Fact check: ಇವಿಎಂಗಳ ಬದಲಾವಣೆ: ಯುಪಿಯಲ್ಲಿ ಮರು ಮತದಾನ?
ಲಕ್ನೋ ಮಾರ್ಚ್ 17: ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಬಿಜೆಪಿ ಸಂಪೂರ್ಣ ಬಹುಮತ ಗಳಿಸಿದೆ. ರಾಜ್ಯದಲ್ಲಿ ಹೀನಾಯ ಸೋಲಿನ ನಂತರ ಪ್ರತಿಪಕ್ಷಗಳು ಇವಿಎಂಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿವೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ಹೆಚ್ಚು ವೈರಲ್ ಆಗುತ್ತಿದ್ದು, ಇದರಲ್ಲಿ ಯುಪಿಯ ಹಲವು ಸ್ಥಾನಗಳಲ್ಲಿ ಮರುಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸತ್ಯಾಂಶ ತಿಳಿಯದೆ ಜನ ಕೂಡ ಈ ಸಂದೇಶವನ್ನು ಶೇರ್ ಮಾಡುತ್ತಿದ್ದಾರೆ.
ಉತ್ತರಪ್ರದೇಶ ವಿಧಾನಸಭೆ ಫಲಿತಾಂಶಕ್ಕೂ ಮುನ್ನ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಯುಪಿಯಲ್ಲಿ ಇವಿಎಂಗಳನ್ನು ಕಳ್ಳತನ ಮಾಡಲಾಗಿದೆ ಎನ್ನುವ ಗಂಭೀರ ಆರೋಪವನ್ನು ಮಾಡಿದ್ದರು. ಇದಾದ ಬಳಿಕ ಉತ್ತರಪ್ರದೇಶ ವಿಧಾನಸಭೆ ಫಲಿತಾಂಶದಲ್ಲಿ ಎಸ್ಪಿ ಬಿಜೆಪಿ ವಿರುದ್ಧ ಸೋಲನ್ನು ಅನುಭವಿಸಿದೆ.
Fact check: ಅಖಿಲೇಶ್ ಸೋಲಿನಿಂದ ಮನನೊಂದು ಸಹೋದರರು ಆತ್ಮಹತ್ಯೆ?
ವೈರಲ್ ಆಗುತ್ತಿರುವ ಪೋಸ್ಟ್ ಸುದ್ದಿ ವಾಹಿನಿಯ ಸ್ಕ್ರೀನ್ಶಾಟ್ ಅನ್ನು ಹೊಂದಿದೆ. ಇದರಲ್ಲಿ ಯೋಗಿ ಆದಿತ್ಯನಾಥ್ ಕುರ್ಚಿ ಕಿತ್ತುಕೊಳ್ಳಬಹುದು ಎಂದು ಬರೆಯಲಾಗಿದೆ. ಇವಿಎಂ ಬದಲಾವಣೆಯನ್ನು ಚುನಾವಣಾ ಆಯೋಗ ಒಪ್ಪಿಕೊಂಡಿದೆ. ಇದರಿಂದಾಗಿ 142 ಕ್ಷೇತ್ರಗಳಲ್ಲಿ ಮರು ಮತದಾನ ನಡೆಯಲಿದೆ. ಇಂತಹ ಹೇಳಿಕೆಯೊಂದಿಗೆ ಸ್ಕ್ರೀನ್ಶಾಟ್ ಅನ್ನು ವಿಭಿನ್ನ ಸಂದೇಶಗಳೊಂದಿಗೆ ವೇಗವಾಗಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಸಂದೇಶ ಪಿಐಬಿ ಸ್ಪಷ್ಟನೆ
ಇದೀಗ ವೈರಲ್ ಆಗುತ್ತಿರುವ ಪೋಸ್ಟ್ ಬಗ್ಗೆ ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ಸ್ಪಷ್ಟನೆ ನೀಡಿದೆ. ಪಿಐಬಿ ಪ್ರಕಾರ, ಈ ಸ್ಕ್ರೀನ್ಶಾಟ್ ನಕಲಿಯಾಗಿದೆ. ಯುಪಿಯಲ್ಲಿ ಸರಿಯಾಗಿ ಮತದಾನ ನಡೆದಿರುವುದರಿಂದ ಮರು ಮತದಾನ ನಡೆಯುವುದಿಲ್ಲ. ಚುನಾವಣಾ ಆಯೋಗವೂ ಇವಿಎಂಗಳನ್ನು ಬದಲಾಯಿಸಿರುವುದಾಗಿ ಹೇಳಿಕೊಂಡಿಲ್ಲ. ಈ ಸಂದೇಶ ಎಲ್ಲರನ್ನೂ ದಾರಿತಪ್ಪಿಸುವ ಸಲುವಾಗಿ ಸೃಷ್ಟಿಸಲಾಗಿದೆ. ಇಂಥಹ ಸಂದೇಶಗಳನ್ನು ನಂಬಬಾರದು ಮತ್ತು ಈ ಸಂದೇಶಗಳನ್ನು ಶೇರ್ ಮಾಡಬೇಡಿ ಮತ್ತು ವದಂತಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಲಾಗಿದೆ.
ಮುಂದಿನ ಸಿಎಂ ಯಾರು?
