ಸೊರಬದಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗಬೇಕು : ರಾಜು ತಲ್ಲೂರು ಸಂದರ್ಶನ
Recommended Video
ಶಿವಮೊಗ್ಗ, ಮೇ 04 : '40ವರ್ಷದಿಂದ ಒಂದೇ ಕುಟುಂಬ ಸೊರಬ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿದೆ. ಆ ಕುಟುಂಬದಿಂದ ತಾಲೂಕು ಅಭಿವೃದ್ಧಿಯಾಗಿಲ್ಲ. ಈ ಚುನಾವಣೆಯಲ್ಲಿ ಜನರು ಅದಕ್ಕೆ ಉತ್ತರ ಕೊಡುತ್ತಾರೆ ಎಂಬ ಭರವಸೆ ಇದೆ' ಎಂದು ರಾಜು ತಲ್ಲೂರು ಹೇಳಿದರು.
ರಾಜು ತಲ್ಲೂರು ಅವರು ಸೊರಬ ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಮೊದಲು ಬಿಜೆಪಿಯಲ್ಲಿದ್ದ ರಾಜು ಅವರು, ಕುಮಾರ್ ಬಂಗಾರಪ್ಪ ಅವರು ಪಕ್ಷ ಸೇರಿದ ಬಳಿಕ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
'ಸೊರಬದಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಅದು ಅಂತ್ಯಗೊಳ್ಳಲಿದೆ' ಎಂದು ರಾಜು ತಲ್ಲೂರು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ.
ಸಂಬಂಧ ಅರ್ಥ ಮಾಡಿಕೊಳ್ಳುವ ತಿಳುವಳಿಕೆ ಕೊಡಲಿ : ಕುಮಾರ್ ಬಂಗಾರಪ್ಪ ಸಂದರ್ಶನ
ಸೊರಬ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ಬಿಜೆಪಿ ಅಭ್ಯರ್ಥಿ. ಮಧು ಬಂಗಾರಪ್ಪ ಜೆಡಿಎಸ್ ಅಭ್ಯರ್ಥಿ, ಕಾಂಗ್ರೆಸ್ನಿಂದ ರಾಜು ತಲ್ಲೂರು ಕಣದಲ್ಲಿದ್ದಾರೆ.
ಸೊರಬದಲ್ಲಿ ಕಾಂಗ್ರೆಸ್ ಪ್ರಚಾರ ಹೇಗೆ ಸಾಗಿದೆ?
ಮನೆ ಮನೆ ಪ್ರಚಾರವನ್ನು ನಾವು ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದೇವೆ. 40ವರ್ಷದಿಂದ ಒಂದೇ ಕುಟುಂಬ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿದೆ. ಆ ಕುಟುಂಬದಿಂದ ಸೊರಬ ತಾಲೂಕು ಅಭಿವೃದ್ಧಿಯಾಗಿಲ್ಲ. ಈ ಚುನಾವಣೆಯಲ್ಲಿ ಜನರು ಅದಕ್ಕೆ ಉತ್ತರ ಕೊಡುತ್ತಾರೆ ಎಂಬ ಭರವಸೆ ಇದೆ.
ಸೊರಬ ಕ್ಷೇತ್ರದ ಸಮಸ್ಯೆಗಳೇನು?
ಸೊರಬ ಕ್ಷೇತ್ರದ ಹೆಚ್ಚಿನ ಜನರು ರೈತರು, ಭೂಮಿಯನ್ನು ಅವಲಂಬಿಸಿ ಅವರು ಜೀವನ ಮಾಡುತ್ತಾರೆ. ತಾಲೂಕಿನಲ್ಲಿ ಎರಡು ನದಿಗಳು ಹರಿದುಹೋಗುತ್ತವೆ. ಆ ನದಿಗಳಿಂದ ಒಂದಷ್ಟು ನೀರಾವರಿ ಯೋಜನೆಗೆಳು ಬೇಕಾಗಿವೆ.
ಕಚವಿ, ಮುಗೂರು ಏತ ನೀರಾವರಿ ಸೇರಿದಂತೆ ಕ್ಷೇತ್ರಕ್ಕೆ ಅಗತ್ಯ ಇರುವುದು ನೀರು. ಬಹಳ ವರ್ಷಗಳಿಂದ ನದಿಯಿಂದ ಒಂದು ಹನಿ ನೀರನ್ನು ಸಹ ಕೆರೆಗಳಿಗೆ ಹರಿಸಿ ಅದನ್ನು ತುಂಬಿಸುವ ಕೆಲಸ ಮಾಡಿಲ್ಲ. ಆದ್ದರಿಂದ ನೀರಾವರಿ ಯೋಜನೆ ಬೇಕು
ದೇವಾಲಯಗಳು ಅಭಿವೃದ್ಧಿಯಾಗಬೇಕು, ರೈತರಿಗೆ ಸಹಾಯಕವಾಗುವ ಯೋಜನೆ ಬೇಕು, ರಸ್ತೆಗಳ ಅಭಿವೃದ್ದಿಯಾಗಬೇಕು. ಅಕ್ಕಪಕ್ಕದ ತಾಲೂಕುಗಳಿಗೆ ಕೈಗಾರಿಕೆಗಳು ಬಂದು ಉದ್ಯೋಗ ಸಿಕ್ಕಿವೆ. ನಮ್ಮ ಕ್ಷೇತ್ರಕ್ಕೆ ಕೈಗಾರಿಕೆಗಳು ಬಂದಿಲ್ಲ.
