ನೇರವಾಗಿ ಮೋದಿಯೊಡನೆ ಯುದ್ಧಕ್ಕಿಳಿದಿರುವ ಸಿದ್ದರಾಮಯ್ಯ
Recommended Video
ಈಶಾನ್ಯ ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಸ್ಥಾಪನೆ ಮಾಡಿದ್ದಕ್ಕಿಂತ ಹೆಚ್ಚಾಗಿ ಅಲ್ಲಿ ಕಾಂಗ್ರೆಸ್ ಮುಕ್ತ ಮಾಡಿರುವ ಸಂಭ್ರಮದಲ್ಲಿ ಬೀಗುತ್ತಿದೆ. ಅಷ್ಟೇ ಅಲ್ಲ, ಮುಂದಿನ ಟಾರ್ಗೆಟ್ ಕರ್ನಾಟಕ ಎಂಬುದನ್ನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಎಲ್ಲ ನಾಯಕರು ಹೇಳುತ್ತಿದ್ದಾರೆ.
ಜತೆಗೆ ಮೋದಿ ಸೇರಿದಂತೆ ಅಮಿತ್ ಶಾ ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ರಾಷ್ಟ್ರನಾಯಕರಿಂದ ಆರಂಭಗೊಂಡು, ತಳಮಟ್ಟದ ಕಾರ್ಯಕರ್ತರವರೆಗೂ ಬಿಜೆಪಿಯಲ್ಲಿ ಹುಮ್ಮಸ್ಸು ಇಮ್ಮಡಿಯಾಗಿದೆ. ಕರ್ನಾಟಕದಲ್ಲಿ ಹೇಗಾದರು ಮಾಡಿ ಕಾಂಗ್ರೆಸ್ ಸರಕಾರಕ್ಕೆ ಇತಿಶ್ರೀ ಹಾಡಲೇಬೇಕೆಂಬ ಹಠಕ್ಕೆ ಬಿದ್ದಾಗಿದೆ.
ಜೆಡಿಎಸ್ ಜೊತೆ ಮೈತ್ರಿಗೆ ಸಿದ್ದರಾಮಯ್ಯ ವಿರೋಧ!
ಸಾಮಾಜಿಕ ಜಾಲತಾಣಗಳಿಂದ ಹಿಡಿದು ಕಾರ್ಯಕರ್ತರನ್ನು ಸಂಘಟಿಸುವುದಾಗಲೀ, ಚುನಾವಣೆಗೆ ತಂತ್ರಗಳನ್ನು ಹೆಣೆಯುವುದಾಗಲೀ ಎಲ್ಲವನ್ನೂ ಬಿಜೆಪಿ ಆರಂಭಿಸಿದೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಬಿಜೆಪಿಗೆ ಚುನಾವಣೆ ಎಂಬ ಯುದ್ಧವನ್ನು ಗೆಲ್ಲುವ ಹುರುಪು ಬಂದೇಬಿಟ್ಟಿದೆ.
ಇದರ ಜೊತೆಗೆ ಜೆಡಿಎಸ್ ತೆಪ್ಪಗೆ ಕುಳಿತಿಲ್ಲ. ಅದು ಕೂಡ ಸೆಟೆದು ನಿಂತಿದೆ. ತಮ್ಮ ಇಳಿ ವಯಸ್ಸಲ್ಲೂ ಎಚ್.ಡಿ.ದೇವೇಗೌಡರು ಸಕ್ರಿಯರಾಗಿದ್ದು, ಕರ್ನಾಟಕದಾದ್ಯಂತ ಪಾದರಸದಂತೆ ಓಡಾಡುತ್ತಿದ್ದಾರೆ. ಅವರಿಗೂ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು, ತಮ್ಮ ಮಗ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದನ್ನು ನೋಡುವ ಬಯಕೆ.
ಎಚ್ ಡಿಕೆಗೆ ಸಿದ್ದರಾಮಯ್ಯ ಟಾರ್ಗೆಟ್
ಎಚ್.ಡಿ.ಕುಮಾರಸ್ವಾಮಿ ಸದ್ಯಕ್ಕೆ ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ದೇವೇಗೌಡರು ಕೂಡ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅನ್ನು ಹೇಗೆ ಸೋಲಿಸಲು ಸಾಧ್ಯವಿದೆ ಎಂಬುದನ್ನು ಗಮನಿಸಿ, ದಲಿತ ಮತ್ತು ಹಿಂದುಳಿದ ವರ್ಗದ ಮತವನ್ನು ಸೆಳೆಯುವ ಸಲುವಾಗಿ ಬಿಎಸ್ ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಈಗ ಬಿಜೆಪಿ ಮತ್ತು ಜೆಡಿಎಸ್ ನ ನಾಯಕರಿಗೆ ಟಾರ್ಗೆಟ್ ಆಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.
