ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ಸಂದರ್ಶನ
Recommended Video
ಶಿವಮೊಗ್ಗ, ಮೇ 02 : ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಎದುರಾಳಿಗಳು ಇಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಕಣಕ್ಕಿಳಿದಿರುವ ಇಬ್ಬರು ಹಣಬಲದಲ್ಲಿ ಎದುರಾಳಿಗಳು ಆಗಬಹುದು. ಆದರೆ, ಜನರಿಗೆ ಸ್ಪಂದಿಸುವ ವಿಚಾರ, ಕ್ಷೇತ್ರದ ಅಭಿವೃದ್ಧಿಗಾಗಿ ಕೆಲವ ಮಾಡುವ ವಿಚಾರದಲ್ಲಿ ಎದುರಾಳಿಗಳಲ್ಲ' ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯಾನಾಯ್ಕ ಹೇಳಿದರು.
ಶಾರದಾ ಪೂರ್ಯಾನಾಯ್ಕ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕಿ. 2018ರ ವಿಧಾನಸಭೆ ಚುನಾವಣೆಗೆ ಅವರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ. ಈಗಾಗಲೇ ಅವರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯದನ್ನು ಬ್ಯುಸಿಯಾಗಿದ್ದಾರೆ.
ಶಿವಮೊಗ್ಗದಲ್ಲಿ ನನಗೆ ಎದುರಾಳಿಗಳೇ ಇಲ್ಲ : ಕೆ.ಎಸ್.ಈಶ್ವರಪ್ಪ ಸಂದರ್ಶನ
ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಚುನಾವಣೆ ಬಗ್ಗೆ ಮಾತನಾಡಿದರು. ಕ್ಷೇತ್ರದಲ್ಲಿ ಎದುರಾಳಿಗಳು, ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡಿರುವ ಕೆಲಸಗಳು, ಜೆಡಿಎಸ್ ಪಕ್ಷವನ್ನು ಏಕೆ ಬೆಂಬಲಿಸಬೇಕು? ಎಂದು ಮಾತನಾಡಿದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಯಾರಿಗೆ ಗೆಲುವು?
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶಾರದಾ ಪೂರ್ಯಾನಾಯ್ಕ ಅವರು ಜೆಡಿಎಸ್ ಅಭ್ಯರ್ಥಿ. ಬಿಜೆಪಿಯಿಂದ ಅಶೋಕ್ ನಾಯ್ಕ, ಕಾಂಗ್ರೆಸ್ನಿಂದ ಶ್ರೀನಿವಾಸ ಕರಿಯಣ್ಣ ಕಣದಲ್ಲಿದ್ದಾರೆ. ಯಾರಿಗೆ ಜನ ಬೆಂಬಲ ನೀಡುವರು? ಎಂದು ಕಾದು ನೋಡಬೇಕು.
ಪ್ರಚಾರದಲ್ಲಿ ತೊಡಗಿದ್ದೀರಿ, ಜನರ ಪ್ರತಿಕ್ರಿಯೆ ಹೇಗಿದೆ?
ಪ್ರಚಾರ ಕಾರ್ಯ ತುಂಬಾ ಚೆನ್ನಾಗಿ ನಡೆಯುತ್ತಿದೆ. ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂದು ಜನರು ಬಯಸಿದ್ದಾರೆ. ಆದ್ದರಿಂದ, ಈ ಬಾರಿಯ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿಯೂ ಪುನಃ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.
ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಚಿಂತನೆ ಏನು?
ತುಂಗ ಏತ ನೀರಾವರಿ ಯೋಜನೆಗೆ ದಿ.ಬಂಗಾರಪ್ಪ ಅವರಿ ಅಡಿಗಲ್ಲು ಹಾಕಿದ್ದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಪೈಪ್ ಲೈನ್ ಬದಲಾವಣೆ ಮಾಡಲಾಯಿತು. ಈಗ ಯೋಜನೆ ಪೂರ್ಣಗೊಂಡಿದ್ದು, ಈ ಮಳೆಗಾಲದಲ್ಲಿ ನೀರು ಹರಿಸಲು ಸಾಧ್ಯವಾಗುತ್ತದೆ.
