ದೇವೇಗೌಡರ ಮನೆ ಬಾಗಿಲು ತಟ್ಟಿದ ಸಿದ್ದರಾಮಯ್ಯ
ಬೆಂಗಳುರು, ಮೇ 15: ಚುನಾವಣಾ ಪ್ರಚಾರದಲ್ಲಿ ಸತತವಾಗಿ ದೇವೇಗೌಡ ಅವರನ್ನು ಟೀಕಿಸುತ್ತಿದ್ದ ಸಿದ್ದರಾಮಯ್ಯ ಅವರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಂದು ಅದೇ ದೇವೇಗೌಡ ಅವರನ್ನು ಭೇಟಿ ಆಗಲು ಹೊರಟಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿರುವ ಬೆನ್ನಲ್ಲೆ ಸಿದ್ದರಾಮಯ್ಯ ಅವರು ದೇವೇಗೌಡ ಅವರ ಭೇಟಿಗೆ ಅವರ ನಿವಾಸಕ್ಕೆ ತೆರಳಿದ್ದಾರೆ. ಸಿದ್ದರಾಮಯ್ಯ ಅವರನ್ನು ತಮ್ಮ ಮನೆ ಬಾಗಿಲಿಗೆ ಕರೆಸಿಕೊಳ್ಳುವ ಮೂಲಕ ದೇವೇಗೌಡರು ರಾಜಕೀಯವಾಗಿ ಗೆಲುವು ಸಾಧಿಸಿದ್ದಾರೆ ಎಂದೇ ಈ ಭೇಟಿಯನ್ನು ಪ್ರಾಥಮಿಕವಾಗಿ ವಿಶ್ಲೇಷಿಸಬಹುದಾಗಿದೆ.
ಕಾಂಗ್ರೆಸ್ ಜೊತೆ ಮೈತ್ರಿಗೆ ಜೆಡಿಎಸ್ ಒಪ್ಪಿಗೆ,ಬಿಎಸ್ವೈ ಕನಸು ಭಗ್ನ
ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವು ಮೈತ್ರಿ ಸರ್ಕಾರ ರಚಿಸುತ್ತಿರುವ ಬೆನ್ನಲ್ಲೆ ರಾಜಕೀಯ ಮತ್ತು ಆಡಳಿತಾತ್ಮಕ ವಿಚಾರಗಳ ಚರ್ಚೆಗೆಂದು ಸಿದ್ದರಾಮಯ್ಯ ಅವರು ದೇವೇಗೌಡ ಅವರನ್ನು ಭೇಟಿ ಮಾಡಲಿದ್ದಾರೆ. ರಾಜಕೀಯ ವಿರೋಧಿಗಳೆನಿಸಿಕೊಂಡಿರುವ ಇಬ್ಬರು ನಾಯಕರ ಪರಸ್ಪರ ಭೇಟಿ ಅತ್ಯಂತ ಕುತೂಹಲ ಕೆರಳಿಸಿದೆ.
ಕಾವೇರಿ ವಿವಾದ ಉಲ್ಬಣಿಸಿದ್ದಾಗ ಸಿದ್ದರಾಮಯ್ಯ ಅವರು ಬಯಸಿ-ಬಯಸಿ ದೇವೇಗೌಡ ಅವರನ್ನು ಭೇಟಿ ಆಗಿದ್ದರು, ಅಲ್ಲದೆ ಅವರ ನೇತೃತ್ವದಲ್ಲೇ ಕಾವೇರಿ ವಿವಾದದ ಬಗ್ಗೆ ಸರ್ವ ಪಕ್ಷ ಸಭೆ ನಡೆಸಿದ್ದರು, ಆ ನಂತರ ಈ ಇಬ್ಬರೂ ನಾಯಕರು ಪರಸ್ಪರ ಭೇಟಿ ಆಗಿಯೇ ಇಲ್ಲ.
ಆಜಾದ್ ತಂತ್ರ : ಕುಮಾರಸ್ವಾಮಿ ಸಿಎಂ, ಕೈ -ತೆನೆ ಮೈತ್ರಿ
ಇದಷ್ಟೆ ಅಲ್ಲ ದೇವೇಗೌಡ ಅವರ ಭೇಟಿ ನಂತರ ಸಿದ್ದರಾಮಯ್ಯ ಅವರು ಇಂದು ಸಂಜೆ ಕುಮಾರಸ್ವಾಮಿ ಅವರನ್ನೂ ಭೇಟಿ ಆಗಿ ಮಾತುಕತೆ ನಡೆಸಲಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಪುತೃ ಸೇರಿದಂತೆ ಇತರ ತಮ್ಮ ಬೆಂಬಲಿಗರ ಪರ ಸಚಿವ ಸ್ಥಾನಕ್ಕೆ ಲಾಭಿ ನಡೆಸುತ್ತಾರೊ ಅಥವಾ ಇತರೆ ವಿಚಾರಗಳ ಚರ್ಚೆ ಮಾಡುತ್ತಾರೆಯೋ ಕಾದು ನೋಡಬೇಕಿದೆ.