'ಎರಡೇ ಎರಡು ನಿಮಿಷದಲ್ಲಿ ಸರ್ಕಾರ ಉರುಳಿಸಬಲ್ಲರು ಸಿದ್ದರಾಮಯ್ಯ!'
Recommended Video
"ಸಿದ್ದರಾಮಯ್ಯ ಮನಸ್ಸು ಮಾಡಿದರೆ ಸರ್ಕಾರ ಎರಡೇ ನಿಮಿಷಗಳಲ್ಲಿ ಉರುಳುತ್ತೆ" ಎಂದು ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣ ಹೇಳಿದ್ದಾರೆ.
'ಕಾಂಗ್ರೆಸ್ ಪಕ್ಷದಲ್ಲಿ ಸದ್ಯಕ್ಕೆ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲಾಗಿದೆ, ಅವರ ಮಾತಿಗೆ ಬೆಲೆ ನೀಡಲಾಗುತ್ತಿಲ್ಲ' ಎಂಬ ವದಂತಿಯನ್ನು ನಾರಾಯಣ ಸಾರಾಸಗಟಾಗಿ ಅಲ್ಲಗಳೆದರು. 'ಇವೆಲ್ಲವೂ ಶುದ್ಧ ಸುಳ್ಳು. ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುವುದಾಗಿದ್ದರೆ ಅವರಿಗೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನು ನೀಡುತ್ತಿರಲಿಲ್ಲ' ಎಂದು ಅವರು ಕಿಡಿಕಾರಿದರು.
ಬಿಕ್ಕಟ್ಟಿನ ವೇಳೆ ಪ್ರವಾಸ ಬೇಕೆ: ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್ ಅಸಮಾಧಾನ?
'ಸಿದ್ದರಾಮಯ್ಯ ನಮ್ಮ ನಾಯಕ. ಅವರು ಮನಸ್ಸು ಮಾಡಿದರೆ ಸರ್ಕಾರವನ್ನು ಎರಡೇ ನಿಮಿಷದಲ್ಲಿ ಉರುಳಿಸಬಲ್ಲರು. ಸಿದ್ದರಾಮಯ್ಯ ಅವರ ಮನಸ್ಸನ್ನು ನೋಯಿಸಬೇಡಿ. ಅವರ ಕೂದಲು ಕೋಂಕಿಸುವುದಕ್ಕೂ ನಾವು ಬಿಡುವುದಿಲ್ಲ' ಎಂದು ನಾರಾಯಣ ಉದ್ವೇಗದಿಂದ ಹೇಳಿದರು.
ಸಚಿವ ಸಂಪುಟ ರಚನೆ ಮತ್ತು ಖಾತೆ ಹಂಚಿಕೆಯ ನಂತರ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಆರಂಭವಾಗಿದೆ. ಸಿದ್ದರಾಮಯ್ಯ ಬೆಂಬಲಿಗ ಶಾಸಕರಿಗೆ ಮಂತ್ರಿ ಸ್ಥಾನ ಸಿಕ್ಕುತ್ತಿಲ್ಲ. ಇಷ್ಟೆಲ್ಲ ಆದರೂ ಸಿದ್ದರಾಮಯ್ಯ ಮಾತ್ರ ಬಾದಾಮಿ ಪ್ರವಾಸದಲ್ಲಿದ್ದಾರೆ. ರಾಜ್ಯ ರಾಜಕಾರಣದಲ್ಲಿ ನೇರವಾಗಿ ಪಾಲ್ಗೊಳ್ಳದೆ ದೂರವೇ ಉಳಿದು ಅಚ್ಚರಿ ಮೂಡಿಸಿದ್ದಾರೆ.
ಸಿದ್ದರಾಮಯ್ಯ ಮನಸ್ಸು ಮಾಡಿದರೆ ...
ಸಿದ್ದರಾಮಯ್ಯ ಮನಸ್ಸು ಮಾಡಿದರೆ ಸರ್ಕಾರ ಬೀಳುತ್ತೆ ಎಂಬ ಮಾತಿನ ಅರ್ಥವೇನು? ಈಗಾಗಲೇ ಸರ್ಕಾರದಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಗೆ ಸೂಕ್ತ ಹುದ್ದೆ ನೀಡಲಾಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಈ ಎಲ್ಲವೂ ಗೊತ್ತಿದ್ದರೂ ಏನೂ ಗೊತ್ತಿಲ್ಲ ಎಂಬಂತೆ ಸಿದ್ದರಾಮಯ್ಯ ಮೌನವಾಗಿಯೇ ಇದ್ದಾರೆ. ಆದರೆ ಬೆಂಬಲಿಗರ ಒತ್ತಾಯಕ್ಕೆ ಮಡಿದು ಸಿದ್ದರಾಮಯ್ಯನವರೇ ಸರ್ಕಾರವನ್ನು ಬೀಳಿಸುವ ಮಟ್ಟಿಗೆ ಯೋಚಿಸುತ್ತಾರಾ ಎಂಬುದು ಈಗ ಕುತೂಹಲದ ಪ್ರಶ್ನೆಯಾಗಿ ಉಳಿದಿದೆ.