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಒಟ್ಟು 403 ಸ್ಥಾನಗಳಿವೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 273 ಸ್ಥಾನಗಳನ್ನು ಗೆದ್ದಿದೆ. ಸಮಾಜವಾದಿ ಪಕ್ಷ 125 ಸ್ಥಾನಗಳಿಗೆ ಕುಸಿದಿದೆ. ಯುಪಿಯಲ್ಲಿ ಭರ್ಜರಿ ಜಯ ಸಾಧಿಸಿದ ನಂತರ ಹಂಗಾಮಿ ಸಿಎಂ ಯೋಗಿ ಆದಿತ್ಯನಾಥ್ ದೆಹಲಿಗೆ ಭೇಟಿ ನೀಡಿದ್ದಾರೆ. ಮೂಲಗಳ ಪ್ರಕಾರ ಅವರೇ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ನಂಬಿಕೆ ಇದೆ. ಹೋಳಿ ನಂತರ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗುವ ನಿರೀಕ್ಷೆ ಇದೆ. ಯುಪಿ ಅಧಿಕಾರಿಗಳು ಪ್ರಮಾಣ ವಚನಕ್ಕೆ ಸಿದ್ಧತೆಯಲ್ಲಿ ನಿರತರಾಗಿದ್ದಾರೆ.
ಯುಪಿಯಲ್ಲಿ ಇವಿಎಂ ಕಳ್ಳತನ
ಉತ್ತರ ಪ್ರದೇಶದಲ್ಲಿ ಚುನಾವಣಾ ಫಲಿತಾಂಶಕ್ಕೂ ಮುನ್ನ ಇವಿಎಂಗಳ ಸಮಸ್ಯೆ ಬಹಳ ವೇಗವಾಗಿ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು. ವಾಸ್ತವವಾಗಿ ವಾರಣಾಸಿಯ ಆಡಳಿತ ಅಧಿಕಾರಿಗಳು ಇವಿಎಂ ಯಂತ್ರಗಳನ್ನು ಸ್ಥಳಾಂತರಿಸುತ್ತಿದ್ದಾರೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದರು. ವಾರಣಾಸಿಯಲ್ಲಿ ಎಸ್ಪಿ ಕಾರ್ಯಕರ್ತರು ಇವಿಎಂ ತುಂಬಿದ ಟ್ರಕ್ ಅನ್ನು ಹಿಡಿದಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿಕೊಂಡಿದ್ದರು. ಈ ಹೇಳಿಕೆಯ ನಂತರ ಯುಪಿ ರಾಜಕೀಯದಲ್ಲಿ ಹೊಸ ಸಂಚಲನ ಶುರುವಾಗಿತ್ತು. ಬಿಜೆಪಿ ಮತ್ತು ಚುನಾವಣಾ ಆಯೋಗ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಈ ವೇಳೆ ವಾರಣಾಸಿಯ ಡಿಎಂ ಇಡೀ ವಿಷಯದ ಬಗ್ಗೆ ಹೇಳಿಕೆ ನೀಡಿದ್ದಾರೆ. ಮತದಾನದ ವೇಳೆ ಬಳಸಲಾದ ಎಲ್ಲಾ ಇವಿಎಂಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಗೆ ಜಯ
ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಕಳೆದ ವಾರ (ಮಾರ್ಚ್ 10) ಪ್ರಕಟವಾಗಿದೆ. ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶದಂತೆ ಈ ಬಾರಿಯೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಯುಪಿಯ 403 ವಿಧಾನಸಭೆ ಕ್ಷೇತ್ರಗಳಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 202 ಪಡೆಯಬೇಕಿತ್ತು. ಇದರಲ್ಲಿ ಬಿಜೆಪಿ 255 ಸ್ಥಾನಗಳನ್ನು ಪಡೆದು ಯುಪಿಯಲ್ಲಿ ಮತ್ತೆ ಕಮಲವನ್ನು ಅರಳಿಸಿದೆ. ಜೊತೆಗೆ ಸಮಾಜವಾದಿ ಪಕ್ಷ ಒಟ್ಟು 111 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 2 ಸ್ಥಾನಗಳನ್ನು ಪಡೆದು ಹೀನಾಯ ಸೋಲು ಕಂಡಿದೆ. ಇನ್ನೂ ಇತರೆ ಪಕ್ಷಗಳು ಬೆರಳೆಣಿಕೆಯಷ್ಟು ಸ್ಥಾನಗಳನ್ನು ಮಾತ್ರ ಪಡೆದುಕೊಂಡಿವೆ. ಈ ಬಾರಿ ಎಸ್ಪಿಗೆ ಕಾಂಗ್ರೆಸ್ ಹಾಗೂ ಬಿಎಸ್ಪಿ ಮತಗಳು ಸಿಕ್ಕಿವೆ ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಇನ್ನೂ ಮೊದಲಬಾರಿಗೆ ಸ್ಪರ್ಧಿಸಿದೆ ಗೋರಖ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯೋಗಿ ಆದಿತ್ಯನಾಥ್ ಹಾಗೂ ಕರ್ಹಾಲ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಖಿಲೆಶ್ ಯಾದವ್ ಬಹುಮತಗಳನ್ನು ಪಡೆದು ಗೆಲವು ಸಾಧಿಸಿದ್ದಾರೆ.
Fact Check
ಕ್ಲೇಮು
ಉತ್ತರಪ್ರದೇಶದಲ್ಲಿ ಇವಿಎಂ ದೋಷಗಳಿಂದ ಮತ್ತೆ ವಿಧಾನಸಭೆ ಚುನಾವಣೆ ನಡೆಯಲಿದೆ ಎನ್ನುವ ಪೋಸ್ಟ್ ವೈರಲ್ ಆಗಿದೆ.
ಪರಿಸಮಾಪ್ತಿ
ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಯಾವುದೇ ದೋಷವಿಲ್ಲದೆ ನಡೆದಿದೆ. ಇದು ಮತ್ತೆ ನಡೆಯುವುದಿಲ್ಲ ಎಂದು ಪಿಐಬಿ ಹೇಳಿದೆ.