ನನ್ನ ಕನಸಿನ ಕರ್ನಾಟಕದಲ್ಲಿ ರೈತರ ಬದುಕು ಹಸನಾಗಬೇಕು
Recommended Video
ಶಿವಮೊಗ್ಗ, ಮೇ 08 : 'ರೈತರ ಬದುಕು ಹಸನಾಗುವಂತಹ ರಾಜ್ಯ ನಮ್ಮದಾಗಬೇಕು. ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಸಿಗುವಂತಾಗಬೇಕು' ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯಾನಾಯ್ಕ ಹೇಳಿದರು.
ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಅವರು ಕನಸಿನ ಕರ್ನಾಟಕ ಹೇಗಿರಬೇಕು? ಎಂದು ಅಭಿಪ್ರಾಯ ಹಂಚಿಕೊಂಡರು. 'ಕರ್ನಾಟಕದಲ್ಲಿ ರೈತ ಪರವಾದ ಸರ್ಕಾರ ಬರಬೇಕು. ಅವರ ಬದುಕು ಸುಂದರವಾಗಬೇಕು' ಎಂದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ಸಂದರ್ಶನ
'ಮೊದಲು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುತ್ತಿದ್ದರು. ಆದರೆ, ಈಗ ಕೇಂದ್ರ ಸರ್ಕಾರ ಅದು ಜನರು ತಿನ್ನುವ ಉತ್ಪನ್ನವಲ್ಲ ಬೆಲೆ ನೀಡುವುದಿಲ್ಲ ಎನ್ನುತಾರೆ. ಹಾಗಾದರೆ ರೈತರು ಯಾವ ಬೆಳೆಯನ್ನು ಬೆಳೆಯಬೇಕು?' ಎಂದು ಪ್ರಶ್ನಿಸಿದರು.
'ರೈತರಿಗೆ ಬೆಂಬಲ ಬೆಲೆ ಕೊಡಿ ಎಂದರೆ ಕೇಂದ್ರ ಸರ್ಕಾರ ರಾಜ್ಯದತ್ತ, ರಾಜ್ಯ ಕೇಂದ್ರದತ್ತ ಕೈ ತೋರಿಸುತ್ತದೆ. ಎರಡೂ ಸರ್ಕಾರದ ನಡುವೆ ಸಿಕ್ಕಿಕೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿ ಬರಬಾರದು' ಎಂದು ಶಾರದಾ ಪೂರ್ಯಾನಾಯ್ಕ ತಿಳಿಸಿದರು.
'ರಾಜ್ಯದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ, ಅವರು ಉನ್ನತ ಶಿಕ್ಷಣ ಪಡೆದಿದ್ದಾರೆ. ಆದರೆ, ಅವರು ನಿರುದ್ಯೋಗ ಸಮಸ್ಯೆ ಎದುರಿಸುವಂತಾಗಿದೆ. ಇಂತಹ ಸ್ಥಿತಿ ಬರಬಾರದು, ಸ್ಥಳೀಯ ಮಟ್ಟದಲ್ಲಿ ಅವರಿಗೆ ಉದ್ಯೋಗ ಸಿಗುವ ವ್ಯವಸ್ಥೆಯಾಗಬೇಕು' ಎಂದರು.
'ಆರೋಗ್ಯ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಬೇಕು. ಗರ್ಭಿಣಿಯರಿಗೆ ಉತ್ತಮ ಪೌಷ್ಠಕಾಂಶ ಯುಕ್ತ ಆಹಾರವನ್ನು ಒದಗಿಸುವ ಕೆಲಸವಾಗಬೇಕು. ವೃದ್ಧರು, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಆರೋಗ್ಯ ಸೇವೆಗಳು ಉತ್ತಮವಾಗಿ ದೊರೆಯವು ಕರ್ನಾಟಕ ನನ್ನದಾಗಬೇಕು' ಎಂದು ಹೇಳಿದರು.