ಬಾದಾಮಿ ಪ್ರವಾಸದಲ್ಲಿ ಸಿದ್ದರಾಮಯ್ಯ!
ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಿದ್ದರಾಮಯ್ಯ ಸರ್ಕಾರದ ಚಟುವಟಿಕೆಗಳಲ್ಲಿ ಸಕ್ರಿಯರಾಗಿಲ್ಲ. ಇದೀಗ ಇತ್ತ ಬಂಡಾಯದ ಬೆಂಕಿ ದೆಹಲಿಯ ಹೈಕಮಾಂಡ್ ಅಂಗಳವನ್ನೂ ಬಿಸಿಮಾಡುತ್ತಿದ್ದರೆ ಸಿದ್ದರಾಮಯ್ಯನವರು ಮಾತ್ರ ತಮ್ಮನ್ನು ಗೆಲ್ಲಿಸಿದ ಜನರಿಗೆ ಕೃತಜ್ಞತೆ ಹೇಳಲು ಬಾದಾಮಿಗೆ ತೆರಳಿದ್ದಾರೆ. ಇನ್ನೆರಡು ದಿನ ಬಾದಾಮಿ ಪ್ರವಾಸದಲ್ಲೇ ಸಿದ್ದರಾಮಯ್ಯ ಇರುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಅಂದರೆ ಸಿದ್ದರಾಮಯ್ಯ ಈ ಪರಿ ನಿರ್ಲಿಪ್ತವಾಗಿರುವುದೇಕೆ?
ಸಿದ್ದು ಮೇಲೆ ಹೈಕಮಾಂಡ್ ಕೆಂಡ!
ಕೆಲವು ಮೂಲಗಳ ಪ್ರಕಾರ ಸರ್ಕಾರದ ಚಟುವಟಿಕೆಯಲ್ಲಿ ಸ್ವ ಇಚ್ಛೆಯಿಂದ ಸಕ್ರಿಯರಾಗದೆ, ಈಗ ಇದ್ದಕ್ಕಿದ್ದಂತೆ ಬಾದಾಮಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರ ನಡೆ ಹೈಕಮಾಂಡಿಗೂ ಕೋಪ ತರಿಸಿದೆ. ಪಕ್ಷದಲ್ಲಿನ ಗೊಂದಲವನ್ನು ಸರಿಪಡಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯ ಹೀಗಿರುವುದಕ್ಕೆ ಸ್ವತಃ ಹೈಕಮಾಂಡ್ ಬೇಸರ ವ್ಯಕ್ತಪಡಿಸಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರೇ ಫೋನ್ ಮಾಡಿ ಸಿದ್ದರಾಮಯ್ಯ ಅವರ ಬಳಿ ಗೊಂದಲ ಪರಿಹರಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ನಾರಾಯಣ ಬಿಟ್ಟ ಬಾಣ!
'ಸಿದ್ದರಾಮಯ್ಯ ಸಿದ್ದರಾಮಯ್ಯನೇ. ಅವರನ್ನು ಮೂಲೆಗುಂಪು ಮಾಡುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಅವರ ಕೂದಲು ಕೋಂಕಿಸುವುದಕ್ಕೂ ನಾವು ಬಿಡೋಲ್ಲ' ಎಂದು ನಾರಾಯಣ ಅವರು ಉದ್ವೇಗದಿಂದ ಹೇಳಿದ ಮಾತಿನ ಅರ್ಥವೇನು? ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಬಣ ಮತ್ತು ಪರಮೇಶ್ವರ್ ಬಣದ ನಡುವೆ ಸಾಕಷ್ಟು ಅಂತರ ಸೃಷ್ಟಿಯಾಗಿದೆ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರಾ? ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ಮಾಡಿದರೆ ಸರ್ಕಾರ ಉರುಳಿಸುತ್ತೇವೆ ಎಂಬ ಬ್ಲಾಕ್ ಮೇಲ್ ಸಂದೇಶವೂ ಆ ಮಾತಿನಲ್ಲಿದೆಯಾ? ಅದನ್ನು ಕಾಲವೇ ಹೇಳಬೇಕು!