ಸಮೀಕ್ಷೆಗಳು ಬೇಡ ಜನರ ನಿರ್ಧಾರ ಕಾದು ನೋಡೋಣ : ಮಧು ಬಂಗಾರಪ್ಪ ಸಂದರ್ಶನ
Recommended Video
ಶಿವಮೊಗ್ಗ, ಮೇ 02 : 'ಸಹೋದರರ ಸವಾಲು ಎಂದು ಮಾಧ್ಯಮಗಳು ಹೇಳುತ್ತವೆ. ಆದರೆ, ಕ್ಷೇತ್ರದ ಜನರು ತಮಗಾಗಿ ಕೆಲಸ ಮಾಡುವ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ' ಎಂದು ಸೊರಬ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.
ಸೊರಬ ಕ್ಷೇತ್ರದ ಹಾಲಿ ಶಾಸಕರು ಮಧು ಬಂಗಾರಪ್ಪ. 2018ರ ವಿಧಾನಸಭೆ ಚುನಾವಣೆಗೆ ಸೊರಬ ಕ್ಷೇತ್ರಕ್ಕೆ ಅವರೇ ಅಭ್ಯರ್ಥಿ. ಬಿಜೆಪಿಯಿಂದ ಮಧು ಬಂಗಾರಪ್ಪ ಸಹೋದರ ಕುಮಾರ್ ಬಂಗಾರಪ್ಪ ಅವರು ಅಭ್ಯರ್ಥಿ.
ಸಂಬಂಧ ಅರ್ಥ ಮಾಡಿಕೊಳ್ಳುವ ತಿಳುವಳಿಕೆ ಕೊಡಲಿ : ಕುಮಾರ್ ಬಂಗಾರಪ್ಪ ಸಂದರ್ಶನ
ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಧು ಬಂಗಾರಪ್ಪ ಅವರು ಕ್ಷೇತ್ರದ ಸಮಸ್ಯೆಗಳು, ಚುನಾವಣೆ ಸಿದ್ಧತೆ, ಚುನಾವಣಾ ಸಮೀಕ್ಷೆಗಳ ಬಗ್ಗೆ ಮಾತನಾಡಿದ್ದಾರೆ. 'ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ನನಗೆ ಎದುರಾಳಿಗಳೇ ಇಲ್ಲ : ಕೆ.ಎಸ್.ಈಶ್ವರಪ್ಪ ಸಂದರ್ಶನ
ಸೊರಬ ಕ್ಷೇತ್ರದಲ್ಲಿ ಬಿಜೆಪಿಯಿಂದ ಕುಮಾರ್ ಬಂಗಾರಪ್ಪ, ಕಾಂಗ್ರೆಸ್ನಿಂದ ರಾಜು ತಲ್ಲೂರು ಮತ್ತು ಜೆಡಿಎಸ್ ಪಕ್ಷದಿಂದ ಮಧು ಬಂಗಾರಪ್ಪ ಅವರು ಕಣದಲ್ಲಿದ್ದಾರೆ. ಜನರು ಯಾರನ್ನು ಬೆಂಬಲಿಸುತ್ತಾರೆ? ಎಂದು ಕಾದು ನೋಡಬೇಕು.
ಪ್ರಚಾರ ಹೇಗೆ ಸಾಗಿದೆ, ಜನರ ಪ್ರತಿಕ್ರಿಯೆ ಹೇಗಿದೆ?
ಸೊರಬ ಕ್ಷೇತ್ರದಲ್ಲಿ ನಾನು ಗೆದ್ದ ದಿನವೇ ಪ್ರಚಾರ ಆರಂಭವಾಗಿದೆ, ಇಲ್ಲಿಯ ತನಕ ನಿಂತಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದಾರೆ. ನಾನು ಸಹ ಪ್ರಚಾರ ಕೈಗೊಂಡಿದ್ದೇನೆ. ಜನರು ಸಹ ಮತ ಚಲಾಯಿಸಲು ಸಿದ್ಧರಾಗಿದ್ದಾರೆ. ಐದು ವರ್ಷ ನಾನು ಕ್ಷೇತ್ರದಲ್ಲಿ ಮಾಡಿದ ಕೆಲಸ. ಜನರಿಗೆ ಸ್ಪಂದಿಸುವ ರೀತಿಯನ್ನು ನೋಡಿದ್ದಾರೆ. ಕಳೆದ ಬಾರಿಗಿಂತ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ.
