ಗೆದ್ದರೆ ಸೌಮ್ಯಾ ರೆಡ್ಡಿಗೆ ಸಚಿವಸ್ಥಾನ? ಕಾಂಗ್ರೆಸ್ ನಲ್ಲಿ ಮತ್ತೆ ಕಿಚ್ಚು?
Recommended Video
ಬೆಂಗಳೂರು, ಜೂನ್ 13: ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಗೆದ್ದರೆ ಅವರಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡುತ್ತದಾ? ಹಾಗೊಮ್ಮೆ ಕೊಟ್ಟರೆ ಈಗಾಗಲೇ ಮಂತ್ರಿಸ್ಥಾನದ ಆಕಾಂಕ್ಷಿಗಳಾಗಿರುವ ಘಟಾನುಘಟಿಗಳು ಸುಮ್ಮನಿರುತ್ತಾರಾ?
ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ ಎನ್ ವಿಜಯಕುಮಾರ್ ಅವರ ಅಕಾಲಿಕ ಮರಣದ ಕಾರಣ ಮೇ 12 ರಂದು ನಡೆಯಬೇಕಿದ್ದ ಚುನಾವಣೆಯನ್ನು ಜೂನ್ 11 ಕ್ಕೆ ಮುಂದೂಡಲಾಗಿತ್ತು. ಸೋಮವಾರ ಮತದಾನ ನಡೆದರೆ, ಇಂದು(ಜೂನ್ 13) ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ.
ಜಯನಗರ ಫಲಿತಾಂಶ LIVE: ಸೌಮ್ಯ ರೆಡ್ಡಿಗೆ 5,348 ಮತಗಳ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಗೃಹಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ, ಬಿಜೆಪಿ ಅಭ್ಯರ್ಥಿಯಾಗಿ ದಿ.ವಿಜಯಕುಮಾರ್ ಅವರ ಸಹೋದರ ಬಿ ಎನ್ ಪ್ರಹ್ಲಾದ್, ಪಕ್ಷೇತರ ಅಭ್ಯರ್ಥಿಯಾಗಿ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣರೆಡ್ಡಿ ಕಣದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ, ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ಸೌಮ್ಯಾ ರೆಡ್ಡಿ ಗೆದ್ದರೆ ಮಂತ್ರಿಸ್ಥಾನ?!
ಈ ಕ್ಷೇತ್ರದಲ್ಲಿ ಸೌಮ್ಯಾ ರೆಡ್ಡಿ ಅವರು ಗೆದ್ದಿದ್ದೇ ಆದಲ್ಲಿ ಅವರಿಗೆ ಮಂತ್ರಿಸ್ಥಾನವನ್ನು ಸರ್ಕಾರ ನೀಡುತ್ತದಾ? ಈಗಾಗಲೇ ಹಿರಿಯ ಕಾಂಗ್ರೆಸ್ ಮುಖಂಡರೂ, ಮಾಜಿ ಮಂತ್ರಿಗಳೂ, ಅನುಭವೀ ರಾಜಕಾರಣಿಗಳೂ ಆಗಿರುವ ರಾಮಮಲಿಂಗಾ ರೆಡ್ಡಿ ಅವರಿಗೆ ಮಂತ್ರಿಸ್ಥಾನವನ್ನು ನೀಡಲಾಗಿಲ್ಲ. ಬಹುಶಃ ಸೌಮ್ಯಾ ರೆಡ್ಡಿ ಅವರು ಗೆಲ್ಲುವ ಸಾಧ್ಯತೆಗಳು ಹೆಚ್ಚಿರುವುದರಿಂದ, ರಾಮಲಿಂಗಾ ರೆಡ್ಡಿ ಅವರ ಬದಲಾಗಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರಿಗೇ ಸಚಿವ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್ ಸಹ ಚಿಂತನೆ ನಡೆಸಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ.
ಸೌಮ್ಯಾ ರೆಡ್ಡಿಗೇ ಏಕೆ?
ಯಾವ ರಾಜಕೀಯ ಅನುಭವವೂ ಇಲ್ಲದಿದ್ದರೂ ಸೌಮ್ಯಾ ರೆಡ್ಡಿ ಅವರಿಗೆ ಮಂತ್ರಿ ಸ್ಥಾನ ನೀಡಲು ಕಾಂಗ್ರೆಸ್ ಏಕೆ ಮುಂದೆಬರುತ್ತದೆ? ಈಗಾಗಲೇ ಯುವಕರಿಗೆ ಹೆಚ್ಚು ಹೆಚ್ಚು ಅವಕಾಶ ನೀಡಬೇಕು ಎಂದು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ನಾಯಕರು ಚಿಂತನೆ ನಡೆಸುತ್ತಿದ್ದಾರೆ. ಆ ಕಾರಣದಿಂದ ಸೌಮ್ಯಾ ರೆಡ್ಡಿ ಅವರಿಗೂ ಒಂದು ಅವಕಾಶ ನೀಡಿದರೆ ಅಚ್ಚರಿಯೇನಿಲ್ಲ. ಅದೂ ಅಲ್ಲದೆ, ಈಗಾಗಲೇ ಅವರು ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿಮಾನಿಗಳನ್ನೂ ಹೊಂದಿದ್ದು, ಜನಪರ ಕೆಲಸ ಮಾಡುವ ವಿಶ್ವಾಸ ಗಳಿಸಿದ್ದಾರೆ. ಸಂಪುಟದಲ್ಲಿ ಜಯಮಾಲಾ ಅವರನ್ನು ಬಿಟ್ಟರೆ ಮಹಿಳಾ ಪ್ರಾತಿನಿಧ್ಯವಿಲ್ಲ. ಮಹಿಳೆ ಎಂಬ ಕಾರಣಕ್ಕೂ ಸೌಮ್ಯಾ ಅವರಿಗೆ ಸಚಿವ ಸ್ಥಾನ ಸಿಕ್ಕರೂ ಅಚ್ಚರಿಯೇನಿಲ್ಲ.
