ಯಡಿಯೂರಪ್ಪ ವಿರುದ್ಧ ಆಪ್ ಅಭ್ಯರ್ಥಿ ಚಂದ್ರಕಾಂತ್ ಸಂದರ್ಶನ
ಶಿವಮೊಗ್ಗ, ಏಪ್ರಿಲ್ 05 : 'ಬಿ.ಎಸ್.ಯಡಿಯೂರಪ್ಪ ವಿರುದ್ಧ ಚುನಾವಣೆಗೆ ಸ್ಪರ್ಧಿಸುವುದು ದೊಡ್ಡ ಸವಾಲು. ಆದರೆ, ಶಿಕಾರಿಪುರ ಕ್ಷೇತ್ರದಲ್ಲಿ ಅವರ ಕುಟುಂಬ ಮಾಡುತ್ತಿರುವ ಅಕ್ರಮಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಅದಕ್ಕಾಗಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ'.
2018ರ ಚುನಾವಣೆಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದಲ್ಲಿ ಆಮ್ಮ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಚಂದ್ರಕಾಂತ್ ರೇವಂಕರ್ ಸ್ಪರ್ಧಿಸುತ್ತಿದ್ದಾರೆ. 65ವರ್ಷದ ಚಂದ್ರಕಾಂತ್ ಅವರಿಗೆ ಇದು ಮೊದಲ ಚುನಾವಣೆ. ಈ ಬಾರಿಯ ಚುನಾವಣೆಯ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ. ಅವರ ಎದುರಾಳಿಯಾಗಿ ರೇವಂಕರ್ ಕಣಕ್ಕಿಳಿಯುತ್ತಿದ್ದಾರೆ.
Flashback : ಶಿಕಾರಿಪುರದಲ್ಲಿ ಯಡಿಯೂರಪ್ಪ ಒಮ್ಮೆ ಸೋಲು ಕಂಡಿದ್ದಾರೆ!
ಹಲವಾರು ವರ್ಷಗಳಿಂದ ಶಿಕಾರಿಪುರದಲ್ಲಿ ಜನಪರ ಹೋರಾಟಗಳನ್ನು ಮಾಡಿಕೊಂಡು ಬಂದ ಚಂದ್ರಕಾಂತ್ ಅವರು ಒಂದು ಕಾಲದಲ್ಲಿ ಯಡಿಯೂರಪ್ಪ ಜೊತೆಗಿದ್ದವರು. ಯಡಿಯೂರಪ್ಪ ಅವರು ಮುನ್ಸಿಪಲ್ ಚುನಾವಣೆಗೆ ನಿಂತಾಗ ಅವರ ಪರವಾಗಿ ಕೆಲಸ ಮಾಡಿದವರು, ಗೆಲ್ಲಲು ಸಹಕಾರ ನೀಡಿದವರು. ಈ ಚುನಾವಣೆಯಲ್ಲಿ ಅವರ ಎದುರಾಳಿಯಾಗಿದ್ದಾರೆ.
ಕ್ಷೇತ್ರ ಪರಿಚಯ : ಶಿಕಾರಿಪುರದಲ್ಲಿ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಯಾರು?
'ಶಿಕಾರಿಪುರ ಭ್ರಷ್ಟಾಚಾರದ ಕೂಪವಾಗಿದೆ. ಪುರಸಭೆ ಆಡಳಿತದಲ್ಲಿ ಯಡಿಯೂರಪ್ಪ ಕುಟುಂಬದ ಹಸ್ತಕ್ಷೇಪವಿದೆ. ಸಾಮಾನ್ಯ ಜನರ ಮಾತಿಗೆ ಅಧಿಕಾರಿಗಳು ಬೆಲೆ ಕೊಡುವುದಿಲ್ಲ. ಜನರ ದೂರು ಕಸದ ಬುಟ್ಟಿ ಸೇರುತ್ತದೆ' ಎಂದು ಆಕ್ರೋಶ ವ್ಯಕ್ತಪಡಿಸುವ ಚಂದ್ರಕಾಂತ್ ಅವರು ಎರಡು ತಿಂಗಳಿನಿಂದ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯನ್ನು ಬೆಂಬಲಿಸಿ ಎಂದು ಜನರಿಗೆ ಮನವಿ ಮಾಡುತ್ತಿದ್ದಾರೆ.
ಎಲ್ಲ ಪಕ್ಷಗಳಿಗೆ ಮರ್ಮಾಘಾತ : ಕರ್ನಾಟಕ ಆಪ್ ಶಪಥ
ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಲು ಕಾರಣವೇನು? ಎಂಬ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ವಿವರಗಳು ಇಲ್ಲಿವೆ ನೋಡಿ....
ಚಂದ್ರಕಾಂತ್ ರೇವಂಕರ್ ಪರಿಚಯ ಮಾಡಿಕೊಡಿ
ನಾನು ಶಿಕಾರಿಪುರದ ಸಾಮಾನ್ಯ ವ್ಯಕ್ತಿ. ಮೊದಲು ಖಾಸಗಿ ಬಸ್ ಏಜೆಂಟ್ ಆಗಿದ್ದೆ. ನಂತರ ಬಸ್ ಖರೀದಿ ಮಾಡಿದೆ. ಕೆಲವು ಉದ್ಯಮಗಳನ್ನು ನಡೆಸುತ್ತಿದ್ದೇನೆ. ಶಿಕಾರಿಪುರ ಕ್ಷೇತ್ರದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಆರ್ಟಿಐ ಮೂಲಕ ದಾಖಲೆಗಳನ್ನು ಸಂಗ್ರಹಣೆ ಮಾಡಿ ಹೋರಾಟ ಆರಂಭಿಸಿದೆ.
ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರ ಅವರು ಶಿಕಾರಿಪುರದಲ್ಲಿ ಭೂ ಕಬಳಿಕ ಮಾಡಿದ್ದನ್ನು ಬಹಿರಂಗ ಪಡಿಸಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷದ ಶ್ರೀಧರ್ ಅವರ ಪರವಾಗಿ ಪ್ರಚಾರ ಮಾಡಿದ್ದೇನೆ.
2016-17ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳ ಪರವಾಗಿ 43 ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದೇನೆ. ಆಮ್ ಆದ್ಮಿ ಪಕ್ಷದ ಸಿದ್ಧಾಂತವನ್ನು ಕ್ಷೇತ್ರದ ಜನರ ಮನೆ-ಮನೆಗೆ ತಲುಪಿಸಿದ್ದೇನೆ.
ಯಡಿಯೂರಪ್ಪ ಮತ್ತು ಅವರ ಆಪ್ತರು ಕ್ಷೇತ್ರದಲ್ಲಿ ಸಾಕಷ್ಟು ಭೂಮಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ. ನನ್ನ 5.24 ಗುಂಟೆ ಜಮೀನನ್ನು 2008ರಲ್ಲಿ ಪೊರ್ಜರಿ ಮಾಡಿ ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಇದನ್ನು ಖಂಡಿಸಿ ನಾನು ಸತ್ಯಾಗ್ರಹ ಮಾಡಿದೆ. ನಮಗೆ ಉದ್ಯೋಗ ನೀಡುವ ಆಮಿಷ ವೊಡ್ಡಿದರು. ಅದಕ್ಕೂ ಬಗ್ಗದಿದ್ದಾಗ ಜೈಲಿಗೆ ಹಾಕಿಸಿದರು.
ಶಿಕಾರಿಪುರ ಕ್ಷೇತ್ರ ಭ್ರಷ್ಟಾಚಾರದ ಕೂಪವಾಗಿದೆ. ಸಾಮಾನ್ಯ ಜನರು ಇಲ್ಲಿ ಬದುಕುವಂತಿಲ್ಲ. ಚುನಾವಣೆಗಳು ಬಂದಾಗ ಇಲ್ಲಿ 30, 40 ಕೋಟಿ ಖರ್ಚು ಮಾಡಿ ಗೆದ್ದು ಬರುತ್ತಾರೆ. ಯಡಿಯೂರಪ್ಪ ಮತ್ತು ಅವರ ಆಪ್ತರು ಬೇನಾಮಿ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿ ಖರೀದಿ ಮಾಡಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವ ಚಿಂತನೆ ಬಂದಿದ್ದು ಏಕೆ?
ಭ್ರಷ್ಟಚಾರದ ವಿರುದ್ಧ ಹೋರಾಟ ಮಾಡುತ್ತಾ ಬಂದ ನಾನು ಕ್ಷೇತ್ರದಲ್ಲಿ ಬದಲಾವಣೆ ತರಬೇಕು ಎಂದ ಚುನಾವಣಾ ಕಣಕ್ಕೆ ಇಳಿದಿದ್ದೇನೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಜನರಿಗೆ ತಲುಪಿಸಿ ಮತ ಕೇಳುತ್ತಿದ್ದೇನೆ.
ಶಿಕಾರಿಪುರದ ಪುರಸಭೆ ಭ್ರಷ್ಟಾಚಾರದ ಕೂಪವಾಗಿದೆ. 30 ವರ್ಷಗಳಿಂದ ಇಲ್ಲಿ ಯಡಿಯೂರಪ್ಪ ಮತ್ತು ಅವರ ಆಪ್ತರು ಮಾಡಿದ್ದೇ ನಿಯಮವಾಗಿದೆ. ಅಧಿಕಾರಿಗಳು ಅವರ ಕೈಗೊಂಬೆಯಾಗಿದ್ದಾರೆ. ಸಾಮಾನ್ಯ ಜನರು ಯಾವುದೇ ದೂರು ಕೊಟ್ಟರೂ ಅದನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ.
ಶಿಕಾರಿಪುರದಲ್ಲಿ 2009ರಲ್ಲಿ 32 ಕೋಟಿ ವೆಚ್ಚದ ಒಳಚರಂಡಿ ಕಾಮಗಾರಿ ನಡೆಯಿತು. ಇಂದಿಗೂ ಅದು ಉದ್ಘಾಟನೆಗೊಂಡಿಲ್ಲ. ಕಳೆಪೆ ಕಾಮಗಾರಿ ನಡೆದಿದೆ. ದಿನಕ್ಕೊಂದು ಕಡೆ ಅದರ ಗುಂಡಿ ತೆರೆದುಕೊಳ್ಳುತ್ತದೆ. ಬೈಕ್ ಮತ್ತು ಆಟೋ ಅದರಲ್ಲಿ ಸಿಲುಕುತ್ತದೆ. ಕ್ಷೇತ್ರದಲ್ಲಿ ಬದಲಾವಣೆ ತರಬೇಕು ಎಂಬ ಉದ್ದೇಶದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ.
ಯಡಿಯೂರಪ್ಪ ವಿರುದ್ಧದ ಸ್ಪರ್ಧೆ ಸವಾಲು ಅಲ್ಲವೇ?
ಯಡಿಯೂರಪ್ಪ ಈ ಬಾರಿಯ ಮುಖ್ಯಮಂತ್ರಿ ಅವರ ಎದುರು ಸ್ಪರ್ಧೆ ಮಾಡುವುದು ನಿಜಕ್ಕೂ ಸವಾಲು. ಆದರೆ, ಜನರಿಗೆ ಇಲ್ಲಿ ನಡೆಯುವ ಭ್ರಷ್ಟಾಚಾರವನ್ನುತಲುಪಿಸಬೇಕು ಎಂದು ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ಅವರರಂತೆ ಹಣ ಖರ್ಚು ಮಾಡುವುದಿಲ್ಲ. ಅಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತೇನೆ.
ಭ್ರಷ್ಟಾಚಾರ ಮುಕ್ತವಾದ ಚುನಾವಣೆ ನಡೆಯಬೇಕು. 500, 2000 ರೂ. ಪಡೆದು ಮತ ಹಾಕುತ್ತಾರೆ. ಅಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಸಾಮಾನ್ಯ ಜನರನ್ನು ಭಿಕ್ಷುಕರು ಎಂದು ತಿಳಿದುಕೊಂಡಿದ್ದಾರೆ. ಇಂತಹ ಚುನಾವಣೆ ಬೇಡ, ಸಾಮಾನ್ಯ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಜನರಿಗೆ ಮನವಿ ಮಾಡುತ್ತಿದ್ದೇನೆ.
ಚುನಾವಣಾ ಪ್ರಚಾರವನ್ನು ಆರಂಭಿಸಿದ್ದೀರಾ?
ಹೌದು ಎರಡು ತಿಂಗಳಿನಿಂದ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದೇನೆ. ಈಗ ಬೆಂಗಳೂರಿನ ಕಚೇರಿಯಿಂದ ಮತ್ತಷ್ಟು ಪ್ರಚಾರ ಸಾಮಾಗ್ರಿಗಳು ಬರುತ್ತವೆ. ನಂತರ ಮತ್ತೆ ಪ್ರಚಾರವನ್ನು ಬಿರುಸುಗೊಳಿಸುತ್ತೇನೆ. ನಮ್ಮ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳು ನಡೆಯುವ ಸಾಧ್ಯತೆ ಇದೆ.
ಶಿಕಾರಿಪುರದಲ್ಲಿ 20 ವರ್ಷಗಳಿಂದ ಚುನಾವಣಾ ಅಧಿಕಾರಿಗಳು ಆಗಿರುವವರು ಎಲ್ಲರೂ ಒಂದೇ. ಹಲವು ವರ್ಷಗಳಿಂದ ಅವರು ವರ್ಗಾವಣೆ ಗೊಂಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ದೂರು ಕೊಟ್ಟಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
ಎಲ್ಲಾ ಅಧಿಕಾರಿಗಳು ಯಡಿಯೂರಪ್ಪ ಅವರ ಕೈಗೊಂಬೆಗಳು. ಚುನಾವಣಾ ಆಕ್ರಮ ನಡೆಯುತ್ತಿದೆ ಎಂದು ನಾವು ದೂರು ನೀಡಿದರೂ ಆ ಬಗ್ಗೆ ಅವರು ಗಮನ ಹರಿಸುವುದಿಲ್ಲ. ಇಂತಹ ಎಲ್ಲಾ ಅಡೆ-ತಡೆಗಳನ್ನು ಮೀರಿ ಚುನಾವಣೆ ಎದುರಿಸಬೇಕಿದೆ.
ಶಿಕಾರಿಪುರದ ಕುಟುಂಬ ರಾಜಕಾರಣದ ಬಗ್ಗೆ ಏನು ಹೇಳುವಿರಿ?
ಯಡಿಯೂರಪ್ಪ, ರಾಘವೇಂದ್ರ ಒಬ್ಬರಿಗಿಂತ ಮತ್ತೊಬ್ಬರು ಹೆಚ್ಚು ಬಲಿಷ್ಠರು ಎಂಬಂತೆ ವರ್ತಿಸುತ್ತಾರೆ. ಅವರು ಹೇಳಿದಂತೆ ಕೇಳಲಿಲ್ಲ ಎಂದರೆ ಬಲ ಪ್ರಯೋಗ ಮಾಡುತ್ತಾರೆ. ಹಲವರ ಜಮೀನು ಪಡೆಯು ರೌಡಿಸಂ ಮಾಡಿದ್ದಾರೆ. ಯಡಿಯೂರಪ್ಪ ಮತ್ತು ಅವರ ಕುಟುಂಬದ ಅಕ್ರಮದ ಬಗ್ಗೆ ಮಾತನಾಡಲು ಕುಳಿತರೆ ನಾಲ್ಕು ಗಂಟೆ ಬೇಕಾಗುತ್ತದೆ. ಎಲ್ಲದಕ್ಕೂ ನನ್ನ ಬಳಿ ದಾಖಲೆ ಇದೆ.
ಒಂದು ಕಾಲದಲ್ಲಿ ಯಡಿಯೂರಪ್ಪ ಅವರು ನನ್ನ ಮನೆಯ ಸಮೀಪ ಬಾಡಿಗೆ ಮನೆಯಲ್ಲಿ ಇದ್ದೆವು. ಮುನ್ಸಿಪಲ್ ಚುನಾವಣೆಯಲ್ಲಿ ಅವರ ಪರವಾಗಿ ನಾನು ಕೆಲಸ ಮಾಡಿದ್ದೆ. ನಮ್ಮ ಕುಟುಂಬದಿಂದ ಅವರಿಗೆ 21 ಮತ ಹಾಕಲಾಗಿತ್ತು. ಈಗ ಈ ಮಟ್ಟಕ್ಕೆ ಬೆಳೆಯುತ್ತಾರೆ. ಹೋದಲೆಲ್ಲಾ ಅವರು ಅಭಿವೃದ್ಧಿ ಎಂದು ಮಾತನಾಡುತ್ತಾರೆ. ಅವರ ಕ್ಷೇತ್ರದ ಸಮಸ್ಯೆಗಳು ಮಾತ್ರ ಯಾರಿಗೂ ತಿಳಿಯುವುದಿಲ್ಲ.
ಆಮ್ ಆದ್ಮಿ ಪಕ್ಷವನ್ನು ಜನರು ಏಕೆ ಬೆಂಬಲಿಸಬೇಕು?
ನಮ್ಮ ಪಕ್ಷ ದೆಹಲಿಯಲ್ಲಿ ಆಡಳಿತ ನಡೆಸುತ್ತಿದೆ. ಅಲ್ಲಿಯೂ ನರೇಂದ್ರ ಮೋದಿ ಅವರು ಸರ್ಕಾರಕ್ಕೆ ಹಲವು ತೊಂದರೆಗಳನ್ನು ನೀಡುತ್ತಿದ್ದಾರೆ. ಆಮ್ ಆದ್ಮಿ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸುತ್ತಿದೆ. 20 ಸಾವಿರ ಲೀಟರ್ ನೀರು ನೀಡಲಾಗುತ್ತಿದೆ. ಆಮ್ ಆದ್ಮಿ ಕ್ಲಿನಿಕ್ ಪರಿಕಲ್ಪನೆಯನ್ನು ಅಮೆರಿಕದ ಅಧ್ಯಕ್ಷ ಬಾರಕ್ ಒಬಾಮಾ ಅವರು ಮೆಚ್ಚಿದ್ದರು.
ದೆಹಲಿಯಲ್ಲಿ ನಾವು ಮಾಡಿದ ಕೆಲಸ ನೋಡಿ ಪಂಜಾಬ್ ಚುನಾವಣೆಯಲ್ಲಿ ಜನರು ಬೆಂಬಲ ನೀಡಿದರು. ಅಲ್ಲಿ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ. ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಜನರು ಭ್ರಷ್ಟಾಚಾರ ಮುಕ್ತ ಆಡಳಿತ ಬಯಸುತ್ತಾರೆ. ಆದ್ದರಿಂದ, ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುತ್ತಾರೆ.
ಕರ್ನಾಟಕದಲ್ಲಿಯೂ ಭ್ರಷ್ಟಾಚಾರ ಮಿತಿ ಮೀರಿದೆ. ಯಡಿಯೂರಪ್ಪ ಮತ್ತು ಅವರ ಕುಟುಂಬದವರು ಒಂದು ಜಿಲ್ಲೆಯನ್ನು ಕಿತ್ತು ತಿನ್ನುತ್ತಿದ್ದಾರೆ. ಭ್ರಷ್ಟರ ವಿರುದ್ಧ ಹೋರಾಟ ಮಾಡಲು ಎಲ್ಲರೂ ಆಪ್ ಬೆಂಬಲಿಸಬೇಕು.