ಮುಂದಾದ ವ್ಯಕ್ತಿಯು ಕಸದ ಚೀಲವನ್ನು ತೆಗೆದುಕೊಂಡು ಏಕಾಂಗಿಯಾಗಿ ದಡದಲ್ಲಿ ನಡೆಯುತ್ತಾನೆ.
ಸಮುದ್ರದಲ್ಲಿರುವ ಜಲಚರಗಳ ರಕ್ಷಣೆಯ ಜಾಗೃತಿ ಮೂಡಿಸುವ ವಿಡಿಯೋವನ್ನು ಟ್ರಿಪ್ ಪಿಸ್ಸೊ ಕ್ರೆಡಿಟ್ ಮಾಡಿದೆ. ಇದರ ಸಹ-ಸಂಸ್ಥಾಪಕರಾದ ಉದಯ ಹೆವಾಗಮ ಈ ವಿಡಿಯೋ ಕಾಲ್ಪನಿಕ ಎಂದು ಹೇಳಿದ್ದಾರೆ.
ಎಎಫ್ಡಬ್ಲ್ಯೂಎಗೆ ಟ್ರಿಪ್ ಪಿಸ್ಸೊದ ಮುಖ್ಯ ಮಾರ್ಕೆಟಿಂಗ್ ಮ್ಯಾನೇಜರ್ ಹಶಾನ್ ಮಧುಷ್ಕಾ ಮಾತನಾಡಿ, "ನಾವು ಸಾಮಾನ್ಯವಾಗಿ ನಮ್ಮ ಚಾನಲ್ನಲ್ಲಿ ನೈಸರ್ಗಿಕ ಅದ್ಭುತಗಳ ವೀಡಿಯೊಗಳನ್ನು ಪೋಸ್ಟ್ ಮಾಡುತ್ತೇವೆ. ಈ ವರ್ಷ ವಿಶ್ವ ಸಾಗರ ದಿನದಂದು, ನಾವು ವಿಶಿಷ್ಟವಾಗಿ ಏನನ್ನಾದರೂ ಮಾಡಲು ಯೋಚಿಸಿದ್ದೆವು. ಎಕ್ಸ್-ಪ್ರೆಸ್ ಪರ್ಲ್ ಸರಕು ಸಾಗಣೆ ಹಡಗು ರಾಸಾಯನಿಕಗಳನ್ನು ಹೊತ್ತೊಯ್ದು ಶ್ರೀಲಂಕಾ ಕರಾವಳಿಯಲ್ಲಿ ಬೆಂಕಿ ಹೊತ್ತಿಕೊಂಡು ಪರಿಸರ ವಿಕೋಪಕ್ಕೆ ಕಾರಣವಾಯಿತು. ಈ ಘಟನೆಯು ಸಾಗರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ನಮಗೆ ಸ್ಫೂರ್ತಿ ನೀಡಿತು ಮತ್ತು ಮತ್ಸ್ಯಕನ್ಯೆಯ ಕಲ್ಪನೆಯು ಬಂದಿತು. ಟ್ರಿಪ್ ಪಿಸೊದ ಫೇಸ್ಬುಕ್ ಪುಟದಲ್ಲಿ ನಾವು ಕಿರುಚಿತ್ರದ ತೆರೆಮರೆಯ ವೀಡಿಯೊವನ್ನು ಹಂಚಿಕೊಂಡಿದ್ದೇವೆ.
ಚಿತ್ರದ ಬಗ್ಗೆ ಒಂದು ಸಾರಾಂಶವನ್ನು ಉದಯ ಅವರು ಜೂನ್ 8 ರಂದು ತಮ್ಮ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ನಲ್ಲಿ ಉದಯ ಅವರು ಈ ಚಿತ್ರವನ್ನು ವಿಶ್ವ ಸಾಗರ ದಿನದಂದು ಸಮುದ್ರ ಸಂರಕ್ಷಣೆಯ ಮಹತ್ವದ ಕುರಿತು ಸಂದೇಶವನ್ನು ಹರಡಲು ಮಾಡಲಾಗಿದೆ,'' ಎಂದು ಹೇಳುತ್ತಾರೆ.
ಆದ್ದರಿಂದ, ವೈರಲ್ ವೀಡಿಯೋ ಶ್ರೀಲಂಕಾದಲ್ಲಿ ಪ್ರಕೃತಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಚಿತ್ರವಾಗಿದ್ದು, ಮಂಗಳೂರು ಕಡಲತೀರದಲ್ಲಿ ಮತ್ಸ್ಯಕನ್ಯೆಯ ಚಿತ್ರವಲ್ಲ ಎಂಬುದು ಸ್ಪಷ್ಟವಾಗಿದೆ.
Fact Check
ಕ್ಲೇಮು
ಮಂಗಳೂರು ಕಡಲತೀರದಲ್ಲಿ ಮತ್ಸ್ಯಕನ್ಯೆಯ ವಿಡಿಯೋ ವೈರಲ್
ಪರಿಸಮಾಪ್ತಿ
ವೈರಲ್ ವೀಡಿಯೋ ಶ್ರೀಲಂಕಾದಲ್ಲಿ ಪ್ರಕೃತಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ವಿಡಿಯೋವಾಗಿದೆ.