ಗೃಹ ಸಚಿವರ ಪುತ್ರಿ ಸೌಮ್ಯ ಆಸ್ತಿ ಕೇವಲ 47ಲಕ್ಷ ರೂ
ರೆಬೆಲ್ ಗಳ ಕತೆ ಏನು?
ಅಕಸ್ಮಾತ್ ಸೌಮ್ಯಾ ರೆಡ್ಡಿ ಅವರಿಗೆ ಮಂತ್ರಿಸ್ಥಾನ ನೀಡಿದ್ದೇ ಆದಲ್ಲಿ ಈಗಾಗಲೇ ಮಂತ್ರಿಸ್ಥಾನದ ಆಕಾಂಕ್ಷಿಗಳಾಗಿ ರೆಬೆಲ್ ಆಗಿರುವ ನಾಯಕರುಗಳು ಹೇಗೆ ಪ್ರತಿಕ್ರಿಯಿಸಬಹುದು? ಕಾಂಗ್ರೆಸ್ ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿಯುತ್ತಿದ್ದರೂ ತಮಗೆ ಸಿಗದ ಸ್ಥಾನ ನಿನ್ನೆ ಮೊನ್ನೆ ಬಂದವರಿಗೆ ಸಿಗುತ್ತದೆ ಎಂದರೆ ಹಿರಿಯ ಕಾಂಗ್ರೆಸ್ಸಿಗರಿಗೆ ನೋವುಂಟಾಗುವುದು ಖಂಡಿತ. ಮಾಜಿ ಸಚಿವರಾದ ಎಂ ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಅಂಥವರು ಮತ್ತಷ್ಟು ಬಂಡಾಯವೇಳಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಸುಲಭ ಸ್ಪರ್ಧೆ
ದಿ.ಬಿ ಎನ್ ವಿಜಯಕುಮಾರ್ ಅವರು ಅಖಾಡದಲ್ಲಿದ್ದಾಗ ಸ್ಪರ್ಧೆ ಕಠಿಣವೆಂದೇ ಹೇಳಲಾಗಿತ್ತು. ಆಗ ಜೆಡಿಎಸ್ ಸಹ ಕಾಂಗ್ರೆಸ್ಸಿಗೆ ಬೆಂಬಲ ನೀಡಿರಲಿಲ್ಲವಾದ್ದರಿಂದ ತ್ರಿಕೋನ ಸ್ಪರ್ಧೆ ಇತ್ತು. ಅನುಭವಿ ಬಿ ಎನ್ ವಿಜಯಕುಮಾರ್ ಜಯಗಳಿಸುವ ಸಾಧ್ಯತೆ ಹೆಚ್ಚಿತ್ತು. ಆದರೆ ಈಗ ಬದಲಾದ ಸನ್ನಿವೇಶದಲ್ಲಿ ಜೆಡಿಎಸ್ ಸ್ಪರ್ಧೆಯಿಂದ ಹಿಂದೆ ಉಳಿದು ಕಾಂಗ್ರೆಸ್ಸಿಗೆ ಬೆಂಬಲ ನೀಡಿದೆ. ಅನುಕಂಪದ ಅಲೆ ಕೆಲಸ ಮಾಡೀತು ಎಂದು ಬಿಜೆಪಿ ಬಿ ಎನ್ ವಿಜಯಕುಮಾರ್ ಅವರ ಸಹೋದರ ಪ್ರಹ್ಲಾದ್ ಅವರನ್ನು ಕಣಕ್ಕಿಳಿಸಿದ್ದರೂ, ಕಾಂಗ್ರೆಸ್-ಜೆಡಿಎಸ್ ಒಂದಾಗಿರುವುದರಿಂದ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಸುಲಭವಿಲ್ಲ. ಅದೂ ಅಲ್ಲದೆ ಪ್ರಹ್ಲಾದ್ ಅವರು ರಾಜಕೀಯವಾಗಿ ಹೆಚ್ಚು ಪರಿಚಿತರೂ ಅಲ್ಲ. ಈ ಕ್ಷೇತ್ರದಲ್ಲಿ ಉತ್ತಮ ಪ್ರಚಾರ ನಡೆಸಿರುವ ಸೌಮ್ಯಾ ರೆಡ್ಡಿ ಅವರ ಗೆಲುವಿನ ಹಾದಿಯನ್ನು ಈ ಎಲ್ಲ ಅಂಶಗಳೂ ಮತ್ತಷ್ಟು ಸುಲಭಗೊಳಿಸಿವೆ.