ಚಾಮುಂಡೇಶ್ವರಿ ತಿರಸ್ಕರಿಸಿದವರನ್ನು ಬನಶಂಕರಿ ಸ್ವೀಕರಿಸುತ್ತಾಳೆಯೇ?
Recommended Video
ಬೆಂಗಳೂರು, ಏಪ್ರಿಲ್ 23: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ತಾಯಿ ತಿರಸ್ಕಾರ ಮಾಡಿದ್ದಾಳೆ. ಹೀಗಾಗಿ ಬಳಿಕ ಅವರು ಬಾದಾಮಿಯ ಬನಶಂಕರಿ ತಾಯಿ ಕಡೆ ಹೋಗಿದ್ದಾರೆ. ಚಾಮುಂಡೇಶ್ವರಿ ತಾಯಿ ತಿರಸ್ಕಾರ ಮಾಡಿದ್ದನ್ನು ಬನಶಂಕರಿ ಸ್ವೀಕರಿಸುತ್ತಾಳೆಯೇ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರನ್ನ ಯಾರೂ ಸ್ವೀಕಾರ ಮಾಡುವ ಸಾಧ್ಯತೆಯೇ ಇಲ್ಲ. ಅವರಿಗೆ ಭವಿಷ್ಯ ಇಲ್ಲ. ಮಹಾಭಾರತದಲ್ಲಿ ಬರುವ ಶಕುನಿಯ ರೀತಿ ಆಗಿದ್ದಾರೆ. ಕಾಂಗ್ರೆಸ್ನಲ್ಲಿ ನಡೆಯುತ್ತಿರುವುದು ಕೌರವರ ಪ್ರತಿಪಾದನೆಗಳು. ನಿಜವಾದ ಧರ್ಮ ಮತ್ತು ತತ್ವ ಯಡಿಯೂರಪ್ಪ ಕೈಯಲ್ಲಿದೆ. ಅವರಿಗೆ ಅಧಿಕಾರ ದೊರೆತರೆ ಪಾಂಡವರ ಸಾಮ್ರಾಜ್ಯದ ಆಡಳಿತ ಸಿಗುತ್ತದೆ ಎಂದರು.
ಯುದ್ಧಕ್ಕೆ ಮೊದಲೇ ಸೋಲೊಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ : ಬಿಜೆಪಿ
ಸಿದ್ದರಾಮಯ್ಯ ಅವರೇ ನಿಮಗೆ ಯಡಿಯೂರಪ್ಪ ಅವರ ಶಕ್ತಿ ಗೊತ್ತಿಲ್ಲ. 40 ವರ್ಷ ಹೋರಾಟ ನಡೆಸಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಅವರದು ಸ್ವಾರ್ಥ ರಹಿತ ಜೀವನ. ಅವರ ಸ್ವಾರ್ಥ ಏನಿದ್ದರೂ ರಾಜ್ಯದ ಬಡವರು, ರೈತರು ಅಭಿವೃದ್ಧಿ ಹೊಂದಬೇಕು ಎಂಬುದಷ್ಟೇ.
ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಮೂರೂವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಕೆ ಈ ಹಾದಿ ಹಿಡಿಯುತ್ತಿದ್ದಾರೆ. ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ರೈತರ ಸಾಲ ಮನ್ನಾ ಆಗಲಿದೆ ಎಂದು ಹೇಳಿದರು.
ನಾವು ಉತ್ತರ ಕರ್ನಾಟಕದಿಂದ ಬಂದವರು. ಅಲ್ಲಿ ಯಡಿಯೂರಪ್ಪ ಅವರ ಶಕ್ತಿ ಬಲವಾಗಿದೆ. ಅವರು ಅಲ್ಲಿಗೆ ಬಂದು ಎಲ್ಲೋ ಒಂದೆಡೆ ಕುಳಿತು ಬಿಜೆಪಿಯನ್ನು ಗೆಲ್ಲಿಸಿ ಎಂದರೆ ಸಾಕು. ಚುನಾವಣಾ ಪ್ರಚಾರ ಮಾಡುವ ಅಗತ್ಯವಿಲ್ಲ. ಜನರೇ ಗೆಲ್ಲಿಸುತ್ತಾರೆ. ಹಾಗೆಯೇ ಮೈಸೂರು, ಮಂಡ್ಯ ಭಾಗದ ಜನರು ಮನಸು ಮಾಡಿದರೆ ವಿಜಯೇಂದ್ರ ಅವರ ಗೆಲುವನ್ನು ತಡೆಯಲು ಸಾರಿಗೂ ಸಾಧ್ಯವಿಲ್ಲ. ಮುಂದೆ ನಿಮ್ಮೆಲ್ಲರ ಕಷ್ಟ ಪರಿಹಾರವಾಗುತ್ತದೆ. 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 23ನೇ ರಾಜ್ಯ ಕರ್ನಾಟಕವಾಗಬೇಕು ಎಂದರು.