ಜೆಡಿಎಸ್ ಪ್ರತಿಸ್ಪರ್ಧಿಯೇ ಅಲ್ಲವಂತೆ!
ಬಿಜೆಪಿ ಮತ್ತು ಜೆಡಿಎಸ್ ಎರಡೂ ತನ್ನ ಮೇಲೆಯೇ ಮುಗಿ ಬಿದ್ದಿವೆ ಎಂಬುದು ಸಿದ್ದರಾಮಯ್ಯ ಅವರಿಗೆ ತಿಳಿದಿದೆಯಾದರೂ ಅವರು ಗಂಭೀರವಾಗಿ ಪರಿಗಣಿಸಿರುವುದು ಬಿಜೆಪಿಯನ್ನು ಮಾತ್ರ. ಅವರು ನೇರವಾಗಿಯೇ ಮೋದಿಯೊಂದಿಗೆ ಯುದ್ಧಕ್ಕಿಳಿದಿದ್ದಾರೆ. ಹಾಗಾಗಿ ರಾಜ್ಯ ಬಿಜೆಪಿ ನಾಯಕರು ಸೇರಿದಂತೆ ಮೋದಿ ವಿರುದ್ಧ ಹರಿಹಾಯುತ್ತಿದ್ದಾರೆ. ಅವರ ದೃಷ್ಟಿಯಲ್ಲಿ ಜೆಡಿಎಸ್ ಗೆಲುವಿನ ಪಕ್ಷವೂ ಅಲ್ಲ. ಎದುರಾಳಿಯೂ ಅಲ್ಲ.
ಕುಮಾರಸ್ವಾಮಿ- ದೇವೇಗೌಡರ ಬಗ್ಗೆ ಉದಾಸೀನ
ಜೆಡಿಎಸ್ ನ ಒಂದಷ್ಟು ಘಟಾನುಘಟಿ ನಾಯಕರು ತಮ್ಮ ಪರವಾಗಿ ಇರುವುದು ಸಿದ್ದರಾಮಯ್ಯನವರಿಗೆ ಇಡೀ ಜೆಡಿಎಸ್ ಅನ್ನೇ ಗೆದ್ದಂತೆ ಆಗಿದೆ. ಹಾಗಾಗಿ ಅವರು ಕುಮಾರಸ್ವಾಮಿ ಮತ್ತು ದೇವೇಗೌಡರತ್ತ ಉದಾಸೀನತೆ ತಾಳುತ್ತಿದ್ದಾರೆ. ಆದರೆ ಇದನ್ನೇ ಸವಾಲ್ ಆಗಿ ಸ್ವೀಕರಿಸಿರುವ ಜೆಡಿಎಸ್, ಮುಂದಿನ ದಿನಗಳಲ್ಲಿ ಯಾವ ರೀತಿಯ ಸ್ಪರ್ಧೆ ಒಡ್ಡುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ಸಿದ್ದುವಿಂದ ಇತರ ನಾಯಕರಿಗೆ ಮುಜುಗರ
ಈಗ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ ರಾಜ್ಯ ಕಾಂಗ್ರೆಸ್ ನಲ್ಲಿ ಹಲವು ಘಟಾನುಘಟಿ ನಾಯಕರು ಇದ್ದರೂ ಅವರೆಲ್ಲರೂ ಸಿದ್ದರಾಮಯ್ಯ ಅವರ ಮುಂದೆ ಮಂಕಾಗಿರುವಂತೆ ಗೋಚರಿಸುತ್ತಿದೆ. ಎಲ್ಲ ಸಾಧನೆ ತನ್ನಿಂದಲೇ ಆಗಿದೆ. ಮುಂದೆಯೂ ನಾನೇ ಮುಖ್ಯಮಂತ್ರಿ ಎಂಬ ಮಾತುಗಳು ಇತರ ನಾಯಕರಿಗೆ ಮುಜುಗರ ತಂದಿದೆ.
ಮತದಾರರ ಓಲೈಕೆಯಲ್ಲಿ
ಎಲ್ಲಕ್ಕಿಂತ ಹೆಚ್ಚಾಗಿ ಪಕ್ಷದ ಶಾಸಕರು ಮಾಡಿಕೊಳ್ಳುತ್ತಿರುವ ಎಡವಟ್ಟುಗಳು ನೇರವಾಗಿ ಸಿದ್ದರಾಮಯ್ಯ ಅವರ ಮೇಲೆ ಪರಿಣಾಮ ಬೀರುತ್ತಿದೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮತ್ತು ಜೆಡಿಎಸ್ ಅನ್ನು ಹತ್ತಿಕ್ಕಿ ಮತದಾರರನ್ನು ಸೆಳೆಯಲು ಯಾವ ತಂತ್ರ ಅಳವಡಿಸಿದರೆ ಕಾರ್ಯಗತವಾಗುತ್ತದೆ ಎಂಬುದರತ್ತ ಚಿತ್ತ ಹರಿಸಿದ್ದು, ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ.