ಯಡಿಯೂರಪ್ಪ ಸಿಎಂ ಆಗಲು ಬಿಜೆಪಿ ಬೆಂಬಲಿಸಿ : ಅಶೋಕ್ ನಾಯ್ಕ್ ಸಂದರ್ಶನ
Recommended Video
ಶಿವಮೊಗ್ಗ, ಮೇ 04 : 'ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ನಡೆಯಿತು. ಯಡಿಯೂರಪ್ಪ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಬಿಜೆಪಿಯನ್ನು ಜನರು ಬೆಂಬಲಿಸಬೇಕು' ಎಂದು ಅಶೋಕ್ ನಾಯ್ಕ್ ಹೇಳಿದರು.
ಅಶೋಕ್ ನಾಯ್ಕ್ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು. 2018ರ ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಬಿರುಸಿನಿಂದ ಪ್ರಚಾರವನ್ನು ನಡೆಸುತ್ತಿದ್ದಾರೆ. 'ಜನರು ಆಶೀರ್ವಾದ ಮಾಡಲಿದ್ದಾರೆ' ಎಂಬ ಭರವಸೆಯನ್ನು ಹೊಂದಿದ್ದರೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ಸಂದರ್ಶನ
ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಅಶೋಕ್ ನಾಯ್ಕ್ ಅವರು, 'ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ರೈತರೇ ಅಧಿಕವಾಗಿದ್ದಾರೆ. ಅವರಿಗೆ ಕುಡಿಯುವ ಮತ್ತು ಜಮೀನುಗಳಿಗೆ ನೀರು ನಿರಂತರವಾಗಿ ಸಿಗಬೇಕು. ಅದಕ್ಕಾಗಿ ಪ್ರಯತ್ನ ನಡೆಸುತ್ತೇನೆ' ಎಂದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಯಾರಿಗೆ ಗೆಲುವು?
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಬಿಜೆಪಿಯಿಂದ ಅಶೋಕ್ ನಾಯ್ಕ್, ಕಾಂಗ್ರೆಸ್ನಿಂದ ಶ್ರೀನಿವಾಸ ಕರಿಯಣ್ಣ ಅವರು ಅಭ್ಯರ್ಥಿಗಳಾಗಿದ್ದಾರೆ. ಯಾರಿಗೆ ಗೆಲುವು? ಎಂದು ಕಾದು ನೋಡಬೇಕಾಗಿದೆ.
ಶಿವಮೊಗ್ಗ ಗ್ರಾಮಾಂತರದಲ್ಲಿ ಪ್ರಚಾರ ಹೇಗೆ ಸಾಗಿದೆ?
ಅದ್ಭುತವಾದ ಸ್ಪಂದನೆ ಜನರಿಂದ ಸಿಗುತ್ತಿದೆ. ಈ ಭಾಗದಲ್ಲಿ ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಜನರ ಸೇವೆ ಮಾಡಿದ್ದೆ. ಜನರು ಅದನ್ನು ಮರೆತಿಲ್ಲ. ಈ ಬಾರಿಯ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ನಿರ್ಧರಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ ಗ್ರಾಮಗಳ ಅಭಿವೃದ್ಧಿಯಾಗಲಿದೆ ಎಂದು ಜನರು ಹೇಳುತ್ತಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಯೋಜನೆಗಳೇನು?
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಹಲವು ವೈಶಿಷ್ಯತೆಗಳನ್ನು ಒಳಗೊಂಡಿದೆ. ಇಲ್ಲಿ ಶೇ 95ರಷ್ಟು ಜನರು ರೈತರು. ಕುಡಿಯುವುದಕ್ಕೆ, ಹೊಲಗದ್ದೆಗಳಿಗೆ ನೀರಿನ ಅಗತ್ಯವಿದೆ. ನಿರಂತರವಾಗಿ ವಿದ್ಯುತ್ ಪೂರೈಕೆಯಾಗಬೇಕಿದೆ. ಬೆಳೆಗಳಿಗೆ ಉತ್ತಮವಾದ ಬೆಲೆ, ಮಕ್ಕಳಿಗೆ ಉತ್ತಮವಾದ ಶಿಕ್ಷಣ ಬೇಕಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಜನರ ಸಮಸ್ಯೆಯನ್ನು ಬಗೆಹರಿಸಿಲ್ಲ. ಈಗ ಮತ ಕೇಳಲು ಬರುತ್ತಿದ್ದಾರೆ. ಜನರು ಈ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ.
ನಿಮ್ಮ ಎದುರಾಳಿ ಯಾರು?
ಈ ಕ್ಷೇತ್ರದಲ್ಲಿ ನನ್ನ ಎದುರಾಳಿ ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ಈ ಭಾಗದಲ್ಲಿ ತನ್ನದೇ ಆದ ವೋಟ್ ಬ್ಯಾಂಕ್ ಹೊಂದಿದೆ. ಹಾಗಾಗಿ ಪ್ರತಿಸ್ಪರ್ಧಿ ಕಾಂಗ್ರೆಸ್.
ಈ ಚುನಾವಣೆಯಲ್ಲಿ ಬಿಜೆಪಿ ಏಕೆ ಬೆಂಬಲಿಸಬೇಕು?
ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ನಡೆಯಿತು. ಸಾವಿರಾರು ಕೋಟಿ ಅನುದಾ ಜಿಲ್ಲೆಗೆ ಹರಿದುಬಂತು. ಆ ಅನುದಾನ ಜಿಲ್ಲೆಯ ಎಲ್ಲಾ ಗ್ರಾಮಕ್ಕೂ ತಲುಪಿತು. ಆಗಲೇ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ಬಂದಿತು.
ಆದ್ದರಿಂದ, ಜನರು ಈ ಬಾರಿ ಬಿಜೆಪಿಯನ್ನು ಬೆಂಬಲಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ಅವರ ಕನಸು. ಅದಕ್ಕಾಗಿ ಪಕ್ಷವನ್ನು ಬೆಂಬಲಿಸುತ್ತಾರೆ.