ಮಧು ಬಂಗಾರಪ್ಪ ರಾಜ್ಯದ ಎಲ್ಲೆಲ್ಲಿ ಪ್ರಚಾರ ಮಾಡುತ್ತಾರೆ?
ರಾಜ್ಯದ ಹಲವು ಭಾಗಗಳಲ್ಲಿ ಪ್ರಚಾರ ನಡೆಸಿದ್ದೇನೆ. ಕಾಯುತ್ತಾ ಕುಳಿತರೆ ಸಮಯ ಸಾಲುವುದಿಲ್ಲ ಎಂದು ಪ್ರಚಾರ ಕಾರ್ಯ ಮುಗಿಸಿದ್ದೇನೆ. ಈಗ ಶಿವಮೊಗ್ಗ ಜಿಲ್ಲೆ ಮತ್ತು ಅಕ್ಕ-ಪಕ್ಕದ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದೇನೆ. ಸೊರಬ ಕ್ಷೇತ್ರದಲ್ಲಿ ನನ್ನ ಜೊತೆ ಗೀತಾ ಶಿವರಾಜ್ ಕುಮಾರ್ ಅವರು ಪ್ರಚಾರ ನಡೆಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿಯೂ ಅವರು ಪ್ರಚಾರವನ್ನು ನಡೆಸಲಿದ್ದಾರೆ.
ಶಿವಮೊಗ್ಗಕ್ಕೆ ಪಾದಯಾತ್ರೆ ನಡೆಸಿದ್ದು ಏಕೆ?
ಮೂರು ವರ್ಷದಿಂದ ಬರಗಾಲವಿದೆ. ಹಿಂದೆ ನೀರಾವರಿ ಸಚಿವರಾಗಿದ್ದ ನನ್ನ ಸಹೋದರ ಸರಿಯಾಗಿ ಕೆಲಸ ಮಾಡಿದ್ದರೆ ನಮ್ಮ ಕ್ಷೇತ್ರಕ್ಕೆ ನೀರಿನ ಸಮಸ್ಯೆ ಎದುರಾಗುತ್ತಿರಲಿಲ್ಲ ಅನ್ನಿಸುತ್ತದೆ. ಪಾದಯಾತ್ರೆ ಸಮಯದಲ್ಲಿ ಮೂರು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು.
ಕಚವಿ ನೀರಾವರಿ ಯೋಜನೆ ಕೆಲಸ ಆರಂಭವಾಗಿದೆ. ಒಂದೂವರೆ ಎರಡು ವರ್ಷದಲ್ಲಿ ಅದು ಪೂರ್ಣಗೊಳ್ಳಲಿದೆ. ಇನ್ನೆರಡು ನೀರಾವರಿ ಯೋಜನೆಗಳನ್ನು ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಆರಂಭಿಸಲಾಗುತ್ತದೆ.
ಸೊರಬದಲ್ಲಿ ಸಹೋದರರ ಮುಖಾಮುಖಿ ಏನು ಹೇಳುವಿರಿ?
ಸಹೋದರರ ಸವಾಲು ಎಂದು ಮಾಧ್ಯಮಗಳು ಹೇಳುತ್ತವೆ. ಆದರೆ, ಕ್ಷೇತ್ರದ ಜನರು ಆ ರೀತಿ ನೋಡುವುದಿಲ್ಲ. ಒಳ್ಳೆ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ. ಅವರಿಗಾಗಿ ಕೆಲಸ ಮಾಡದಿರುವವರನ್ನು ತಿರಸ್ಕರಿಸುತ್ತಾರೆ.
ಸಮೀಕ್ಷೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾನು ಸಮೀಕ್ಷೆಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುವುದಿಲ್ಲ. ಒಬ್ಬೊಬ್ಬರು ಒಂದೊಂದು ಥರದ ಸಮೀ'ಕ್ಷೆ ನೀಡುತ್ತಾರೆ, ಅವರಿಗೆ ಅದು ಸತ್ಯವಾಗಿ ಕಾಣುತ್ತದೆ.
ಜನರ ಸಮೀಕ್ಷೆ ನಿಜವಾದದ್ದರು. ಅವರ ನಿರ್ಧಾರವನ್ನು ಕಾದು ನೋಡುವುದು ಒಳ್ಳೆಯದು. ಆದ್ದರಿಂದ, ಸಮೀಕ್ಷೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ ಎಂಬುದು ನನ್ನ ಅಭಿಪ್ರಾಯ.