ಕ್ಷೇತ್ರದ ವ್ಯಾಪ್ತಿಯ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದೇನೆ. ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚಿನ ಒತ್ತು ನೀಡಿ ಎಂದು ಜನರು ಬೇಡಿಕೆ ಇಟ್ಟಿದ್ದಾರೆ. ನಮ್ಮಲ್ಲಿ ತುಂಗ-ಭದ್ರಾ ನದಿ ಹರಿಯುತ್ತಿದ್ದರೂ ನೀರಿಗೆ ಕೊರತೆ ಇದೆ.
ಶಿವಮೊಗ್ಗ ಪಾದಯಾತ್ರೆ ಮಾಡಿದ್ದು ಏಕೆ?
ಅಡಿಕೆ ಬೆಳೆಗಾರರಿಗೆ ಸಹಾಯಕವಾಗಲಿ ಎಂದು ಪಾದಯಾತ್ರೆ ಮಾಡಿದೆ. ಮೊದಲು 80 ಸಾವಿರವಿದ್ದ ಅಡಿಕೆ ಬೆಲೆ 28 ಸಾವಿರಕ್ಕೆ ಇಳಿಯಿತು. ಇದರಿಂದ ರೈತರು ಆತಂಕಗೊಂಡರು, ಸಾಲಗಾರರಾದರು. ರೈತರಿಗೆ ಸ್ಥಿತರವಾದ ಬೆಲೆ ನೀಡಿ ಎಂದು ಪಾದಯಾತ್ರೆ ಮಾಡಿದೆ. ಈಗ ಅಡಿಕೆಗೆ ಸ್ಥಿರವಾದ ಬೆಲೆ ಸಿಕ್ಕಿದೆ ಬೆಳೆಗಾರರ ಆತಂಕ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
ಕ್ಷೇತ್ರದಲ್ಲಿ ನಿಮ್ಮ ಎದುರಾಳಿ ಯಾರು?
ಎದುರಾಳಿ ಯಾರು ಎಂದು ಹೇಳಲು ಇದು ಸಕಾಲವಲ್ಲ. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಕಣಕ್ಕಿಳಿದಿರುವ ಇಬ್ಬರೂ ಎದುರಾಳಿಗಳು. ಕ್ಷೇತ್ರದಲ್ಲಿ ಪ್ರಚಾರ ನಡೆಸಿದಾಗ ನನಗೆ ಯಾರೂ ಎದುರಾಳಿಗಳಲ್ಲ ಎಂದು ಅನ್ನಿಸುತ್ತಿದೆ. ಅವರು ಹಣದದಲ್ಲಿ ಎದುರಾಳಿಗಳಾಗಬಹುದು ಆದರೆ, ನಾನು ಮಾಡಿದ ಕೆಲಸಗಳಿಂದಾಗಿ ಜನರು ನನಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ.
ಜೆಡಿಎಸ್ ಪಕ್ಷವನ್ನು ಜನರು ಏಕೆ ಬೆಂಬಲಿಸಬೇಕು?
ಹಿಂದೆ ಕಾಂಗ್ರೆಸ್ ಸರ್ಕಾರ ಬರುವುದಕ್ಕಿಂತ ಮುಂಚೆ ಬಿಜೆಪಿ ಸರ್ಕಾರವಿತ್ತು. ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿಯಾಗಿದ್ದರು. ಆಗ ನನ್ನ ಕ್ಷೇತ್ರ ಹೇಗಿತ್ತು? ಎಂಬುದನ್ನು ಜನರು ನೋಡಿದ್ದಾರೆ. ರಾಷ್ಟ್ರೀಯ ಪಕ್ಷಗಳ ಭರವಸೆಯನ್ನು ನೋಡಿ ಜನರು ಮತ ಹಾಕುವ ಕಾಲ ಈಗ ಇಲ್ಲವಾಗಿದೆ.
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಹಲವು ಭಾಗ್ಯಗಳನ್ನು ನೀಡಿತು. ಆದರೆ, ಪ್ರತಿ ಹಳ್ಳಿಯಲ್ಲೂ ಜನರು ಸರ್ಕಾರದ ಯೋಜನೆ ತಲುಪಿಲ್ಲ ಎಂದು ದೂರುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು. ಒಮ್ಮೆ ಬದಲಾವಣೆ ತರೋಣ ಎಂದು ಬಯಸಿದ್ದಾರೆ. ಆದ್ದರಿಂದ, ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ.