ಶಿಕಾರಿಪುರದಲ್ಲಿ 50 ಸಾವಿರ ಅಂತರದಲ್ಲಿ ಗೆಲ್ಲುವೆ : ವಿನಯ್ ಕೆ.ಸಿ.ರಾಜಾವತ್ ಸಂದರ್ಶನ
Recommended Video
ಶಿವಮೊಗ್ಗ, ಮೇ 02 : 'ನಾನು ಮುಖ್ಯಮಂತ್ರಿ ಅಭ್ಯರ್ಥಿ. ಯಾವ ಪಕ್ಷ ಬಹುಮತ ಪಡೆದರೂ ಅವರ ಜೊತೆ ಚರ್ಚೆ ನಡೆಸುತ್ತೇನೆ. ನನಗೂ ಮುಖ್ಯಮಂತ್ರಿ ಆಗುವ ಕನಸಿದೆ ಎಂದು ವಿನಯ್ ಕೆ.ಸಿ.ರಾಜಾವತ್' ಹೇಳಿದರು.
25 ವರ್ಷದ ವಿನಯ್ ಕೆ.ಸಿ.ರಾಜಾವತ್ ಶಿಕಾರಿಪುರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕರ್ನಾಟಕ ಬಿಜೆಪಿ ಅಧ್ಯಕ್ಷ, 2018ರ ಚುನಾವಣೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ 75 ವರ್ಷದ ಬಿ.ಎಸ್.ಯಡಿಯೂರಪ್ಪ ಎದುರಾಳಿಯಾಗಿದ್ದಾರೆ.
ಶಿಕಾರಿಪುರದಲ್ಲಿ 75ರ ಯಡಿಯೂರಪ್ಪಗೆ 25ರ ಯುವಕನ ಸವಾಲು!
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿದವರು ವಿನಯ್ ಕೆ.ಸಿ.ರಾಜಾವತ್. ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎದುರಾಳಿ ಕೇವಲ 1 ಮತ ಪಡೆಯುವಂತೆ ಮಾಡಿ ಇತಿಹಾಸ ನಿರ್ಮಿಸಿದವರು.
ಒನ್ ಇಂಡಿಯಾ ಕನ್ನಡಕ್ಕೆ ಸಂದರ್ಶನ ನೀಡಿರುವ ವಿನಯ್ ಕೆ.ಸಿ.ರಾಜಾವತ್ ಶಿಕಾರಿಪುರದ ಚುನಾವಣೆ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದೇಕೆ? ಎಂದು ಮನಬಿಚ್ಚಿ ಮಾತನಾಡಿದ್ದಾರೆ.
'ಯಡಿಯೂರಪ್ಪ ಅವರು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಚುನಾವಣೆ ಮಾಡುವುದಾದದರೆ ನಾನು ಮುಖ್ಯಮಂತ್ರಿ ಅಭ್ಯರ್ಥಿ. ಶಿಕಾರಿಪುರ ಕ್ಷೇತ್ರದಲ್ಲಿ 50 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದೇನೆ' ಎನ್ನುವ ವಿಶ್ವಾಸದಲ್ಲಿದ್ದಾರೆ ವಿನಯ್...
ವಿನಯ್ ಕೆ.ಸಿ.ರಾಜಾವತ್ ಯಾರು?
ವಿನಯ್ ಮೂಲತಃ ಶಿವಮೊಗ್ಗದ ಕುಂಚೇನಹಳ್ಳಿಯವರು. ಓದಿದ್ದು ಶಿಕಾರಿಪುರದಲ್ಲಿ, ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎದುರಾಳಿಗೆ ಕೇವಲ ಒಂದು ವೋಟು ಸಿಗುವಂತೆ ಮಾಡಿ ಇತಿಹಾಸ ನಿರ್ಮಿಸಿದ್ದರು.
'ವಿದ್ಯಾರ್ಥಿ ಸಂಘಟನೆ' ಎಂಬ ರಾಜಕೀಯೇತರ ಸಂಘಟನೆ ಸ್ಥಾಪನೆ ಮಾಡಿದ್ದಾರೆ. 22 ಜಿಲ್ಲೆಯಲ್ಲಿ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ. ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗಕ್ಕೆ ಸಂಬಂಧಿಸಿದ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲು ಕಾರಣವೇನು?
'ಸರ್ಕಾರಿ ಆಸ್ಪತ್ರೆ, ಹಾಸ್ಟೆಲ್ ಸಮಸ್ಯೆ ಬಗ್ಗೆ ಹೋರಾಟ ಮಾಡಲು ಹೋದಾಗ ಕೇಳಲು ನೀವು ಯಾರು?, ನಿಮಗೆ ಏನು ಅಧಿಕಾರವಿದೆ? ಎಂದು ಕೇಳುತ್ತಿದ್ದರು. ಶಿಕಾರಿಪುರದ ಯುವಕರು ಇಲ್ಲಿ ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದರು. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ' ಎನ್ನುತ್ತಾರೆ ವಿನಯ್.
ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ನಿಂದ ಜಿ.ಬಿ.ಮಾಲತೇಶ್, ಜೆಡಿಎಸ್ನಿಂದ ಎಚ್.ಟಿ.ಬಳಿಗಾರ್, ಆಮ್ ಆದ್ಮಿ ಪಕ್ಷದಿಂದ ಚಂದ್ರಕಾಂತ್ ರೇವಂಕರ್ ಶಿಕಾರಿಪುರದಲ್ಲಿ ಕಣದಲ್ಲಿದ್ದಾರೆ.
ಪ್ರಚಾರ ಹೇಗೆ ಸಾಗಿದೆ ಶಿಕಾರಿಪುರದಲ್ಲಿ?
'ಏಳು ತಂಡಗಳಲ್ಲಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇವೆ. ಜನರಿಂದ ಅತ್ಯುತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಮೊದಲು 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಜನರ ಪ್ರತಿಕ್ರಿಯೆ ನೋಡಿದಾಗ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಸಿಕ್ಕಿದೆ' ಎನ್ನುತ್ತಾರೆ ವಿನಯ್.
'ಕ್ಷೇತ್ರದ ಜನರು ಪ್ರಚಾರಕ್ಕೆ ಹೋದಾಗ ಪ್ರೀತಿಯಿಂದ ಸ್ವಾಗತ ಕೋರುತ್ತಾರೆ. ಅವರೇ ನನಗೆ ಊಟ ನೀಡುತ್ತಿದ್ದಾರೆ. ಕ್ಷೇತ್ರವನ್ನು ಸುತ್ತಿದಾಗ ಜನರ ಪ್ರೀತಿ ನೋಡಿದಾಗ 50 ಸಾವಿರ ಮತಗಳ ಅಂತದಲ್ಲಿ ಗೆಲ್ಲಿಸುವ ಭರವಸೆ ಸಿಗುತ್ತಿದೆ' ಎನ್ನುತ್ತಾರೆ
ನಿಮ್ಮ ಎದುರಾಳಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲವೇ?
ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, 2018ರ ವಿಧಾನಸಭೆ ಚುನಾವಣೆಯ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ, ಅವರಿಗೆ ವಿನಯ್ ಎದುರಾಳಿ.
'ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅವರು ಚುನಾವಣೆ ಎದುರಿಸುವುದಾದದರೆ ನಾನು ಸಹ ಮುಖ್ಯಮಂತ್ರಿ ಅಭ್ಯರ್ಥಿ. ನನಗೂ ಮುಖ್ಯಮಂತ್ರಿ ಆಗುವ ಕನಸಿದೆ. ಯಾವುದೇ ಪಕ್ಷ ಬಹುಮತ ಪಡೆಯಲಿ ಅವರ ಜೊತೆ ಕುಳಿತು ಮಾತುಕತೆ ನಡೆಸುತ್ತೇನೆ' ಎಂದು ವಿನಯ್ ಹೇಳಿದರು.
ಪಕ್ಷೇತರ ಅಭ್ಯರ್ಥಿಯಾಗಿ ಏಕೆ ಸ್ಪರ್ಧೆ?
'ಶಿವಸೇನೆ, ನಮ್ಮ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಲು ಸಿದ್ಧರಿದ್ದರು. ಕಾಂಗ್ರೆಸ್ ಪಕ್ಷದವರು ನಮ್ಮ ಜೊತೆ ಬನ್ನಿ ಎಂದು ಆಹ್ವಾನಿಸಿದ್ದರು. ಆದರೆ, ಯಾವುದೇ ಪಕ್ಷ ಸೇರಬಾರದು ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ' ಎಂದು ವಿನಯ್ ಸ್ಪಷ್ಟನೆ ನೀಡಿದರು.
'ಕ್ಷೇತ್ರದಲ್ಲಿ ಬಂದು ನಾಮಪತ್ರ ಸಲ್ಲಿಸಿ, ಪ್ರಚಾರ ಪಡೆದು ವಾಪಸ್ ಹೋಗುತ್ತಾರೆ ಎಂದು ಜನರು ಅಂದುಕೊಂಡಿದ್ದರು. ಈಗ ಅವರಿಗೆ ನಂಬಿಕೆ ಬಂದಿದೆ, ಆದ್ದರಿಂದ ಬೆಂಬಲ ನೀಡುತ್ತಿದ್ದಾರೆ' ಎಂದರು.