ಕಾಂಗ್ರೆಸ್ ಪಕ್ಷವನ್ನು ಜನರು ಏಕೆ ಬೆಂಬಲಿಸಬೇಕು?
ಯಾರೂ ಮಾಡ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. 5 ವರ್ಷಗಳ ಹಿಂದೆ 160 ಅಂಶಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಈಗ 158 ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.
ಬಡವರು ಹಸಿವಿನಿಂದ ಮಲಗಬಾರದು ಎಂದು ಅನ್ನಭಾಗ್ಯ ಯೋಜನೆ ತಂದಿದೆ. ರೈತರ ಸಾಲ ಮನ್ನಾ ಮಾಡಿದ್ದಾರೆ. ಇದರಿಂದ ರೈತರು ಹೆಚ್ಚಿರುವ ಸೊರಬದಂತಹ ತಾಲೂಕಿಗೆ ಅನುಕೂಲವಾಗಿದೆ. ಎಲ್ಲಾ ಜಾತಿ, ಧರ್ಮದವರ ಅಭಿವೃದ್ಧಿಗೆ ಸರ್ಕಾರ ಕೆಲಸ ಮಾಡಿದೆ.
ಸೊರಬದ ಕುಟುಂಬ ರಾಜಕಾರಣದ ಬಗ್ಗೆ ಏನು ಹೇಳುವಿರಿ?
ಅಣ್ಣ-ತಮ್ಮ ಒಂದು ಕುಟುಂಬದಲ್ಲಿ ಸರಿ ಇಲ್ಲ ಎಂದರೆ ತಾಲೂಕನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ?. ಕ್ಷೇತ್ರದ ಜನರನ್ನು ಹೇಗೆ ಕಾಪಾಡುತ್ತೀರಿ?. ಕುಮಾರ್ ಬಂಗಾರಪ್ಪ ಅವರನ್ನು 10 ವರ್ಷ ಶಾಸಕರನ್ನಾಗಿ ಮಾಡಿ 5 ವರ್ಷ ಸಚಿವರನ್ನಾಗಿ ಮಾಡಿದೆವು. ನೀರಾವರಿ ಮಂತ್ರಿ ಆಗಿದ್ದರೂ ಸೊರಬಕ್ಕೆ ಯಾವ ಯೋಜನೆಯನ್ನು ತರಲಿಲ್ಲ.
ಅಣ್ಣ-ತಮ್ಮ ಇಬ್ಬರು ದಂಡಾವತಿ ಎಂಬ ಹೆಸರು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅದರಿಂದ ತಾಲೂಕಿಗೆ ಯಾವುದೇ ಪ್ರಯೋಜನವಾಗಿಲ್ಲ. 20 ವರ್ಷ ಅಣ್ಣ-ತಮ್ಮ ಶಾಸಕರಾಗಿದ್ದಾರೆ. ಕ್ಷೇತ್ರದ ಅಭಿವೃದ್ದಿ ಹೇಗೆ ಆಗಿದೆ? ಎಂಬುದನ್ನು ನೋಡಿ.
ಚಂದ್ರಗುತ್ತಿ ದೇವಾಲಯಕ್ಕೆ ನೂರಾರು ಭಕ್ತರು ಬರುತ್ತಾರೆ. ಆದರೆ, ಅಲ್ಲಿ ಕುಡಿಯಲು ನೀರಿಲ್ಲ, ಶೌಚಾಲಯದ ವ್ಯವಸ್ಥೆ ಇಲ್ಲ, ಜಾತ್ರೆಯ ದಿನ ಜನರು ನೀರಿಲ್ಲದೇ ಪರದಾಡುತ್ತಾರೆ. ಒಂದೇ ಕುಟುಂಬದವರು ಶಾಸಕರು, ಸಚಿವರು, ರಾಜ್ಯದ ಮುಖ್ಯಮಂತ್ರಿಯಾದರು. ಆದರೆ, ತಾಲೂಕು ಅಭಿವೃದ್ಧಿ ಆಗಿಲ್ಲ.